Tuesday, October 4, 2011

ರಾಜ್ಯದಲ್ಲೂ ಆಘೋರಿಗಳಿದ್ದಾರಾ?


ರಾಜ್ಯದಲ್ಲೂ ಆಘೋರಿಗಳಿದ್ದಾರಾ?

 ದಯವಿಟ್ಟು,  ಅಸಹ್ಯ ಪಟ್ಟು ಕೊಳ್ಳದ ಗಟ್ಟಿ ಹೃದಯದವರಿಗೆ ಮಾತ್ರ.
ಇದು ಪರಮ ಸತ್ಯ ಆದರೂ ಮನುಷ್ಯ ಮಾತ್ರದವರು ನಂಬಲು ಅಸಾದ್ಯ. ಬೇಜಾರು ಮಾಡಿಕೊಳ್ಳಬೇಡಿ, ಕಸಿವಿಸಿ ಮಾಡಿ ಕೊಳ್ಳಬೇಡಿ. ಬರೆಯಬೇಕಾದ್ದು ಅವಶ್ಯಕ ಮತ್ತು ಅನಿವಾರ್ಯ ಕೂಡ. ವರದಿ ಓದಿದ ಮೇಲೆ ನೀವೇ ಉದ್ಘರಿಸುತ್ತೀರಿ ಹೀಗೂ ಉಂಟೆ ಎಂದು. ನಂತರ ಮನಸ್ಸಿಗೆ ಕಸಿವಿಸಿಯಾದರೆ ನಮ್ಮನ್ನು ಕ್ಷಮಿಸಿ, ಇದು ನಮ್ಮ ತಪ್ಪಲ್ಲ.
 
ಇಲ್ಲೊಬ್ಬ ಸುಮಾರು ೯೫ ವರ್ಷದ ಮುದುಕ ವಿಚಿತ್ರವಾಗಿ ವರ್ತಿಸುತ್ತಾನೆ. ಅಘೋರಿಗಳ ತರಹ. ಮನುಷ್ಯ ಮಾತ್ರದವರು ಮಾಡಲಾರದ ಕೆಲಸ ಮಾಡಿ, ಎಲ್ಲರನ್ನೂ ಬೆಚ್ಚಿ ಬೀಳಿಸುವ ಜೊತೆಗೆ ಭಯ ಮತ್ತು ಗೊಂದಲಕ್ಕೀಡು ಮಾಡುತ್ತಾನೆ. ಇವನ ವರ್ತನೆ ವಿಜ್ಞಾನ ಮತ್ತು ವೈಧ್ಯ ಕ್ಷೇತ್ರಕ್ಕೆ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ.

ಆಸ್ಪತ್ರೆಗೆ ಹೋಗಿಯೂ ಸಹ ವಾಸಿಯಾಗದೇ ನಿಮ್ಮೂರಿನಲ್ಲಿ ಯಾರಿಗಾದರೂ ಕಾಲು, ಕೈ ಕೊಳೆತು ಗ್ಯಾಂಗ್ರಿನ್ ಆಗಿದ್ದರೆ, ಯಾವುದಾದರೂ ಕಾರಣಕ್ಕೆ ಗಾಯವಾಗಿ ವಾಸಿಯಾಗದೇ ರಣವಾಗಿದ್ದರೆ ಅಥವಾ ಬಾರಿ ಸುಟ್ಟ ಗಾಯವಾಗಿ ಕೀವು ರಕ್ತ ಸೋರುತ್ತಾ ಬಾಧೆ ಪಡುತ್ತಿದ್ದರೆ, ಗಾಯವಾಗಿ ಸಕ್ಕರೆ ಕಾಯಿಲೆಯ ಕಾರಣದಿಂದ ವಾಸಿಯಾಗದೇ ಅದು ಇಡೀ ಕಾಲು ವ್ಯಾಪಿಸಿ ಮತ್ತೆ ಮತ್ತೆ ಹೆಚ್ಚುತ್ತಾ ಕೊಳೆಯುವ ಸ್ಥಿತಿಗೆ ತಲುಪಿ ಹುಳ ಸಹಿತ ದುರ್ವಾಸನೆ ಬಂದಿದ್ದರೆ ಇನ್ನೂ ಮುಂದೆ ಹೆದರಬೇಕಿಲ್ಲ. ಗುಣ ಪಡಿಸಿಕೊಳ್ಳುವ ಉಪಾಯ ಇಲ್ಲಿದೆ.
ಅದು ಯಾವುದೇ ಔಷಧಿ ನೀಡದೇ, ಶಸ್ತ್ರ ಚಿಕಿತ್ಸೆ ಮಾಡದೇ, ದುಬಾರಿ ವೆಚ್ಚ ಕೇಳದೇ ಕ್ಷಣ ಮಾತ್ರದಲ್ಲಿ ನೋವನ್ನು ನೀಗಿಸುವ ಮಾಂತ್ರಿಕ ಶಕ್ತಿಯ ವಿಸ್ಮಯ ಕಥೆ ಇಲ್ಲಿದೆ. ಆತ ಸಾಮಾನ್ಯ ಸಾಧು. ರೈತ ಸಂಘದ ಹೋರಾಟಗಾರನಂತೆ ಕಾಣುವ ಆ ವ್ಯಕ್ತಿ ಇಂತಹ ಗಾಯಗಳನ್ನು ನಾಲಿಗೆಯಿಂದ ನೆಕ್ಕಿ ನೆಕ್ಕಿ ಅದನ್ನು ವಾಸಿ ಮಾಡುತ್ತಾರೆ. ಬಹಳ ದಿನಗಳಿಂದ ಅನುಭವಿಸುತ್ತಿರುವ ನೋವಿಗೆ ದೀರ್ಘ ವಿರಾಮ ನೀಡುತ್ತಾರೆ. ಗಾಯದ ಕಾರಣದಿಂದ ಕಾಲು ಅಥವಾ ಕೈ ಕತ್ತರಿಸುವ ಪ್ರಮೆಯವೇ ಇಲ್ಲ.
ಇದೇನು ಮನುಷ್ಯ ಎಲ್ಲಾದರೂ ರಕ್ತ ಕೀವು ಸೋರುವ ಗಾಯವನ್ನು ನಾಯಿಯಂತೆ ನೆಕ್ಕುವುದು ಸಾಧ್ಯವೇ? ಎಂದು ಅಚ್ಚರಿ ಪಡಬೇಡಿ. ಗಾಬರಿಯಾಗಬೇಡಿ. ಇದು ಸತ್ಯ, ನೂರಕ್ಕೆ ನೂರು.
ಅವರೇ ಸವದತ್ತಿ ತಾಲೂಕಿನ ಅಳಕಟ್ಟೆ ಗ್ರಾಮದ ೯೫ ವರ್ಷದ ಹುಟ್ಟು ಬ್ರಹ್ಮಚಾರಿ ನಾರಾಯಣಸ್ವಾಮಿ. ತನ್ನ ೧೮ನೇ ವಯಸ್ಸಿನಲ್ಲಿ ಶಕ್ತಿವಂತ ಗುರುವೊಬ್ಬರು  ಇವರ ತಲೆ ಮೇಲೆ ಕೈಯಿಟ್ಟು ಆಶೀರ್ವದಿಸಿದರಂತೆ. ಅವರಿಂದ ದೀಕ್ಷೆ ಪಡೆದು ಸಾಧನೆ ಮಾಡಿದ ಒಂದು ವಿಶಿಷ್ಟ ಶಕ್ತಿ ಗಳಸಿಕೊಂಡು ಸಮಾಜ ಸೇವೆಗಾಗಿ ತಮ್ಮ ಬದುಕನ್ನು ಮೀಸಲಿಟ್ಟಿದ್ದಾರೆ. ಊರಿಂದ ಊರಿಗೆ ಬರಿಗಾಲಲ್ಲಿ ನಡೆದು ನಾಲಿಗೆಯಿಂದ ನೆಕ್ಕುವ ಮೂಲಕ ಗಾಯದ ನೋವಿನಿಂದ ನರಳುವವರಿಗೆ ಶಾಶ್ವತ ಪರಿಹಾರ ನೀಡಿ ವರದಾನವಾಗಿದ್ದಾರೆ. ಬಹಳ ಕಾಲದಿಂದ ವಾಸಿಯಾಗದೇ ಸಾಕಷ್ಟು ಆಸ್ಪತ್ರೆಗಳಿಗೆ ಸುತ್ತಿ ಸಾವಿರಾರು ರೂ.ಗಳನ್ನು ಖರ್ಚು ಮಾಡಿಕೊಂಡು ಕೈ ಸೋಸಿದವರಿಗೆ ಇವರು ಸುಲಭ ಮತ್ತು ಸರಳ ಸಿದ್ಧ ಔಷಧಿಯಾಗಿದ್ದಾರೆ. ಸೋರಿಯಾಸಿಸ್, ಗ್ಯಾಂಗ್ರಿನ್, ಸುಟ್ಟಗಾಯ ನೀರು ಇಸುಬು, ಕುಷ್ಟರೋಗ ಸೇರಿದಂತೆ ನಾನಾ ಚರ್ಮ ರೋಗಗಳನ್ನು ಗುಣ ಪಡಿಸುವ ದೇವದೂತ ಎನಿಸಿದ್ದಾರೆ.
ಮೊನ್ನೆ ತಿಪಟೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಬಹಳ ದಿನಗಳಿಂದ ದಾಖಲಾಗಿದ್ದ ರೋಗಿಯೊಬ್ಬರ ವಾಸಿಯಾಗದ ಗಾಯ(ಗ್ಯಾಂಗ್ರಿನ್)ವನ್ನು ವಾಸಿ ಮಾಡಲು ಇವರನ್ನು ಬೆಳಗಾವಿಯಿಂದ ಕರೆಸಲಾಗಿತ್ತು. ಬೆಳಗಾವಿಯಲ್ಲಿ ವೃತ್ತಿ ಮಾಡುತ್ತಿರುವ ತಿಪಟೂರಿನ ಮೂಲದವರಾದ ದಂತವೈಧ್ಯ ಕೃಷ್ಣ ಎಂಬುವರು ಈ ಸಾಧು ನಾರಾಯಣಸ್ವಾಮಿಯವರನ್ನು ಕರೆತಂದಿದ್ದರು. ಆಸ್ಪತ್ರೆಯಲ್ಲಿ ಗಾಯವನ್ನು ನಾಲಿಗೆಯಿಂದ ನೆಕ್ಕಿ ವಾಸಿ ಮಾಡುವ ದೃಶ್ಯ ಕಂಡ ಕೆಲವರು ಪತ್ರಿಕೆಗೆ ಮಾಹಿತಿ ನೀಡಿದಾಗ ತಕ್ಷಣ ಸ್ಥಳಕ್ಕೆ ಹೋಗಿ ಪರೀಕ್ಷಿಸಿದಾಗ ಅಚ್ಚರಿಯಾಯಿತು. ನಂತರ ಅವರು ತುರುವೇಕೆರೆ ತಾಲೂಕು ದಂಡಿನ ಶಿವರದ ರಾಮೇಗೌಡ ಎಂಬುವರಿಗೆ ಆಗಿರುವ ಗಾಯವನ್ನು ವಾಸಿ ಮಾಡಲು ಕರೆದುಕೊಂಡು ಹೋಗಲಾಯ್ತು.

ಶಕ್ತಿದಾಯಕ ವಿಭೂತಿ:
ನಾರಾಯಣಸ್ವಾಮಿ ಒಬ್ಬ ವಿಚಿತ್ರವಾದ ಸಾಧು. ಇವರು ಇದ್ದ ಕಡೆ ಇರುವುದಿಲ್ಲ. ಸದಾ ಸಂಚರಿಸುತ್ತಲೇ ಇರುತ್ತಾರೆ. ಸ್ವಂತ ಸ್ಥಳ ಎನ್ನುವುದು ಇಲ್ಲ. ತಲೆ ಮೇಲೆ ನಾನಾ ಗಿಡಮೂಲಿಕೆಗಳ ಗಂಟೊಂದನ್ನು ಇಟ್ಟು ಕೊಂಡು ಕಾಲಿಗೆ ಚಪ್ಪಲಿ ಹಾಕದೇ ಬರಿಗಾಲಲ್ಲಿ ತಮ್ಮ ಮನಸ್ಸು ಬಂದ ಕಡೆ ಹೋಗುತ್ತಿರುತ್ತಾರೆ. ಯಾರಾದರೂ ಕರೆದರೆ ಶಕ್ತಿಯಿರುವ ನಾಲಿಗೆಯಿಂದ ನೆಕ್ಕುವ ಮೂಲಕ ಗುಣಪಡಿಸಿ ಒಂದು ನಯಾಪೈಸೆಯೂ ದಕ್ಷಿಣೆ ಪಡೆಯದೇ ಮರಳಿ ಹೋಗುತ್ತಾರೆ. ಆದರೆ ಇಡೀ ಚಿಕಿತ್ಸೆಗೆ ಬಳಸುವುದು ವಿಭೂತಿ ಮಾತ್ರ. ಅದೇ ಅವರ ಸಂಜಿವಿನಿ ಔಷಧ ಎಂದು ಅವರ ಬಗ್ಗೆ ವ್ಯಕ್ತಿಪರಿಚಯವನ್ನು ತೆರದಿಡುತ್ತಾರೆ ಬೆಳಗಾಂನಲ್ಲಿ ದಂತವೈಧ್ಯರಾಗಿರುವ ಕೃಷ್ಣ(೯೮೮೬೬೩೨೩೦೮).
ಎಂತದ್ದೇ ರಣಗಾಯವಾಗಿದ್ದರೂ ಅದು ಹುಳ ಬಿದ್ದಿದ್ದರೂ ಅದರ ಮೇಲೆ ಮೊದಲು ವಿಭೂತಿ ಹಾಕಿ ನಂತರ ತಮ್ಮ ನಾಲಿಗೆಯಿಂದ ನೆಕ್ಕಲು ಶುರು ಮಾಡುತ್ತಾರೆ. ನೆಕ್ಕಿದ ನಂತರ ಅದನ್ನು ಹೊರಗೇ ಉಗಿಯದೇ ಎಲ್ಲವನ್ನೂ ಒಳಗೆ ನುಂಗಿ ಬಿಡುತ್ತಾರೆ. ಗಾಯದಲ್ಲಿರುವ ಕೀವು, ರಕ್ತವನ್ನು ಸಂಪೂರ್ಣವಾಗಿ ಹೀರಿದ ನಂತರ ಪುನಃ ಅದರ ಮೇಲೆ ವಿಭೂತಿ ಹಾಕಿ, ಸ್ವಲ್ಪ ವಿಭೂತಿಯನ್ನು ರೋಗಿಗೆ ನೀಡಿ ಒಂದು ವಾರ ಗಾಯದ ಮೇಲೆ ಹಾಕಲು ಹೇಳುತ್ತಾರೆ. ಯಾವುದೇ ಪಥ್ಯ ಹೇಳದಿದ್ದರೂ ಗಾಯ ವಾಸಿಯಾಗುವವರೆಗೂ ಭಗವಂತನನನ್ನು ಚಿತ್ತ ಮನಸ್ಸಿನಿಂದ ಧ್ಯಾನಿಸಲು ಹೇಳುತ್ತಾರೆ. ಇದಲ್ಲದೇ ಗುಡ್ಡಗಾಡುಗಳನ್ನು ಸುತ್ತಿ ತಮ್ಮ ಬಳಿಯಿಟ್ಟುಕೊಂಡಿರುವ ಗಿಡಮೂಲಿಕೆಗಳಿಂದ ನಾನಾ ತರಹದ ರೋಗಗಳನ್ನೂ ಸಹ ಗುಣಪಡಿಸುತ್ತಾರಂತೆ ಎಂದು ಮತ್ತಷ್ಟು ಅವರ ಬಗ್ಗೆ ವಿವರ ನೀಡುತ್ತಾರೆ.
ಮೊಬೈಲ್ ಬಳಸಲ್ಲ: 
ಸಾಧು ನಾರಾಯಣಸ್ವಾಮಿ ಹತ್ತಿರ ಯಾವುದೇ ಸಂಪರ್ಕ ಸಾಧನಗಳಿಲ್ಲ. ತಮ್ಮ ವಿಳಾಸ ಹೇಳಲ್ಲ. ಮೊಬೈಲ್‌ನಂತೂ ಅವರು ಮುಟ್ಟುವುದೂ ಇಲ್ಲ. ದಿನಕ್ಕೆ ಒಂದು ಹೊತ್ತು ಮಾತ್ರ ಊಟ ಮಾಡುತ್ತಾರೆ, ಅದೂ ಸರಳ ಸಸ್ಯಹಾರ. ವಾರಕ್ಕೊಮ್ಮೆ ಬಹಿರ್ದಿಷೆಗೆ ಹೋಗುವ ಅಭ್ಯಾಸ ಇಟ್ಟುಕೊಂಡಿರುವ ಅವರು ಯಾರಿಗಾದರೂ ಚಿಕಿತ್ಸೆ ನೀಡಿದ (ನಾಲಿಗೆಯಿಂದ ನೆಕ್ಕಿದ) ನಂತರ ಎರಡು ಮೂರು ದಿನ ಊಟ ಮಾಡುವುದಿಲ್ಲವಂತೆ.
ಸ್ಪರ್ಶಕ್ಕೆ ನೋವು ಮಾಯ:
ದಂಡಿನಶಿವರದ ರಾಮೇಗೌಡ ಗಾಯ ಮಾಡಿಕೊಂಡು ಅದು ಕೊಳೆತು ಬಾಧೆ ಕೊಡುತ್ತಿತ್ತಂತೆ. ಸಾಧು ನಾರಾಯಣಸ್ವಾಮಿ ಗಾಯವನ್ನು ಸ್ಪರ್ಶಿಸುತ್ತಿದ್ದಂತೆ ಹಿತವೆನಿಸಿ, ನೆಕ್ಕಲು ಶುರು ಮಾಡುತ್ತಿದ್ದಂತೆ ಅವರಿಗೆ ಅದೆನೋ ಆನಂದವಾಯಿತಂತೆ. ವಾರದಿಂದ ಜೀವ ಹಿಂಡುತ್ತಿದ್ದ ನೋವು ತಕ್ಷಣ ಮಾಯ. ಇದು ಪವಾಡವೇ ಸರಿ.  ಈಗ ಗಾಯವೂ ವಾಸಿಯಾಗುತ್ತಾ ಬರುತ್ತಿದೆ ಎಂದು ಅವರು ಹೇಳುತ್ತಾರೆ.

ಮೂರು ದಿನ ಊಟ, ತಿಂಡಿ ಮರೆತಿದ್ದ ದೃಶ್ಯ ಮಾಧ್ಯಮ ತಂಡ:
ಕಳೆದ ಆರೇಳು ತಿಂಗಳ ಹಿಂದೆ ಸುದ್ದಿ ತಿಳಿದ ಸ್ನೇಹಿತ ದಂಡಿನಶಿವರ ತಿಮ್ಮೇಗೌಡ, ಬಾಲಕೃಷ್ಣ ಕಾಕತ್ಕರ್ ಮತ್ತು ತಂಡ ನಾರಾಯಣಸ್ವಾಮಿ ಬೆನ್ನು ಹತ್ತಿ ಶುದ್ಧ ಹಸಿ ಹಸಿ ದೃಶ್ಯಗಳನ್ನು ಸೆರೆ ಹಿಡಿದ ಜೊತೆಗೆ ಉತ್ತಮ ಸುದ್ದಿ ಮಾಡಿತ್ತು. ಇದೊಂದು ಬೊಂಬಾಟ್ ಹಾಟ್ ಸುದ್ದಿ ಎಂದು ಎಡಿಟಿಂಗ್‌ಗೆ ಕಳುಹಿಸಿತ್ತು. ಆದರೆ ಆಗಿದ್ದೇ ಬೇರೆ. ವಿಡಿಯೋ ಎಡಿಟ್ ಮಾಡುವ ಆಸಾಮಿ ದೃಶ್ಯಗಳನ್ನು ನೋಡಿ ಬಕಾ ಬಕಾ ಅಂತ ವಾಂತಿ ಮಾಡಿಕೊಂಡು ಬಿಟ್ಟಿದ್ದಾನೆ.
ಸುದ್ದಿ ತಿಳಿದ ತಕ್ಷಣ ಪ್ರಸಾರ ಸ್ಟುಡಿಯೋದ ಸಿಬ್ಬಂಧಿ ಜಮಾಯಿಸಿ ವೀಕ್ಷಿಸುತ್ತಿದ್ದಂತೆ ಹಲವಾರು ಮಂದಿ ವಾಂತಿ ಮಾಡಿಕೊಂಡಿದ್ದಾರೆ. ಕೆಲವರಂತೂ ಮೂರು ನಾಲ್ಕು ದಿನ ಊಟವನ್ನೇ ತೊರೆದಿದ್ದರಂತೆ. ಅಯ್ಯೋ ಈ ಎಪಿಸೋಡ್ ಪ್ರಸಾರ ಮಾಡಿದರೆ ನಾವು ದೊಡ್ಡ ಪಾಪಿಷ್ಟರಾಗುತ್ತೇವೆ. ನಾಡಿನ ವೀಕ್ಷಕರ ಊಟ ಕಿತ್ತುಕೊಂಡು ನರಕಕ್ಕೆ ಹೋಗುತ್ತೇವೆ. ಎಂದು ಬಾರಿ ಚಿಂತನೆ ನಡೆಸಿದ ಚಾನಲೆ ಕೊನೆಗೆ ಅದನ್ನು ಪ್ರಸಾರ ಮಾಡದಂತೆ ರದ್ದು ಪಡಿಸಿತಂತೆ.


ಸಾಧಕಿಯ ಯಶೋಗಾಥೆ: "ಒಲೆಯಮ್ಮ"  
ಓದಿಲ್ಲ, ಬರೆದಿಲ್ಲ ಅಕ್ಷರ ಜ್ಞಾನ ಮೊದಲೇ ಇಲ್ಲ. ಆದರೂ ಮನಸ್ಸಿದ್ದರೆ ಮಾರ್ಗ ಎನ್ನುವ ಪ್ರೋತ್ಸಾಹ ನುಡಿಯ ಬೆನ್ನು ಹತ್ತಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಭಾಜನರಾಗುವ ಮೂಲಕ ನಾಡಿಗೆ ಕೀರ್ತಿತಂದಿರುವ "ಒಲೆಯಮ್ಮ" ಹೊಸ ದಾಖಲೆ ಮಾಡಿ ಮತ್ತೊಮ್ಮೆ ದೇಶದ ಗಮನ ಸೆಳೆಯಲು ಹೊರಟಿದ್ದಾರೆ.
ನಮ್ಮ ಹಳ್ಳಿ ಅಡಿಗೆ ಮನೆ ಸಮಸ್ಯೆಯಲ್ಲಿ ಮಹಿಳೆಯರ ಉಸಿರುಗಟ್ಟಿಸಿ, ಕಣ್ಣಿನಲ್ಲಿ ನೀರು ಬರಿಸುವ ಹೊಗೆಯ ಉಪಟಳ ಸಹಿಸಲಸಾಧ್ಯ. ಸಮಸ್ಯೆಗೆ ಪರಿಹಾರ ಹುಡುಕಿ ಹೊಗೆ ರಹಿತ ಸುಲಭ ಮತ್ತು ಸರಳ ಅಸ್ತ್ರ ಒಲೆ ನಿರ್ಮಿಸಿಕೊಡುವ ಮೂಲಕ ಗ್ರಾಮೀಣ ಮಹಿಳೆಯರ ಸಮಸ್ಯೆಗೆ ಮುಕ್ತಿ ಕಾಣಿಸಿ ಅವರ ಅಚ್ಚುಮೆಚ್ಚಿನವರಾಗಿ "ಒಲೆಯಮ್ಮ" ಎಂದೇ ಪ್ರಸಿದ್ಧರಾಗಿರುವ ತಿಪಟೂರು ತಾಲೂಕಿನ ಹಾಲ್ಕುರಿಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಚ್.ಮುದ್ದೇನಹಳ್ಳಿ ತಾಂಡ್ಯದ ಲಲಿತಾಬಾಯಿಯ ಯಶೋಗಾಥೆ ಇದು.
ತನ್ನ ಅವಿರತ ಶ್ರಮದಿಂದ ರಾಜ್ಯ ಮತ್ತು ಹೊರ ರಾಜ್ಯದಲ್ಲಿ ಈಗಾಗಲೇ ೧೪ಸಾವಿರಕ್ಕೂ ಹೆಚ್ಚು ಒಲೆಗಳನ್ನು ನಿರ್ಮಿಸಿದ್ದಾರೆ. ಶೀಘ್ರದಲ್ಲೇ ೨೦ಸಾವಿರ ಒಲೆ ನಿರ್ಮಿಸುವ ಅತ್ಯುತ್ಸಾಹದಲ್ಲಿದ್ದಾರೆ. ವಯಸ್ಸು ೪೯ ಆದರೂ ಅವರ ಉತ್ಸಾಹ ಒಂದಿಷ್ಟೂ ಕುಗ್ಗಿಲ್ಲ. ಹಾಗಾಗಿ ಒಬ್ಬ ಮಾದರಿ ಯಶಸ್ವಿ ಗೃಹಿಣಿ ಎನಿಸಿದ್ದಾರೆ.
ಟೈಡ್ ಸಂಸ್ಥೆಯ ಮಾರ್ಗದರ್ಶನದಲ್ಲಿ ಹಳ್ಳಿ ಹಳ್ಳಿಗಳಿಗೆ ಹೋಗಿ ಅಲ್ಲಿ ಸಿಗುವ ಸ್ಥಳೀಯ ಸಂಪನ್ಮೂಲ ಬಳಸಿಕೊಂಡು ಒಲೆಗಳನ್ನು ಕೇವಲ ೨೦೦-೩೦೦ರೂಗಳಲ್ಲಿ ಸರಳ, ಸುಲಭ ಅಸ್ತ್ರಒಲೆಯನ್ನು ತಯಾರಿಸಿ ಕೊಡುವ ಇವರು ಸ್ಥಳೀಯ ಮಟ್ಟದ ಉದ್ಯಮವಾಗಿಸಿಕೊಂಡು ಶ್ರಮವಹಿಸಿ, ನ್ಯಾಯವಾಗಿ ಹಣ ಸಂಪಾದನೆ ಮಾಡುತ್ತಿದ್ದಾರೆ. ಸಾಂಪ್ರದಾಯಿಕ ಒಲೆಗಳಿಗಿಂಥ ವಿಭಿನ್ನ ಹಾಗೂ ಗ್ರಾಮೀಣ ಪರಿಸರಕ್ಕೆ ಸೂಕ್ತವಾಗಿ ಹೊಂದುವಂತಹ ಈ ಒಲೆಗಳು ಇಂಧನ ಮಿತವ್ಯಯಿ ಕೂಡ. ಗ್ರಾಮೀಣ ಮಹಿಳೆಯರ ಆರೋಗ್ಯದ ದೃಷ್ಟಿಯಲ್ಲೂ ಇದು ಉತ್ತಮ ಎನಿಸಿದೆ. ಸಾಂಪ್ರದಾಯಿಕ ಒಲೆಗಳಿಗಿಂತ ಅರ್ಧ ಪಟ್ಟು ಕಡಿಮೆ ಕಟ್ಟಿಗೆಯಿಂದ ಅತ್ಯಂತ ಹೆಚ್ಚಿನ ಶಾಖ ನೀಡುವ ಈ ಒಲೆ ಹೊಗೆ ರಹಿತವಾಗಿದ್ದು ಗ್ರಾಮೀಣ ಮಹಿಳೆಯರ ಅಚ್ಚುಮೆಚ್ಚು ಎನಿಸಿದೆ.
ಭ್ಯೆಫ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಲ್ಲಿ ನರ್ಸರಿ ತರಬೇತಿಯನ್ನೂ ಪಡೆದಿರುವ ಇವರು ತಮ್ಮ ಗ್ರಾಮದಲ್ಲಿ ಔಷಧ ಗಿಡಗಳನ್ನು ನೆಟ್ಟು ಜನರಿಗೆ ಉಪಕಾರಿಯಾದರು. ಹೋದ ಕಡೆಯಲ್ಲಿ ತನ್ನ ಕಾಯಕದ ಜೊತೆಗೆ  ಗ್ರಾಮೀಣ ಅಭಿವೃದ್ಧಿ, ಸ್ವಚ್ಚತೆ, ಪರಿಸರ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಿ, ಬಾಯಿ ಮಾತಿನ ಪ್ರಚಾರ ಮಾಡುವ ಸಾಮಾಜಿಕ ಸೇವಕಿ ಎನಿಸಿದ್ದಾರೆ.

ತರಬೇತಿಯಿಂದ ಏನಾದೀತು ಎಂದು ಗ್ರಾಮದ ಕೆಲವು ಜನರು ಹೀಯಾಳಿಸಿದ್ದರು. ಸೌದೆ, ಸೀಮೆಎಣ್ಣೆ, ವಿದ್ಯುತ್ ಹಾಗೂ ಆಧನಿಕ ಗ್ಯಾಸ್ ಸ್ಟೌಗಳ ಭರಾಟೆಯಲ್ಲಿ ಲಲಿತಾಬಾಯಿಯ ಅಸ್ತ್ರ ಒಲೆ ಉಳಿಯುತ್ತಾ ಎಂದು ಜನರಾಡಿ ಕೊಳ್ಳುವಾಗಲೇ ತನ್ನ ನಿಷ್ಟೆ, ಶ್ರದ್ದೆ ಮತ್ತು ಅಚಲ ವಿಶ್ವಾಸದಿಂದ ಮುನ್ನುಗಿದ್ದ ಅವರು ಎರಡು ವರ್ಷ ಕಳೆಯುವುದರ ಒಳಗೆ ೨೦೦೭ ಸಾಲಿನ ಸಿಐಐ-ಭಾರತಿ ಆದರ್ಶ ಮಹಿಳಾ ಪ್ರಶಸ್ತಿಗೆ ಆಯ್ಕೆಯಾಗಿ ಆಗದು ಎಂದು ಕೈ ಹೊತ್ತು ಕುಳಿತ ಮಂದಿಯ ಎದುರು ಭಾರತೀಯ ಕೈಗಾರಿಕಾ ಒಕ್ಕೂಟ ಮತ್ತು ಟೆಲಿಕಾಂ ವಲಯದ ಏರ್‌ಟೆಲ್ ಭಾರತದಲ್ಲಿ ಗ್ರಾಮೀಣ ಅಭಿವೃದ್ಧಿಗೆ ಕೊಡುಗೆ ನೀಡಿದ ಸಾಹಸಿ ಉದ್ಯಮಿ ಎಂದು ಗುರ್ತಿಸಿಕೊಂಡು ಒಂದು ಲಕ್ಷ ನಗದು ಪುರಸ್ಕಾರ, ಪ್ರಶಸ್ತಿ ಹಾಗೂ ಪದಕದೊಂದಿಗೆ ದೆಹಲಿಯ ಅಂದಿನ ಮುಖ್ಯಮಂತ್ರಿ ಶೀಲಾದೀಕ್ಷಿತ್ ಅವರಿಂದ ಬೆನ್ನುತಟ್ಟಿಸಿಕೊಂಡ ಹೆಮೆಯ ಮಹಿಳೆ ಎನಿಸಿದ್ದರು. ಈಗ ಹತ್ತಾರು ಸನ್ಮಾನಗಳು ಅಅರನ್ನು ಅರಸಿ ಬಂದಿವೆ.
ಸಾಧಕಿಯ ಯಶೋಗಾಥೆ:  

ತಿಪಟೂರು ತಾಲೂಕಿನ ಹಿಂದುಳಿದ ಗ್ರಾಮದಲ್ಲಿ ಕಳೆದ ಆರು ವರ್ಷಗಳ ಹಿಂದೆ ಅತ್ಯಂತ ಬಡತನದ ಶಾಪದಲ್ಲಿ ಕನಸ್ಸುಗಳನ್ನು ಗಂಟು ಕಟ್ಟಿ ಮೂಲೆಗೆಸೆದು ಗಂಡನೊಂದಿಗೆ ಬದುಕಿನ ಬಂಡಿ ನೆಡಸಲು ಹೆಗಲು ಕೊಟ್ಟಿದ್ದ ಲಿಲಿತಾಬಾಯಿ, ಹಸಿದ ಹೊಟ್ಟೆಯ ತಣಿಸಲು ಗಾರೆ ಕೆಲಸ, ಜಲ್ಲಿ ಹೊಡೆಯುವ ಕೆಲಸ, ಸೌದೆ ಹೊರುವ ಕೆಲಸ ಮಾಡಿ ಹೇಗೋ ಸಂಜೆಯ ವೇಳೆಗೆ ೨೦-೩೦ರೂ ದುಡಿಯುತ್ತಿದ್ದ ಲಲಿತಾಬಾಯಿ ಮುಂದೆ ತಾನು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಖ್ಯಾತಿಗೆ ಒಳಗಾಗಿ, ಆರ್ಥಿಕವಾಗಿ ಉತ್ತಮ ಜೀವನ ನಡೆಸುತ್ತೇನೆ ಎನ್ನುವ ಕಲ್ಪನೆಯೂ ಸಹ ಇರಲಿಲ್ಲ. ಕಿತ್ತು ತಿನ್ನುವ ಬಡತನದಲ್ಲಿ ತನ್ನ ಇಬ್ಬರು ಮಕ್ಕಳನ್ನು ಚೆನ್ನಾಗಿ ಓದಿಸಿ, ಅವರ ಭವಿಷ್ಯ ನಿರ್ಮಿಸುವ ಕನಸನ್ನೂ ಕಾಣದ ಸ್ಥಿತಿಯಲ್ಲಿ ಲಲಿತಾಬಾಯಿಗೆ ಕೈಹಿಡಿದಿದ್ದು ಟೈಡ್( ಟೆಕ್ನಾಲಜಿ ಇನ್ಫೋಮೆಟ್ರಿಕ್ ಡಿಸೈನ್ ಎಂಡೀವರ್) ಸಂಸ್ಥೆ.
ಬೆಂಗಳೂರಿನಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸುಸ್ಥಿರ ತಂತ್ರಜ್ಞಾನ ಕೇಂದ್ರ ಸರಳ ಹೆಸರಿನಲ್ಲಿ ಅಭಿವೃದ್ಧಿ ಪಡಿಸಿದ ಸೌದೆ ಆಧಾರಿತ ಉರಿಯುವ ಒಲೆಯನ್ನು ನಿರ್ಮಿಸುವ ತರಬೇತಿಯನ್ನು ಎಲ್ಲರಂತೆ ಮುಗಿಸಿದ ಲಲಿತಾಬಾಯಿ ಇದರಲ್ಲೇ ತನ್ನ ಭವಿಷ್ಯವನ್ನು ಕನಸಿಕೊಂಡು ಅದಕ್ಕೊಂದು ರೂಪ ಮತ್ತು ಶಕ್ತಿ ಕೊಟ್ಟರು. ಕಲಿತದ್ದು ಈಕೆಯ ಕೈ ಹಿಡಿದ ಪರಿಣಾಮ ಇಂದು ಅತ್ಯಂತ ಬೇಡಿಕೆಯ ಸ್ವಯಂ ವೃತ್ತಿ ಮಹಿಳೆಯಾಗಿದ್ದಾರೆ. ತನ್ನ ೪೫ರ ವಯಸ್ಸಿನಲ್ಲಿ ದಿಕ್ಕು ಕಾಣದ ದಿನಗಳಲ್ಲಿ ತೆಗೆದುಕೊಂಡ ದೃಡ ನಿರ್ಧಾರ ಇಂದು ಆಕೆಯ ಭವಿಷ್ಯವನ್ನೇ ಬದಲಿಸಿದೆ. ಸಾಧಕಿ ಲಿಲತಾಬಾಯಿಯ ಛಲ ಮತ್ತು ಪರಿಶ್ರಮ ಆಕೆಗೆ ಗೌರವ, ಕೀರ್ತಿ, ಹಣ ಹಾಗೂ ತೃಪ್ತಿಯನ್ನು ನೀಡಿದೆ. ತನ್ನ ಮಗಳಿಗೆ ಟಿಸಿಹೆಚ್ ಓದಿಸಿ ಕೆಲಸ ಕೊಡಿಸಿದ್ದಾರೆ. ಮಗನಿಗೆ ಐಟಿಐ ತರಬೇತಿ ಕೊಡಿಸಿದ್ದಾರೆ. ತನ್ನ ನಿಷ್ಠೆ, ನಿಸ್ವಾರ್ಥ ಮತ್ತು ಅರ್ಪಣಾ ಮನೋಭಾವ ಕಾಯಕಕ್ಕೆ ದಿನಕ್ಕೆ ಕನಿಷ್ಟ ಐದು ನೂರು ದುಡಿಯುತ್ತಾ ಅದರಲ್ಲೇ ಸಂತೃಪ್ತಿ ಪಡುತ್ತಾರೆ. ಸಂಕಟದ ಬದುಕಿನ ತೀವ್ರತೆ ಅರಿತಿರುವ ಲಲಿತಾಬಾಯಿ ಕಷ್ಟ ಎಂದು ಬಂದ ಮಹಿಳೆಯರಿಗೆ ಬದುಕುವ ಮಾರ್ಗವನ್ನು ಹೇಳಿಕೊಡುತ್ತಾರೆ ಅಲ್ಲದೇ ಆರ್ಥಿಕ ಸಹಾಯವನ್ನೂ ಮಾಡಿ, ಪ್ರೋತ್ಸಾಹಿಸುತ್ತಿದ್ದಾರೆ. ಅವರೂ ಸ್ವ ಉದ್ಯೋಗ ಮಾಡುವಂತೆ ಹುರಿದುಂಬಿಸಿ, ಮಾರ್ಗದರ್ಶನ ನೀಡುತ್ತಾ ಪರಿಪೂರ್ಣ ಮಹಿಳೆ ಎನಿಸಿರುವ ಆಕೆಯನ್ನು ನಾನಾ ಸಂಘಟನೆಗಳು ಗುರ್ತಿಸಿ, ಹೆಮ್ಮೆಯಿಂದ ಅಭಿನಂದಿಸಿವೆ. ತಾಲೂಕು ಆಡಳಿತದ ನಾನಾ ಇಲಾಖೆಗಳು ಸನ್ಮಾನಿಸಿ, ಪುರಸ್ಕರಿಸಿವೆ.
ಬೆನ್ನ ಹಿಂದೆ ಬಿದ್ದು ಅಂಗಲಾಚಿ ಬೇಡುವ ಹುಂಬರಿಗೆ, ಹೊಗಳುವ ನಿರರ್ಥಕರಿಗೆ, ಸ್ವಾರ್ಥ ಪ್ರಚಾರ ಪ್ರಿಯರಿಗೆ ಪ್ರಶಸ್ತಿ ನೀಡುವ ಪರಿಪಾಠವನ್ನು ಸರಕಾರ ಕೂಡಲೇ ಕೈಬಿಟ್ಟು ಇಂತಹ ನಿಸ್ವಾರ್ಥ ಶ್ರಮ ಜೀವಿಗಳನ್ನು ಗುರ್ತಿಸಿ, ಪುರಸ್ಕರಿಸಿದರೆ ಸಾರ್ಥಕ್ಯ ಎನಿಸುತ್ತದೆ.


Wednesday, September 14, 2011

ಮಕ್ಕಳ ಊಟಕ್ಕೆ ಅಸ್ಪೃಶ್ಯತೆಯ ಸೋಗು


ಮಕ್ಕಳ ಊಟಕ್ಕೆ ಅಸ್ಪೃಶ್ಯತೆಯ ಸೋಗು
ಶಾಸ್ತ್ರ, ಜ್ಯೋತಿಷ್ಯದಲ್ಲಿ ಹೆಸರು ಮಾಡಿದ್ದ, ಮಾಜಿ ಮುಖ್ಯ ಮಂತ್ರಿಗಳಾದ ಕುಮಾರಸ್ವಾಮಿ, ಯಡಿಯೂರಪ್ಪ, ಮಾಜಿ ಸಚಿವರುಗಳನ್ನು ತನ್ನತ್ತ ಸೆಳೆದು ರಾಜ್ಯದಲ್ಲೇ ಖ್ಯಾತಿಗಳಿಸಿದ್ದ ತಿಪಟೂರು ತಾಲೂಕಿನ ನೊಣವಿನಕೆರೆ ಹೋಬಳಿ ಬುರುಡೇಘಟ್ಟದಲ್ಲಿ ಮತ್ತೊಂದು ರೀತಿಯಲ್ಲಿ ಹೆಸರು ಮಾಡಲು ಹೊರಟಿದೆ.
ಪರಿಶಿಷ್ಟ ಜಾತಿ ಮಹಿಳೆ ಅಡಿಗೆ ಮಾಡುತ್ತಾರೆ ಎಂಬ ಕಾರಣಕ್ಕೆ ಇಲ್ಲಿನ ಶಾಲೆಯಲ್ಲಿ ಬಿಸಿ ಊಟ ಮಾಡಬಾರದು ಎಂದು ಪೋಷಕರು ತಮ್ಮ ಮಕ್ಕಳಿಗೆ ತಾಕೀತು ಮಾಡಿರುವ ಘಟನೆಯ ಮೂಲಕ ಸುದ್ದಿಗೆ ಗ್ರಾಸವಾಗಿರುವ ಜೊತೆಗೆ ಶಿಕ್ಷಣ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.
ತಿಪಟೂರಿನ ಬುರುಡೇಘಟ್ಟ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಒಟ್ಟು ೬೬ ಮಕ್ಕಳು ವ್ಯಾಸಂಗ ಮಾಡುತ್ತಿದ್ದು ಅವರಲ್ಲಿ ಇಂದು ಕೇವಲ ೨೫ ಮಕ್ಕಳು ಮಾತ್ರ ಮಧ್ಯಾಹ್ನದ ಬಿಸಿ ಊಟ ಮಾಡುತ್ತಾರೆ. ಉಳಿದ ೪೧ ಮಕ್ಕಳು ಮೇಲ್ಜಾತಿಯ ಕುಟುಂಬಕ್ಕೆ ಸೇರಿದ್ದು ಆ ಮಕ್ಕಳು ಶಾಲೆಯಲ್ಲಿ ಊಟ ಮಾಡಬಾರದು ಎಂದು ಪೋಷಕರು ಮಕ್ಕಳ ಮೇಲೆ ಒತ್ತಡ ಹೇರಿದ್ದಾರಲ್ಲದೇ ತಮ್ಮ ತಮ್ಮ ಮನೆಯಿಂದಲೇ ಊಟ ಹಾಗೂ ತಿಂಡಿಯನ್ನು ಕೊಟ್ಟು ಕಳುಹಿಸುತ್ತಿದ್ದಾರೆ. ಇಲ್ಲಿ ದಲಿತ ಮಹಿಳೆ ಅಡಿಗೆ ಮಾಡುತ್ತಾರೆ ಎಂಬ ಒಂದೇ ಕಾರಣಕ್ಕಾಗಿ ಮಕ್ಕಳು ಇಲ್ಲಿ ಊಟ ಮಾಡಲು ಪೋಷಕರು ನಿರಾಕರಿಸಿದ್ದಾರೆ.
ಈ ವಿಷಯ ಬಿಇಒ ಮನಮೋಹನ್ ಅವರ ಗಮನಕ್ಕೆ ಬಂದಿದ್ದು ಅವರ ಸೂಚನೆ ಮೇರೆಗೆ ಶಾಲೆಯಲ್ಲಿ ನಡೆಯುತ್ತಿರುವ ಈ ತಾರತಮ್ಯ ಮತ್ತು ಅಸಮಾನತೆಯ ಬಗ್ಗೆ ಶಿಕ್ಷಕರು ಪೋಷಕರ ಮತ್ತು ಮಕ್ಳಳ ಮನವೊಲಿಸುವ ಯತ್ನ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಪೋಷಕರ ಕರೆಸಿ ಇದು ಶಾಲೆ ಎಲ್ಲರೂ ಇಲ್ಲಿ ಕಲಿಯುತ್ತಾರೆ, ಇಲ್ಲಿ ಎಲ್ಲರೂ ಸಮಾನರೇ ಮೇಲು ಕೀಳು ಎಂಬ ಇಬ್ಬಗೆ ನೀತಿಗೆ ಇಲ್ಲಿ ಅವಕಾಶ ಮಾಡಿಕೊಡುವಂತಿಲ್ಲ ಎಂದು ತಿಳಿಹೇಳಿದಾಗ ಅದಕ್ಕೆ ಆಕ್ರೋಶಗೊಂಡ ಪೋಕಷರು ತಮ್ಮ ಮಕ್ಕಳ ಟಿಸಿ ಕೊಟ್ಟು ಬಿಡಿ, ಇಲ್ಲ ತೆಪ್ಪಗಿರಿ ಎಂದು ತಾಕೀತು ಮಾಡಿದ್ದಾರೆ. ಇದು ಇಲ್ಲಿನ ಶಿಕ್ಷಕರಿಗೆ ಧರ್ಮ ಸಂಕಟವಾಗಿದೆ. ಯಾವುದೇ ಕಾರಣಕ್ಕೂ ಪರಿಶಿಷ್ಟ ಜಾತಿಯವರು ಮಾಡುವ ಅಡಿಗೆಯನ್ನು ನಮ್ಮ ಮಕ್ಕಳು ಊಟ ಮಾಡಬಾರದು ಎಂಬ ಮನೋಭಾವ ಪೋಷಕರದ್ದು, ಅವರ ಅಪ್ಪಣೆಯಂತೆ ನಡೆಯುವ ಮನಸ್ಥಿತಿ ಮಕ್ಕಳದ್ದು.
ಶಾಲೆಯಲ್ಲಿ ಎಲ್ಲಾ ವರ್ಗದ ಮಕ್ಕಳು ಯಾವುದೇ ಬೇಧ ಭಾವವಿಲ್ಲದೇ ಓದುತ್ತಾ, ಆಡುತ್ತಾ, ನಲಿಯುತ್ತಿವೆ. ಆದರೆ ಮಧ್ಯಾಹ್ನ ಬಿಸಿ ಊಟದಲ್ಲಿ ಮಾತ್ರ ಬೇಧ ಎಣಿಸಿದ್ದು ವಿಧಿಯಿಲ್ಲದೇ ಬೇರೆಯಾಗಿ ಊಟ ಮಾಡುತ್ತಿವೆ. ಮಕ್ಕಳ ಮನಸ್ಸಿನಲ್ಲಿ ಇದ್ಯಾವುದೂ ಅರ್ಥವಾಗುತ್ತಿಲ್ಲ, ಕೇಳಿದರೆ ಅವರಿಗೆ ಏನೂ ಗೊತ್ತಾಗುವುದೂ ಇಲ್ಲ. ಎನೂ ಅರಿಯದ ಮುಗ್ಧ ಮನಸ್ಸಿನ ಮೇರೆ ಮಡಿವಂತಿಕೆ ಸಮಾಜ ಇಂತಹ ಆಚರಣೆಗಳನ್ನು ಈಗಿನಿಂದಲೇ ತುಂಬುತ್ತಿದ್ದು ಮುಂದೆ ಅದರ ದುಷ್ಪರಿಣಾಮ ಮಕ್ಕಳ ಭವಿಷ್ಯದ ಮೇಲಾಗುತ್ತದೆ.

ದಲಿತ ಮಹಿಳೆ ಅಡಿಗೆ ಮಾಡದ್ದಕ್ಕೆ ಊಟ ನಿರಾಕರಣೆ:
ಇಲ್ಲಿ ಮೊದಲಿನಿಂದಲೂ ಮೂರು ಜನ ಅಡಿಗೆಯವರಿದ್ದಾರೆ. ಅವರಲ್ಲಿ ಶಿವಗಂಗಮ್ಮ ಹಾಗೂ ಸುನಂದಮ್ಮ ಇಬ್ಬರು ಸಾಮಾನ್ಯ ವರ್ಗದವರು ಹಾಗೂ ಲಕ್ಷ್ಮಿದೇವಿ ಒಬ್ಬ ಅಡಿಗೆಯವರು ಪರಿಶಿಷ್ಟಜಾತಿಯವರು. ಸಾಮಾನ್ಯ ವರ್ಗದ ಇಬ್ಬರೂ ಅಡಿಗೆ ಮಾಡುತಿದ್ದರಿಂದ ಶಾಲೆಯಲ್ಲಿ ಯಾವುದೇ ಸಮಸ್ಯೆ ತಲೆ ದೂರಿರಲಿಲ್ಲ. ಕಳೆದ ಆಗಸ್ಟ್ ತಿಂಗಳಲ್ಲಿ ಶಾಲಾ ದಾಖಲಾತಿಗಳ ಅನುಸರಿಸಿ ಸರಕಾರದ ನಿಯಮದಂತೆ ಸಾಮಾನ್ಯ ವರ್ಗದ ಸುನಂದಮ್ಮಳನ್ನು ವಜಾ ಗೊಳಿಸಲಾಗಿದೆ.
ಇಬ್ಬರು ಅಡಿಗೆಯವರಲ್ಲಿ ಶಿವಗಂಗಮ್ಮ ಮುಖ್ಯ ಅಡಿಗೆಯವರಾದ್ದರಿಂದ ಕಳೆದ ಆಗಸ್ಟ್ ತಿಂಗಳಿಂದ ಪರಿಶಿಷ್ಟ ಜಾತಿಯ ಲಕ್ಷ್ಮಿದೇವಿ ಅಡಿಗೆ ಮಾಡಲು ಆರಂಭಿಸಿದರು.  ಅಂದಿನಿಂದ ಮೇಲ್ವರ್ಗದ ಸುಮಾರು ೪೧ ಮಕ್ಕಳು ಶಾಲೆಯಲ್ಲಿ ಬಿಸಿ ಊಟ ಮಾಡುತ್ತಿಲ್ಲ.

ಪ್ರತಿಕ್ರಿಯೆಗೆ: ೯೪೪೮೪೧೬೫೫೦

Saturday, August 6, 2011

ತುತ್ತಿನ ಚೀಲ ತುಂಬಲು ಚಿಂದಿ ಹಾಯುವ ಮಕ್ಕಳು:



ತುತ್ತಿನ ಚೀಲ ತುಂಬಲು ಚಿಂದಿ ಹಾಯುವ ಮಕ್ಕಳು:

ಹಾಲು ಗಲ್ಲದ ಮಕ್ಕಳೂ ಕೊಳಚೆಯಲ್ಲಿ ಚಿಂದಿಹಾಯುವ ಸ್ಥಿತಿ: ಬದುಕಿನೊಂದಿಗೆ ಬಿಡದೇ ಅಂಟಿಕೊಂಡ ಬಡತನದ ಬೇಗೆಯಲ್ಲಿ ತುತ್ತು ಕೂಳಿಗೆ, ತುಂಡು ಬಟ್ಟೆಗೆ ನಿತ್ಯಾ ಪರದಾಡುವ ಲಕ್ಷಾಂತರ ಜನರ ದುಸ್ಥಿತಿ..  ಇದು ಇಂದಿನ ಭಾರತ.

ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎನ್ನುವ ನಮ್ಮ ಘನ ಸರಕಾರದ ಮಹತ್ತರ ಘೋಷಣೆ ನಡುವೆ ಇಂತಹ ಪರಿಸ್ಥಿತಿ ನಿಜಕ್ಕೂ ಶೋಚನೀಯ.  ಉದರ ನಿಮಿತ್ತಂ ಬಹುಕೃತ ವೇಷಂ ಎಂಬಂತೆ ತುತ್ತಿನ ಚೀಲ ತುಂಬಿಕೊಳ್ಳಲು ಹಸಿದ ಜನ ನಾನಾ ನಾನಾ ಮಾರ್ಗ ಅನುಸರಿಸುತ್ತಾರೆ. ಕೆಲವರು ಬಿಕ್ಷೆ ಬೇಡಿ ಜೀವನ ಸಾಗಿಸಿದರೆ, ಮತ್ತೆ ಕೆಲವರು ನಾನಾ ವೇಷ ಭೂಷಣ ತೊಡುತ್ತಾರೆ. ಒಂದಷ್ಟು ಜನ ಈ ತರಹದ ಬೀದಿ ಬೀದಿಗಳಲ್ಲಿ ಚಿಂದಿ ಆಯ್ದು ಬದುಕಿನ ಗಾಡಿ ನಡೆಸುತ್ತಾರೆ. ಇವರಲ್ಲಿ ಕುಂಟರೆಷ್ಟೋ, ಕುರುಡರೆಷ್ಟೋ, ರೋಗಿಗಳೆಷ್ಟೋ, ನಿರ್ಗತಿಕರೆಷ್ಟೋ, ವೃದ್ಧರೆಷ್ಟೋ..

ತಿಪಟೂರು ನಗರದ ಕೆಲವು ಭಾಗಗಳಲ್ಲಿ ಅನಾಥರು, ಬಿಕ್ಷಕರು, ನಿರ್ಗತಿಕರ ಸಂಖ್ಯೆ ಹೆಚ್ಚುತ್ತಿದೆ. ನಗರವಲ್ಲದೇ ಇತರೆ ನಗರಗಳು, ಪಟ್ಟಣಗಳಲ್ಲಿ ಇವರ ಸಂಖ್ಯೆಯೇನೂ ಕಡಿಮೆ ಇಲ್ಲ. ದಾರಿಯಲ್ಲಿ ಮಕ್ಕಳನ್ನು ಮಕಡೆ ಮಲಗಿಸಿ ನೋಡುಗರಿಗೆ ಕನಿಕರ ಬರುವಂತೆ ಬಿಕ್ಷೆ ಬೇಡುವವರು ಒಂದು ಕಡೆ ತಮ್ಮ ದಿನವನ್ನು ದೂಡಿದರೆ. ಮತ್ತೊಂದು ಕಡೆ  ಬೀದಿಗಳಲ್ಲಿ, ಮನೆಯ ಮುಂದೆ, ಕೊಳಚೆ ಪ್ರದೇಶದಲ್ಲಿ ಕಸದ ರಾಶಿಗಳಲ್ಲಿ ಬಿದ್ದಿರುವ ಪ್ಲಾಸ್ಟಿಕ್ ವಸ್ತುಗಳು, ಕಬ್ಬಿಣದ ತುಂಡುಗಳು ಇತ್ಯಾದಿಗಳನ್ನು ಹೆಕ್ಕಿ ತೆಗೆದು, ಮಾರಿ ಅನ್ನ ಸಂಪಾದಿಸುವ ಈ ಜನ ತಮ್ಮ ಆ ದಿನದ ತುತ್ತಿನ ಚೀಲ ತುಂಬಿಕೊಳ್ಳುವ ಮೂಲಕ ಹಸಿವಿನ ವೇದನೆಯನ್ನು ತಣಿಸಿಕೊಳ್ಳುತ್ತಾರೆ. ಇವರೆಲ್ಲಾ ನಿರಾಶ್ರಿತರೇ. ಹಾಳು ಮನೆ, ಶಾಲೆ, ಮರಗಳ ನೆರಳೇ ಇವರಿಗೆ ಸೂರು.

ಆದರೆ ಜಗತ್ತಿನ ಪರಿವೇ ಇಲ್ಲದ ಮುಗ್ದ ಹಾಲು ಗಲ್ಲದ ತಮ್ಮ ಮಕ್ಕಳನ್ನೂ ಸಹ ಇಂತಹ ಚಿಂದಿ ಆಯುವ ಕೆಲಸಕ್ಕೆ ಹಚ್ಚುವ ದುಸ್ಥಿತಿ ನಿಜಕ್ಕೂ ಕರಣಾಜನಕ. ಇಲ್ಲಿನ ರೈಲ್ವೇ ನಿಲ್ದಾಣ ಮತ್ತಿತರ ಕಡೆ ವಾಸಿಸುವ ಬಡ ದಂಪತಿಗಳು ನಗರದ ನಾನಾ ಬಡಾವಣೆಗಳಲ್ಲಿ ನಿತ್ಯಾ ತಿರುಗುತ್ತಾ ಮನೆಯಿಂದ ಎಸೆದ ಕಸದಲ್ಲಿ ಮತ್ತು ದುರ್ವಾಸನೆಯುಕ್ತ ಕೊಳಚೆಗಳಲ್ಲಿ ಚಿಂದಿ ಆಯುವ ಕಾಯಕ ಮಾಡುತ್ತಾರೆ. ಅವರಿಗೆ ಆ ಕಾಯಕದಲ್ಲಿಯೇ ಅನ್ನ, ಬಟ್ಟೆ ಸಿಕ್ಕಿರ ಬಹುದು ಅಥವಾ ಸಿಕ್ಕದೇ ಇರಬಹುದು. ಆದರೆ ನಿಯಂತ್ರಣದ ಅರಿವಿಲ್ಲದೇ ಹುಟ್ಟಿದ ಎಲ್ಲಾ ಮಕ್ಕಳನ್ನು ಚಿಂದಿ ಹಾಯುವ ಕೆಲಸಕ್ಕೆ ಅಚ್ಚುವುದು ಎಷ್ಟು ಸರಿ? ಇದು ತಪ್ಪು ಎಂದು ಅವರ ಮನವೊಲಿಸಿ ಪನರ್ವಸತಿ ಕಲ್ಪಿಸಿಕೊಡುವವರು ಯಾರು?

೨೮ ವರ್ಷದ ಈ ಮಹಿಳೆಗೆ ೩೫ ವರ್ಷದ ಗಂಡನಿದ್ದಾನೆ. ಅವನು ಒಂದು ಕಡೆ ಚಿಂದಿ ಆಯುತ್ತಾನೆ. ಈಕೆಗೆ ಸುಮಾರು ಐದು ವರ್ಷದ ಒಂದು ಹೆಣ್ಣು ಮಗುವಿದೆ, ಮೂರು ವರ್ಷದ ಒಂದು ಗಂಡು ಮಗು ಜೊತೆಯಲ್ಲಿ ಹಾಲು ಕುಡಿಯುವ ಒಂದು ವರ್ಷದ ಗಂಡು ಮಗು ಜೊತೆಗೆ ವಯಸ್ಸಾದ ತಾಯಿ ಇದ್ದಾರೆ. ನಗರದ ಬೀದಿ ಬೀದಿಯಲ್ಲಿ ಚಿಂದಿ ಆಯಲು ತನ್ನ ಮೂರು ಮಕ್ಕಳನ್ನು ಕರೆದುಕೊಂಡು ಹೋಗುವ ಈ ಮಹಿಳೆಗೆ ಬಡತನವೇ ದೊಡ್ಡ ಶಾಪವಾಗಿದೆ. ನಾನಾ ಸುಂದರ ಕನಸುಗಳನ್ನು ಕಟ್ಟಿಕೊಂಡು ಎಲ್ಲಾ ಮಕ್ಕಳಂತೆ ಕುಣಿದು ನಲಿಯಬೇಕಾದ ಹೆಣ್ಣು ಮಗು ಚೀಲ ಹಿಡಿದು ಕೊಳಚೆಯಲ್ಲಿ ಚಿಂದಿ ಆಯುವ ಪರಿ ನೋಡಿದರೆ ಕಲ್ಲು ಹೃದಯವೂ ಹಿಂಡುವಂತಾದ್ದು. ತಾಯಿ ಅವಸರದಲ್ಲಿ ಮುಂದೆ ಮುಂದೆ ಚಿಂದಿಗಳನ್ನು ಹೆಕ್ಕಿ ತೆಗೆದು ಹೋಗುತ್ತಿದ್ದರೆ ಮಕ್ಕಳು ಅಳುತ್ತಾ ಅವರನ್ನು ಹಿಂಬಾಲಿಸುತ್ತವೆ. ಒಂದೊಂದು ಸಲ ಆಕೆ ಹಾಲು ಕುಡಿಯುವ ಮಗುವನ್ನು ಸೊಂಟಕ್ಕೆ ಕುಳ್ಳಿರಿಸಿಕೊಂಡು ಮತ್ತೊಂದು ಬಗಲಲ್ಲಿ ಆಯ್ದ ಚಿಂದಿಯ ಮೂಟೆ ಇಟ್ಟುಕೊಂಡು ತನ್ನ ಕಾಯಕ ಮುಂದುವರಸುತ್ತಾಳೆ. ಸುಸ್ತಾದರೆ ಎಲ್ಲೆಂದರಲ್ಲಿ ಕಸದ ನಡುವೆ ಮಗುವನ್ನು ಕೆಳಗೆ ಕೂರಿಸಿ, ಆ ಕಸದಲ್ಲಿಯೇ ಅನ್ನ ಹುಡುಕುವ ಕಾಯಕ ಮಾಡುತ್ತಾಳೆ. ಸಂಜೆಯವರೆಗೂ ಸುಮಾರು ಚಿಂದಿ ಸಂಗ್ರಹಿಸಿ ಬೇರ್ಪಡಿಸಿ, ಮಾರಾಟ ಮಾಡುತ್ತಾರೆ. ಹಳೇ ಪ್ಲಾಸ್ಟಿಕ್, ಹಾಲಿನ ಕವರ್, ಸಣ್ಣ ಪುಟ್ಟ ಕಬ್ಬಿಣ ಹಾಗೂ ತಗಡಿನ ತುಂಡುಗಳನ್ನು ಕೊಳ್ಳುವ ವ್ಯಾಪಾರಿಗಳಿದು ಅವರ ಬಳಿ ಮಾರಿ ಗಂಜಿಗೆ ಹಣ ಸಂಪಾದಿಸುತ್ತಾರೆ. ಬಯಲಲ್ಲೇ ಅಡಿಗೆ ಮಾಡಿ ಹಸಿದ ಹೊಟ್ಟೆಯ ತುಂಬಿಸಿ, ಆಕಾಶ ನೋಡುತ್ತಾ ಮಲಗಿ ನಿದ್ರಿಸುತ್ತಾರೆ. ಪುನಃ ಬೆಳಿಗ್ಗೆ ಅದೇ ಕಾಯಕ.

ಹೌದು, ಹಸಿವಿನ ಬಾಧೆಯನ್ನು ಕಂಡವರಿಗೆ ಗೊತ್ತು ಅದರ ಸಂಕಟ. ನಿತ್ಯಾ ಕಾಟ ಕೊಡುವ ಹೊಟ್ಟೆಯ ವೇದನೆ ತಣಿಸಲು ಈ ಪರದಾಟ. ಹುಟ್ಟು ಅವರಿಗೆ ಬಡತನ ಮತ್ತು ಹಸಿವನ್ನು ನೀಡಿರುತ್ತದೆ. ತಿಂಡಿ ಅಥವಾ ಊಟ ಸ್ವಲ್ಪ ತಡವಾದರೂ ಬಡಿದುಕೊಳ್ಳುವ ನಾವು ದಿನಗಟ್ಟಲೆ, ವಾರಗಟ್ಟಲೆ, ತಿಂಗಳುಗಟ್ಟಲೆ ಆ ಹಸಿವಿನ ನೋವು ಸಹಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಅವರು ನಮ್ಮಂತೆ ಮನುಷ್ಯರು ಎಂದು ಭಾವಿಸದ ಸಮಾಜ ಅವರನ್ನು ಸರಿ ದಾರಿಗೆ ತರದೇ ನಿರ್ಲಕ್ಷಿಸಿ, ದೂರ ಇಟ್ಟಿರುವುದರಿಂದ ಅವರು ನಿತ್ಯಾ ಕಡು ಬಡತನದ ವೇದನೆ ಅನುಭವಿಸುವಂತಾಗಿದೆ. ಸರಕಾರದ ಯಾವ ಸವಲತ್ತುಗಳೂ ಇವರಿಗೆ ಸಿಗುವುದಿಲ್ಲ ಅಥವಾ ಗುರ್ತಿಸಿ, ಅವರಿಗೆ ಮುಟ್ಟಿಸುವ ಪ್ರಾಮಾಣಿಕ ಕೆಲಸವನ್ನು ನಮ್ಮ ಜನಪ್ರತಿನಿಧಿಗಳು ಮಾಡುವುದಿಲ್ಲ. ಅವರಿಗೆ ಒಂದು ಪರಿಹಾರ ಅಥವಾ ಪರ್ಯಾಯ ಬದುಕಿನ ಮಾರ್ಗವನ್ನು ಯಾರೂ ಹುಡುಕಿಕೊಡುವ ಮನಸ್ಸು ಮಾಡೋದೂ ಇಲ್ಲ. ಇನ್ನೂ ಬಡತನ ನಿರ್ಮೂಲನೆಗೆ ಸರಕಾರಗಳು ಬಿಡುಗಡೆ ಮಾಡುವ ಸಾವಿರಾರು ಕೋಟಿಗಳು ಸಾಲದೇ ಅದು ಇಲಾಖೆಗಳ ಬಾಗಿಲು ದಾಟಿ, ಇಂತಹ ನಿರ್ಗತಿಕರ ತಲುಪುವಲ್ಲಿ ವಿಫಲವಾಗಿದೆ.  ಹಾಗಾಗಿ ಬೀದಿಯಲ್ಲಿರುವುದು ಇಂತಹವರಿಗೆ ಅನಿವಾರ್ಯ ಕರ್ಮ.

ನಮ್ಮ ದೇಶ ಈಗ ಜಾಗತೀಕ ಮಟ್ಟದಲ್ಲಿ ಶ್ರೀಮಂತ ರಾಷ್ಟ್ರ ಎನಿಸಿಕೊಳ್ಳುವ ಪೈಪೋಟಿಯಲ್ಲಿದೆ. ಆರ್ಥಿಕ ಸ್ಥಿರತೆ ಮತ್ತು ಸದೃಡತೆ ಹೊಂದಲು ಸರಕಾರ, ಖಾಸಗೀ ವಲಯ ನಾನಾ ಶತ ಪ್ರಯತ್ನ ನಡೆಸುತ್ತಿವೆ. ಆದರೆ ದೇಶದೊಳಗೆ ಇರುವ ದಾರಿದ್ರ್ಯ ನಿವಾರಣೆಗೆ ಸಮರೋಪಾದಿಯಲ್ಲಿ ಕೆಲಸ ಮಾಡಲು ವಿಫಲವಾಗಿದೆ. ನಿತ್ಯಾ ಸಾವಿರಾರು ಕೋಟಿಯಷ್ಟು ಹಣ ಸಲ್ಲದ ವಿಚಾರಕ್ಕೆ ಪೋಲಾಗುತ್ತಿದೆ. ಅನಾವಶ್ಯಕ ಕೆಲಸಗಳಿಗೆ ಖರ್ಚು ಮಾಡಲಾಗುತ್ತಿದೆ. ಇದೂವರೆಗೂ ಬಂಡವಾಳ ಶಾಯಿಗಳಿಗೆ ಲಕ್ಷಾಂತರ ಕೋಟಿ ತೆರಿಗೆ ಮನ್ನಾ ಮಾಡಲಾಗಿದೆ. ಭ್ರಷ್ಟಾಚಾರದಲ್ಲಿ ಸಾವಿರಾರು ಕೋಟಿ ಹಣ ದುಷ್ಟರ ಪಾಲಾಗಿದೆ. ಗಣಿ ಸೇರಿದಂತೆ ದೇಶದ ನಾನಾ ಹಗರಣದಲ್ಲಿ ಕೋಟಿ ಕೋಟಿಯಷ್ಟು ಹಣ ಹಣವಂತರ, ಅಧಿಕಾರಿಗಳ ಮತ್ತು ರಾಜಕಾರಣಿಗಳ ಖಜಾನೆ ಸೇರಿದೆ. ಇಷ್ಟು ಹಣದಲ್ಲಿ ಕೇವಲ ಶೇ೧೦ರಷ್ಟು ಹಣ ಖರ್ಚು ಮಾಡಿದರೆ ಇಂಯಹ ನಿರ್ಗತಿಕರಿಗೆ ಪುನರ್ವಸತಿ ಕಲ್ಪಿಸಿ, ಪುಣ್ಯ ಕಟ್ಟಿ ಕೊಳ್ಳಬಹುದಲ್ಲವೇ.

ನಿವೇದನೆ: ನಿಮ್ಮ ಅನಿಸಿಕೆಯನ್ನು ದಯಮಾಡಿ ನನಗೆ ಕಳುಹಿಸಿ ಅಥವಾ ದೂರವಾಣಿ ಕರೆ ಮಾಡಿ. ಮೋಬೈಲ್: ೯೪೪೮೪ ೧೬೫೫೦






Monday, July 18, 2011

ಹುಟ್ಟಿದ ಮನೆಗೆ ಪುಣ್ಯ ಕಟ್ಟದ ಪುಣ್ಯಾನಂದ.

ಹುಟ್ಟಿದ ಮನೆಗೆ ಪುಣ್ಯ ಕಟ್ಟದ ಪುಣ್ಯಾನಂದ.  

ಪ್ರತಿಷ್ಠಿತ ಮಠದ ಮಠಾಧೀಶರಾಗಿದ್ದ ಮಗ ಅಕಾಲಿಕ ಸಾವಿಗೆ ತುತ್ತಾಗಿ ನಾಲ್ಕು ವರ್ಷ ಕಳೆದಿದ್ದು ಅವರಿಗೆ ಜನ್ಮ ನೀಡಿದ್ದ ತಂದೆ ತಾಯಿ ಮಾತ್ರ ಸಮಾಜ ನೀಡಿದ ಭರವಸೆಗಾಗಿ ಕಾಯುತ್ತಾ ಇಂದಿಗೂ ತಮ್ಮ ಶ್ರಮದಾಯಕ ಬದುಕಿಗೆ ಮಂಗಳ ಹಾಡದೇ ನಿತ್ಯಾ ಬೆವರು ನೀರು ಹರಿಸುತ್ತಿರುವುದು ಶೋಚನೀಯ. 

ಹೌದು, ಇದು ಸಮಾಜ ಹಾಗೂ ಸಮಾಜದ ಪ್ರತಿಷ್ಠಿತರಿಗಾಗಿ ತಮ್ಮ ಕೈಲಾದಷ್ಟು ಪುಣ್ಯ ಕಟ್ಟಿಟ್ಟು ಹೋದ ಪುಣ್ಯಾನಂದರ ಹೆತ್ತ ಕುಟುಂಬದ ದುರಂತ ಕಥೆ. ಇಂದಿಗೆ ಸುಮಾರು ನಾಲ್ಕು ವರ್ಷಗಳ ಹಿಂದೆ ೨೦೦೭, ಏಪ್ರಿಲ್ ೩ ಮಂಗಳವಾರದ ದುರ್ದಿನದಂದು ಶ್ರೀ ವಾಲ್ಮಕಿ ಮಹಾ ಸಂಸ್ಥಾನ ರಾಜನಹಳ್ಳಿಯ ಮಹರ್ಷಿ ವಾಲ್ಮಿಕಿ ಗುರು ಪೀಠದ ಸ್ವಾಮಿಜಿಯಾಗಿದ್ದ ಪುಣ್ಯಾನಂದಪುರಿ ಸ್ವಾಮಿಜಿ ದಾವಣಗೆರೆ ಹೊರ ವಲಯದಲ್ಲಿ ಹಳಿ ದಾಟುವಾಗ ಅವರ ಕಾರಿಗೆ ರೈಲು ಡಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ ದುರ್ಮರಣ ಹೊಂದಿದ್ದರು. ಮಗನ ಸಾವಿನ ಸೂಚನೆ ಅರಿಯದ ಶ್ರೀಗಳ ತಂದೆ ತಾಯಿಗಳು ತಿಪಟೂರಿನಲ್ಲಿ ಅಂದು ಹಸಿವಿಗಾಗಿ ಬೆವರಿಳಿಸಿ ಕೂಲಿ ಮಾಡುತ್ತಿದ್ದರು. ಶ್ರೀಗಳ ಅಕಾಲಿಕ ಸಾವು ಇವರಿಗೆ ಸೂತಕವಾದರೆ ಇಡೀ ವಾಲ್ಮಿಕಿ ಸಮಾಜಕ್ಕೆ ಒಂದು ಕರಾಳ ದಿನವಾಗಿತ್ತು.

ಈ ಆಘಾತದಿಂದ ಶೋಕತಪ್ತರಾಗಿದ್ದ ಜನ ಶ್ರೀಗಳ ಕುಟುಂಬದ ದುಸ್ಥಿತಿ ಕಂಡು ಅನುಕಂಪ ತೋರಿದರು. ಸಮಾಜಕ್ಕಾಗಿ ಮಗನನ್ನು ಕೊಟ್ಟ ಕುಟುಂಬಕ್ಕೆ ಸಹಾಯ ನೀಡಲು ಮುಂದಾಗಿದ್ದರು. ಅಂದು ಸಚಿವರಾಗಿದ್ದ ಸತೀಶ ಜಾರಕಿಹೊಳಿ ಸ್ವತಃ ಶ್ರೀಗಳ ಕುಟುಂಬಕ್ಕೆ ಸಹಾಯ ಮಾಡುವ ಭರವಸೆ ನೀಡಿದ್ದರು. ಶ್ರೀಗಳ ತಂಗಿಯೊಬ್ಬರ ಮದುವೆಗೆ ಕುಟುಂಬ ಮಾಡಿದ ಸಾಲ, ನಿರ್ಮಿಸಿಕೊಂಡ ಮನೆಯ ಸಾಲ ತೀರಿಸಿ ಒಂದಷ್ಟು ಹಣಕಾಸು ಸಹಾಯ ನೀಡುವುದಾಗಿ ಅಂದು ಸಮಾಜದ ಮುಂದೆ ಅವರು ಬಹಿರಂಗವಾಗಿ ಹೇಳಿಕೊಂಡಿದ್ದರು. ಟ್ರಸ್ಟ್‌ನಲ್ಲಿ ಕುಟುಂಬದ ಸದಸ್ಯರೊಬ್ಬರಿಗೆ ಸದಸ್ಯತ್ವ ನೀಡುವ ಬಗ್ಗೆಯೂ ಸಭೆ ನಿರ್ಣಯಿಸಿತ್ತು. ಆದರೆ ಕಾಲ ಕಳೆದಂತೆ ಅನುಕಂಪದ ದಿನಗಳಲ್ಲಿ ನೀಡಿದ ಆಶ್ವಾಸನೆಗಳೆಲ್ಲಾ ಕೇವಲ ಹುಸಿ ಭರವಸೆಗಳಾಗಿ ಹೋದವು. ಸಹಾಯ ಮಾಡುವುದು ಆಗಿರಲಿ ಇಡೀ ಟ್ರಸ್ಟ್ ಇವತ್ತಿಗೂ ಇತ್ತಾ ತಿರುಗಿಯೂ ನೋಡಲಿಲ್ಲ.

ಚಿತ್ರದುರ್ಗದ ಶ್ರೀ ಶಿವಮೂರ್ತಿ ಮುರುಘರಾಜೇಂದ್ರಸ್ವಾಮಿಜಿ ಸಹ ಇವರ ಕುಟುಂಬದ ದುಸ್ಥಿತಿ ಕಂಡು ಸಹಾಯ ಮಾಡುವಂತೆ ಸತೀಶ್ ಜಾರಕಿಹೊಳಿಯವರಿಗೆ ಪತ್ರ ಬರೆದು ಆಗ್ರಹಿಸಿದ್ದರು. ಅದಕ್ಕೂ ಬೆಲೆ ಸಿಗಲಿಲ್ಲ. ಶ್ರೀಗಳ ಕುಟುಂಬ ಎಂದು ಗೌರವವನ್ನೂ ನೀಡಲಿಲ್ಲ. ಆದರೆ ಹೊಸಪೇಟೆಯ ಶ್ರೀಗಳ ಅಭಿಮಾನಿಗಳು ಒಂದಷ್ಟು ಚಂದಾ ಸಂಗ್ರಹಿಸಿ ಸುಮಾರು ೮೦ ಸಾವಿರ ಕುಟುಂಬಕ್ಕೆ ನೀಡಿರುವುದು ಬಿಟ್ಟರೆ ಮತ್ಯಾವುದೇ ಬಿಡಿಗಾಸು ಸಹಾಯವಾಗಿಲ್ಲ ಎಂದು ಅವರ ಸಹೋದರ ಆಟೋ ಚಾಲಕ ವಿಜಯಕುಮಾರ್ ತಮ್ಮ ನೋವನ್ನು ತೋಡಿಕೊಳ್ಳುತ್ತಾರೆ.

"ನಮ್ಮ ಕೊನೆ ಕಾಲದಲ್ಲಿ ದುಡಿಯುವ ಶಕ್ತಿ ಕಳೆದುಕೊಂಡು ನಿತ್ರಾಣರಾದಾಗ ಮಗ ನೆರವಾಗುತ್ತಾನೆಂದು ಕಷ್ಟ ಪಟ್ಟು ಸಾಕಿ, ಸಲಹಿ, ವ್ಯಾಸಂಗ ಕೊಡಿಸಿ ದೊಡ್ಡವನಾಗಿ ಮಾಡಿದೆವು. ಆದರೆ ಮಗ ನಮ್ಮ ವಿರೋಧದ ನಡುವೆಯೂ ಸನ್ಯಾಸ ಸ್ವೀಕರಿಸಿ, ನಮ್ಮ ಮನಸ್ಸು ನೋಯಿಸಿ, ದಿಕ್ಕು ತಪ್ಪಿಸಿದ್ದಾನೆ" ಎಂದು ಕುಣಿಗಲ್ ತಾಲೂಕಿನ

ಹೊನ್ನೇನಹಳ್ಳಿ ಗ್ರಾಮದ ನಿಂಗಯ್ಯ ಮತ್ತು ಗಂಗಮ್ಮ ದಂಪತಿಗಳು ತಹಸೀಲ್ದಾರರಾಗಿದ್ದ ತಮ್ಮ ಮಗ ಡಾ.ಎಚ್.ಎಲ್.ನಾಗರಾಜ ಆದಿಚುಂಚನಗಿರಿ ಶ್ರೀಗಳ ಸಮ್ಮುಖದಲ್ಲಿ ಸನ್ಯಾಸ ಸ್ವೀಕರಿಸಿದ ಸುದ್ದಿ ಕೇಳಿ ಎದೆ ಬಡಿದುಕೊಂಡು ನೊಂದ ನುಡಿಗಳಿವು. ಇಂತಹುದ್ದೇ ನೊಂದ ಮಾತುಗಳನ್ನು ಪುಣ್ಯಾನಂದಾಪುರಿ ಸ್ವಾಮಿಜಿಗಳ ದೀಕ್ಷೆ ಸಮಯದಲ್ಲಿ ಅವರ ತಂದೆ ತಾಯಿಗಳು ಕಣ್ಣೀರು ಸುರಿಸಿ ಹೇಳಿದ್ದರು. ಆದರೆ ಅವರನ್ನು ನೋಡುವುದಕ್ಕೂ ಈಗ ಸಾಧ್ಯವಾಗಿಲ್ಲದೇ ಹೋಗಿದೆ. ಅವರ ಮನೆಯಲ್ಲಿ ಪುಣ್ಯಾನಂದಾ ಕೇವಲ ಒಂದು ನೆನಪು ಮಾತ್ರ.

ಬದುಕಿಗೆ ಕೂಲಿಯೇ ದಿಕ್ಕು:

ಶ್ರೀಗಳ ತಂದೆ ರಂಗಸ್ವಾಮಿ ತಿಪಟೂರಿನಲ್ಲಿ ಅಂದು ತನ್ನ ಮತ್ತು ತನ್ನ ನಂಬಿಕೊಂಡವರ ಹಸಿವನ್ನು ಹಿಂಗಿಸಲು ನಿತ್ಯಾವೂ ಕೂಲಿ ಮಾಡ ಬೇಕಿತ್ತು. ಬಸಿಲು ಮಳೆ ಎನ್ನದೇ ಮೂಟೆಗಳನ್ನು ತುಂಬಿದ ಗಾಡಿಯನ್ನು ಮೈ ಮೂಳೆ ಮುರಿಯುವಂತೆ ಎಳೆಯ ಬೇಕಿತ್ತು. ಆಗ ಯಾರೂ ರಂಗಸ್ವಾಮಿಯನ್ನು ಅಣಕಿಸುವುದಾಗಲಿ, ಅನುಕಂಪ ತೋರುವುದಾಗಲಿ ಮಾಡುತ್ತಿರಲಿಲ್ಲ. ಶ್ರೀಗಳ ಹೆತ್ತವರು ಇವರೇ ಎಂದು ಯಾರಿಗೂ ಗೊತ್ತಿರಲಿಲ್ಲ. ರಂಗಸ್ವಾಮಿ ಸಹ ತನ್ನ ಮಗ ಮಠಾಧೀಶ ಎಂದು ಯಾರಿಗೂ ಎಲ್ಲಿಯೂ ಹೇಳಿರಲಿಲ್ಲಿ.

ಆದರೆ ಶ್ರೀಗಳು ಅಪಘಾತದಲ್ಲಿ ಮೃತರಾದ ಸುದ್ದಿ ಜೊತೆಯೇ ಇವರ ಸುದ್ದಿ ರಾಜ್ಯದ ಜನತೆಗೆ ತಿಳಿಯುತ್ತಿದ್ದಂತೆ ಸ್ಥಳೀಯ ಜನ ಇವರ ಬಗ್ಗೆ ವಿಶೇಷ ಗೌರವ ನೀಡಲು ಆರಂಭಿಸಿದರು. ಆದರೆ ಅದು ಅವರ ಹಸಿವನ್ನು ಹಿಂಗಿಸುತ್ತಿರಲಿಲ್ಲ. ಆತ್ಮಗೌರವದಿಂದ ಬದುಕುವ ಜನ ಮುಜಗರಕ್ಕೆ ಒಳಗಾದರು. ಸಮಾಜದ ಮುಖಂಡರು, ನಾನಾ ಜನರು ನೀಡಿದ ಭರವಸೆ ಬಗ್ಗೆ ಜನ ಮಾತಾಡಿಕೊಳ್ಳತೊಡಗಿದರು. ಕೂಲಿ ಬೇಡ ಬರುವ ಹಣದಲ್ಲಿ ಬೇರೆ ಏನಾದರೂ ವ್ಯಾಪಾರ ಮಾಡಿಕೋ ಎಂದು ಹೇಳುತ್ತಿದ್ದರು. ಜನ ಗೌರವ ನೀಡುತ್ತಿದ್ದರು ಆದರೆ ಕೂಲಿ ನೀಡುತ್ತಿರಲಿಲ್ಲ ಹಾಗಾಗಿ ಆರಂಭದಲ್ಲಿ ಎಷ್ಟೋ ದಿನ ಈ ಕುಟುಂಬ ಕೂಲಿಯೂ ಮಾಡದೇ ಉಪವಾಸ ಕಳೆದಿದೆಯಂತೆ. ಇಂದಿಗೂ ಅವರ ಸ್ಥಿತಿ ಶೋಚನೀಯವಾಗಿದೆ.

ರಂಗಸ್ವಾಮಿ ಮತ್ತು ಮಹಾದೇವಮ್ಮ ದಂಪತಿಗಳು ಹಿರಿಯ ಮಗಳ ಮದುವೆಗೆ ಮಾಡಿದ ಸಾಲ ಮತ್ತು ಬಡ್ಡಿ ತೀರಿಸದೇ ನಿತ್ಯಾ ಕೂಲಿ ಮಾಡುತ್ತಾರೆ. ಆಶ್ರಯ ಮನೆಗೆ ಮಾಡಿದ ಸಾಲ ತೀರಿಲ್ಲ. ಮತ್ತೊಬ್ಬಳ ಮಗಳ ವ್ಯಾಸಂಗ ಮತ್ತು ಅವಳ ಮದುವೆಗೆ ಹಣ ಹೊಂದಿಸಲು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ತಾಯಿ ತೆಂಗಿನ ಕಡ್ಡಿ ಎರೆದು ಹಾಲು, ತರಕಾರಿ ತಂದರೆ ರಂಗಸ್ವಾಮಿ ನಿತ್ಯಾ ಮೂಟೆ ಹೊತ್ತು, ಗಾಡಿ ಎಳೆದು ಗಂಜಿಗೆ ಹೊಂಚುತ್ತಾರೆ. ದುಬಾರಿ ಪೆಟ್ರೋಲ್ ದರದಲ್ಲಿ ಇಬ್ಬರು ಮಕ್ಕಳು ವಿಜಯಕುಮಾರ್ ಮತ್ತು ಮಂಜುನಾಥ್ ಆಟೋ ಓಡಿಸಿ ಜೀವನ ಸಾಗಿಸುತ್ತಿದ್ದಾರೆ.

ಸಮಾಜದ ಋಣವನ್ನು ಶ್ರೀಗಳು ತೀರಿಸಿ ಹೋಗಿದ್ದಾರೆ. ಇರುವಷ್ಟು ದಿನ ಶ್ರಮ ವಹಿಸಿ ಸಾರ್ಥಕ ಎನಿಸಿಕೊಂಡಿದ್ದಾರೆ. ಆದರೆ ಸಮಾಜ ಅವರನ್ನು ಹೆತ್ತವರ ಋಣ ತೀರಿಸ ಬೇಕಲ್ಲವೇ? ನೀಡಿದ ಭರವಸೆ ಈಡೇರಿಸಬೇಕಲ್ಲವೇ? ಶ್ರೀಗಳು ಇಹಲೋಕ ತ್ಯಜಿಸ ಮಾತ್ರಕ್ಕೆ ಹೆತ್ತವರನ್ನು ಕಡೆಗಣಿಸುವುದು ಯಾವ ನ್ಯಾಯ? ಪ್ರಜ್ಞಾವಂತ ಸಮಾಜ ಇದನ್ನು ಒಪ್ಪುವುದೇ.


ಗಾಡಿ ಎಳೆದು ಜೀವನ :  ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ

ರಾಜ್ಯದ ಒಂದು ಪ್ರತಿಷ್ಟಿತ ಮಠದ ಮಠಾಧಿಪತಿಯವರ ತಂದೆ ಎಪ್ಪತ್ತು ವರ್ಷದ ಇಳಿ ವಯಸ್ಸಿನಲ್ಲೂ ಮೂಟೆ ಹೊತ್ತು ಬದುಕು ಸಾಗಿಸುವ ವಿಜಯಕರ್ನಾಟಕದ ಸುದ್ದಿ ನನ್ನ ಮನಸ್ಸಲ್ಲಿ ತೀವ್ರತರವಾದ ನೋವುಂಟಾಗಿ ತಿಪಟೂರಿಗೆ ಬಂದು ಆ ಕುಟುಂಬಕ್ಕೆ ಸಾಂತ್ವನ ನೀಡುವಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.
ಮಂಗಳವಾರ ಸಂಜೆ ಇಲ್ಲಿನ ಬಸವೇಶ್ವರನಗರದ ಹೊಸಬಡಾವಣೆಯ ಪುಣ್ಯಾನಂದಪುರಿಸ್ವಾಮಿಜಿಯವರ ತಂದೆ ತಾಯಿ ವಾಸಿಸುವ ಆಶ್ರಯ ಮನೆಗೆ ಬೇಟಿ ನೀಡಿದ ನಂತರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.
ವಾಲ್ಮಿಕಿ ಗುರು ಪೀಠದ ಶ್ರೀಪುಣ್ಯಾನಂದಪುರಿ ಸ್ವಾಮಿಜಿ ೨೦೦೭ರಲ್ಲಿ ರೈಲು ಅಪಘಾತವೊಂದರಲ್ಲಿ ಅಕಾಲಿಕ ಮರಣಕ್ಕೆ ತುತ್ತಾಗಿದ್ದು ನಂತರ ಅವರ ಕುಟುಂಬ ತೀವ್ರ ಸಂಕಟಕ್ಕೀಡಾಗಿದ್ದು ಜೀವನ ನಿರ್ವಹಣೆಗಾಗಿ ಶ್ರೀಗಳ ತಂದೆ ತಿಪಟೂರು ನಗರದಲ್ಲಿ ಮೂಟೆ ಹೊತ್ತು ಗಾಡಿ ಎಳೆದು ಜೀವನ ಸಾಗಿಸುತ್ತಿರುವುದು ಚಿತ್ರ ವಸಹಿತ ಪ್ರಕಟವಾಗಿದ್ದು ನೋಡಿ ತಡೆದು ಕೊಳ್ಳಲಾಗಲಿಲ್ಲ. ತಕ್ಷಣ ಬಂದು ಸೀದಾ ಅವರ ಮನೆಗೆ ಹೋಗಿ ನೋಡಿದೆ ಅವರ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ದುರಸ್ಥಿ ಇಲ್ಲದೇ ಇರುವ ಮನೆ ಸೋರುತ್ತಿದೆ. ಮದುವೆಗೆ ಬಂದ ಮಗಳಿದ್ದಾಳೆ. ಹೆಂಡತಿ, ಮಕ್ಕಳ ನಿರ್ವಹಣೆಗಾಗಿ ೭೦ ವರ್ಷದ ಶ್ರೀಗಳ ವೃದ್ಧ ತಂದೆ ದಿನ ನಿತ್ಯಾ ಮೂಟೆ ಹೊತ್ತು ಕೂಲಿ ಮಾಡಿ ಎಲ್ಲರ ಜೀವನ ನಡೆಸುತ್ತಿದ್ದಾರೆ. ಇದು ತುಂಬಾ ನೋವಿನ ಸಂಗತಿ. ಸಮಾಜದ ಮುಖಂಡರು ಇವರ ಕುಟುಂಬಕ್ಕೆ ಒಂದು ಭರವಸೆ ಕೊಟ್ಟಿದ್ದರು ಅದನ್ನು ಮಾನವಿಯತೆ ದೃಷ್ಟಿಯಿಂದ ಈಡೇರಿಸಬೇಕಿದೆ. ನಾನು ಸಹ ಈ ಸಂದರ್ಭದಲ್ಲಿ ಅವರನ್ನೂ ಈ ಮೂಲಕ ಕೋರಿಕೊಳ್ಳುತ್ತೇನೆ ದಯಮಾಡಿ ಅವರ ಕುಟಂಬಕ್ಕೆ ಅನುಕೂಲ ಮಾಡಿಕೊಡಿ ಎಂದರು.

ಮನೆಯ ಪರಿಸ್ಥಿತಿ ನೋಡಿ ಸಧ್ಯ ಸ್ಥಳದಲ್ಲೇ ನಾನು ಒಂದು ಲಕ್ಷ ಆರ್ಥಿಕ ಸಹಾಯ ಮಾಡಿದ್ದೇನೆ. ತಾಲೂಕು ಜೆಡಿಎಸ್‌ನಿಂದ ಐದು ಸಾವಿರ, ಜೆಡಿಎಸ್ ಮುಖಂಡ ಲಿಂಗರಾಜು ೨೫ಸಾವಿರ ನಾಳೆ ಕೊಡುತ್ತಾರೆ, ಜಿಲಾ ಪಂಚಾಯಿತಿ ಸದಸ್ಯೆ ರಾಧನಾರಾಯಣ ಗೌಡ ಹತ್ತು ಸಾವಿರ ಧನ ಸಹಾಯ ಮಾಡಿದ್ದಾರೆ. ಉಳಿದಂತೆ ಅವರ ಮಗಳಿಗೆ ಹುಲಿನಾಯ್ಕರು ಅವರ ವಿದ್ಯಾ ಸಂಸ್ಥೆಯಲಿ ನಾಳೆಯೇ ಕೆಲಸ ಕೊಡುವವರಿದ್ದಾರೆ. ನಾನು ಮುಂದೆ ಅವರ ಕುಟುಂಬಕೆ ಹೆಚ್ಚಿನ ಸಹಕಾರ ನೀಡುವ ಭರವಸೆ ನೀಡಿದ್ದೇನೆ ಎಂದರು.

ಹೇಳಿಕೆ: ಸಿಂಧನೂರು ವಾಲ್ಮಿಕಿ ಗುರು ಪೀಠದ ಶ್ರೀವಾಲ್ಮಿಕಿ ಸಂಜಯ ಕುಮಾರಸ್ವಾಮಿ
ಸಮಾಜಕ್ಕೆ ಜಗದ್ಗುರು ಒಬ್ಬರನ್ನು ನೀಡಿದ ಮನೆಯನ್ನು ಕಾಯುವ ಕೆಲಸ ಆ ಸಮಾಜದ ಜವಬ್ಧಾರಿ. ಅದನ್ನು ಮರೆತಿದ್ದ ರಾಜ್ಯದ ಒಂದು ಕೋಟಿ ವಾಲ್ಮಕಿ ಜನಾಂಗದ ಕಣ್ಣು ತೆರೆಸುವ ಪುಣ್ಯ ಕೆಲಸವನ್ನು ವಿಜಯಕರ್ನಾಟಕ ಮಾಡಿದೆ. ಮೊದಲು ಪತ್ರಿಕೆಗೆ ಅಭಿನಂದನೆ ಎಂದು ಸಿಂಧನೂರು ವಾಲ್ಮಿಕಿ ಗುರು ಪೀಠದ ಶ್ರೀವಾಲ್ಮಿಕಿ ಸಂಜಯ ಕುಮಾರಸ್ವಾಮಿ ಹೇಳಿದ್ದಾರೆ.
ಮಂಗಳವಾರ ಸಂಜೆ ಶ್ರೀಪುಣ್ಯಾನಂದಪುರಿಸ್ವಾಮಿಗಳ ತಂದೆ ತಾಯಿಗಳ ಇರುವ ತಿಪಟೂರಿನ ಮನೆಗೆ ಬೇಟಿ ನೀಡಿ ಮನೆಯ ಪರಿಸ್ಥಿತ ಕಣ್ಣಾರೆ ಕಂಡು ತಮ್ಮ ವಿಷಾಧವ್ಯಕ್ತ ಪಡಿಸಿದರಲ್ಲದೇ ಇರುವ ವಾಸ್ತವಾಂಶ ತೆರೆದಿಟ್ಟ ಪತ್ರಿಕೆಯ ಪ್ರಯತ್ನವನ್ನು ಮನಸಾರೆ ಕೊಂಡಾಡಿದರು.
ಹೌದು, ಸಮಾಜ ತಿಳಿಯದೇ ತಪ್ಪು ಮಾಡಿದೆ ನಿಜ ಅದರ ನೈತಿಕ ಹೊಣೆಯನ್ನು ನಾವೇ ಹೊರುತ್ತೇವೆ. ಆಗಿರುವ ತಪ್ಪಿಗೆ ಕ್ಷಮೆ ಕೋರುತ್ತಾ ಮುಂದೆ ಈ ತರಹದ ಪ್ರಮಾದ ಆಗದಂತೆ ನೋಡಿ ಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ ಎಂದ ಅವರು ನಾವು ಮಠದ ಮತ್ತು ಸಮಾಜದ ಭಾಂಧವರ ಮನವೊಲಿಸಿ ಸಂಕಷ್ಟದಲ್ಲಿರುವ ಶ್ರೀಗಳ ಕುಟುಂಬಕ್ಕೆ ಶಕ್ತಿ ಮೀರಿ ಸಹಾಯ ಮಾಡುವ ಭರವಸೆಯನ್ನು ಇಂದು ನಾವು ನೀಡುತ್ತಿದೇವೆ. ಅಲ್ಲದೇ ಶ್ರೀಗಳ ತಂಗಿ ಕಲ್ಪನಾಳ ಮದುವೆಗೆ ಸಹಕಾರ ನೀಡುತ್ತೇವೆ ಎಂದ ಅವರು ಸಮಾಜದ ರಾಜ್ಯದ ಎಲ್ಲಾ ನಾಯಕರು ಈ ಕೂಡಲೇ ಅವರ ಮನೆಗೆ ಬೇಟಿ ನೀಡಿ ಸಾಂತ್ವನ ಹೇಳುವಂತೆ ಈ ಮೂಲಕ ಕೋರಿಕೊಂಡರು.
ಕುಮಾರಸ್ವಾಮಿ ಮಾನವೀಯ ಹೃದಯಕ್ಕೆ ವಂದನೆ:
ಪತ್ರಿಕೆ ವರದಿ ನೋಡಿ ತಕ್ಷಣ ತಿಪಟೂರಿಗೆ ಧಾವಿಸಿ, ನೊಂದ ಕುಟುಂಬಕ್ಕೆ ಸಾಂತ್ವನ ನೀಡುವುದರ ಜೊತೆಗೆ ಒಂದು ಲಕ್ಷ ಹಣ ಸಹಾಯ ಮಾಡಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಹೃದಯ ವೈಶಾಲ್ಯತೆ ಇಡೀ ಸಮಾಜ ಮೆಚ್ಚುವಂತಾದ್ದು. ಕಷ್ಟದಲ್ಲಿರುವವರಿಗೆ ಸ್ಪಂದಿಸುವ ಮನೋಭಾವ ಕೇಳಿದ್ದೆ ನೆನ್ನೆ ಪ್ರತ್ಯಕ್ಷ ನೋಡಿ ಹೃದಯ ತುಂಬಿ ಬಂತು ಎಂದು ಸಮಾಜದ ಪರವಾಗಿ ತಮ್ಮ ಮೆಚ್ಚಿಗೆ ವ್ಯಕ್ತ ಪಡಿಸಿದರು.

ಶ್ರೀಗಳು ಆತ್ಮಿಯರು:
ಪುಣ್ಯಾನಂದ ಪುರಿ ಸ್ವಾಮಿಜಿಗಳು ನಮ್ಮ ಆತ್ಮಿಯರು. ನಾವು ಅವರನ್ನು ಮರೆತಿದ್ದೇವು. ಆದರೆ ಪತ್ರಿಕೆಯ ವರದಿ ಅವರನ್ನು ಪುನಃ ನೆನಪಿಸಿದೆ. ಮಠಕ್ಕೆ ತಮ್ಮ ಹೆತ್ತ ತಂದೆ ತಾಯಿ ಕುಟುಂಬವನ್ನು ಬಿಟ್ಟು ಕೊಳ್ಳುತ್ತಿರಲಿಲ್ಲ. ಬಂದರೂ ಅಲ್ಲಿ ಊಟ ಮಾಡಲು ಬಿಡುತ್ತಿರಲಿಲ್ಲ. ಇದು ಸಮಜದ ಋಣ ನಿಮಗೆ ಬೇಡ ಎನ್ನುವಷ್ಟು ಪ್ರಮಾಣಿಕ ಶುದ್ಧರಾಗಿದ್ದರು. ಸಮಾಜಕ್ಕಾಗಿ ಸಾಕಷ್ಟು ಮಾಡಿದ್ದಾರೆ. ಅದರಲ್ಲಿ ತಿರುಗಿ ಅವರ ಕುಟುಂಬಕ್ಕೆ ಅಲ್ಪಪ್ರಮಾಣಲ್ಲಿ ನೀಡುವುದು ತಪ್ಪಲ್ಲ ಎಂದರು.

 ಮಾನವೀಯತೆಯಿಂದ ಸಹಾಯ : ಶ್ರೀತಿರುದಾಸ
ಜಗದ್ಗರುಗಳ ಕುಟುಂಬ ಸಂಕಟದಲ್ಲಿದ್ದಾಗ ಮಾನವೀಯತೆಯಿಂದ ಸಹಾಯ ಮಾಡುವುದು ನಮ್ಮ ಧರ್ಮ ಎಂದು ಸಮಾಜ ಸೇವಕರಾದ ಶ್ರೀರಾಮನುಜ ಸೇವಾ ಟ್ರಸ್ಟ್‌ನ ಶ್ರೀತಿರುದಾಸ ಸ್ವಾಮಿಜಿ ಹೇಳಿದರು.
ಅವರು ಬುಧವಾರ ತಿಪಟೂರಿನ ಶ್ರೀಪುಣ್ಯಾನಂದಪುರಿ ಸ್ವಾಮಿಜಿಗಳ ಕುಟುಂಬಕ್ಕೆ ಬೇಟಿ ನೀಡಿ ಆರೈಕೆ ವಿಚಾರಿಸಿದ್ದರಲ್ಲದೇ ನಿಮ್ಮ ಮಗ ಸನ್ಯಾಸಿಯಾಗಿದ್ದು ಪುಣ್ಯದ ಕೆಲಸ. ಒಬ್ಬ ಸನ್ಯಾಸಿಯಾದರೆ ಅವರ ಕುಟುಂಬದ ೧೪ ತಲೆಮಾರು ಕಾಯುತ್ತದೆ. ಭಯ ಪಡಬೇಕಿಲ್ಲ. ಒಳ್ಳೆಕಾಲ ಬಂದಿದೆ ಎಂದ ಅವರು ಕುಟುಂಬಕ್ಕೆ ಐದು ಸಾವಿರ ರೂಗಳ ಧನ ಸಹಾಯ ಮಾಡಿದರು.
ಅಮೇರಿಕಾದ ನ್ಯೂಯಾರ್ಕ್ ಐಲ್ಯಾಂಡ್‌ನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಬೆಂಗಳೂರು ಮೂಲದ ಎಂ.ಶ್ರೀನಿವಾಸ ವಿಜಯಕರ್ನಾಟಕ ಇ-ಪೇಪರ್‌ನಲ್ಲಿ ಪ್ರಕಟವಾದ ಸುದ್ದಿ ನೋಡಿ ಕುಟುಂಬಕ್ಕೆ ಸಹಾಯ ಮಾಡುವ ಆಸಕ್ತಿ ತೋರಿದ್ದಾರೆ. ಹೆಚ್ಚಿನ ಹಣಕಾಸು ಜೊತೆಗೆ ಮಗಳ ಮದುವೆಗೂ ಸಹಕಾರ ನೀಡುವ ಭರವಸೆಯನ್ನು ಅವರು ನೀಡಿದ್ದಾರೆ ಎಂದು ಅವರ ಪರವಾಗಿ ಶ್ರೀತಿರು ಸ್ವಾಮಿಗಳು ಹೇಳಿ, ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಕಡೂರು ತಾಲೂಕು ಸಮಾಜಸೇವಕ ಬಾಲು ಉಪಸ್ಥಿತರಿದ್ದರು.

೨೦ಸಾವಿರ ಹಣ ಸಹಾಯ ಮಾಡಿದ ಕೃಷಿ ಇಲಾಖೆ ಉಪನಿರ್ದೇಶಕ:
ಯಾದಗಿರಿಯ ಕೃಷಿ ಇಲಾಖೆಯಲ್ಲಿ ಉಪನಿರ್ದೆಶಕರಾಗಿರುವ ಅಶೋಕಕುಮಾರ್ ಅವರು ಗುರುವಾರ ಶ್ರೀಪುಣ್ಯಾನಂದಪುರಿ ಸ್ವಾಮಿಜಿಗಳ ಕುಟುಂಬಕ್ಕೆ ಬೇಟಿ ನೀಡಿ ಸ್ವಾಮಿಗಳ ಶ್ರಮ ಹಾಗೂ ಅವರು ಸಮಾಜಕ್ಕಾಗಿ ಮಾಡಿದ ಸೇವೆಯನ್ನು ಶ್ಲಾಘಿಸಿದ ಅವರು ಶ್ರೀಗಳ ಕುಟುಂಬಕ್ಕೆ ೨೦ಸಾವಿರ ಹಣ ಸಹಾಯ ಮಾಡಿದರು.

ಪರ್ಯಾಯ ಮಠ ಸ್ಥಾಪನೆ ಅನಿವಾರ್ಯ:
ವಾಲ್ಮಿಕಿ ಸಮಾಜದ ರಾಜನಹಳ್ಳಿ ಗುರುಪೀಠದ ಶ್ರೀಪ್ರಸನ್ನಾನಂದ ಸ್ವಾಮಿಜಿ ಅವರು ಪುಣ್ಯಾನಂದ ಶ್ರೀಗಳ ಕುಟುಂಬಕ್ಕೆ ಸಹಾಯ ಮಾಡಿರುವುದಾಗಿ ಹೇಳುವ ಮೂಲಕ ಸಮಾಜಕ್ಕೆ ತಪ್ಪು ಮಾಹಿತಿ ರವಾನಿಸಿದ್ದಾರೆಂದು ವಿರೋಧಿಸಿ ನಾನಾ ಸಂಘಟನೆಗಳ ಮುಖಂಡರು ಗುರುವಾರ ನಗರದಲ್ಲಿ ದಿಡೀರ್ ಪ್ರತಿಭಟನೆ ನಡೆಸಿದರು. ತಾಲೂಕು ನಾಯಕ ಸಂಘದ ಕಾರ್ಯದರ್ಶಿ ಜಯಸಿಂಹ ಮತ್ತು ದೊಡ್ಡಯ್ಯ, ಶೆಡ್ಯೂಲ್ ಕ್ಯಾಸ್ಟ್ ಫಡರೇಷನ್ ಹಾಗೂ ಕ್ರಿಯಾಶೀಲ ಜಾತಿಗಳ ಒಕ್ಕೂಟದ ಸೂರ್ಯಪ್ರಕಾಶ್‌ಕೋಲಿ ಮತ್ತಿತರರು ತಿಪಟೂರಿನ ಸಿಂಗ್ರಿವೃತ್ತದಲ್ಲಿ ಸಮಾವೇಶಗೊಂಡು ಶ್ರೀಗಳು ಕುಟುಂಬದ ವಿರುದ್ಧ ನೀಡಿರುವ ಹೇಳಿಕೆಯನ್ನು ಖಂಡಿಸಿದರು.
ಮಠಲದಲ್ಲಿ ಯಾರಿಗೂ ತಾರತಮ್ಯ ಮಾಡದೇ ಸಮಾನತೆಯಿಂದ ನೋಡ ಬೇಕು. ಮಠದಲ್ಲಿ ಪುಣ್ಯಾನಂದ ಸ್ವಾಮಿಜಿಗಳ ಕುಟುಂಬಕ್ಕೆ ತಂಗಲು ಒಂದು ಮನೆ ನಿರ್ಮಿಸಬೇಕು. ವಾಲ್ಮಿಕಿ ಸಮಾಜದ ರಾಜನಹಳ್ಳಿ ಟ್ರಸ್ಟ್ ನೊಂದ ಕುಟುಂಬಕ್ಕೆ ನೀಡಿರುವ ಆಶ್ವಾಸನೆಯಂತೆ ಪರಿಹಾರ ನೀಡಬೇಕು. ಶ್ರೀಗಳ ಕುಟುಂಬಕೆ ನ್ಯಾಯ ಸಿಗದಿದ್ದರೆ ಬೀದಿಗಳಿದು ಹೋರಾಟ ಮಾಡುವ ಜೊತೆಗೆ ಪರ್ಯಾಯ ಮಠ ಸ್ಥಾಪಿಸುವ ಅನಿವಾರ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.


ಪ್ರಸನ್ನಾನಂದಪುರಿ ಸ್ವಾಮಿಗಳ ಹೇಳಿಕೆಗೆ ಕುಟುಂಬದ ಪ್ರತಿಕ್ರಿಯೆ:

ತಿಪಟೂರು: ವಾಲ್ಮಿಕಿ ಗುರು ಪೀಠದ ಬಗ್ಗೆ ನಮ್ಮ ವಿಶೇಷ ಗೌರವ, ಭಕ್ತಿ ಮತ್ತು ಪ್ರೀತಿ ಇದೆ. ನಾವು ಬಡವರು ನಿಜ ಆದರೆ ಸುಳ್ಳು ಹೇಳಲು ನಮಗೆ ಬರುವುದಿಲ್ಲ. ಶ್ರೀಗಳು ವಾಸ್ತವಾಂಶ ಮರೆ ಮಾಚಿ ಹೇಳಿಕೆ ನೀಡಿರುವುದು ನಮ್ಮ ಮನಸ್ಸಿಗೆ ನೋವಾಗಿದೆ ಎಂದು ಪುಣ್ಯಾನಂದಪುರಿಸ್ವಾಮಿಜಿಗಳ ಹೆತ್ತವರು ಪ್ರತಿಕ್ರಿಯಿಸಿದ್ದಾರೆ.
ಶ್ರೀಗಳು ಗುರುವಾರ ಪತ್ರಿಕೆಗೆ ಹೇಳಿಕೆ ನೀಡಿ ಪುಣ್ಯಾನಂದಪುರಿ ಶ್ರೀಗಳ ಕುಟುಂಬವನ್ನು ನಿರ್ಲಕ್ಷಿಸಿಲ್ಲ, ಹಣಕಾಸು ನೆರವು ನೀಡಿದ್ದೇವೆ ಎಂದು ಹೇಳಿರುವ ಮಾತಿಗೆ ಪ್ರತಿಕ್ರಿಯಿಸಿರುವ ಅವರು ಶ್ರೀಗಳ ಬಗ್ಗೆ ನಮಗೆ ಪೂಜ್ಯಭಾವನೆ ಇದೆ, ತಿರುಗಿ ಅವರ ವಿರುದ್ಧ ಹೇಳಿಕೆ ನೀಡುವುದು ಧರ್ಮವಲ್ಲ ಆದರೆ ನಮ್ಮದು ತಪ್ಪು ಎಂದು ಕಂಡು ಬಂದರೆ ಸತ್ಯ ಹೇಳುವದು ಅನಿವಾರ್ಯವಾಗಿದೆ. ಮೊದಲು ಸಮಾಜದ ಕ್ಷಮೆ ಕೋರಿ ಹೇಳಿಕೆ ನೀಡುತ್ತಿದ್ದೇವೆ. ನಾವು ಬಡವರು. ಬಲಿಷ್ಟರಲ್ಲ. ನಮ್ಮದೇನು ನಡೆಯುವುದಿಲ್ಲ. ಹಾಗಾಗಿ ನಾವು ಯಾರೊಂದಿಗೂ ವಾದಕ್ಕಿಳಿಯುವುದಿಲ್ಲ. ಇಷ್ಟು ಮಾತ್ರ ಸತ್ಯ. ಶ್ರೀಗಳು ಹೇಳುತ್ತಿರುವುದು ಅರ್ಧ ಸತ್ಯ ಮಾತ್ರ ಎಂದು ಅವರು ಸ್ಪಷ್ಟಿಕರಿಸಿದ್ದಾರೆ.
ನಮ್ಮ ಶ್ರೀಗಳು ಅಗಲಿದ ನಂತರ ವರ್ಷಕ್ಕೆ ನಾಲ್ಕೈದು ಬಾರಿ ರಾಜನಹಳ್ಳಿಗೆ ಹೋಗಿ ಗದ್ದಿಗೆ ಪೂಜಿಸಿ, ದರ್ಶನ ಪಡೆದು ಬರುತ್ತಿದ್ದೇವು. ನಮ್ಮ ಸ್ವಾಮಿಜಿಯ ನಂತರ ಒಂದೂವರೆ ಎರಡು ವರ್ಷದ ನಂತರವಷ್ಟೇ ಅಂದರೆ ೨೦೦೮ರ ಆಗಸ್ಟ್ ೧೪ರಂದು ನೂತನ ಶ್ರೀಗಳು ಪೀಠಕ್ಕೆ ಬಂದರು. ನಂತರ ನಾವು ಗದ್ದಿಗೆಗೆ ಹೋದ ಸಂದರ್ಭದಲ್ಲಿ   ಎರಡು ಮೂರು ಬಾರಿ ಮಾತ್ರ ಶ್ರೀಗಳು ನಮಗೆ ಸಿಗುತ್ತಿದ್ದರು. ಉಳಿದಂತೆ ಹೊರಗೆ ಹೋಗಿರುತ್ತಿದ್ದರು. ನಮ್ಮನ್ನು ಕಂಡಾಗ ಅವರ ಕೈಯಲಿದ್ದ ಒಂದು ಸಾವಿರ, ಎರಡು ಸಾವಿರ, ಮೂರು ಸಾವಿರ ಕೊಡುತ್ತಿದ್ದದ್ದು ನಿಜ. ಆದರೆ ಆ ಹಣ ಬಸ್ಸಿನ ಖರ್ಚಿಗೆಂದು ತಿಳಿದಿದ್ದೇವು  ಜೀವನೋಪಾಯಕ್ಕೆ ಕೊಡುತ್ತಿದ್ದರು ಎಂದು ನಮಗೆ ಗೊತ್ತಿರಲಿಲ್ಲ. ಮಠದಲ್ಲಿ ನಾವು ಉಳಿದುಕೊಳ್ಳಲು ಬೇರೆ ಯಾವುದೇ ವ್ಯವಸ್ಥೆಯಿಲ್ಲ. ನಾವು ಹೋದಾಗ ಅಲ್ಲಿ ಅವರು ನಮ್ಮನ್ನು ಹೇಗೆ ನೋಡಿ ಕೊಳ್ಳುತ್ತಾರೆ ಎಂಬುದು ಶ್ರೀಗಳಿಗೆ ಚೆನ್ನಾಗಿ ಗೊತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
೨೦೦೭ರ ಏಪ್ರಿಲ್ ೪ರಂದು ಶ್ರೀಗಳು ಅಗಲಿದ ಸಂದರ್ಭದಲ್ಲಿ ನಡೆದ ಸಭೆಯಲ್ಲಿ ಜನರ  ಎದುರು ಮತ್ತು ಬೆಂಗಳೂರು ಓಂಕಾರಾಶ್ರಮದ ಶ್ರೀಶಿವಪುರಿಸ್ವಾಮಿಗಳ ಸಾನಿಧ್ಯದಲ್ಲಿ ಸಮಾಜದ ನಾಯಕರು, ಮುಖಂಡರು, ಟ್ರಸ್ಟ್‌ನವರು ನಮ್ಮ ದುಸ್ಥಿತಿಕೊಂಡು ಸಹಾಯ ಮಾಡುವ ಭರವಸೆ ನೀಡಿದ್ದರು. ಐದು ಲಕ್ಷ ಪರಿಹಾರ, ಒಂದು ಮನೆ, ನಾವು ಒಡಾಡಲು ಒಂದು ಕಾರು, ಇಬ್ಬರು ಗಂಡು ಮಕ್ಕಳ ಜೀವನೋಪಾಯಕ್ಕೆ ಎರಡು ಆಟೋ ಕೊಡಿಸಿ ಇರುವ ಮಗಳ ಮದುವೆ ಮಾಡಿಕೊಡುವ ಮಾತು ಕೊಟ್ಟಿದ್ದರು. ಇದಕ್ಕೂ ಮುಂಚಿನ ಸಭೆಯಲ್ಲಿ ಕುಟುಂಬದ ಒಬ್ಬರನ್ನು ಟ್ರಸ್ಟಿಯಾಗಿ ತೆಗೆದುಕೊಳ್ಳುವ ಮಾತನ್ನು ಹೇಳಿದ್ದರು. ಆ ದಾಖಲೆ ನಮ್ಮ ಬಳಿ ಇದೆ. ಶ್ರೀದಯಾನಂದಪುರಿ ಸ್ವಾಮಿಜಿಗಳ ನೇತೃತ್ವದಲ್ಲಿ ಟ್ರಸ್ಟ್‌ನವರು ನಮ್ಮ ಮನೆ ಬಳಿಗೆ ಬಂದು ವಾಸ್ತವ ಕಂಡು ಹೆಚ್ಚಿನ ಸಹಾಯ ಮಾಡುವ ಭರವಸೆ ನೀಡಿದ್ದರು. ಆದರೆ ಇದೂವರೆಗೂ ಯಾವುದೇ ಸಹಾಯ ಮಾಡಿಲ್ಲ. ಸಹಾಯ ಕೋರಿ ಹೋದಾಗ ಶ್ರೀರಾಮುಲು ಬಳಿಗೆ ಹೋಗಿ, ಜಾರಕಿಹೊಳಿ ಬಳಿಗೆ ಹೋಗಿ ಎಂದು ಹೇಳಿ ಕಳುಹಿಸುತ್ತಿದ್ದರು. ಸಂಜೆಯವರೆಗೂ ಕಾದು ಕುಳಿತರೂ ಅವರು ಅಲ್ಲಿ ಸಿಗುತ್ತಿರಲಿಲ್ಲ ನಾವು ವಯಸ್ಸಾದವರು ಏನೋ ಪರಿಹಾರ ಸಿಗುತ್ತದೆ ಎಂದು ಎಲ್ಲಾ ಕಡೆಯೂ ಅಲೆದು ಅಲೆದು ಸಾಕಾಗಿ ನಿತ್ರಾಣರಾಗುತ್ತಿದ್ದೇವು. ಇದಕ್ಕಾಗಿಯೇ ಸಾಕಷ್ಟು ಹಣವನ್ನೂ ಖರ್ಚು ಮಾಡಿದ್ದೇವೆ. ನಾವು ಕೂಲಿ ಮಾಡಿ ಜೀವನ ಮಾಡುವವರು ಈ ರೀತಿ ಓಡಾಡುತ್ತಾ ದುಡ್ಡು ಖರ್ಚು ಮಾಡಲು ಸಾಧ್ಯವೇ ನೀವೇ ಹೇಳಿ ಎಂದು ಮರು ಪ್ರಶ್ನಿಸಿದಾರೆ.
ಮೈಸೂರು ಭಾಗದವರು, ಚಿಂತಾಮಣಿಯವರು ಯಾವುದೇ ಹಣವನು ನಮಗೆ ನೇರವಾಗಿ ಕೊಟ್ಟಿಲ್ಲ, ಇದು ಸುಳ್ಳು. ಶ್ರೀಗಳು ಅಗಲಿದ ಸಮಯದಲ್ಲಿ ಅಂದು ಇದೇ ವಿಜಯಕರ್ನಾಟಕ ಪತ್ರಿಕೆಯಲಲಿ ಬಂದ ನಮ್ಮ ದುಸ್ಥತಿ ವರದಿ ನೋಡಿದ ನಾನಾ ಭಕ್ತರು ಅನುಕಂಪದಲ್ಲಿ ನೀಡಿದ ಹಣವನ್ನು ಟ್ರಸ್ಟಿ ಸತೀಶ್ ಜಾರಕಿಹೊಳಿ ಇಟ್ಟುಕೊಂಡು ಒಟ್ಟಿಗೆ ಕೊಡುತ್ತೇವೆ ಎಂದು ಹೇಳಿದ್ದು ಮುಂದೆ ಕೊಡಲಿಲ್ಲ. ಆದರೆ ಟ್ರಸ್ಟ್ ಹೊರತಾಗಿ ವೈಯಕ್ತಿಕವಾಗಿ ಸಹಾಯ ಮಾಡುತ್ತಿದೇನೆ ಎಂದು ಬಾಲಚಂದ್ರ ಜಾರಕಿಹೊಳಿ ಎರಡು ಸಲ ೨೦ಸಾವಿರ  ಕೊಟ್ಟು, ಮನೆಯನ್ನು ಕೊಡಿಸುವ ಭರವಸೆ ನೀಡಿದ್ದರು. ಆದರೆ ಅದೂ ಸಾಧ್ಯವಾಗಿಲ್ಲ. ಮುಂದೆ ಅವರು ಸಿಗಲಿಲ್ಲ. ಅಲ್ಲದೇ ಬಳ್ಳಾರಿಯ ನಮ್ಮ ಸಮಾಜ ಭಾಂದವರು ಜಂಬಯ್ಯನಾಯಕರ ನೇತೃತ್ವದಲ್ಲಿ ಹಣ ಸಂಗ್ರಹಿಸಿ ೮೦ಸಾವಿರ ಕೊಟ್ಟಿದ್ದರು. ಇಷ್ಟು ಹಣವನ್ನು ನಮ್ಮ ಹಿರಿಯ ಮಗಳ ಮದುವೆಯಲ್ಲಿ ಮಾಡಿದ ಸಾಲವನ್ನು ತೀರಿಸಿಕೊಂಡಿದ್ದು ನಿಜ ಎಂದು ಹೆತ್ತವರು ಒಪ್ಪಿಕೊಂಡಿದ್ದಾರೆ.
ನಮ್ಮ ಸ್ವಾಮಿಜಿ ಇದ್ದಾಗ ನಾವು ಮಠಕ್ಕೆ ಬರುವುದು, ಅಲ್ಲಿ ಊಟ ಮಾಡುವುದಕ್ಕೆ ಬಿಡುತ್ತಿರಲಿಲ್ಲ. ಸಮಾಜದ ಋಣ ನಿಮಗೆ ಬೇಡ ಎಂದು ಹೇಳುತ್ತಿದ್ದರು. ಇಂತಹ ಪ್ರಾಮಾಣಿಕ ದೈವಭಕ್ತರ ಕುಟುಂಬದವರಾದ ನಾವು ಅವರು ಇಲ್ಲದ ಸಮಯದಲ್ಲಿ ಮಠದಲ್ಲಿ ಕುಳಿತು ಪುಕ್ಕಟೆ ಊಟ ಮಾಡುವುದು ಸರಿಯೇ, ನಾವು ಬಡವರು ಸರಿ, ಆದರೆ ನಿರ್ಗತಿಕರಲ್ಲ. ನಮಗೂ ಸ್ವಾಭಿಮಾನವಿದೆ. ವಯಸ್ಸಾದರೂ ನಮ್ಮ ತೋಳು ಬಲ ಚೆನ್ನಾಗಿದೆ. ಶಕ್ತಿ ಇರುವವರೆಗೂ ದುಡಿದು ನಮ್ಮ ಹಸಿವನ್ನು ಶಮನ ಮಾಡುತ್ತೇವೆ.  ಆಗಾಗಿ ನಾವು ಮಠದಲ್ಲಿ ಇರಲು ಒಪ್ಪಲಿಲ್ಲ. ಕೊಟ್ಟ ಮಾತಿಗೆ ನಡೆದು ಕೊಳ್ಳುವ ಮನಸ್ಸು ಮತ್ತು ಪ್ರಯತ್ನ ಮಾಡದ ಟ್ರಸ್ಟ್‌ನವರು ಇಂತಹ ಮಾತುಗಳನ್ನು ಸಾಕಷ್ಟು ಸಲ ಆಡಿದ್ದಾರೆ. ಆದರೆ ನಮ್ಮ ಹಸಿವನ್ನು ಹಿಂಗಿಸುವ ಪರ್ಯಾಯ ಮಾರ್ಗ ಕಲ್ಪಿಸಿಕೊಡಲೇ ಇಲ್ಲ. ಈಗ ಮದುವೆ ಮಾಡುತ್ತೇವೆ, ಸಹಾಯ ಮಾಡುತ್ತೇವೆ ಎಂದು ಹೇಳಿಕೆ ಕೊಡುತ್ತಿರುವವರು ಇಷ್ಟು ದಿನ ಏನು ಮಾಡುತ್ತಿದ್ದರು? ಎಂದು ಪ್ರಶ್ನಿಸುತ್ತಾರೆ. ಇವರ ವರ್ತನೆ ಬೇಸತ್ತು ನಾವು ಸುಮ್ಮನಿದ್ದೇವು. ಆದರೆ ಪತ್ರಿಕೆಯವರು ಬರೆದು ಪುನಃ ಇದಕ್ಕೆ ಜೀವ ತುಂಬಿದ್ದಾರೆ. ಪತ್ರಿಕೆಯವರಿಗೆ ಇರುವ ಕಾಳಜಿ, ಮಾನವೀಯತೆ ಟ್ರಸ್ಟ್‌ನವರಿಗೆ ಏಕಿಲ್ಲ ಎಂದಿದ್ದಾರೆ.       
ಅಪಘಾತ ಸುದ್ದಿ ಮುಟ್ಟಿಸದ ನಿಷ್ಕರುಣಿಗಳು:
ನಮ್ಮ ಮಗ ಸ್ವಾಮಿಗೆ ೨೦೦೭ರ ಏಪ್ರಿಲ್ ೪ರಂದು ಪೀಠಾಧಿಕಾರ ಮಾಡುವ ಸಂದರ್ಭದಲ್ಲಿ ನಮಗೆ ಯಾವುದೇ ಮಾಹಿತಿ ನೀಡಿಲ್ಲ. ಹೆತ್ತವರಾದ ನಮ್ಮ ಋಣ ತೀರಿಸಿಕೊಳ್ಳುವ ಯಾವ ಅವಕಾಶವನ್ನೂ ನೀಡಲಿಲ್ಲ. ನಮ್ಮ ಸ್ವಾಮಿ ನಮ್ಮ ಸ್ವತ್ತಾಗಿತ್ತು. ಮಗ ಮನೆಯಲಿದ್ದರೆ ನಮಗೆ ಆಧಾರವಾಗುತ್ತಿದ್ದ. ಅವನನ್ನು ನಂಬಿಸಿ, ನಮಗೆ ಆಸೆ ತೋರಿಸಿ ಕರೆದುಕೊಂಡು ಹೋಗಿ ಸ್ವಾಮಿಜಿ ಮಾಡಿ ನಮ್ಮ ಕುಟುಂಬಕ್ಕೆ ಅನ್ಯಾಯ ಮಾಡಿದ್ದಾರೆ. ಇದು ಯಾವ ನ್ಯಾಯ? ಹೆತ್ತವರಿಗೆ ಹಕ್ಕು ಕಸಿದುಕೊಳ್ಳಲು ಯಾವ ಕಾನೂನಿನಲ್ಲಿ ಅವಕಾಶವಿದೆ? ಸ್ವಾಮಿ ಮಾಡುತ್ತೇವೆ ಎಂದು ನಮ್ಮ ಒಪ್ಪಿಗೆ ಪತ್ರ ಪಡೆದಿದ್ದಾರೆಯೇ? ಎಂದು ಪ್ರಶ್ನಿಸುವ ಅವರು ಸ್ವಾಮಿಯ ಪೀಠಾಧಿಕಾರದ ಸಮಯದಲ್ಲಿ ಸೌಜನ್ಯಕ್ಕಾದರೂ ಹೇಳಿ ಕಳುಹಿಸಿಲ್ಲ ಎಂದು ಆರೋಪಿಸಿದ್ದಾರೆ.
ಅದಿರಲಿ, ಸ್ವಾಮಿ ಅಪಘಾತದಲ್ಲಿ ತೀರಿಕೊಂಡ ಸಂದರ್ಭದಲ್ಲೂ ನಮಗೆ ಹೇಳಿಕಳುಹಿಸುವ ಮನುಷ್ಯತ್ವ ತೋರಲಿಲ್ಲ. ಈ ಎರಡು ಸಂದರ್ಭದಲ್ಲೂ ನಮಗೆ ನೆರವಾಗಿದ್ದು ಪತ್ರಿಕೆ ಮಾತ್ರ. ಮಾಹಿತಿ ಮುಟ್ಟಿಸಿದ್ದು ಈ ಮಾಧ್ಯಮದವರೇ ಅವರಿಗೆ ನಮ್ಮ ಜೀವನ ಪೂರ್ತಿ ಋಣಿಯಾಗಿರುತ್ತೇವೆ ಎಂದಿದ್ದಾರೆ.

ನಿಮ್ಮ ಅನಿಸಿಕೆಗಾಗಿ ಕರೆ ಮಾಡಿ:೯೪೪೮೪೧೬೫೫೦

 


Tuesday, July 12, 2011

ಛಲವೊಂದೇ ಯಶಸ್ಸಿನ ಗುಟ್ಟು:

ಛಲವೊಂದೇ ಯಶಸ್ಸಿನ ಗುಟ್ಟು:ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು ಎಂಬ ಹಿರಿಯರ ನಾಣ್ಣುಡಿಯಂತೆ ಹೆಚ್ಚು ವಿದ್ಯೆ ಕಲಿಯದ ತಂದೆ, ಮಗ ಇಬ್ಬರೂ ಸೇರಿ ಇಲ್ಲಿ ತೀರಾ ಬೇಡಿಕೆಯಿರುವ ತೆಂಗಿನಕಾಯಿಯ ಸಿಪ್ಪೆ ತೆಗೆಯುವ ಯಂತ್ರವನ್ನು ಕಂಡು ಹಿಡಿದು ಅಚ್ಚರಿ ಮೂಡಿಸಿದ್ದಾರೆ.
ತಿಪಟೂರು ತಾಲೂಕಿನಲ್ಲಿರುವ ಸುಮಾರು ೫೦ಕ್ಕೂ ಹೆಚ್ಚು ತೆಂಗಿನ ಕಾಯಿ ಒಣ ಪುಡಿ ತಯಾರಿಕಾ ಘಟಕಗಳಿಗೆ ಕೆಲಸಗಾರರದ್ದೇ ತಲೇ ನೋವು. ಚೆನ್ನಾಗಿ ಕೆಲಸ ಮಾಡುವವರು ಕಾರ್ಖಾನೆ ಮಾಲೀಕರಿಂದ ಮುಂಗಡ ಪಡೆದು ಹೋದರೆ ಮತ್ತೆ ಅವರನ್ನು ಕರೆತಂದು ಕೆಲಸ ಮಾಡಿಸುವುದು ಅಷ್ಟು ಸುಲಭದ ಮಾತಲ್ಲ. ಇಂತಹ ಕೈಗಾರಿಕೆಗಳಲ್ಲಿ ತೆಂಗಿನಕಾಯಿಯ ಒಳಭಾಗದ ಉಂಡೆಯ ಮೇಲಿನ ಕಂದು ಬಣ್ಣದ ಸಿಪ್ಪೆ ತೆಗೆಯುವುದು ಕಷ್ಟದ ಕೆಲಸ. ಅದನ್ನು ಯಂತ್ರದಿಂದ ಮಾಡಲು ಸಾಧ್ಯವಿಲ್ಲ. ಹಾಗಾಗಿ ಅದನ್ನು ಕೆಲಸಗಾರರೇ ಮಾಡಬೇಕು. ಅವರು ಸಣ್ಣ ತಗಡಿನ ಸಾಧನದಿಂದ ಮೇಲಿನ ಸಿಪ್ಪೆ ಎರೆಯುತ್ತಾರೆ. ಆ ಸಮಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಿಳಿ ಕಾಯಿ ತುರಿದುಹೋಗುತ್ತದೆ. ಮುಂದೆ ಇದು ಕೌಟಾಗಿ ಎಣ್ಣೆ ತೆಗೆಯಲು ಉಪಯೋಗಿಸುತ್ತಾರೆ.
ಕಾಯಿಯ ಮೇಲ್ಭಾಗದ ಚಿಪ್ಪು ತೆಗೆಯುವುದು ಮತ್ತು ಒಳಗಿರುವ ಉಂಡೆಯ ಕಂದು ಬಣ್ಣದ ಸಿಪ್ಪೆ ತೆಗೆಯುವುದು ಮಾತ್ರ ಮಾನವ ಕೆಲಸಗಾರರರು ಮಾಡಬೇಕು ಉಳಿದಂತೆ ಎಲ್ಲಾ ಯಂತ್ರದಿಂದಲೇ ನಡೆಯುತ್ತದೆ. ಈಗ ಸಿಪ್ಪೆ ತೆಗೆಯುವುದಕ್ಕೂ ಒಂದು ಯಂತ್ರ ಕಂಡು ಹಿಡಿಯಲಾಗಿದೆ ಎಂಬ ವಿಚಾರ ತಿಳಿಯುತ್ತಿದಂತೆ ಕಾರ್ಖಾನೆಗಳ ಮಾಲೀಕರು ಆಶ್ಚರ್ಯದ ಜೊತೆಗೆ ನಿಟ್ಟುಸಿರು ಬಿಟ್ಟಿದ್ದಾರೆ.
ಇಲ್ಲಿ ಓಡಾಡಿಕೊಂಡಿರುವ ಜಯರಾಂ ಎಂಬ ವ್ಯಕ್ತಿ ಎಲ್ಲರಿಗೂ ಪರಿಚಯ. ಆದರೆ ಅವರು ಯಾವುದೇ ಕೈಗಾರಿಕೆ ನಡೆಸದಿದ್ದರೂ ಆಗಾಗ ತಾಲೂಕಿನಲ್ಲೇ ಹೆಚ್ಚಾಗಿರುವ ತೆಂಗಿನ ಮತ್ತು ನಾರಿನ ಕೈಗಾರಿಕಗಳಿಗೆ ಬೇಟಿ ನೀಡುವುದು ಅಲ್ಲಿನ ಯಂತ್ರಗಳ ಕಾರ್ಯವೈಖರಿಯನ್ನು ನೋಡುವುದು, ಯಂತ್ರದ ಬಗ್ಗೆ ತಮ್ಮಲ್ಲೇ ಏನೋ ಲೆಕ್ಕಹಾಕುವುದು ಮಾಡುತ್ತಾ ತಿರುಗುತ್ತಾರೆ. ಹಾಗೆಯೇ ಜಿಲ್ಲೆ, ರಾಜ್ಯ ಅಲ್ಲದೇ ಹೊರ ರಾಜ್ಯಕ್ಕೂ ಆಗಾಗ ಹೋಗಿ ಬರುತ್ತಾರೆ. ತೆಂಗಿನ ಉತ್ಪನ್ನಗಳನ್ನು ಕಚ್ಚಾಪದಾರ್ಥವಾಗಿ ಉಪಯೋಗಿಸಲ್ಪಡುವ ನಾನಾ ಕೈಗಾರಿಕೆಗಳನ್ನು ಸುತ್ತಿಬಂದಿರುವ ಅವರು ಕೈಗಾರಿಕಾ ಘಟಕಗಳ ನಾನಾ ಸಮಸ್ಯೆಗಳನ್ನು ಪಟ್ಟಿಮಾಡಿಟ್ಟುಕೊಂಡಿದ್ದಾರೆ.
ಕೇವಲ ಏಳನೇ ತರಗತಿಯವರೆಗೆ ಮಾತ್ರ ಓದಿರುವ ಜಯರಾಂ ಕೈಗಾರಿಕೆಗಳ ಬಗ್ಗೆ ಅವರಲ್ಲಿರುವ ಜ್ಞಾನ ಒಂದು ಪ್ರಭಂಧ ಬರೆದು ಪಿಹೆಚ್‌ಡಿ ಮಾಡಬಹುದು. ಹಾಗಾಗಿ ಅವರು ತೆಂಗಿನ ನಾರಿನ ಕೈಗಾರಿಕೆಗಳಿಗೆ ಬರುವ ನಾನಾ ಸುಧಾರಿತ ಯಂತ್ರಗಳನ್ನು ಮಾಡಿಕೊಟ್ಟಿದ್ದಾರೆ. ಆರ್ಥಿಕವಾಗಿ ಅಷ್ಟೊಂದು ಪ್ರಭಲರಲ್ಲದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ಏನನ್ನೂ ಮಾಡಲಾಗಿಲ್ಲ. ಆದರೆ ಇದೂವರೆಗೂ ನಾನಾ ಯಂತ್ರಗಳನ್ನು ಪ್ರಾಯೋಗಿಕವಾಗಿ ಮಾಡಲು ಲಕ್ಷಾಂತರ ರೂಗಳನ್ನು ಕಳೆದುಕೊಂಡಿರುವುದಂತೂ ಸತ್ಯ. ಇವರು ಸಂಶೋಧೀಸಿ ಮಾಡಿರುವ ಯಂತ್ರಗಳು ನಾನಾ ತೆಂಗಿನ ನಾರಿನ ಕೈಗಾರಿಕಾ ಘಟಕದಲ್ಲಿ ಈಗಲೂ ಯಶಸ್ವಿಯಾಗಿ ಚಾಲನೆಯಲ್ಲಿಯಂತೆ.
ತಂದೆಯ ನಡೆಯನ್ನೇ ಅನುಸರಿಸಿರುವ ಮಗ ಕೃಷ್ಣಮೂರ್ತಿ ಈ ಹೊಸ ಯಂತ್ರದ ಜನಕ. ಕೇವಲ ಎಸ್‌ಎಸ್‌ಎಲ್‌ಸಿಯನ್ನೂ ಪೂರ್ಣಗೊಳಿಸದ ಈತ ಈಗ ತೆಂಗಿನ ಕಾಯಿ ತುರಿ ಕೈಗಾರಿಕಾ ಘಟಕಗಳಿಗೆ ನಾನಾ ಮಾಧರಿಯ ಯಂತ್ರಗಳನ್ನು ತಯಾರಿಸಿಕೊಡುವ ಜ್ಞಾನ ಮತ್ತು ಅನುಭವ ಹೊಂದಿದ್ದಾರೆ. ತಂದೆ, ಮಗನ ಬಳಿ ಯಾವ ತಾಂತ್ರಿಕತೆಯ ಪ್ರಮಾಣ ಪತ್ರವಾಗಲಿ ಅಥವಾ ಪಧವಿಯಾಗಲಿ ಇಲ್ಲದಿದ್ದರೂ ಅನುಭವ ಮಾತ್ರ ಅವರ ಉತ್ಸಾಹವನ್ನು ಹಿಮ್ಮಡಿಗೊಳಿಸಿ, ಸತತ ಪ್ರಯತ್ನಕ್ಕೆ ಅಣಿಗೊಳಿಸೆ. ಸ್ವಂತ ಖರ್ಚಿನಲ್ಲಿ ಹೊಸ ಹೊಸ ಯಂತ್ರಗಳನ್ನು ಕಂಡು ಹಿಡಿಯುವ ಇವರಿಗೆ ಇವರೇ ಮಾರ್ಗದರ್ಶಕರು ಮತ್ತು ಪ್ರೋತ್ಸಾಹಕರು.

ಸಿಪ್ಪೆ ತೆಗೆಯುವ ಯಂತ್ರ ಆವಿಷ್ಕಾರ:
ಮೇಲಿನ ಮಟ್ಟೆ ತೆಗೆದ ನಂತರ ಒಳಗೆ ಉಳಿಯುವ ಚಿಪ್ಪಿನಿಂದ ಆವರಿಸಿರುವ ತೆಂಗಿನಕಾಯಿಯನ್ನು ಕಾರ್ಖಾನೆಯಲ್ಲಿರುವ ನಿಪುಣ ಕೆಲಸಗಾರರು ಚೂಪಾದ ಸಣ್ಣ ಕೊಡಲಿಗಳಿಂದ ಗಟ್ಟಿಯಾದ ಚಿಪ್ಪನ್ನು ತೆಗೆದು ಹಾಕುತ್ತಾರೆ. ಪುನಃ ಕಂದು ಬಣ್ಣದ ತೆಳುವಾದ ಚಿಪ್ಪೆ ಕಾಯಿಯ ಉಂಡೆಯ ಮೇಲೆ ಉಳಿದಿರುತ್ತದೆ. ಕಾರ್ಖಾನೆಯ ಮಹಿಳಾ ಕೆಲಸಗಾರರು ಚೂಪಾದ ಚಾಕುವಿನಿಂದ ಅಥವಾ ಚೂಪಾದ ಬ್ಲೇಡ್‌ಯಿರುವ ಸಾಧನದಿಂದ ಉಂಡೆಯ ಮೇಲಿರುವ ಕಂದು ಬಣ್ಣದ ಸಿಪ್ಪೆಯನ್ನು ಎರೆದು ಬಿಳಿ ಉಂಡೆ ಮಾಡಿ ಅದನ್ನು ಪುಡಿ ಮಾಡುವ ಅಥವಾ ತುರಿಯುವ ಯಂತ್ರಕ್ಕೆ ಕೊಡುತ್ತಾರೆ.
ಆದರೆ ಹೀಗೆ ಚಿಪ್ಪು ತೆಗೆಯುವಾಗ ಕೆಲವೊಮ್ಮೆ ಉಂಡೆ ಸಲೀಸಾಗಿ ಬರದೆ ಚಿಪ್ಪಿಗೆ ಅಂಟಿಕೊಂಡ ಚೂರು ಬರುವುದು ಸಹಜ. ಅಂತಹ ಚೂರನ್ನು ಚಿಪ್ಪಿನಿಂದ ಬೇರ್ಪಡಿಸಿದರೂ ಮೇಲಿನ ಕಂದು ಬಣ್ಣದ ಸಿಪ್ಪೆಯನ್ನು ಕೈಯಿಂದ ತೆಗೆಯುವುದು ಅಷ್ಟು ಸುಲಭವಲ್ಲ. ತೆಗೆದರೂ ಸಮಯ ಹಿಡಿಯುವುದರಿಂದ ಇದರಿಂದ ಮಾಲೀಕರಿಗೆ ನಷ್ಟವೇ ಹೊರತು ಲಾಭವಿಲ್ಲ. ಹಾಗಾಗಿ ಅಂತಹ ಚೂರಿನ ಕಂದು ಸಿಪ್ಪೆ ತೆಗೆಸುವ ಗೋಜಿಗೆ ಹೋಗದೆ ಒಣಗಿಸಿ ಕೌಟು ಲೆಕ್ಕಕ್ಕೆ ಮಾರಾಟ ಮಾಡುತ್ತಾರೆ. ಈಗ ಅದನ್ನು ಸಹ ಈ ಹೊಸ ಯಂತ್ರದಿಂದ ತೆಗೆಯಬಹುದು
ಇಂತಹ ಪುಟ್ಟ ಯಂತ್ರವನ್ನು ಕಡಿಮೆ ವೆಚ್ಚದಲ್ಲಿ ತಯಾರಿಸುತ್ತಿದ್ದಾರೆ. ಆ ಯಂತ್ರಗಳಿಗೆ ಈಗ ಭಾರಿ ಬೇಡಿಕೆ ಬಂದಿದೆ. ತಮ್ಮ ತಂತ್ರಜ್ಞಾವನ್ನು ಯಾರೂ ಕದಿಯಲು ಸಾಧ್ಯವೇ ಇಲ್ಲ. ಎಲ್ಲಾ ಬಿಡಿ ಭಾಗಗಳನ್ನು ಬೆಂಗಳೂರಿನಲ್ಲಿ ತಯಾರಿಸಿ ತಂದು ಇಲ್ಲಿನ ವರ್ಕ್ ಶಾಪ್ ಒಂದರಲ್ಲಿ ಜೋಡಿಸುತ್ತೇವೆ ಎನ್ನುತ್ತಾರೆ ಕೃಷ್ಣಮೂರ್ತಿ. ಗಂಟೆಗೆ ೬೦ ಕಿಲೋ ಕಾಯಿ ಚೂರು ಸಿಪ್ಪೆ ಎರೆಯುವ ಇದರಿಂದ ಕಾರ್ಖಾನೆ ಮಾಲೀಕರಿಗೆ ತುಂಬಾ ಅನುಕೂಲವಾಗಿದೆ. ಚೂರನ್ನು ಒಣಗಿಸಿ ಕಡಿಮೆ ಬೆಲೆಗೆ ಕೌಟಿಗೆ ಮಾರುತ್ತಿದ್ದ ಅವರಿಗೆ ಆಗುತ್ತಿದ್ದ ನಷ್ಟವೂ ತಪ್ಪಿದೆ. ಇದರಿಂದ ಮಾಲೀಕರಿಗೆ ಕನಿಷ್ಠ ಕೆಜಿಗೆ ೫೦ ರೂಪಾಯಿ ಹೆಚ್ಚು ಹಣ ಸಿಗುತ್ತಿದೆ. ಹೆಚ್ಚು ಅನುಕೂಲವೂ ಆಗಿದೆ. ಪ್ರಾತ್ಯಕ್ಷಿತೆ ನೋಡಿದ ಮಾಲೀಕರಿಂದ ಯಂತ್ರಗಳಿಗೆ ಬೇಡಿಕೆಯೂ ಬರುತ್ತಿದೆ ಎಂದು ತಮ್ಮ ನೂತನ ಆವಿಷ್ಕಾರದ ಬಗ್ಗೆ ವಿಶ್ವಾಸ ವ್ಯಕ್ತಪಡಿಸುತ್ತಾರೆ ಕೃಷ್ಣಮೂರ್ತಿ(೯೬೩೨೯೧೫೫೪೧).

ಕಾನ್ವೆಂಟ್‌ಗಳ ಹಾವಳಿಗೆ ಸವಾಲು:

ಕಾನ್ವೆಂಟ್‌ಗಳ ಹಾವಳಿಗೆ ಸವಾಲು: ಖಾಸಗಿ ಇಂಗ್ಲೀಷ್ ಕಾನ್ವೆಂಟ್‌ಗಳ ಹಾವಳಿ ಮತ್ತು ಮಕ್ಕಳ ಕೊರತೆಯ ಕಾರಣದಿಂದ ಪ್ರತಿವರ್ಷ ಸರಕಾರಿ ಶಾಲೆಗಳು ಮುಚ್ಚುತ್ತಿವೆ ಎನ್ನುವ ಆತಂಕದ ನಡುವೆಯೂ ತಿಪಟೂರು ತಾಲೂಕಿನ ಕೆಲವು ಸರಕಾರಿ ಶಾಲೆಗಳು ಕಾನ್ವೆಂಟ್‌ಗಳ ವ್ಯವಸ್ಥೆಗೆ ಸಡ್ಡು ಹೊಡೆದು ಪ್ರಗತಿಯತ್ತ ಸಾಗುತ್ತಿರುವುದು ಸಮಾಧಾನ ಉಂಟು ಮಾಡಿದೆ. 
ಶಿಕ್ಷಣ ಇಲಾಖೆ ತಾಲೂಕಿನಲ್ಲಿ ಕಳೆದ ವರ್ಷದಿಂದ ಸುಮಾರು ೧೦ಕ್ಕೂ ಹೆಚ್ಚು ಶಾಲೆಗಳನ್ನು ಮುಚ್ಚಿದ್ದು ಖಾಸಗಿ ಕಾನ್ವೆಂಟ್‌ಗಳ ಅಬ್ಬರ ಮತ್ತು ಲಾಭಿಯಲ್ಲಿ ಸುಮಾರು ೯೫ ಕ್ಕೂ ಹೆಚ್ಚು ಪ್ರಾಥಮಿಕ ಶಾಲೆಗಳು ಶೈಕ್ಷಣಿಕ ಪ್ರಗತಿ ಸಾಧಿಸಿ ಪೋಷಕರ ಮತ್ತು ವಿದ್ಯಾರ್ಥಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿವೆ. ತಾಲೂಕಿನ ಜಾಬಘಟ್ಟ, ಆಲೂರು, ಅಂಚೆಕೊಪ್ಪಲು, ಬಿದರೆಗುಡಿ, ತಿಮ್ಲಾಪುರ, ಕುರುಬರಹಳ್ಳಿ ಹಾಗೂ ನಗರದ ಕಂಚಾಘಟ್ಟ ಸೇರಿದಂತೆ ಹತ್ತಾರು ಶಾಲೆಗಳು ಇಂದಿಗೂ ಜನಮನದಿಂದ ದೂರ ಉಳಿದಿಲ್ಲ.
ಗ್ರಾಮಸ್ಥರ ವಿಶ್ವಾಸ ಗಳಿಸಿ ಶಾಲೆಯನ್ನು ಆಕರ್ಷಣೆಗೊಳಿಸಿರುವುದಲ್ಲದೇ ಶೈಕ್ಷಣಿಕವಾಗಿ ಪ್ರಗತಿ ಸಾಧಿಸುತ್ತಾ ಕಾನ್ವೆಂಟ್ ವ್ಯವಸ್ಥೆಗೆ ಸವಾಲೆಸೆದಿರುವ ಶಾಲೆಗಳಲ್ಲಿ ಕುರುಬರಹಳ್ಳಿ ಪ್ರಾಥಮಿಕ ಪಾಠಶಾಲೆಯೂ ಒಂದು. ಶಿಕ್ಷಕರ ಸತತ ಪರಿಶ್ರಮ, ಗ್ರಾಮಸ್ಥರ ಸಹಕಾರದಿಂದ ಇಲ್ಲಿನ ಶೈಕ್ಷಣಿಲ ವಾತಾವರಣದ ಯಾವ ಇಂಗ್ಲೀಷ್ ಕಾನ್ವೆಂಟ್ ಶಾಲೆಗೂ ಕಡಿಮೆ ಇಲ್ಲ. ಇದೊಂದು ಮಾದರಿ ಶಾಲೆಯಾಗಿ ಹೊರಹೊಮ್ಮಿದ್ದು ಉಳಿದ ಶಾಲೆಗಳಲ್ಲಿ ಉತ್ಸಾಹ ಹೆಚ್ಚಿಸಿದೆ ಎಂದರೆ ತಪ್ಪಾಗಲಾರದು. 
ಪುಟ್ಟ ಗ್ರಾಮದಲ್ಲಿ ಮಾದರಿ ಶಾಲೆ:ನಗರಕ್ಕೆ ಸಮೀಪ ಇರುವ ಕುರುಬರಹಳ್ಳಿ ೧೨೦ ಮನೆಗಳಿರುವ ಪುಟ್ಟ ಗ್ರಾಮ. ಆದರೆ ಇಲ್ಲಿರುವ ಸರಕಾರಿ ಶಾಲೆಗೆ ಯಾರಾದರೂ ಹೊದರೆ ಅವರು ಮೊದಲು ಅಚ್ಚರಿ ಪಡುವುದು ಶಾಲಾ ವಾತವಾರಣ, ಮಕ್ಕಳ ಶಿಸ್ತು ಬದ್ಧ ಸಮವಸ್ತ್ರ ಮತ್ತು ನಡತೆ.
ಶಾಲೆಯ ಒಟ್ಟು ಮಕ್ಕಳ ಸಂಖ್ಯೆ ಈ ಬಾರಿ ೪೫ಕ್ಕೆ ಏರಿದೆ. ಗ್ರಾಮದಿಂದ ನಗರದ ಕಾನ್ವೆಂಟ್‌ಗಳಿಗೆ ಹೋಗುತ್ತಿದ್ದ ಹಲವಾರು ಮಕ್ಕಳು ಈ ಸರಕಾರಿ ಶಾಲೆಗಳ ಕಡೆ ಮುಖ ಮಾಡಿ, ಇಲ್ಲಿಯೇ ತಮ್ಮ ಕಲಿಕೆ ಆರಂಭಿಸಿವೆ. ನಗರಕ್ಕೆ ಹತ್ತಿರದಲ್ಲಿದ್ದು, ಉತ್ತಮ ಸಾರಿಗೆ ಸೌಲಭ್ಯವನ್ನು ಹೊಂದಿರುವ ಗ್ರಾಮದ ಮಕ್ಕಳು ಮತ್ತು ಪೋಷಕರು ಕಾನ್ವೆಂಟ್‌ಗಳ ಕಡೆ ಆಕರ್ಷಿತರಾಗದಂತೆ ನೋಡಿಕೊಳ್ಳುವಲ್ಲಿ ಈ ಶಾಲೆಯ ವ್ಯವಸ್ಥೆ ಯಶಸ್ವಿಯಾಗಿದೆ.
ಇಲ್ಲಿನ ಶಿಕ್ಷಕರ ಪ್ರಾಮಾಣಿಕತೆ, ಪ್ರಯೋಗಶೀಲತೆ, ಶ್ರಮದ ಫಲವಾಗಿ ಶಾಲೆ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದ್ದು ಗ್ರಾಮದ ಸರಕಾರಿ ಶಾಲೆಯೇ ಉತ್ತಮ ಶಿಕ್ಷಣ ನೀಡುವಾಗ ನಮಗೇಕೆ ಕಾನ್ವೆಂಟ್‌ಗಳ ಉಸಾಬರಿ ಎನ್ನುವ ಗ್ರಾಮಸ್ಥರು ತಮ್ಮೂರಿನ ಶಾಲೆಯ ವಿಶಿಷ್ಟತೆ ಕಂಡು ಅಭಿಮಾನ ಮೆರೆದಿದ್ದಾರೆ. ಆರ್ಥಿಕವಾಗಿ ಅಷ್ಟು ಸಬರಲ್ಲದ ಗ್ರಾಮದಲ್ಲಿ ಕೆಲವು ಮಕ್ಕಳು ಬೇರೆ ಊರುಗಳಿಂದ ಬಂದವರಾಗಿದ್ದುಕೊಂಡು ಇಲ್ಲಿಯೇ ಅಜ್ಜಿ, ತಾತನ ಮನೆಯಲ್ಲಿದ್ದು ಓದುತ್ತಿದ್ದಾರೆ ಎನ್ನುವದು ಇಲಿನ ವಿಶೇಷ.
ಇಲ್ಲಿನ ಮಕ್ಕಳು ಕಾನ್ವೆಂಟ್ ಮಕ್ಕಳನ್ನೂ ಮೀರಿಸುವಂತೆ ಇಂಗ್ಲಿಷ್, ಸಾಮಾನ್ಯ ಜ್ಞಾನ ಸೇರಿದಂತೆ ಎಲ್ಲಾ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಮುಂದಿದ್ದು ಮಕ್ಕಳ ಪ್ರವೇಶ ಹೆಚ್ಚುತಿರುವ ಕಾರಣ ಶಿಕ್ಷಣ ಇಲಾಖೆ ಶಾಲೆಗೆ ಹೆಚ್ಚಿನ ನಿಗಾ ವಹಿಸಿದೆ. ಶಾಲೆಯ ಶಿಕ್ಷಕರಾದ ಎಸ್. ಚಿದಾನಂದಸ್ವಾಮಿ, ಪಂಚಾಕ್ಷರಿ ಮತ್ತು ಮೀನಾಕ್ಷಮ್ಮ ಸರಳ ಮತ್ತು ವಿಶಿಷ್ಟ ಬೋಧನೆ ಕ್ರಮದ ಮೂಲಕ ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿದ್ದಾರೆ. ಪಂಚಾಕ್ಷರಿ ಅವರು ತಾವೇ ಅನ್ವೇಷಿಸಿ ತಯಾರಿಸಿದ ಸೂತ್ರಗಳಿಂದ ಮಕ್ಕಳ ಸಾಮಾನ್ಯ ಜ್ಞಾನ ಮತ್ತು ಇಂಗ್ಲಿಷ್, ಗಣಿತ ಕಲಿಕೆ ಅಚ್ಚರಿ ಪಡುವಂತಿದೆ. ರಾಜ್ಯಗಳು, ಜಿಲ್ಲೆಗಳು, ನದಿಗಳು, ಪ್ರವಾಸಿ ಕ್ಷೇತ್ರಗಳು, ಸಮಾಜ ಸುಧಾರಕರು, ವಿಜ್ಞಾನಿಗಳು, ಸಚಿವರು, ಪಕ್ಷಿದಾಮ ಮತ್ತಿತರ ಮಾಹಿತಿಗಳನ್ನು ಮಕ್ಕಳು ಸುಲಭವಾಗಿ ಹೇಳುವಂತೆ ಸೂತ್ರದ ಮೂಲಕ ಕಲಿಸಲಾಗುತ್ತಿದೆ.
ಇಂಗ್ಲಿಷ್ ಕಲಿಕೆಗೂ ಇಂಥದ್ದೇ ಸೂತ್ರ ಅನುಸರಿಸಿದ್ದರಿಂದ ದಾಖಲಾಗಿ ಒಂದೇ ತಿಂಗಳಾಗಿರುವ ಒಂದನೇ ತರಗತಿ ಮಕ್ಕಳು ಕೂಡ ಅಕ್ಷರ, ರೈಮ್ಸ್‌ಗಳನ್ನು ಸುಲಭವಾಗಿ ಹೇಳುತ್ತಾರೆ. ೪ ಮತ್ತು ೫ನೇ ತರಗತಿ ಮಕ್ಕಳು ಇಂಗ್ಲಿಷ್‌ನಲ್ಲಿ ವಾಕ್ಯ ರಚಿಸುವಷ್ಟು ಕಲಿಕೆಯಲ್ಲಿದ್ದಾರೆ. ಇವೆಲ್ಲಾ ಕಾರಣದಿಂದ ಈ ಮಕ್ಕಳು ಎಲ್ಲದರಲ್ಲೂ ಕಾನ್ವೆಂಟ್‌ನವರಿಗಿಂತ ಮುಂದಿರುವುದರಿಂದ ಪೋಷಕರು ಸಹಜವಾಗಿ ಆಕರ್ಷಿಕರಾಗಿದ್ದಾರೆ. ಶಾಲಾಭಿವೃದ್ಧಿ ಸಮಿತಿ ಶಾಲೆಯ ಸತ್ಕಾರ್ಯಗಳಿಗೆ ಕೈಜೋಡಿಸುತ್ತಾ ಬಂದಿದೆ. ತಾವು ಬೆಳೆದ ತರಕಾರಿಯಲ್ಲಿ ಸ್ವಲ್ಪ ಪಾಲನ್ನು ಶಾಲೆಯ ಬಿಸಿಯೂಟಕ್ಕೆ ನೀಡುವ ಪರಿಪಾಠ ಈ ಗ್ರಾಮಸ್ಥರಲ್ಲಿ ಬೆಳೆದಿದೆ. ಕೈತೋಟ, ಮರಗಿಡಗಳ ಉತ್ತಮ ಪರಿಸರವೂ ಇಲ್ಲಿದೆ. ಜನಮೆಚ್ಚಿದ ಶಿಕ್ಷಕ, ಅತ್ಯುತ್ತಮ ಶಾಲೆ, ಅತ್ಯುತ್ತಮ ಎಸ್‌ಡಿಎಂಸಿ ಮತ್ತಿತರ ಪ್ರಶಸ್ತಿ ಮತ್ತು ಪುರಸ್ಕಾರಗಳು ಈ ಶಾಲೆಗೆ ಹಾಗೂ ಶಿಕ್ಷಕರಿಗೆ ಲಭಿಸಿದ್ದು ಶಾಲೆಯ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಶಿಕ್ಷಣ ಇಲಾಖೆಯ ಸಮಾಧಾನ:ತಾಲೂಕಿನಲ್ಲಿ ವಿದ್ಯಾರ್ಥಿಗಳ ಕೊರತೆ ಮತ್ತು ಇಂಗ್ಲೀಷ್ ಕಾನ್ವೆಂಟ್‌ಗಳ ಹಾವಳಿಯಿಂದ ಮುಚ್ಚಿರುವ ಮತ್ತು ಮುಚ್ಚುತ್ತಿರುವ ಶಾಲೆಗಳ ಪುನಶ್ಚೇತನಕ್ಕಾಗಿ ನಾನಾ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗುತ್ತಿದೆ ಎಂದು ಬಿಇಒ ಮನಮೋಹನ್ ತಿಳಿಸಿದ್ದಾರೆ.
ಕಳೆದ ವರ್ಷದಿಂದ ಸಾಕಷ್ಟು ಶಾಲೆಗಳನ್ನು ಮುಚ್ಚಿದ್ದು ತಾಲೂಕಿನ ಶೈಕ್ಷಣಿಕ ಪ್ರಗತಿಗೆ ಹಿನ್ನಡೆ ಉಂಟಾಗುತ್ತಿರುವ ಕಾರಣದಿಂದ ಶಿಕ್ಷಕರು, ಅಧಿಕಾರಿಗಳು, ಜನಪ್ರತಿನಿಧಿಗಳು, ಸಮಾಜ ಸೇವಕರು, ಗ್ರಾಮಸ್ಥರ ಸಹಕಾರದಲ್ಲಿ ಒಂದು ತಂಡ ರಚಿಸಿ ಮುಚ್ಚಿರುವ ಮತ್ತು ಮುಚ್ಚುತ್ತಿರುವ ಶಾಲೆಗಳ ಗ್ರಾಮದಲ್ಲಿ ಪೋಷಕರ ಮನವೋಲಿಸುವ ಪ್ರಯತ್ನ ನಡೆಸಲಾಗಿದೆ.
ಜುಲೈ-೨೦ ವೀಶೇಷ ದಾಖಲಾತಿಯ ಅಂತಿಮ ದಿನವಾಗಿದ್ದು ಈಗಾಗಲೇ ತಂಡ ಕ್ರೀಯಾಶೀಲವಾಗಿ ಕೆಲಸ ಮಾಡುತ್ತಿದೆ ಪರಿಣಾಮವಾಗಿ  ಮುಚಿರುವ ಶಾಲೆಗಳ ಪೈಕಿ ಅಯ್ಯನಪಾಳ್ಯ ಮತ್ತು ಕೆ.ಎಂ.ಗೊಲ್ಲರಹಟ್ಟಿ ಶಾಲೆಗಳನ್ನು ಪುನಃ ತೆರೆಯಲಾಗಿದೆ. ಮುಂದೆ ಕಾರೇಕುರ್ಚಿ, ಕೋಡಿಕೊಪ್ಪಲು, ಹುಚ್ಚಗೊಂಡನಹಳ್ಳಿ, ಹರಚನ ಹಳ್ಳಿ ಸೇರಿದಂತೆ ಇತರೆ ಶಾಲೆಗಳನ್ನು ತೆರೆಯುವ ಬಗ್ಗೆ ಪ್ರಯತ್ನಿಸಲಾಗುತಿದೆ ಎಂದಿದ್ದಾರೆ.
ಸರಕಾರಿ ಶಾಲೆಗಳು ಮುಚ್ಚದಂತೆ ಸಹಕಾರ ನೀಡುವುದರಲ್ಲಿ ಗ್ರಾಮಸ್ಥರ ಸಹಕಾರ ಅಮೂಲ್ಯವಾಗಿರುತ್ತದೆ. ಅದು ಆ ಊರಿಗೆ ಶೋಭೆ ಕೂಡ.

-ಕರೆ ಮಾಡಿ:೯೪೪೮೪೧೬೫೫೦

ಸರಕಾರಿ ಶಾಲೆಗಳ ದುಸ್ಥಿತಿ:

ಸರಕಾರಿ ಶಾಲೆಗಳ ದುಸ್ಥಿತಿ:ಕಾನ್ವೆಂಟ್‌ಗಳ ಹಾವಳಿ, ಗ್ರಾಮಸ್ಥರ ಇಂಗ್ಲೀಷ್ ವ್ಯಾಮೋಹ ಮತ್ತು ಅವರು ಸರಕಾರಿ ಶಾಲೆಗಳ ಬಗ್ಗೆ ತಾಳಿರುವ ಅಸಹಕಾರದಿಂದ ತಾಲೂಕಿನ ಮಾವಿನಹಳ್ಳಿಯಲ್ಲಿ ಅಭಿವೃದ್ಧಿಗೊಂಡಿದ್ದ ಸುಂದರ ಹಳೆಯ ಶಾಲೆಯೊಂದು ಮುಚ್ಚುವ ಸ್ಥಿತಿಗೆ ಬಂದು ನಿಂತಿದೆ.
ಸರಕಾರದ ಧೋರಣೆ ಮತ್ತು ಶಿಕ್ಷಣ ವ್ಯಾಪಾರಿಗಳ ಲಾಭಿಯಿಂದ ಆಕರ್ಷಣೆ ಕಳೆದುಕೊಳ್ಳುತ್ತಿರುವ ಸರಕಾರಿ ಶಾಲೆಗಳು ದಿನೇ ದಿನೇ ತನ್ನ ಅಸ್ತಿತ್ವ ಕಳೆದುಕೊಂಡು ಕೊನೆಯ ದಿನಗಳನ್ನು ಎಣಿಸುತ್ತಿವೆ. ಉದಾಹರಣಗೆ ಕಳೆದ ವರ್ಷ ತಾಲೂಕಿನಲ್ಲಿ ವಿದ್ಯಾರ್ಥಿಗಳ ಕೊರತೆ ಕಾರಣದಿಂದ ಎಂಟು ಸರಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಗಳು ಮುಚ್ಚಲ್ಪಟ್ಟಿದ್ದವು. ಅದು ಈ ವರ್ಷವೂ ಮುಂದುವರೆದಿದ್ದು ಈ ಬಾರಿ ಶಿಕ್ಷಣ ಇಲಾಖೆ ಒಂಬತ್ತು ಶಾಲೆಗಳಿಗೆ ಶಾಶ್ವತವಾಗಿ ಬೀಗ ಜಡಿಯಲಿದೆ. ಮಕ್ಕಳನ್ನು ಕಾನ್ವೆಂಟಿಗೆ ಕಳುಹಿಸಬೇಡಿ ನಮ್ಮ ಸರಕಾರಿ ಶಾಲೆಗೆ ಕಳುಹಿಸಿ ಎಂದು ನಾನಾ ರೀತಿಯಲ್ಲಿ ಆಂದೋಲನ ನಡೆಸಿ ಜಾಗೃತಿ ಉಂಟು ಮಾಡುತ್ತಿರುವ ಶಿಕ್ಷಣ ಇಲಾಖೆ ಈಗಾಗಲೇ ಕಾರೇಕುರ್ಚಿ, ಅಯ್ಯನಪಾಳ್ಯ, ಕೆ.ಎಂ.ಗೊಲ್ಲಹಟ್ಟಿ, ಮತ್ತು ಹುಚ್ಚಗೊಂಡನಹಳ್ಳಿಯ ನಾಲ್ಕು ಶಾಲೆಗಳನ್ನು ಮುಚ್ಚುನ ಮೂಲಕ ಖಾಸಗೀ ಸವಾಲಿನಲ್ಲಿ ಹಿನ್ನಡೆ ಸಾಧಿಸಿದೆ.
ತಾಲೂಕಿನಲ್ಲಿ ೧೦೨ ಹಿರಿಯ ಪ್ರಾಥಮಿಕ ಪಾಠ ಶಾಲೆಗಳು ಹಾಗೂ ೧೮೬ ಕಿರಿಯ ಪ್ರಾಥಮಿಕ ಪಾಠ ಶಾಲೆಗಳಿವೆ. ಈ ಪೈಕಿ ವಿಠಲಾಪುರ, ಮೂಗುತಿಹಳ್ಳಿಹೊಸೂರು, ಕೋಡಿಕೊಪ್ಪಲು, ಹರಚನಹಳ್ಳಿ, ಬಿಳಿಗೆರೆಪಾಳ್ಯ, ಮತ್ತು ಮಾವಿನಹಳ್ಳಿ ಶಾಲೆಗಳು ಮಕ್ಕಳ ಕೊರತೆ ಕಾರಣದಿಂದ ಮುಚ್ಚಲು ದಿನಗಳನ್ನು ಎಣಿಸುತ್ತಿವೆ. ಕನಿಷ್ಟ ಹತ್ತು ಮಕ್ಕಳಿರುವ ಶಾಲೆಗಳನ್ನು ಮುಚ್ಚಬಾರದು ಎಂದು ಸರಕಾರ ನಿಯಮ ರೂಪಿಸಿದೆ ಆದರೆ ಖಾಸಗೀ ಕಾನ್ವೆಂಟ್‌ಗಳ ಹಾವಳಿಯಿಂದ ಕೆಲವು ಗ್ರಾಮಗಳಲ್ಲಿ ಸರಕಾರಿ ಶಾಲೆಗೆ ಮೂರು-ನಾಲ್ಕು ಮಕ್ಕಳು ಸಿಗುತ್ತಿಲ್ಲ ಎಂದು ಇಲಾಖೆಯ ಅಳಲು. ಮಕ್ಕಳನ್ನು ದುಡಿಯಲು ಕಳುಹಿಸದೇ ಶಾಲೆಗೆ ಕಳುಹಿಸಿ, ಮರಳಿ ಶಾಲೆಗೆ ಬಾ ಈ ರೀತಿ ನಾನಾ ಘೋಷಣೆ ಕೂಗುತ್ತಾ ಶಿಕ್ಷಣ ಜಾಗೃತಿ ಮೂಡಿಸುವ ಶಿಕ್ಷಣ ಇಲಾಖೆ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸಿಕೊಂಡು ಶೈಕ್ಷಣಿಕ ಸೌಲಭ್ಯ ನೀಡುವಲ್ಲಿ ವಿಫಲವಾಗುತ್ತಿವೆ.
ಖಾಸಗೀ ಕಾನ್ವೆಂಟ್‌ಗಳು ಪೈಪೋಟಿ ನಡೆಸುತ್ತಾ ಸರಕಾರಿ ಶಾಲೆಗಳಿಗೆ ಸವಾಲೊಡ್ಡುವುದರ ಜೊತೆಗೆ ಗ್ರಾಮೀಣ ಪ್ರದೇಶಗಳಿಗೆ ಲಗ್ಗೆ ಹಾಕಿ ತಮ್ಮ ತಮ್ಮ ವಾಹನ ಸೌಲಭ್ಯಗಳಿಂದ ಎರಡು ಮೂರು ಮಕ್ಕಳನ್ನು ಬಿಡದೇ ಬಾಚಿಕೊಳ್ಳುತ್ತಿವೆ. 
ದೇಶದಲ್ಲಿ ಶೈಕ್ಷಣಿಕ ಪ್ರಗತಿಗಾಗಿ ಕೇಂದ್ರ ಸರಕಾರ ಸರ್ವ ಶಿಕ್ಷ ಅಭಿಯಾನದಲ್ಲಿ ಸಾವಿರಾರು ಕೋಟಿ ರೂಗಳನ್ನು ವ್ಯಹಿಸಿ ವಿದ್ಯಾರ್ಥಿಗಳ ಜ್ಞಾನಾಭಿವೃದ್ಧಿಗಾಗಿ ಹತ್ತು ಹಲವು ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಹಣವೂ ನೀರಿನಂತೆ ಖರ್ಚಾಗುತ್ತಿದೆ ಆದರೆ ಖಾಸಗಿ ವಲಯಕ್ಕೆ ಕಡಿವಾಣ ಹಾಕದೇ ನಿರ್ಲಕ್ಷ್ಯ ತೋರಿದ ಸರಕಾರದಿಂದಲೇ ಸರಕಾರದ ಶಾಲೆಗಳು ಇಂದು ಇಂತಹ ದುಸ್ಥಿಗೆ ಬರಲು ಕಾರಣವಾಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಮುದೊಂದು ದಿನ ಎಲ್ಲಾ ಭಾಗದಲ್ಲೂ ಸರಕಾರಿ ಶಾಲೆಗಳು ಮುಚ್ಚಿ ಎಲ್ಲವನ್ನೂ ಖಾಸಗೀಯವರಿಗೆ ಬಿಟ್ಟು ಕೊಡಬೇಕಾಗುತ್ತದೆ.

ಮಾವಿನಹಳ್ಳಿ ಶಾಲೆಯ ದುಸ್ಥತಿ:ತಾಲೂಕಿನ ಹೊನ್ನವಳ್ಳಿ ಹೋಬಳಿಯ ಮಾವಿನಹಳ್ಳಿ ಕಿರಿಯ ಪ್ರಾಥಮಿಕ ಪಾಠಶಾಲೆಯಿಂದ ಕಲಿತು ಹೋದ ಅನೇಕರು ಇಂದು ನಾನಾ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅನೇಕರು ಶಿಕ್ಷಕರು ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಿಂದೆ ಗ್ರಾಮಸ್ಥರ ಸಹಕಾರದಿಂದ ಅಭಿವೃದ್ಧಿಗೊಂಡಿದ್ದ ಈ ಶಾಲೆ ಎಲ್ಲಾ ರೀತಿಯ ಸೌಕರ್ಯಗಳನ್ನು ಪಡೆದುಕೊಂಡಿತ್ತು ಆದರೆ ಇಂದು ಈ ಶಾಲೆಯನ್ನೂ ಮುಚ್ಚಲಾಗುತ್ತಿದೆ.
ವಿಪರ್ಯಾಸ ಎಂದರೆ ಇದೇ ಶಾಲೆಯಲ್ಲಿ ಓದಿದ್ದ ಶಿಕ್ಷಕಿಯೊಬ್ಬರು ಕಳೆದ ನಾಲ್ಕು ವರ್ಷದಿಂದ ಇಲ್ಲೇ ಸೇವೆ ಸಲ್ಲಿಸುತ್ತಿದ್ದು ಇಂದು ತಾವು ಓದಿದ ಶಾಲೆಯನ್ನೇ ಮುಚ್ಚುವಂತ ದುಸ್ಥಿತಿ ಎದುರಿಸುತ್ತಿದ್ದಾರೆ. ದಿನೇ ದಿನೇ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದ್ದು ಇಂದು ಈ ಶಾಲೆಯಲ್ಲಿ ಕೇವಲ ನಾಲ್ಕು ಮಕ್ಕಳಿವೆ. ಅಚ್ಚರಿ ಎಂದರೆ ಅವರಲ್ಲಿ ಅದೇ ಶಾಲೆಯ ಶಿಕ್ಷಕರ ಮಗ ಒಬ್ಬ ವ್ಯಾಸಂಗ ಮಾಡುತ್ತಿದ್ದಾನೆ. ಕಳೆದ ವರ್ಷ ಓದುತ್ತಿದ್ದ ಎಂಟು ಮಕ್ಕಳಲ್ಲಿ ಇದೇ ಶಿಕ್ಷಕಿಯ ಮತ್ತೊಬ್ಬ ಮಗಳು ಓದುತ್ತಿದ್ದಳು. ಊರಿಗೆ ನಗರದ ಕಾನ್ವೆಂಟ್ ಒಂದರ ಬಸ್ ಬಂದು ಹೋಗುವ  ಕಾರಣ ಮತ್ತು ತಮ್ಮ ಪೋಷಕರ ಒತ್ತಾಯದಿಂದ ಇಲ್ಲಿನ ಎಂಟು ಹತ್ತು ಮಕ್ಕಳು ಈ ಶಾಲೆ ತೊರೆದು ಕಾನ್ವೆಂಟ್ ಕಡೆ ಮುಖ ಮಾಡಿದ್ದಾರೆ.
ಹತ್ತಿರವೇ ಮತ್ತೊಂದು ಶಾಲೆ:ಈ ಗ್ರಾಮದ ಹತ್ತಿರವೇ ಇರುವ ಗೊಲ್ಲರಹಟ್ಟಿಯಲ್ಲಿ ಒಂದು ಶಾಲೆ ತೆರೆದ ಕಾರಣ ಅಲ್ಲಿಂದ ಬರುತ್ತಿದ್ದ ಮಕ್ಕಳು ಇಲ್ಲಿಗೆ ಬರದೇ ಇಂದು ಈ ಶಾಲೆ ಅಂತ್ಯ ಕಂಡು ಇತಿಹಾಸ ಸೇರುತ್ತಿದೆ. ಸರಕಾರದ ಅವೈಜ್ಞಾನಿಕ ನೀತಿಗಳು ಇಂತಹ ದುರಾವಸ್ಥೆಗೆ ನೇರ ಉದಾಹರಣೆಗಳು. ಅಲ್ಲಲ್ಲಿ ಹೊಸ ಶಾಲೆಗಳನ್ನು ತೆರೆದು ಹಳೆಯ ಶಾಲೆಗಳನ್ನು ಮುಚ್ಚುವ ಸಂಪ್ರದಾಯವನ್ನು ಪ್ರಜ್ಞಾವಂತ ನಾಗರೀಕರು ಹುಚ್ಚುತನ ಎಂದು ಹೇಳುತ್ತಿದ್ದಾರೆ. ಗ್ರಾಮಪಂಚಾಯಿತಿ ವ್ಯಾಪ್ತಿಗೆ ಕೇಂದ್ರಿಯ ವಿದ್ಯಾಲಯ ಮಾದರಿಯಲ್ಲಿ ಸಕಲ ಸೌಲಭ್ಯವಿರುವ ವ್ಯವಸ್ಥಿತ ಒಂದೋ ಎರಡೋ ಶಾಲೆಗಳನ್ನು ತೆರದರೆ ಇಂತಹ ದುರಾವಸ್ಥೆಗಳು ನಿಯಂತ್ರಣಗೊಳ್ಳಬಹುದು ಎಂಬುದು ಶಿಕ್ಷಣ ತಜ್ಞರ ಅಭಿಪ್ರಾಯ.
  
  

Tuesday, June 7, 2011

ವೃಕ್ಷಪ್ರೇಮಿ ಗ್ಯಾರಘಟ್ಟದ ಬೀರಜ್ಜ ದೇಶಕ್ಕೆ ಮಾದರಿ




ವೃಕ್ಷಪ್ರೇಮಿ ಗ್ಯಾರಘಟ್ಟದ ಬೀರಜ್ಜ ದೇಶಕ್ಕೆ ಮಾದರಿ
ಉತ್ಸಾಹ ಕುಂದದ ೭೫ರ ಇಳಿವಯಸ್ಸಿನ ಗ್ಯಾರಘಟ್ಟದ ಸಾಲು ಮರದ ಬೀರಜ್ಜ ಮತ್ತೊಮ್ಮೆ ಭೂಮಿಗೆ ಬೀಜ ಬಿತ್ತುವ ಮೂಲಕ ತನ್ನ ವೃಕ್ಷಪ್ರೇಮ ಸಾಬೀತು ಪಡಿಸಿದ್ದಾರೆ.
ವಿಶ್ವ ಪರಿಸರ ದಿನದಂದು ಬೀರಜ್ಜ ಗ್ಯಾರಘಟ್ಟದಿಂದ ಅರಸೀಕೆರೆ ಮಾರ್ಗದ ರಸ್ತೆಯುದ್ದಕ್ಕೂ ಮರವೆಲ್ಲಾ ಹೂವು ಬಿಡುವ ಟೆಕೋಮಾ, ಗೋಲ್ಡ್‌ಮಾರ್, ಪೆಲ್ಟಾ ಫಾರಂ ಸೇರಿದಂತೆ ನಾನಾ ಜಾತಿಯ ಮರಗಳ ಬೀಜಗಳನ್ನು ನೆಟ್ಟಿದ್ದಾರೆ. ಗ್ಯಾರಘಟ್ಟದ ಇದೇ ರಸ್ತೆಯಲ್ಲಿ ಕಳೆದ ೪೦-೫೦ ವರ್ಷಗಳ ಹಿಂದೆ ಸುಮಾರು ೨೦೦ಕ್ಕೂ ಹೆಚ್ಚು ಆಲದ ಮರಗಳನ್ನು ನೆಟ್ಟು ಪರಿಸರ ಕಾಳಜಿ ತೋರಿದ್ದ ಬೀರಜ್ಜನ ಶ್ರಮದಿಂದ ಸುಮಾರು ೩ ಕಿಮಿ ಉದ್ದಕ್ಕೂ ಎರಡು ಕಡೆಗಳಲ್ಲಿ ಇಂದಿಗೂ ೧೦೦ಕ್ಕೂ ಹೆಚ್ಚು ಮರಗಳು ಹುಲುಸಾಗಿ ಬೆಳೆದು ಬೀರಜ್ಜನ ವೃಕ್ಷಪ್ರೇಮದ ಕಥೆಯನ್ನು ಸಾರುತ್ತಿವೆ.

೧೯೪೫-೪೬ರ ಅವಧಿಯಲ್ಲಿ ೬ನೇ ತರಗತಿಯಲ್ಲಿ ಓದುತಿದ್ದ ಬೀರಜ್ಜ ಓದನ್ನು ಮುಂದುವರೆಸಲಾಗದೇ ವ್ಯವಸಾಯದ ಕಡೆ ನಿಂತಿದ್ದರಂತೆ. ಮುಂದೆ ಕೆಲವೇ ವರ್ಷಗಳಲ್ಲಿ ಮದುವೆಯೂ ಮಾಡಲಾಗಿತ್ತಂತೆ. ಆದರೆ ತಾವು ಓದುವಾಗ ಶಾಲೆಯಲ್ಲಿದ್ದ ಕಾಕ ಮಾಸ್ತರರ ಮಾತುಗಳು ಬೀರಜ್ಜನ ಮನದಲ್ಲಿ ಆಗಾಗ ಪ್ರತಿಧ್ವನಿಸುತ್ತಿದ್ದವಂತೆ. ಮನುಷ್ಯನ ಆಯಸ್ಸು ಕೇವಲ ನೂರು ವರ್ಷ, ಅದೇ ಆಲದ ಮರದ ಆಯಸ್ಸು ಮುನ್ನೂರು ವರ್ಷ. ಮನುಷ್ಯ ಬದುಕಿದ್ದರೆ ಯಾರಿಗೂ ಒಳಿತು ಮಾಡಲಾರ ಆದರೆ ಮರಗಳು ತಮ್ಮ ಜೀವನ ಪೂರ್ತಿ ಮೌನವಾಗಿದ್ದುಕೊಂಡೇ ಜನ, ಜಾನೂವಾರು ಹಾಗೂ ಪಕ್ಷಿಗಳಿಗೆ ಆಶ್ರಯ ನೀಡುವುದಲ್ಲದೇ ಮಳೆಗೆ ಕಾರಣವಾಗುತ್ತವೆ. ಶಿಷ್ಯರು ಒಂದೊಂದು ಮರಗಳನ್ನು ನೆಟ್ಟು ಗುರು ಕಾಣಿಕೆ ನೀಡಿರಿ ಎಂದಿದ್ದರಂತೆ.

ಆಗಾಗಿ ಬೀರಜ್ಜ ತನ್ನ ಕಾಕಾ ಮಾಸ್ತರರ ಗಂಟು ಬಿದ್ದು ಅವರ ಹಳೇಬೀಡು ಊರಿನಿಂದ ಒಂದು ಆಲದ ಮರದ ಕೊಂಬೆ ತರಿಸಿಕೊಂಡು ಗ್ರಾಮದ ಮುಂದೆ ನೆಟ್ಟರಂತೆ. ಅದು ೪-೫ ವರ್ಷದಲ್ಲಿ ದೊಡ್ಡದಾಗಿ ಬೆಳೆದಂತೆಲ್ಲಾ ಅದರ ಕೊಂಬೆಗಳನ್ನು  ಕಡಿದು ರಸ್ತೆ ಉದ್ದಕ್ಕೂ ನೆಡುತ್ತಾ ಬಂದರಂತೆ. ಹೀಗೆ ನೂರಾರು ಕೊಂಬೆಗಳನ್ನು ನೆಟ್ಟು ಪೋಷಿಸಿ, ರಕ್ಷಿಸಿದ್ದಾರೆ. ಬೇಸಿಗೆ ಕಾಲದಲ್ಲಿ ತನ್ನ ಪತ್ನಿಯೊಂದಿಗೆ ಸೇರಿಕೊಂಡು ಅಡ್ಡೆಯಲ್ಲಿ ನೀರನ್ನು ಹೊತ್ತು ಹಾಕಿದ್ದಾರೆ. ಅವರ ನಿಸ್ವಾರ್ಥ ಶ್ರಮದ ಫಲವಾಗಿ ಇಂದು ನೂರಕ್ಕೂ ಹೆಚ್ಚು ಮರಗಳು ಸಾಲು ಸಾಲಾಗಿ ನಿಂತು ನಿತ್ಯಾ ಬೀರಜ್ಜನಿಗೆ ನಮನ ಸಲ್ಲಿಸುತ್ತವೆ.

ತನ್ನ ಹೊಲಕ್ಕೆ ಹೋಗುವಾಗ ಬೀರಜ್ಜ ತಾನು ನೆಟ್ಟಿರುವ ಮರಗಳ ಮಧ್ಯೆ ಹಾದು ಹೋಗುತ್ತಾರಂತೆ. ಆಗ ಮರಗಳು ಗಾಳಿಗೆ ಸುಯ್ಯೂ ಎನ್ನುವಾಗ ಬೀರಜ್ಜನಿಗೆ ಏನೋ ಆನಂದ ಮತ್ತು ತೃಪ್ತಿ ಉಂಟಾಗುತ್ತದೆಯಂತೆ. ಬಿಸಿಲಲ್ಲಿ, ಮಳೆಯಲ್ಲಿ ಜನ ಜಾನೂವಾರುಗಳು ಮರದ ಆಶ್ರಯ ಪಡೆದು ನಿಂತಿದ್ದಾಗ ಬೀರಜ್ಜ ಸಂತೋಷ ಪಡುತ್ತಾರಂತೆ. ತಾನು ನೆಟ್ಟ ಮರಗಳು ಇಂದು ಬೃಹತ್ತಾಗಿ ಬೆಳೆದಿದ್ದು ತಾನು ಇಲ್ಲದಿದ್ದರೂ ತನ್ನ ಹೆಸರನ್ನೂ ಮುಂದೆ ನೂರಾರು ವರ್ಷಗಳ ಕಾಲ ಈ ಮರಗಳು ಜಗತ್ತಿಗೆ ಸಾರುತ್ತಲೇ ಇರುತ್ತವೆ. ಮನುಷ್ಯನಿಗೆ ಮಾಡಿದ ಉಪಕಾರ ಕ್ಷಣಾರ್ಧದಲ್ಲಿ ಮರೆಯುತ್ತಾನೆ ಆದರೆ ಮರಗಳಿಗೆ ಮಾಡಿದ ಉಪಕಾರ ನೂರಾರು ವರ್ಷ ನೆನಪಿನಲ್ಲಿರುತ್ತದೆ. ಅಷ್ಟೇ ಸಾಕು, ನನ್ನ ಬದುಕು ಸಾರ್ಥಕ ಎನ್ನುವ ಬೀರಜ್ಜನಿಗೆ ಮನದಲ್ಲಿ ಏನೋ ಅಸಮಾಧಾನವಿದೆ. ಇಷ್ಟು ಚೆನ್ನಾಗಿ ಬೆಳೆಯುತ್ತವೆ ಎಂದಿದ್ದರೆ ಮರಗಳನ್ನು ನೆಡುವುದು ನಿಲ್ಲಿಸದೇ ಮುಂದುವರೆದಿದ್ದರೆ ಇಂದಿಗೆ ಲಕ್ಷಾಂತರ ಮರಗಳನ್ನು ನೆಡಬಹುದಿತ್ತು ಎಂದು ಬೇಸರ ಪಟ್ಟುಕೊಳ್ಳುವ ಬೀರಜ್ಜ ನಾನು ಸಾಯುವವರೆಗೂ ಮತ್ತಷ್ಟು ಸಸಿಗಳನ್ನು ನೆಡುತ್ತೇನೆ ಎಂದು ಅದೇ ಉತ್ಸಾಹದಿಂದ ಹೇಳುತ್ತಾರೆ.

ಎಲ್ಲೆಲ್ಲಿ ಖಾಲಿ ಜಾಗ ಇದಯೋ ಅಲ್ಲಿ, ಮರಗಳಿಲ್ಲದ ರಸ್ತೆಗಳ ಎರಡೂ ಕಡೆಗಳಲ್ಲಿ ಉದ್ದಕ್ಕೂ ಸಸಿಗಳನ್ನು ನೆಡುವ ಆಸೆಯಿದೆ ಆದರೆ ಇವತ್ತೀಗೂ ಯಾರೂ ಆ ತರಹದ ಸಹಾಯವಾಗಲಿ ಅಥವಾ ಪ್ರೋತ್ಸಾಹವಾಗಲಿ ಮಾಡಲಿಲ್ಲ. ಆರ್ಥಿಕ ಸಂಕಟದಲ್ಲಿರುವ ತನಗೆ ತನ್ನ ಕನಸನ್ನು ನನಸು ಮಾಡಕೊಳ್ಳುವ ಸಾಮಾರ್ಥ್ಯವನ್ನು ಕುಗ್ಗಿಸಿದೆ ಎನ್ನುತ್ತಾರೆ. ಸರಕಾರವೂ ಸಹ ವಿಶ್ವ ಪರಸರ ದಿನಾಚರಣೆ ಎಂದು ಕೋಟ್ಯಾಂತರ ರೂಪಾಯಿ ಖರ್ಚು ಮಾಡುತ್ತದೆ, ಏನು ಸಾರ್ಥಕತೆ ಎನ್ನುವ ಬೀರಜ್ಜ ಈಗಲೂ ಹೊಲದ ಎಲ್ಲಾ ಕೆಲಸಗಳನ್ನು ಹುಡುಗರಂತೆ ಮಾಡುತ್ತಾರೆ. ಆರೋಗ್ಯವಾಗಿರುವ ಬೀರಜ್ಜ ತನ್ನ ಮನದ ಆಸೆಯನ್ನು ತಾನೇ ಈಡೇರಿಸಿಕೊಳ್ಳಲು ನಗರದಿಂದ ಬೀಜಗಳನ್ನು ತಂದು ಮಳೆ ಬಿದ್ದಾಗ ರಸ್ತೆ ಪಕ್ಕಗಳಲ್ಲಿ ಗುಂಡಿ ತೋಡಿ ನೆಡುತ್ತಿದ್ದಾರೆ. ಪರಿಸರ ಪ್ರೇಮಿಯಾದ ಬೀರಜ್ಜ ತನ್ನ ಸಾಧನೆಯ ಮೂಲಕ ಯುವ ಸಮಾಜಕ್ಕೆ ಪರಿಸರ ಸಂರಕ್ಷಣೆಯ ಸಂದೇಶ ನೀಡಿದ್ದಾರೆ. ವಿಶ್ವ ಪರಿಸರ ಮಾಸಾಚರಣೆ ಸಂದರ್ಭದಲ್ಲಿ ಪತ್ರಿಕೆ ಬೀರಜ್ಜನ ಶ್ರಮ ಮತ್ತು ಸಾಧನೆಯನ್ನು ನೆನಪಿಸುತ್ತದೆ.


ಶೈಕ್ಷಣಿಕ ವ್ಯವಸ್ಥೆಗೆ ಒಂದು ಸವಾಲು:




ಶೈಕ್ಷಣಿಕ ವ್ಯವಸ್ಥೆಗೆ ಒಂದು ಸವಾಲು:
ಮನೆಯಲ್ಲೇ ಶಾಲಾ ಶಿಕ್ಷಣದ ಪ್ರಯೋಗ. 
ಪ್ರಸ್ತುತ ಶೈಕ್ಷಣಿಕ ವ್ಯವಸ್ಥೆ ಬಗ್ಗೆ ತೀವ್ರ ಅಸಮಾಧಾನ ಮತ್ತು ಅತೃಪ್ತಿ ವ್ಯಕ್ತಪಡಿಸಿರುವ ವಿದ್ಯಾವಂತ ದಂಪತಿಗಳು ತಮ್ಮ ಮಗುವಿಗೆ ಮನೆಯಲ್ಲೇ ಪಾಠ ಹೇಳಿಕೊಡುವ ದೊಡ್ಡ ಸಾಹಸಕ್ಕೆ ಕೈ ಹಾಕಿದ್ದಾರೆ.
ತಂದೆ ಶಶಿಕುಮಾರ್ ವಿಪ್ರೋ ಐಟಿ ಸಂಸ್ಥೆಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದು ಸ್ವ ಇಚ್ಚೆಯಿಂದ ನಿವೃತ್ತಿಹೊಂದಿದ್ದು ಈಗ ತಿಪಟೂರು ತಾಲೂಕಿನಲ್ಲಿ ನಡೆಯುತ್ತಿರುವ ಭೈಫ್ ರೆಡ್ಡಿಯವರ ಕಲ್ಪಗಂಗಾ ಎಂಬ ಸಾವಯವ ಡೈರಿ ಯೋಜನೆಯಲ್ಲಿ ತಂತ್ರಜ್ಞರಾಗಿ ಕೆಲಸ ಮಾಡುತ್ತಿದ್ದಾರೆ. ತಾಯಿ ಶಿಲ್ಪಾ ಜಿ. ಎಂಟೆಕ್ ಪಧವಿಧರೆಯಾಗಿದ್ದು ಮನೆಯ ಕೆಲಸ ಮತ್ತು ಮಗನ ಆರೈಕೆಯಲ್ಲಿ ತೊಡಗಿದ್ದಾರೆ.
ಈ ಇಬ್ಬರು ದಂಪತಿಗಳ ಪ್ರಯೋಗಕ್ಕೆ ಸಿದ್ಧನಾಗಿರುವ ಸಿದ್ಧನಾಗಿರುವ ಮಗ ಶ್ರೇಯಸ್ ಎಸ್. (೮) ಶಾಲೆಗೆ ಹೋಗದೇ ತಂದೆ ತಾಯಿಗಳ ಜೊತೆಯಲ್ಲೇ ಜೀವನದ ಶಿಕ್ಷಣ ಪಡೆಯಲು ಆರಂಭಿಸಿದ್ದಾನೆ. ಮೂಲತಃ ತೆಲುಗು ಮಾತೃ ಭಾಷೆಯಾದರೂ ಈಗಾಗಲೇ ಕನ್ನಡ, ಇಂಗ್ಲೀಷ್ ಭಾಷೆಯಲ್ಲಿ ಚೆನ್ನಾಗಿ ಮಾತನಾಡಲು, ಓದಲು, ಬರೆಯಲು    ಶುರುವಿಟ್ಟಿದ್ದಾನೆ. ತನ್ನ ಭವಿಷ್ಯವನ್ನು ತನ್ನ ತಂದೆ ತಾಯಿಗಳೇ ಹೋಂ ಸ್ಕೂಲ್ ಎಂಬ ಪರೀಕ್ಷಗೆ ಒಡ್ಡಿದ್ದರೂ ಅದನ್ನು ಸವಾಲಾಗಿ ಸ್ವೀಕರಿಸಿರುವ ಶ್ರೇಯಸ್ ಸ್ವತಂತ್ರವಾಗಿ ಆಡುತ್ತಾ, ನಲಿಯುತ್ತಾ, ಸಂತೋಷವಾಗಿ ಎಲ್ಲವನ್ನೂ ಕಲಿಯುತ್ತಿದ್ದಾನೆ.
ಕಂಪ್ಯೂಟರ್ ಜ್ಞಾನ ಹೊಂದಿರುವ ಶ್ರೇಯಸ್ ಈಗಾಗಲೇ ಅಂತರಜಾಲದಲ್ಲಿ ಸುತ್ತಾಡಿ ಮಾಹಿತಿ ಸಂಗ್ರಹಿಸಿ, ತನ್ನ ಜ್ಞಾನವನ್ನು ಹೆಚ್ಚಿಸಿಕೊಳ್ಳುತ್ತಿದ್ದಾನೆ. ತಂದೆಗೆ ಬಿಡುವಿದ್ದಾಗ ಅವರೊಂದಿಗೆ ತನಗೆ ಬಂದ ನಾನಾ ಪ್ರಶ್ನೆಗಳಿಗೆ ಸಮಂಜಸ ಉತ್ತರ ಪಡೆದು ಪಟ್ಟಿ ಮಾಡಿಕೊಳ್ಳುತ್ತಾನೆ. ಮನೆಗೆ ಬಂದವರ ಹೋದವರ ವಿವರ ಪಡೆಯುತ್ತಾನೆ. ತಂದೆ ಹೊರಗೆ ಹೋಗುವಾಗ ಅವರೊಂದಿಗೆ ಹೋಗಿ ಸಮಾಜದ ಎಲ್ಲಾ ಸಂಪರ್ಕಗಳನ್ನು, ವ್ಯವಹಾರವನ್ನೂ ತಿಳಿದುಕೊಳ್ಳುತ್ತಿದ್ದಾನೆ. ಯಾವ ಅಡ್ಡಿ ಆತಂಕವಿಲ್ಲದೇ ಮನಸ್ಸಿಗೆ ಬಂದಂತೆ ಓದುವಾಗ ಓದುತ್ತಾನೆ, ಬರೆಯುತ್ತಾನೆ, ಆಡುತ್ತಾನೆ, ಕಂಪ್ಯೂಟರ್ ಹೀಗೆ ಯಾವ ನಿರ್ಭಂಧ ಮತ್ತು ಭಯವಿಲ್ಲದೇ ಸರ್ವ ಸ್ವತಂತ್ರವಾಗಿ ಬದುಕಿನ ಪಾಠ ಕಲಿಯುತ್ತಿದ್ದಾನೆ.
ಸದಾ ಶಾಂತ ಚಿತ್ತದಿಂದ ಹಸನ್ಮುಖಿಯಾಗಿ ಎಲ್ಲವನ್ನೂ ಗಮನಿಸುವ ಶ್ರೇಯಸ್ ತಾನು ಶಾಲೆಗೆ ಹೋಗುತ್ತಿಲ್ಲ, ಇತರೆ ಗೆಳೆಯರೊಂದಿಗೆ ಬೆರೆಯುತ್ತಿಲ್ಲ, ಗುಂಪು ಗೂಡಿ ನಲಿಯುತ್ತಿಲ್ಲ, ಕ್ರೀಡೆ, ಕಲೆ ಮತ್ತು ಸಾಹಿತ್ಯದಲ್ಲಿ ಸಾಮೂಹಿಕವಾಗಿ ಇತರೆ ಮಕ್ಕಳೊಂದಿಗೆ ಸೇರಿ ತನ್ನ ಪ್ರತಿಭೆ ಗುರ್ತಿಸಿ ಕೊಳ್ಳುತ್ತಿಲ್ಲ ಎಂಬ ಯಾವುದೇ ಆತಂಕವಾಗಲಿ, ಬಯಕೆಯಾಗಲಿ ಇಟ್ಟುಕೊಂಡಿಲ್ಲ. ಶಾಲೆಗೇ ಹೋಗಿ ಕಲಿಯಬೇಕೇ ಮನೆಯಲ್ಲಿ ಯಾಕೆ ಕಲಿಯಲು ಸಾಧ್ಯವಿಲ್ಲ ಎಂದು ಮುಗ್ಧತನದಿಂದ ಪ್ರಶ್ನಿಸುವ ಹಿಂದೆ ಅವನ ಶಾಲೆಯ ಅನುಭವಗಳು ಸ್ಫೂಟವಾಗುತ್ತವೆ.
ಶಾಲೆಯಲ್ಲಿ ಏನಿದೆ? ಅಲ್ಲಿ ನಮಗೆ ಸ್ವಾತಂತ್ರ್ಯವಿಲ್ಲ. ಎಲ್ಲರಿಗೂ ಒಂದೇ ಪಾಠ. ನಮ್ಮ ಇಷ್ಟ ಕೇಳುವವರಿಲ್ಲ. ಅವರ ಶೈಕ್ಷಣಿಕ ಕಲ್ಪನೆಯನ್ನು ನಮ್ಮ ಮೇಲೆ ತುರುಕುತ್ತಾರೆ. ಸಾಮೂಹಿಕವಾಗಿ ಹೇಳಿ ಕೊಡುವುದರಿಂದ ನಾವು ಎಷ್ಟರ ಮಟ್ಟಿಗೆ ಕಲಿತ್ತಿದ್ದೇವೆ ಎಂದು ಗಮನಿಸುವುದಿಲ್ಲ. ನಮ್ಮ ಸಾಮಾರ್ಥ್ಯವನ್ನು ಪರೀಕ್ಷೆಗೆ ಒಡ್ಡುತ್ತಾರೆ. ಮನುಷ್ಯರಂತೆ ನಡೆಸಿಕೊಳ್ಳದೇ ಬಾಯಿಗೆ ಬಂದಂತೆ ಬೈಯುವುದು ಮತ್ತು ಒಡೆಯುವುದು ಮಾಡುತ್ತಾರೆ. ಪ್ರಶ್ನಗಳಿಗೆ ಅವಕಾಶ ನೀಡದೇ ಅವರ ಮಾನಸಿಕ ಸ್ಥಿತಿಗೆ ತಕ್ಕಂತೆ ನಮ್ಮನ್ನು ಕರೆದೊಯ್ಯುತ್ತಾರೆ. ಜಾತಿ, ವರ್ಗ ಬೇಧ ಭಾವ ಮಾಡುತ್ತಾರೆ. ಜಾನುವಾರುಗಳ ದೊಡ್ಡಿಯಂತಿರುವ ಶಾಲಾ ವಾತಾವರಣದಲ್ಲಿ ನಾನು ಕಲಿಯಲು ಸಾಧ್ಯವೇ ಇಲ್ಲ ಎಂದು ಕಡಾಕಂಡಿತವಾಗಿ ಹೇಳುವ ಶ್ರೇಯಸ್ ವಯಸ್ಸಿಗೆ ಮೀರಿದ ಮಾನಸಿಕ ಬೆಳವಣಿಗೆ ಹೊಂದಿದ್ದಾನೆ.
ತಮ್ಮ ಅನುಭವ ಮತ್ತು ಕಲ್ಪನೆಗೆ ಮಗನ ಭವಿಷ್ಯವನ್ನು ಹೋಂ ಸ್ಕೂಲ್ ಎಂಬ ಪ್ರಯೋಗಕ್ಕೆ ಒಡ್ಡಿ ಆತನ ಭವಿಷ್ಯದೊಂದಿಗೆ ಆಟ ಆಡುವುದು ಸರಿಯೇ ಎಂಬ ಪ್ರಶ್ನೆಗೆ ದಂಪತಿಗಳ ಉತ್ತರ ಎಲ್ಲರನ್ನೂ ಅಚ್ಚರಿಗೊಳಿಸಿ, ಪುನಃ ಪ್ರಶ್ನಾರ್ತಕವಾಗಿಯೇ ನಿಲ್ಲಿಸುತ್ತದೆ. ವೇದಿಕ್ ಶಾಸ್ತ್ರದ ಪಂಡಿತರಾಗಿರುವ ಸುಧಾಕರ್ ಶಾಸ್ತ್ರಿಗಳ ಹೋಂ ಸ್ಕೂಲಿಂಗ್ ಯಶಸ್ಸಿನಿಂದ ಸ್ಪೂರ್ತಿಗೊಂಡು ತಾವು ತಮ್ಮ ಮಗನಿಗೆ ಮನೆಯ ಒಳಗೆ ಮತ್ತು ಹೊರಗೆ ಬದುಕಿನ ಪಾಠ ಕಲಿಸಲು ನಿರ್ಧರಿಸಿದ್ದೇವೆ ಎಂದು ಉತ್ತರಿಸುತ್ತಾರೆ.
ಥಾಮಸ್ ಆಲ್ವಾ ಎಡಿಸನ್ ಸೇರಿದಂತೆ ನಾನಾ ವಿಜ್ಞಾನಿಗಳು, ಜ್ಞಾನಿಗಳು, ಮಹಾನ್ ವ್ಯಕ್ತಿಗಳ ಜೀವನದ ಸಂಘರ್ಷವನ್ನು ಸಾಕ್ಷಿಯಾಗಿ ಕೊಡುವ ಶಶಿಕುಮಾರ್ ಇಂದಿನ ಶೈಕ್ಷಣಿಕ ವ್ಯವಸ್ಥೆಯಿಂದ ವಿದ್ಯಾವಂತರಾಗಿ ಹೊರ ಬರುವ ಶೇ.೮೦ರಷ್ಟು ವ್ಯಕ್ತಿಗಳು ಮನಷ್ಯನಾಗಿ ಉಳಿದಿರುವುದಿಲ್ಲ ಎಂದು ಒತ್ತಿ ಹೇಳುತ್ತಾರೆ. ಅವರೆಲ್ಲಾ ಯಾಂತ್ರಿಕೃತ ಜೀವನದ ದುಡಿಯುವ ಸಾಧನಗಳಷ್ಟೆ. ನಾಲ್ಕು ಗೋಡೆಗಳ ಮಧ್ಯೆ ಕೃತಕ ಪರಿಸರದಲ್ಲಿ ಕಲಿಯುವ ಅಂಕಾಧಾರಿತ ಶಿಕ್ಷಣದಿಂದ ಬದುಕು ಪೂರ್ಣಗೊಳ್ಳುವುದಿಲ್ಲ. ಪ್ರತಿಭೆಗೆ ವಿರುದ್ಧವಾದ ಬದುಕು ಅವರದ್ದಾಗಿರುತ್ತದೆ. ಎಲ್ಲವನ್ನೂ ಕಳೆದುಕೊಂಡ ಅವರು ಮಾನಸಿಕವಾಗಿ ಅನಾರೋಗ್ಯದಿಂದಿರುತ್ತಾರೆ. ಓದುವುದು ಒಂದನ್ನು ಬಿಟ್ಟು ಬೇರೆ ಯಾವುದೇ ವಿಷಯದಲ್ಲಿ ಅರೆಜ್ಞಾನಿಗಳಾಗಿರುತ್ತಾರೆ. ಪ್ರತಿಭೆ ಮತ್ತು ಕ್ರೀಯಾಶೀಲತೆಗೆ ಮಾನ್ಯತೆ ಇಲ್ಲದ ಇಂತಹ ಶೈಕ್ಷಣಿಕ ವ್ಯವಸ್ಥೆಯಿಂದ ನೊಂದು ಬೆಂದು ಬಂದ ನಾನು ನನ್ನ ಮಗನನ್ನು ಈ ಕೆಟ್ಟ ಶೈಕ್ಷಣಿಕ ವ್ಯವಸ್ಥೆಗೆ ತಳ್ಳಿ ಆತನ ಬದುಕನ್ನು ನರಕವಾಗಿಸಲಾರೆ ಎಂದು ತಂದೆ ಶಶಿಕುಮಾರ್ ತನ್ನ ಮತ್ತು ತನ್ನ ಮಡದಿಯ ನಿರ್ಧಾರವೇ ಸರಿ ಎಂದು ನಾನಾ ಉದಾಹರಣೆಗಳ ಮೂಲಕ ಸ್ಪಷ್ಟ ಪಡಿಸುತ್ತಾರೆ.
ಅವನು ಯಾವುದನ್ನೂ, ಬಾಲ್ಯಾವಸ್ಥೆಯನ್ನು ಕಳೆದುಕೊಳ್ಳುವುದಿಲ್ಲ. ಆದರೆ ಬಾಲ್ಯದಲ್ಲಿ ಸುಪ್ತವಾಗಿರುವ ಪ್ರತಭೆಯನ್ನು ಈಗಲೇ ಬೆಳಕಿಗೆ ತಂದು ಕೊಂಡು ಪೋಷಿಸಿಕೊಳ್ಳಲು ಪ್ರೋತ್ಸಾಹ ನೀಡುತ್ತೇವೆ. ನನ್ನ ಇರುವ ಒಬ್ಬನೇ ಮಗ ನಮ್ಮ ಮನೆಯ ಒಳಗೆ ಮತ್ತು ಹೊರಗೆ ಕಲಿಯುತ್ತಾನೆ. ನಿತ್ಯಾ ನಡೆಯುವ ಬದುಕಿನ ಎಲ್ಲವನ್ನೂ ತಿಳಿದುಕೊಳ್ಳುತ್ತಾನೆ. ಅನುಮಾನ ಮತ್ತು ಸಮಸ್ಯೆಗಳನ್ನು ಪ್ರಶ್ನಿಸುವ ಮೂಲಕ ಪರಿಹಾರ ಕಂಡು ಕೊಳ್ಳುತ್ತಾನೆ. ಎಲ್ಲಾ ಸ್ವಾತಂತ್ರ್ಯವನ್ನೂ ಅವನಿಗೆ ನೀಡಿದ್ದು ಉತ್ಸಾಹ, ಆನಂದ ಮತ್ತು ಲವಲವಿಕೆಯಿಂದ ಸದಾ ಇರುತ್ತಾನೆ ಎನ್ನುವ ಅವರು ಅವನು ಇಷ್ಟ ಪಟ್ಟರೆ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಕಟ್ಟಿಸುತ್ತೇವೆ, ನಂತರ ಕಾಲೇಜು ಶಿಕ್ಷಣ ಮಾಡಿಸುತ್ತೇವೆ ಎನ್ನುತ್ತಾರೆ.
ಎಲ್ಲಾ ವಿಷಯಗಳನ್ನೂ ಮೊದಲಿಗೆ ಅರ್ಥ ಮಾಡಿಸುತ್ತೇವೆ, ನಂತರ ಆತನಿಂದ ಅರ್ಥ ಮಾಡಿಕೊಂಡಿದ್ದನ್ನು ಹೇಳುವುದನ್ನು ಕಲಿಸುತ್ತೇವೆ. ಹತ್ತನೇ ವಯಸ್ಸಿನವರೆಗೆ ಕನ್ನಡ, ಇಂಗ್ಲೀಷ್, ಸಂಸ್ಕೃತ, ಹಿಂದಿ ಭಾಷೆಯನ್ನು ಚೆನ್ನಾಗಿ ಮಾತನಾಡಲು ಕಲಿಸುತ್ತೇವೆ, ನಂತರ ಬರೆಯವುದು ಕಲಿಸುತ್ತೇವೆ. ಎಂದಿಗೂ ಬಾಯಿ ಪಾಠ ಮಾಡುವ ಕೆಟ್ಟ ಸಂಪ್ರದಾಯವನ್ನು ಬೆಳೆಸುವುದಿಲ್ಲ ಎನ್ನುವ ಅವರು ಬೇರೆಯವರ ದೃಷ್ಟಿಯಲ್ಲಿ ಇದು ಸರಿಕಾಣದೇ ವೈಫಲ್ಯವಾಗಬಹುದು ಆದರೆ ನಮ್ಮ ದೃಷ್ಟಿಯಲ್ಲಿ ಇದು ಸರಿಯಾದ ಕ್ರಮ. ಯಶಸ್ಸು ಅಥವಾ ವಿಫಲತೆ ನಮ್ಮ ಉದ್ದೇಶವಲ್ಲ ಎಂದು ಬಹಳ ದೃಡತೆಯಿಂದ ಹೇಳುತ್ತಾರೆ.
ಪ್ರಸ್ತುತ ಶೈಕ್ಷಣಿಕ ವ್ಯವಸ್ಥೆ ಬದಲಾಗಬೇಕು. ಆದರೆ ಸಧ್ಯದಲ್ಲಿ ಅದು ಸಾಧ್ಯವಿಲ್ಲ. ಶೈಕ್ಷಣಿಕ ಕ್ರಾಂತಿಯಾಗಬೇಕು ಎಂದು ಹೇಳುವ ಅವರ ನಿರ್ಧಾರವನ್ನು ನಮ್ಮ ಸಮಾಜದ ಜನ ಅರಗಿಸಿಕೊಳ್ಳುವುದು ಕಷ್ಟ ಅಲ್ಲವೇ? ಇದಕ್ಕೆ ನಮ್ಮ ಶಿಕ್ಷಣ ಇಲಾಖೆ ಮತ್ತು ತಜ್ಞರು ಏನೆನ್ನುತ್ತಾರೆ.


ಕಲ್ಪನೆಯ ಮನೆ ಕಟ್ಟಿ ಕೊಳ್ಳಿ!


ಕಲ್ಪನೆಯ ಮನೆ ಕಟ್ಟಿ ಕೊಳ್ಳಿ!
ಮದುವೆ ಮಾಡಿ ನೋಡು, ಮನೆ ಕಟ್ಟಿ ನೋಡು ಎಂದು ಹಿರಿಯರು ಹಿಂದೆ ಹೇಳುವ ಮಾತೊಂದು ಇತ್ತು. ಆದರೆ ಇಂದು ಚೆಂದದ ಮನೆ ಕಟ್ಟುವುದು, ಒಳ್ಳೆ ಮದುವೆ ಮಾಡುವುದು ಎರಡೂ ದುಭಾರಿಯಾಗಿ ಬಿಟ್ಟಿದೆ. ನೋಟಿನ ಬೆಲೆ ಕಳೆದುಕೊಂಡ ಮೇಲಂತೂ ಇವೆರಡೂ ಬಡವರಿಗೆ ಕಬ್ಬಿಣದ ಕಡಲೆಯಂತೆಯೇ ಸರಿ. ಬಡವರು, ಆರ್ಥಿಕವಾಗಿ ಹಿಂದುಳಿದ ಜನ ಇಂದು ಮನೆ ಕಟ್ಟುವುದು ಇರಲಿ ಒಂದು ಸ್ವಂತ ಸೈಟ್ ಕೊಂಡು ಕೊಳ್ಳುವುದು ಸಾಧ್ಯವಿಲ್ಲದ ಸ್ಥಿತಿಯಿದೆ. ಆದರೆ ತಿಪಟೂರಿನ ಭೈಫ್ ರೆಡ್ಡಿ ಅವರು ಕನಸಿನ ಮನೆಯನ್ನು ಅತ್ಯಲ್ಪ ವೆಚ್ಚದಲ್ಲಿ ಹೇಗೆ ಕಟ್ಟುವುದು ಎಂದು ಸ್ವತಃ ತೋರಿಸಿಕೊಟ್ಟಿದ್ದಾರೆ.

ಒಂದು ಸ್ವಂತ ನಿವೇಶನ ಕೊಂಡುಕೊಳ್ಳಬೇಕು, ಅಲ್ಲಿ ಒಂದು ತಮ್ಮದೇ ಕಲ್ಪನೆಯ ಸುಂದರ ಮನೆ ಕಟ್ಟಬೇಕು, ಟಿವಿ, ಪ್ರಿಡ್ಜ್, ಕಾರು ಕೊಳ್ಳಬೇಕು.. ಏನೆಲ್ಲಾ ಪ್ರತಿಯೊಬ್ಬರೂ ನಿತ್ಯಾ ಕಾಣುವ ಕನಸು. ಆದರೆ ಇಂದಿನ ದುಬಾರಿ ಯುಗದಲ್ಲಿ ಕನಸು ಕೊನೆಯವರೆಗೂ ಕನಸಾಗಿಯೇ ಉಳಿದು ಬಿಡುತ್ತದೆ. ಅಂತಹವರಿಗೆ ಜಿ.ಎನ್.ಎಸ್.ರೆಡ್ಡಿಯವರು ಆತ್ಮಸ್ಥೈರ್ಯ ಮತ್ತು ದೈರ್ಯ ತುಂಬುತ್ತಾರೆ ಅಲ್ಲದೇ ಮನೆ ಕಟ್ಟುವ ಕನಸಿಗೆ ಶಕ್ತಿ ತುಂಬಿ ಕಡಿಮೆ ವೆಚ್ಚದಲ್ಲಿ ಸುಂದರವಾದ ಮನೆ ಕಟ್ಟಿ ಕೊಳ್ಳುವ ಉಪಾಯ ಹೇಳಿ ಕೊಡುತ್ತಾರೆ.
ಸ್ವತಃ ಅವರು ತಿಪಟೂರಿನ ಶಾರದ ನಗರದಲ್ಲಿ ಕೇವಲ ೩೩ ಅಡಿ ಉದ್ದ ಮತ್ತು ೩೩ ಅಡಿ ಅಗಲದ ವಿಸ್ತೀರ್ಣದಲ್ಲಿ ಒಂದು ಸುಂದರ ಮತ್ತು ಆಕರ್ಷಕ ಮನೆ ನಿರ್ಮಿಸಿದ್ದಾರೆ. ಅವರ ಕಲ್ಪನೆಗೆ ತಕ್ಕಂತೆ ನಾನಾ ಪ್ರದೇಶಗಳನ್ನು ಸುತ್ತಿ ತಮ್ಮದೇ ವಿನ್ಯಾಸದಲ್ಲಿ ನಿರ್ಮಿಸಿರುವ ಮನೆಯನ್ನು ನೋಡಲು ನಿತ್ಯಾ ಹತ್ತಾರು ಜನ ಬಂದು ಹೋಗುತ್ತಾರೆ.
ಸ್ಥಳೀಯವಾಗಿ ದೊರೆಯುವ ಕಟ್ಟಡ ಸಾಮಾಗ್ರಿಗಳನ್ನೇ ತಮ್ಮ ಮನೆ ನಿರ್ಮಾಣಕ್ಕೆ ಬಳಸಿದ್ದಾರೆ. ಸರಳ ಮತ್ತು ಸುಲಭವಾದ ವಿನ್ಯಾಸದಿಂದ ನಿರ್ಮಿಸಿರುವ ಈ ಮನೆ ಹಲವು ವಿಶೇಷಗಳಿಂದ ಕೂಡಿದೆ. ಕಡಿಮೆ ವೆಚ್ಚದಲ್ಲಿ ಅತ್ಯಾಕರ್ಷಕವಾಗಿ ಕಟ್ಟಿರುವ ಈ ಎರಡು ಅಂತಸ್ತಿನ ಮನೆ ಪರಿಸರ ಸ್ನೇಹಿಯಾಗಿದ್ದು ನೋಡುಗರಿಗೆ ಒಂದು ಭವ್ಯ ಭಂಗಲೆಯಂತೆ ಕಾಣುತ್ತದೆ. ತಮ್ಮದೇ ಕಲ್ಪನೆಯ ಮನೆ ಕಟ್ಟುತ್ತೇವೆ ಎನ್ನುವವರಿಗೆ ರೆಡ್ಡಿ ಮಾದರಿಯಾಗಿದ್ದಾರೆ.

ಇಂಜಿಯರ್, ಆರ್ಕಿಟೆಕ್ಟ್ ಸೇರಿದಂತೆ ಯಾರ ಯಾರದೋ ಕಲ್ಪನೆಗೆ ಲಕ್ಷಾಂತರ ರೂಪಾಯಿ ಹಣ ಸುರಿದು ಮನೆ ಕಟ್ಟುವ ಜನ ಮತ್ತೊಂದು ಅದ್ಭುತ ಮನೆ ನೋಡಿದಾಗ ಅಯ್ಯೋ ನಾವು ಅವಸರ ಮಾಡಿದೇವು, ತಡವಾಗಿದ್ದರೆ ಇಂತಹ ಮನೆ ಕಟ್ಟಬಹುದಿತ್ತು ಎಂದು ನೊಂದು ಕೊಳ್ಳುತ್ತಾರೆ. ಆಸೆ ಎನ್ನುವುದು ಎಂದಿಗೂ ಕಡಿಮೆಯಾಗುವುದಿಲ್ಲ. ಮನುಷ್ಯನ ಗುಣವೇ ಅಷ್ಟು, ತನ್ನ ಹತ್ತಿರ ಇರುವುದಕ್ಕೆ ತೃಪ್ತಿ ಪಟ್ಟುಕೊಳ್ಳದೇ ಪರರ ಬಳಿ ಇರುವುದಕ್ಕೆ ಹಂಬಲಿಸುವುದು ಹೆಚ್ಚು. ಈ ರೀತಿ ಕೊನೆಗೂ ತೃಪ್ತಿಯಿಲ್ಲದೇ ಹುಡುಕಾಟ ನಡೆಸುವುದಕ್ಕಿಂತ ನಮ್ಮದೇ ವ್ಯಕ್ತಿತ್ವ ಪ್ರತಿನಿಧಿಸುವಂತ, ತಮ್ಮ ಕಲ್ಪನೆಗೆ ನಿಲುಕುವಂತಹ ಮನೆಯನ್ನು ನಿರ್ಮಿಸಿಕೊಂಡಾಗ ಆಗುವ

ಆತ್ಮತೃಪ್ತಿ, ಸಂತೋಷ ಅರಮನೆಯಲ್ಲಿದ್ದರೂ ಬರುವುದಿಲ್ಲ. ನಮ್ಮ ಕನಸು ಮತ್ತು ಕಲ್ಪನೆಯ ಮನೆ ಪರಿಸರಕ್ಕೆ ನಮ್ಮ ಬದುಕು ಹೊಂದಿಕೊಳ್ಳುವಂತಿರ ಬೇಕು. ಆರೋಗ್ಯಕರ, ಆಹ್ಲಾದಕರ ಮತ್ತು ತೃಪ್ತಿಕರವಾಗಿ ವಾಸಿಸಲು ಯೋಗ್ಯವಾಗಿರಬೇಕು ಎನ್ನುವ ರೆಡ್ಡಿ ಅವರು ಮರ ಮುಟ್ಟುಗಳನ್ನು ಬಳಸಲು ಪ್ರಕೃತಿ ಮೇಲೆ ದೌರ್ಜನ್ಯ ನಡೆಸುವುದು ಸರಿಯಲ್ಲ ಎನ್ನುತ್ತಾರೆ. ನಮ್ಮ ಚೆಂದದ ಮನೆಗಾಗಿ ಪರಿಸರದ ಮೇಲೆ ಧಾಳಿ ಮಾಡಿ ನಾಶ ಮಾಡಿದರೆ ಭವಿಷ್ಯದಲ್ಲಿ ಬಾರೀ ಅಪಾಯ ಎದುರಿಸಬೇಕಾದೀತು ನಮನ್ನು ಕಾಯುವ ಈ ಸುಂದರ ಪ್ರಕೃರ್ತಿಯನ್ನು ಮುಂದಿನ ಪೀಳಿಗೆಗಾಗಿ ನಾವು ಸದಾ ಕಾಯಬೇಕು ಎಂದು ಎಚ್ಚರಿಸುತ್ತಾರೆ.
೭೮ ವರ್ಷಗಳ ಹಿಂದೆಯೇ ಗಾಂಧಿಜಿಯವರು ಮನೆ ಕಟ್ಟಲು ಒಂದು ಸರಳ ಸೂತ್ರ ನೀಡಿದ್ದರು. ಅವರ ಸಲಹೆಯಂತೆ ಮನೆ ಕಟ್ಟಲು ಉದ್ದೇಶಿಸಿರುವ ಪ್ರದೇಶಕ್ಕೆ ಹೆಚ್ಚಿನ ಆಧ್ಯತೆ ನೀಡಬೇಕು. ಮನೆ ಕಟ್ಟುವ ಸ್ಥಳದ ೫ ಕಿಮಿ ವ್ಯಾಪ್ತಿಯೊಳಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ದೊರೆಯುವ ಕಟ್ಟಡ ಸಾಮಾಗ್ರಿಗಳನ್ನು ಬಳಸಬೇಕು. ಮನೆ ಪರಿಸರ ಸ್ನೇಹಿಯಾಗಿದ್ದು ಸ್ಥಳೀಯ ವಾತಾವರಣದ ಬದಲಾವಣೆಗೆ ಹೊಂದಿಕೊಳ್ಳುವಂತಹ ವಿನ್ಯಾಸ ಹೊಂದಿರಬೇಕು. ನಮ್ಮ ಮನಸ್ಸಿಗೆ ಒಪ್ಪುವ ಸುಂದರ ಮತ್ತು ವಿಶಾಲವಾದ  ಮನೆಯನ್ನು ಮಿತವ್ಯಯದಲ್ಲಿ ನಿರ್ಮಿಸುವುದು ಒಂದು ದೊಡ್ಡ ಸಾಧನೆ ಮತ್ತು ಪ್ರತಿಷ್ಟೆಯೇ ಸರಿ. ಒಂದು ಸುಂದರ ಆಲೋಚನೆ, ತಾಳ್ಮೆ, ಕಲ್ಪನೆ ಇಷ್ಟಿದ್ದರೆ ಸಾಕು ಒಂದು ಭವ್ಯ ಮನೆ ಸಿದ್ಧ.
ಸ್ಥಳೀಯವಾಗಿ ಸಿಗುವ ಇಟ್ಟಿಗೆ, ಮಣ್ಣು, ಇತ್ಯಾದಿ ವಸ್ತುಗಳನ್ನೇ ಬಳಸಿ ಸ್ಥಳೀಯ ವಿನ್ಯಾಸಕ್ಕನುಗುಣವಾಗಿ ಸ್ಥಳೀಯ ಕಾರ್ಮಿಕರಿಂದ ಮನಸ್ಸಿಗೆ ಒಪ್ಪುವ ಮನೆ ನಿರ್ಮಾಣ ಮಾಡಿಕೊಳ್ಳಬೇಕು ಎನ್ನುವ ರೆಡ್ಡಿಯವರು ಇಂಜಿನಿಯರ್ ಹೇಳಿದರು ಎಂದು ದುಂದುವೆಚ್ಚಮಾಡಿ ಮನಸ್ಸಿಗೆ ಬಂದಂತೆ ಕಬ್ಬಿಣ, ಸಿಮೆಂಟ್, ಮರ ಮಟ್ಟುಗಳನ್ನು ಬಳಸಿ ಅತಿ ಭಾರದ ಮನೆ ನಿರ್ಮಾಣ ಮಾಡಬಾರದು ಎಂದು ಸಲಹೆ ನೀಡುತ್ತಾರೆ.

ಆರ್ಕಿಟೆಕ್ಟರ್‌ಗಳ ಕಲ್ಪನೆಗೆ ತಕ್ಕಂತೆ ಒಂದೊಂದು ಮನೆ ನಿರ್ಮಾಣ ವೆಚ್ಚ ಲಕ್ಷ, ಕೋಟಿಗಳನ್ನೂ ದಾಟುತ್ತವೆ. ಆದರೆ ಅಲ್ಲಿ ಎಲ್ಲಾ ಒಂದೇ ಮಾದರಿಯ ತದ್ರೂಪ ವ್ಯವಸ್ಥೆಗಳಿರುತ್ತವೆ. ಒಂದು ಮನೆ ನೋಡಿದರೆ ಮತ್ತೊಂದು ಮನೆ ನೋಡುವಂತಿಲ್ಲ. ಅಲ್ಲಿ ವಿಶೇಷ ಏನೂ ಇರುವುದಿಲ್ಲ. ಒಂದು ಕಿಚನ್, ಎರಡು ಬೆಡ್ ರೂಂ, ಒಂದು ಹಾಲ್, ಬಾತ್ ರೂಂ, ಪೋರ್ಟಿಕೋ ಹಾಗೂ ಒಂದು ಕಾರ್ ಶೆಡ್ ಮುಗಿದು ಹೋಯಿತು, ನೀವು ನೂರು ಅಲ್ಲ ಸಾವಿರ ಮನೆ ಸುತ್ತಿದರೂ, ಯಾವ ಮನೆ ನೋಡಿದರೂ ಇದೇ ವಿನ್ಯಾಸ. ಬೇರೆ ಹೊಸ ವಿಶೇಷ ಇರೋದಿಲ್ಲ. ಜೊತೆಗೆ ರಾಜಾಸ್ಥಾನ್ ಮಾರ್ಬಲ್, ಇಟಾಲಿಯನ್ ಮಾರ್ಬಲ್, ಚೈನೀಸ್ ಕಿಚನ್, ಹೀಗೆ ನಾನಾ ತರಹದ ನಾನಾ ಐಷರಾಮಿ ವಿನ್ಯಾಸದಿಂದ ದುಬಾರಿ ವೆಚ್ಚದಲ್ಲಿ ಅಲಂಕರಿಸಿ, ಕ್ಷಣಿಕ ತೃಪ್ತಿ ಪಟ್ಟು ಕೊಳ್ಳುತ್ತಾರೆ. ಆದರೆ ಮತ್ತೆ ಇದಕ್ಕಿಂತ ಭಿನ್ನ ವಿನ್ಯಾಸ ನೋಡಿದಾಗ ಖಿನ್ನರಾಗುತ್ತಾರೆ. ಇಷ್ಟೆಲ್ಲಾ ಕೋಟಿ ಗಟ್ಟಲೆ ಹಣ ಕರ್ಚು ಮಾಡಿ ಕಟ್ಟಿರುವ ಮನೆಯಲ್ಲಿ ಗಾಳಿಗಾಗಿ ವಿದ್ಯುತ್ ಫ್ಯಾನು, ಬೆಳಕಿಗಾಗಿ ವಿದ್ಯುತ್ ದೀಪ, ವಾತಾವರಣ ನಿಯಂತ್ರಣಕ್ಕಾಗಿ ಏರ್‌ಕಂಡಿಶನ್ ವ್ಯವಸ್ಥೆ, ಮರ ಮುಟ್ಟುಗಳ ರಕ್ಷಣೆಗಾಗಿ ನಾನಾ ಕೀಟ ನಾಶಕಗಳ ಬಳಕೆ, ನಾನಾ ಕೊಠಡಿಗಳ ನಿರ್ವಹಣೆಗಾಗಿ ಮಾನವಯಂತ್ರ ನಿಯೋಜನೆ  ಹೀಗೆ ತಾವು ಮಾಡಿಕೊಂಡ ವ್ಯವಸ್ಥೆಯ ನಿರ್ವಹಣೆಗಾಗಿ ಪುನಃ ಮಿತಿ ಮೀರಿದ ವೆಚ್ಚವನ್ನು ನಿರಂತರವಾಗಿ ಮಾಡುತ್ತಾ ಹೋಗುತ್ತಾರೆ. ಒಂದು ದಿನ ನಿರ್ವಹಣೆ ನಿಂತರೆ ಆಗ ಅದು ಭೂತ ಭಂಗಲೆಯಂತೆ ಕಾಣುತ್ತದೆ. ಮನೆ ಕಟ್ಟಿದಾಗ ಈ ರೀತಿ ಆಗ ಬಾರದು.

ನಮ್ಮ ಕಲ್ಪನೆಯ ಮನೆ ಕಟ್ಟಿದಾಗ ಅಲ್ಲಿ ಶಾಂತಿ, ನೆಮ್ಮದಿ, ಪ್ರೀತಿ ಮತ್ತು ಆರೋಗ್ಯದ ವಾತಾವರಣ ನಿರ್ಮಾಣವಾಗಬೇಕು. ಗಾಳಿ, ಬೆಳಕು ನೈಸರ್ಗಿಕವಾಗಿ ಬರುವಂತಿರಬೇಕು. ಅತಿಯಾದ ಗೋಡೆಗಳನ್ನು ಬಳಸದೇ ಎಲ್ಲರೂ ಕೂಡಿ ಬದುಕುವಂತೆ, ಮನೆಯ ಸದಸ್ಯರೊಂದಿಗೆ ಮಾನವೀಯ ಸಂಬಂಧ ಗಟ್ಟಿಗೊಳಿಸುವ ವಾತಾವರಣ ಸೃಷ್ಟಿಯಾಗಬೇಕು. ವಿಶಾಲ ಜಾಗದಲ್ಲಿ ಮಧ್ಯೆ ಮಧ್ಯೆ ಗೋಡೆಗಳನ್ನು ಹಾಕುವ ಮೂಲಕ ಮನೆಯವರನ್ನೇ ಭಾಗ ಮಾಡಿ, ಮನಸ್ಸನ್ನು ಬೇರ್ಪಡಿಸಿ, ಬಂಧಿಸಿಡುವ ಆಧುನಿಕ ಗೃಹ ನಿರ್ಮಾಣ ಪದ್ಧತಿ ಸರಿಯಲ್ಲ ಎನ್ನುವ ರೆಡ್ಡಿ ಅವರ ಕಲ್ಪನೆಯ ಮನೆಯಲ್ಲಿ ಮಧ್ಯೆ ಗೋಡೆ ಮತ್ತು ಬಾಗಿಲುಗಳನ್ನೇ ಇಟ್ಟಿಲ್ಲ,
ಹುಚ್ಚು ಪ್ರತಿಷ್ಟೆಗೆಂದು ಎಷ್ಟು ದುಬಾರಿ ಮನೆ ಕಟ್ಟುತ್ತೇವೆಯೋ ಅಷ್ಟು ಹಣ ಪರರ ಪಾಲಾಗುತ್ತದೆ. ಮನೆ ಕಟ್ಟುವುದು ನಾವು, ಆದರೆ ಅದರ ಲಾಭ ಎಲ್ಲರಿಗೂ ಸಿಗುತ್ತದೆ. ಮೊದಲಿಗೆ ಮನೆ ವಿನ್ಯಾಸದ ಇಂಜಿನಿಯರ್‌ನಿಂದ ಶುರುವಾಗಿ, ಆರ್ಕಿಟೆಕ್ಟ್, ಗುತ್ತಿಗೆದಾರ, ಗಾರೆಯವರು, ಬಣ್ಣಗಾರರು, ಬಡಗಿ, ನಾನಾ ವ್ಯಾಪಾರಿಗಳೂ ಸೇರಿದಂತೆ ಹಲವು ಮಂದಿಗೆ ಮನೆ ಕಟ್ಟುವ ನೆಪದಲ್ಲಿ ಹೇರಳವಾಗಿ ಹಣ ಸುರಿಯುತ್ತೇವೆ.   ಮನೆ ನಿರ್ಮಾಣ ಮಾಡುವ ವೆಚ್ಚ ಹೆಚ್ಚಿದಂತೆಲ್ಲಾ ಅದು ದುಬಾರಿಯಾಗುತ್ತದೆ. ಆಗ ಹಣವೆಲ್ಲಾ ನಿರ್ಮಾಣ ಮಾಡುವ ಹಂತದ ಭಾಗಿದಾರರಿಗೆ ಹಂಚಿ ಹೋಗುತ್ತದೆ. ಒಂದು ಮನೆ ನಿರ್ಮಾಣ ಮಾಡುವಾಗ ಶೇ.೫೦-೬೦ರಷ್ಟು ಹಣ ವಿನಾ ಕಾರಣ ಪರರ ಪಾಲಾಗುತ್ತದೆ ಎನ್ನುವ ರೆಡ್ಡಿಯವರು ನಾವು ನಮ್ಮ ಪುರಾತನರ ಕಲ್ಪನಗೆ ತಕ್ಕಂತೆ ಕಡಿಮೆ ವೆಚ್ಚದಲ್ಲಿ ಒಂದು ಸುಂದರ ಮನೆ ಕಟ್ಟಿಕೊಳ್ಳಬಹುದು.
ಡೆಸಾರ್ಟ್ ಆರ್ಕಿಟೆಕ್ಚರ್, ಹೈದರಾಬಾದ್‌ನ ಗೋಲ್ಕಂಡ ಪೋರ್ಟ್ ಸಮೀಪ ಸಿಗುವ ಕೆಲವು ಮಾದರಿಗಳ ಸ್ಪೂರ್ತಿಯಿಂದ ಈ ನಮ್ಮ ಮನೆ ನಿರ್ಮಾಣ ಮಾಡಲು ಸಾಧ್ಯವಾಯಿತು. ಚಿಂತನೆ, ಅಧ್ಯಯನ, ಮಾಹಿತಿ ಸಂಗ್ರಹ ಸೇರಿದಂತೆ ಯೋಜನೆ ರೂಪಿಸಿ ಮನೆ ಕಟ್ಟಲು ತೆಗೆದುಕೊಂಡ ಅವಧಿ ನಾಲ್ಕು ವರ್ಷಗಳಾದರೂ ನನ್ನ ಕನಸಿನ ಮನೆ ನನ್ನ ಕಣ್ಣ ಮುಂದೆ ಇದೆ ಎಂದು ತಾವು ನಿರ್ಮಿಸಿರುವ ಮನೆಯತ್ತ ಬೊಟ್ಟು ಮಾಡುತ್ತಾರೆ ರೆಡ್ಡಿಯವರು.

ಮನೆಯ ವೈಶಿಷ್ಟ್ಯ: 
೩೩*೩೩ ಅಡಿಗಳ ನಿವೇಶನದಲ್ಲಿ ಒಟ್ಟು ೨೨ ಚದರಡಿಯ ಮನೆ ನಿರ್ಮಾಣ ಮಾಡಲಾಗಿದೆ. ವೈಜ್ಞಾನಿಕವಾಗಿ ಮತ್ತು ಸಂಪ್ರದಾಯವಾಗಿ ನಿವೇಶನದ ಮಧ್ಯೆ ಭಾಗದಲ್ಲಿ ೧೧*೧೧ ಅಡಿಗಳಲ್ಲಿ ಒಂದು ತೊಟ್ಟಿಯನ್ನು ನಿರ್ಮಿಸಿ, ಮನೆಯ ಎಲ್ಲರ ಬದುಕು ಮತ್ತು ವ್ಯಕ್ತಿತ್ವ ಈ ತೊಟ್ಟಿಯ ಸುತ್ತಲೂ ನಿರ್ಮಾಣವಾಗಬೇಕು. ಇದು ಮನೆಯ ಬ್ರಹ್ಮ ಸ್ಥಳ ಎನ್ನುತ್ತಾರೆ ರೆಡ್ಡಿ.

ಈ ತೊಟ್ಟಿಯೂ ಒಂದು ಸುಂದರ ಆಕರ್ಷಕ ಸ್ಥಳವಲ್ಲದೇ ಆಧ್ಯಾತ್ಮಿಕತೆಯ ಮಹತ್ವವುಳ್ಳ ಕೇಂದ್ರವೂ ಆಗಿದೆ. ಬಾಗಿಲು ಇಲ್ಲದೇ ತೆರೆದಿಟ್ಟ ಸ್ಥಳದಲ್ಲಿ ಪೀಠದಲ್ಲಿ ಮನೆ ದೇವರನ್ನು ಪ್ರತಿಷ್ಠಾಪಿಸಿದ್ದು ಎಲ್ಲರೂ ಪೂಜೆ ಮಾಡುವ ಅವಕಾಶ ಕಲ್ಪಿಸಿ ಕೊಡಲಾಗಿದೆ. ಅದು ಇದರ ಸುತ್ತಲೂ ಎಲ್ಲಾ ಕೊಠಡಿಗಳು ನಿರ್ಮಾಣವಾಗುತ್ತವೆ. ಬರುವವರು, ಹೋಗುವವರು, ಮನೆಯವರೆಲ್ಲಾ ಎಲ್ಲರಿಗೂ ಗೋಚರಿಸುತ್ತಾರೆ.    
ಈ ತೊಟ್ಟಿಯ ಸುತ್ತಾಲೂ ಆಗ್ನೆಯಕ್ಕೆ ಅಡಿಗೆ ಮನೆ ೧೧*೧೧ ಅಳತೆ. ದಕ್ಷಿಣಕ್ಕಿರುವ ವಿಶ್ರಾಂತಿ ಕೊಠಡಿ ೧೧*೧೧, ಬಾತ್ ರೂಂ ೧೧*೧೧, ಹೀಗೆ ಒಟ್ಟು ಇತರೆ ಎಂಟು ಕೊಠಡಿಗಳು ತಲಾ ೧೧*೧೧ ಅಳತೆಯಲ್ಲಿವೆ. ಅದೇ ಮಾದರಿಯಲ್ಲಿ ಮೊದಲ ಅಂತಸ್ಥಿನಲ್ಲೂ ಎಂಟು ಕೊಠಡಿಗಳನ್ನು ನಿರ್ಮಿಸಲಾಗಿದೆ. ಆದರೆ ಯಾವ ಕೊಠಡಿಗೂ ಬಾಗಿಲುಗಳಿಲ್ಲ ಮತ್ತು ಗೋಡೆಗಳಿಲ್ಲ. ಇಲ್ಲಿ ಓಪನ್ ಕಿಚನ್ ಇದೆ, ಗಾಳಿ, ಬೆಳಕು ಸರಾಗಿ ಬರುವಂತಹ ತಾಂತ್ರಿಕ ವ್ಯವಸ್ಥೆ ಮನೆಯಲ್ಲಿದೆ. ಮಧ್ಯೆ ಭಾಗದಲ್ಲಿರುವ ಮೇಲ್ಚಾವಣಿಯಲ್ಲಿ ತೆರೆದುಕೊಂಡ ಭಾಗದಿಂದ ಮನೆಯ ಬಿಸಿ ಗಾಳಿ ಹೊರ ಹೋದರೆ ಮನೆಯ ನಾನಾ ಕಡೆ ನಿರ್ಮಿಸಿರುವ ಪಿಲ್ಲರ್‌ಗಳಲ್ಲಿರುವ ತಂಪಾದ ಶುದ್ಧಗಾಳಿ ರಂಧ್ರದ ಮೂಲಕ ಒಳಗೆ ಬರುತ್ತದೆ ಇದು ಯಾಂತ್ರಿಕೃತವಾಗಿ ನಡೆಯುವುದರಿಂದ ಇಲ್ಲಿ ಯಾವ ಕೊಠಡಿಗೂ ಫ್ಯಾನುಗಳಿಲ್ಲ.
ಮನೆಯಲ್ಲಿ ಎಲ್ಲೂ ಮರಗಳನ್ನು ಬಳಸಿ ಮಾಡಿದ ಮಂಚ, ಬಾಗಿಲು, ಕಿಟಕಿ,  ಸೆಲ್ಫ್‌ಗಳಿಲ್ಲ. ಇರುವ ಸೆಲ್ಫ್ ಮತ್ತು ಪುಸ್ತಕ ರ‍್ಯಾಕ್‌ಗಳನ್ನು ಕಡಪ ಕಲ್ಲು ಮತ್ತು ಬಿದರಿನ ಕಡ್ಡಿಗಳಿಂದ ಮಾಡಲಾಗಿದೆ. ಮನೆಯ ಮಧ್ಯೆ ಇರುವ ತೊಟ್ಟಿಯ ಮಧ್ಯೆ ನೇತು ಹಾಕಿರುವ ಒಂದು ವಿದ್ಯುತ್ ದೀಪ ಇಡೀ ಕೆಳಗಿನ ಮತ್ತು ಮೇಲಿನ ಎಂಟು ಕೊಠಡಿಗೆ ಬೆಳಕು ನೀಡುತ್ತದೆ, ಅದೂ ರಾತ್ರಿ ವೇಳೆ ಮಾತ್ರ. ಹಾಗಾಗಿ ಮನೆಯಲ್ಲಿ ಎಲ್ಲೂ ಹೆಚಿನ ದೀಪದ ಅವಶ್ಯತೆಯಿರುವುದಿಲ್ಲ.
ಕೊಠಡಿಗಳಲ್ಲಿರುವ ಮಂಚಗಳೂ ಸಹ ಇಟ್ಟಿಗೆ ಮತ್ತು ಕಡಪ ಕಲ್ಲಿನಿಂದ ಮಾಡಲಾಗಿದ್ದು ಅರಾಮದಾಯಕ ಮತ್ತು ಆರೋಗ್ಯದಾಯಕವಾಗಿದೆ. ಮನೆಯಲ್ಲಿ ಮುಂಭಾಗಿಲು ಬಿಟ್ಟರೆ ಉಳಿದಂತೆ ಬಾಗಿಲು, ಕಿಟಕಿಗಳಿಲ್ಲದ್ದರಿಂದ ಮರಗಳನ್ನು ಬಳಸಿಲ್ಲ. ಅವಶ್ಯತೆ ಇರುವ ಕಡೆಗಳಲ್ಲಿ ಸಿಂಥಟಿಕ್ ಬಾಗಿಲುಗಳನ್ನು ಬಳಸಲಾಗಿದೆ. ಕಟ್ಟಡಕ್ಕೆ ಹಾಲೋ ಬ್ರಿಕ್ಸ್ ಬಳಸಿರುವುದರಿಂದ ಮನೆಯ ತುಂಬಾನೇ ಹಗುರವಾಗಿದೆ. ನೆಲ್ಕಕೆಲ್ಲಾ ಟೆರಾಕೋಟ ಟೈಲ್ಸ್ ಬಳಸಿದ್ದು ಅತ್ಯಂತ ಸುಂದರವಾಗಿದೆ.
ಮುಂಭಾಗ ಮತ್ತು ಒಳ ಭಾಗದ ಮುಖ್ಯ ಭಾಗಗಳಲ್ಲಿ ಗ್ರಾನೈಟ್ ಕಂಪನಿಗಳಲ್ಲಿ ಬಳಸಿ ಬಿಸಾಡಿದ ನಿರುಪಯುಕ್ತ ಗ್ರಾನೈಟ್ ಕಲ್ಲುಗಳನ್ನು ತಂದು ಬಳಸಿದ್ದು ಅತ್ಯಂತ ಸುಂದರವಾಗಿ ಕಾಣುತ್ತಿದ್ದು ಕಸದಿಂದ ರಸವಾಗಿದೆ. ಮನೆಯ ಮುಂಬಾಗದ ಗೇಟ್ ಬಳಿ ಹಾಗೂ ಕಾಂಪೌಂಡ್ ಗೋಡೆಗಳಿಗೆ ಕಾಡು ಕಲ್ಲುಗಳನ್ನು ಬಳಸಿದ್ದು ಅತ್ಯಂತ ಆಕರ್ಷಕವಾಗಿ ಕಾಣುತ್ತದೆ. ಅಂದರೆ ಮನೆ ಕಟ್ಟುವವರು ಒಮ್ಮೆ ರೆಡ್ಡಿಯವರನ್ನು ಸಂಪರ್ಕಿಸಿದರೆ ಹೊಸ ಕಲ್ಪನೆ, ಹೊಸ ವಿಚಾರ ಹಾಗೂ ಒಂದು ಹೊಸ ಆಲೋಚನೆ ಸಿಗುತ್ತದೆ.
ರೆಡ್ಡಿಯವರ  ನಿರ್ಮಿಸಿರುವ ಮನೆ ನಗರದಲ್ಲೇ ವಿಶಿಷ್ಟ ಮತು ವಿಶೇಷವಾಗಿದ್ದು ಭವ್ಯ ಭಂಗಲೆಯತೆ ಕಾಣುತ್ತದೆ. ಆದರೆ ಅದರ ಒಟ್ಟು ವೆಚ್ಚ ಕೇವಲ ೧೦-೧೨ ಲಕ್ಷ ಮಾತ್ರ. ನೋಡುಗರಿಗೆ ಈ ಮನೆ ನಿರ್ಮಾಣ ಕಡಿಮೆ ಎಂದರೂ ೪೦-೫೦ಲಕ್ಷ ಎಂದು ಭಾಸವಾಗುತ್ತದೆ.



Friday, May 13, 2011

ನಾವು ಮತ್ತು ನಮ್ಮೂರು

ನಾವು ಮತ್ತು ನಮ್ಮೂರು

ಚಿತ್ರಗಳು ಮಾತಾಡುತ್ತವೆ     ***************

Tuesday, May 10, 2011

ನಾವು ಯಾರಿಗಿಂಥ ಕಮ್ಮಿ ಇಲ್ಲ


ನಾವು ಯಾರಿಗಿಂಥ ಕಮ್ಮಿ ಇಲ್ಲ 
ಕರ್ನಾಟಕದ ರಾಜ್ಯದ ಕಲ್ಪತರು ನಾಡೆಂದೇ ಪ್ರಸಿದ್ಧವಾದ ಊರು ತಿಪಟೂರು.  ಸಾಮಾಜಿಕವಾಗಿ, ಆರ್ಥಿಕವಾಗಿ, ಸಾಹಿತ್ಯಕವಾಗಿ ಬೆಳೆದಿರುವ ನಮ್ಮ ಈ ಊರು ವಾಣಿಜ್ಯವಾಗಿ ಹೆಸರು ಮಾಡಿದಂತೆಯೇ ಕಲೆ ಮತ್ತು ನಾಟಕರಂಗ ಕ್ಷೇತ್ರದಲ್ಲೂ ಖ್ಯಾತಿಗಳಿಸಿದೆ.

ನಮ್ಮ ತಾಲೂಕಿನಲ್ಲಿ ವೀರಶೈವ ಸಮೂದಾಯದವರೇ ಹೆಚ್ಚು ಸಂಖ್ಯೆಯಲ್ಲಿದ್ದು ಪಂಚ ಮಠಗಳ ಸಾಮಿಪ್ಯದಿಂದ ಒಂದು ರೀತಿಯ ಧಾರ್ಮಿಕ ಕ್ಷೇತ್ರ ಎನಿಸಿದೆ. ಹಲವು  ವೈಶಿಷ್ಟ್ಯವಿರುವ ತಮ್ಮ ಊರು ಶೈಕ್ಷಣಿಕವಾಗಿಯೂ ಸಾಕಷ್ಟು ಪ್ರಗತಿ ಸಾಧಿಸಿದೆ.    ಇಂತಹ ನಮ್ಮ ತಾಲೂಕಿನ ಬಿಸಿಲೇಹಳ್ಳಿ ಗ್ರಾಮದ ದಲಿತರು ಒಂದು ಇತಿಹಾಸ ಸೃಷ್ಟಿಸಿ, ಗಮನ ಸೆಳೆದಿದ್ದಾರೆ. ತಮ್ಮ ನಡೆ ನುಡಿ ಸಾಧನೆಗಳಿಂದ ಅಚ್ಚರಿ ಮೂಡಿಸಿರುವ ಇವರು ಸಮಾಜದ ಜನ ನಿಬ್ಬೆರಗಾಗಿ ನೋಡುವಂತಹ ಅವಕಾಶವನ್ನು ಸೃಷ್ಟಿಸಿಕೊಂಡಿದ್ದಾರೆ.

 ಡಾ. ಬಿ.ಆರ್.ಅಂಬೇಡ್ಕರ್ ಅವರ ಆದರ್ಶಗಳನ್ನು ಕಾಯಾ, ವಾಚಾ, ಮನಸಾ ಚಾಚೂ ತಪ್ಪದೇ ಪಾಲಿಸುವ ಇವರು ಇಡೀ ದಲಿತ ಸಮೂದಾಯಕ್ಕೆ ಮಾದರಿಯಾಗಿದ್ದಾರೆ. ಸರಕಾರ ನೀಡುವ ಎಲ್ಲಾ ಅವಕಾಶಗಳನ್ನು ಸದುಪಯೋಗ ಮಾಡಿಕೊಂಡ ಈ ದಲಿತ ಕಾಲೋನಿಯಲ್ಲಿ ಎಲ್ಲರೂ ವಿದ್ಯಾವಂತರೇ. ಕನಿಷ್ಟ ಹತ್ತನೇ ತರಗತಿಯಿಂದ ಪದವಿವರೆಗೂ ಓದಿಕೊಂಡಿದ್ದಾರೆ.  ಹಾಗಾಗಿ ಇದು ಸಂಪೂರ್ಣ ಸಾಕ್ಷರಗ್ರಾಮ ಎನಿಸಿದೆ.
 ಮತ್ತೊಂದು ಅಚ್ಚರಿ ಎಂದರೆ, ಇಲ್ಲಿನ ಪ್ರತಿ ಮನೆಯಲ್ಲೂ ಒಬ್ಬರಲ್ಲ ಒಬ್ಬರು ಸರಕಾರಿ ಸೇವೆಯಲ್ಲಿದ್ದಾರೆ.    ಗುಮಾಸ್ತನಿಂದ ಹಿಡಿದು, ಶಿಕ್ಷಕ, ಬಸ್ ಚಾಲಕ, ಬಸ್ ಕಂಡಕ್ಟರ್, ಮೆಕ್ಯಾನಿಕ್, ಕಂದಾಯ ಇಲಾಖೆ, ಅರಣ್ಯ, ತೆರಿಗೆ ಇಲಾಖೆಯ ಅಧಿಕಾರಿ, ತಹಸೀಲ್ದಾರ್, ಶಿಕ್ಷಣ ಇಲಾಖೆಯ ಉಪನಿರ್ದೇಶಕ ಹೀಗೇ ಜಿಲ್ಲಾ ಮಟ್ಟದ ಅಧಿಕಾರಿಗಳವರೆಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. 
ಈ ಊರಿನ ದಲಿತರ ಮತ್ತೊಂದು ವಿಶೇಷ ಏನೆಂದರೆ ಇಲ್ಲಿ ಇದೂವರೆಗೂ ಮೇಲ್ಜಾತಿಯವರ ಜೊತೆ ಕಲಹ ಮಾಡಿಕೊಳ್ಳದೇ ಶಾಂತಿ ಸೌಹಾರ್ಧತೆಯಿಂದ ಬಾಳುತ್ತಿರುವುದು. ವೀರಶೈವರು ಬಿಟ್ಟರೆ ಇಲ್ಲಿ ವಾಸಿಸುವುದು ದಲಿತರೇ, ಬೇರೆ ಯಾವುದೇ ಜನ ಇಲ್ಲಿ ಇಲ್ಲ. ಊರಿನ ವೀರಶೈವ ದೇವರಿಗೆ ಎಲ್ಲರೂ ಸೇರಿ ನಮಿಸಿ, ಪೂಜಿಸುತ್ತಾರೆ. ಒಂದೇ ಕುಟುಂಬದವರಂತೆ ಜಾತ್ರೆ ಉತ್ಸವಗಳಲ್ಲಿ ಒಟ್ಟಾಗಿ ಭಾಗವಹಿಸಿ, ಸಂಭ್ರಮಿಸುತ್ತಾರೆ. ಸಂಪ್ರದಾಯ ಮತ್ತು ಮಡಿವಂತಿಕೆಗೆ ಇಲ್ಲಿ ದಲಿತರು ಎಂದೂ ಭಿನ್ನ ಮಾಡಿಲ್ಲದಿರುವುದರಿಂದ ಮೇಲ್ಜಾತಿಯವರೂ ಸಹ ಇಲ್ಲಿನ ದಲಿತರೊಂದಿಗೆ ಉತ್ತಮ ಭಾಂಧವ್ಯ ಹೊಂದಿದ್ದಾರೆ.
ಇವರ ಮತ್ತೊಂದು ಗಮನ ಸೆಳೆಯುವ ವಿಶೇಷ ಎಂದರೆ, ಕ್ಷೌರಿಕರ ಸಹಾಯವಿಲ್ಲದೇ ಅವರ ತಲೆ ಕೂದಲುಗಳನ್ನು ಅವರೇ ಕತ್ತರಿಸಿಕೊಳ್ಳುವುದು. ತಮ್ಮ ತಮ್ಮ ತಲೆ ಕೂದಲುಗಳನ್ನು ತಾವೇ ಅಂದವಾಗಿ ಕತ್ತರಿಸಿಕೊಂಡು ಆಕರ್ಷಕವಾಗಿ ಕಾಣುವ ಮೂಲಕ ಸಮೂದಾಯದ ಸ್ವಾಭಿಮಾನ ಮೆರೆದಿರುವುದಲ್ಲದೇ, ಪ್ರಜ್ಞಾವಂತ ಸಮಾಜಕ್ಕೆ ಸ್ವಾವಲಂಬನೆಯ ಪಾಠ ಹೇಳುತ್ತಾರೆ.
ಹೌದು, ಗಾಂಧಿಜಿ ಕೂಡ ದಕ್ಷಿಣ ಆಫ್ರಿಕಾದಲ್ಲಿ ವ್ಯಾಸಂಗ ಮಾಡುವಾಗ ತಾವೇ ಹೇರ್ ಕಟ್ ಮಾಡಿಕೊಳ್ಳುತ್ತಿದ್ದರು ಎಂಬುದನ್ನು ನಾವು ಓದಿದ್ದೇವೆ. ಆದರೆ ಇಲ್ಲಿನ ಯುವಕರೂ ಆಧುನಿಕ ಆಡಂಬರ, ದುಭಾರಿ ವೆಚ್ಚಕ್ಕೆ ಬಲಿಯಾಗದೇ ನಿಷ್ಠೆಯಿಂದ ಸಮಾಜದ ಬದ್ಧತೆಗೆ ಶರಣಾಗಿ ತಮ್ಮ ಕ್ಷೌರವನ್ನು ಮತ್ತು ಕೂದಲಿನ ಕಟಿಂಗ್‌ನ್ನು ತಾವೇ ಮಾಡಿಕೊಳ್ಳುವ ಮೂಲಕ ತಮ್ಮ ವಿಶಿಷ್ಟ ವ್ಯಕ್ತಿತ್ವವನ್ನು  ಅಭಿವ್ಯಕ್ತಗೊಳಿಸಿದ್ದಾರೆ.
ಬಹಳ ಹಿಂದೆ ಗ್ರಾಮದಲ್ಲಿ ದಲಿತರಿಗೆ ಕ್ಷೌರ ಮಾಡುವುದಿಲ್ಲ ಎಂದು ಕ್ಷೌರಿಕನೊಬ್ಬ ತಿರಸ್ಕರಿಸಿದ್ದ ಎಂಬ ಕಾರಣಕ್ಕೆ ಬೇಸತ್ತಿದ್ದ ಗ್ರಾಮಸ್ಥರು  ಅಂದಿನಿಂದಲೇ ಸ್ವತಃ ತಾವೇ ತಮ್ಮ ತಮ್ಮ ಕೂದಲುಗಳನ್ನು ಕತ್ತರಿಸಿಕೊಂಡು, ಮುಖ ಕ್ಷೌರ ಮಾಡಿಕೊಳ್ಳುತ್ತಿದ್ದರಂತೆ. ಅದು ಹಾಗೆಯೇ ರೂಡಿಯಾಗಿ ಎಲ್ಲರೂ ಹೇರ್ ಕಟ್ಟಿಂಗ್ ಮಾಡಿ ಕೊಳ್ಳುತ್ತಾರೆ. ತಲೆ ಕೂದಲು ಕತ್ತರಿಸುವುದು, ವಿನ್ಯಾಸಗೊಳಿಸುವುದು ನಮ್ಮ ಕೆಲಸವಲ್ಲ ಎಂದು ಇವರು ಯಾವತ್ತೂ ಮೂಗು ಮುರಿದವರಲ್ಲ. ಹಲವು ದಶಕಗಳಿಂದ ಗ್ರಾಮದಲ್ಲಿ ಯಾವ ಕ್ಷೌರಿಕನೂ ಇಲ್ಲ, ಗ್ರಾಮದ ದಲಿತರ‍್ಯಾರೂ ಕೂದಲು ಕತ್ತರಿಸಿಕೊಳ್ಳಲು ಕ್ಷೌರಿಕರ ಬಳಿ ಹೋದ ಉದಾಹರಣೆಗಳೂ ಇಲ್ಲ. ಹಾಗಂಥ ಅವರು ಹೇಗೆ ಬೇಕೋ ಆಗೇ ಕೂದಲುಗಳನ್ನು ಕತ್ತರಿಸಿಕೊಳ್ಳುವುದಿಲ್ಲ. ಅವರು ಮಾಡುವ ಹೇರ್ ಕಟಿಂಗ್ ನೋಡಿ ಪರಿಣಿತ ಹಾಗೂ ಅನುಭವಿ ಕ್ಷೌರಿಕರೇ ತಲೆ ಬಾಗಿದ್ದಾರೆ. ಅಚ್ಚರಿ ಎಂದರೆ ಗ್ರಾಮದ ವೀರಶೈವ ಕೋಮಿನ ಪಟೇಲ  ಹಾಗೂ ದಲಿತ ಯುವಕರ ಗೆಳೆತನ ಬೆಳೆಸಿರುವ ಲಿಂಗಾಯಿತ ಕೋಮಿನ ಅನೇಕರು ಇವರ ಬಳಿಯೇ ಹೇರ್ ಕಟ್ ಮಾಡಿಸುತ್ತಾರೆ. ಯಾರಿಗೇ ಕ್ಷೌರ ಮತ್ತು ಕಟ್ಟಿಂಗ್ ಮಾಡಿದರೂ ಹಣ ಪಡೆಯುವುದಿಲ್ಲ. ಹಾಗಾಗಿ ಈ ಕಾಲೋನಿಯ ಜನ ಕ್ಷೌರ ಮತ್ತು ಕೂದಲು ಕತ್ತರಿಸಿಕೊಳ್ಳಲು ಹಣ ಖರ್ಚು ಮಾಡುವುದಿಲ್ಲ. ಎಲ್ಲಾ ತರಹದ ಕೇಶ ವಿನ್ಯಾಸದಲ್ಲಿ ಸಿದ್ಧ ಹಸ್ತರಾದ ಇವರ ಕೌಶಲ್ಯ ಮೆಚ್ಚುವಂತಾದ್ದು. ಆದರೆ ಈ ಪರಿವರ್ತನೆಯ ಹಿಂದೆ ನೋವಿನ ಕಥೆಯಿದೆ. ಸ್ವಾಭಿಮಾನದ ಪ್ರಶ್ನೆಯಿದೆ.
ಹೌದು, ಈ ಊರಿನ ಇತಿಹಾಸದಲ್ಲಿ ದಲಿತ ವರ್ಗದ ಜನ ಕ್ಷೌರಿಕರಿಂದ ಕ್ಷೌರ ಮಾಡಿಸಿಕೊಳ್ಳುವುದು ಅಷ್ಟು ಸುಲಭವಾಗಿರಲಿಲ್ಲ. ಆಗ ಮೂಡನಂಬಿಕೆ, ಅಂಧಚಾರ, ಅಸ್ಪೃಶ್ಯತೆ ತೀಕ್ಷ್ಣವಾಗಿದ್ದ ಕಾಲ. ಸಾಕಷ್ಟು ಅವಮಾನಗಳು ನಡೆದಿವೆ, ಮನಸ್ಸು ನೊಂದಿವೆ. ನಮ್ಮ ತಾತ ಮತ್ತು ಅಪ್ಪಂದಿರು ಸಮಾಜದ ಕಟ್ಟು ಪಾಡಿಗೆ ಅಂಟಿಕೊಂಡು ಬದುಕುತ್ತಿದ್ದರು. ಅವರಿಗೆ ಜ್ಞಾನೋದಯವಾಗುವುದರೊಳಗೆ ನಮ್ಮ ಪೀಳಿಗೆಯ ಜನ ಹುಟ್ಟಿದ್ದರು ಎಂದು ತಮಗಾದ ಅನುಭವವನ್ನು ಬಿಚ್ಚಿಡುತ್ತಾರೆ ಗ್ರಾಮದ ಶೀಲ ಸಂಪನ್ನ ಎಂಬ ಯುವಕ.


ದಲಿತ ಯುವಕ ಶಿವರಾಜು ಹೇಳುವ ಕಥೆ ಕೇಳಿ: ಹಿಂದೆ ಪಕ್ಕದ ಗ್ರಾಮದಲ್ಲಿದ್ದ ಒಬ್ಬ ಭಜಂತ್ರಿಯೇ ಮನಸ್ಸು ಮಾಡಿ ಎಲ್ಲರ ತಲೆ ಕೂದಲುಗಳನ್ನು ಕತ್ತರಿಸಿ, ಮುಖ ಕ್ಷೌರ ಮಾಡಬೇಕಿತ್ತು. ದಲಿತರ ಅಂತರ ಕಾಪಾಡಿಕೊಂಡು ಕ್ಷೌರಿಕ ತನ್ನ ಕೆಲಸ ಮುಗಿಸುತ್ತಿದ್ದ. ಅಲ್ಲದೇ ದಲಿತರಿಗಾಗಿಯೇ ಬೇರೆ ಪರಿಕರಗಳನ್ನು ಅಂಗಡಿಯ ಹೊರಗೆ ಮಡಗಿದ್ದನಂತೆ. ದಲಿತರ ಬಗ್ಗೆ ತೀರಾ ಅಸಡ್ಡೆ ತೋರುತ್ತಿದ್ದ ಆತ ಹೇರ್ ಕಟ್ಟಿಂಗ್ ಮತ್ತು ಕ್ಷೌರ ಮಾಡಿದ ನಂತರ ಸ್ನಾನ ಮಾಡಿ ಶುದ್ಧವಾಗುತ್ತಾ ಸ್ವತಃ ಅವನಾಗಿಯೇ ಮಡಿವಂತಿಕೆ ಆಚರಿಸಿಕೊಂಡಿದ್ದನಂತೆ.  ದಲಿತರ ಬಗ್ಗೆ ಅಷ್ಟೊಂದು ಪ್ರೀತಿ ತೋರದ ಕ್ಷೌರಿಕರೊಬ್ಬರಿಂದ ತಲೆ ಕೂದಲು ಕತ್ತರಿಸಿಕೊಂಡಿದ್ದ ನಮ್ಮ ಗ್ರಾಮದ ಯುವಕನೊಬ್ಬ ಮನಸ್ಸು ಬದಲಾಯಿಸಿ ತನ್ನ ಕೂದಲನ್ನು ತಾನೇ ಕಟ್ ಮಾಡಿಕೊಂಡಿದ್ದನಂತೆ. ಮನಸ್ಸು ಮತ್ತು ಛಲದಿಂದ ಆ ವಿದ್ಯೆ ಕರಗತ ಮಾಡಿಕೊಳ್ಳಲು ಸಾಹಸ ಮಾಡಿದ್ದನಂತೆ.
ಮೊದ ಮೊದಲು ಆತ ತನ್ನ ಮನೆಯಲ್ಲಿ ಒಂದು ಕನ್ನಡಿ ಹಿಡಿದುಕೊಂಡು ತನ್ನ ಕೂದಲನ್ನು ತಾನೇ ಕತ್ತರಿಸಿಕೊಂಡನಂತೆ. ಆದರೆ ಅವತ್ತು ಅದು ಸಮಾಜಕ್ಕೆ ಒಂದು ಹಾಸ್ಯದಂತೆ ಕಂಡರೂ ಮುಂದಿನ ಬದಲಾವಣೆಗೆ ನಾಂದಿಯಾಯಿತು. ದಿನೇ ದಿನೇ ಆತ ಶ್ರದ್ದೆಯಿಂದ ಪ್ರಯತ್ನಿಸುತ್ತಾ, ಕಲಿಯುತ್ತಾ ಉತ್ತಮವಾಗಿ ಕೂದಲು ಕತ್ತರಿಸುವುದನ್ನು ರೂಡಿ ಮಾಡಿಕೊಂಡನಂತೆ. ನಂತರ ತನ್ನ ಮನೆಯವರಿಗೆ, ಸಂಬಂಧಿಕರಿಗೆ ಬೇರೆಯವರಿಗೆ ಕೂದಲನ್ನು ನಾನಾ ವಿನ್ಯಾಸದಲ್ಲಿ ಕತ್ತರಿಸಲು ಆರಂಭಿಸಿದ. ಗ್ರಾಮದ ಇತರರು ಇವನಂತೆಯೇ ರೂಢಿಸಿಕೊಂಡರು. ಕೊನೆಗೆ ಅವರವರ ಮನೆಯವರ ಕೂದಲುಗಳನ್ನು ಅವರೇ ಕತ್ತರಿಸಿ, ವಿನ್ಯಾಸಗೊಳಿಸುತ್ತಿದ್ದರಂತೆ.
ಇಂದು ಗ್ರಾಮದ ಎಲ್ಲರೂ ಅಂದವಾಗಿ ಹೇರ್ ಕಟ್ ಮಾಡುತ್ತಾರೆ. ಹಿರಿಯ ಕಿರಿಯ ಎಂಬ ಬೇಧ ಭಾವವಿಲ್ಲದೇ ಎಲ್ಲರ ಕೈಗಳೂ ಚೆನ್ನಾಗಿ ಪಳಗಿವೆ. ಯಾರೂ ಬೇಕಾದರೂ ಯಾರನ್ನಾದರೂ ಕಟ್ಟಿಂಗ್ ಮಾಡುತ್ತಾರೆ. ದಾರಿಯಲ್ಲಿ ಹೋಗುವ ನಮ್ಮೂರಿನ ಹುಡುಗರನ್ನು ಬಾರೋ ಕಟಿಂಗ್ ಮಾಡು ಎಂದರೆ ತಕ್ಷಣ ಕತ್ತರಿ ಮತ್ತು ಬಾಚಣಿಗೆಯೊಂದಿಗೆ ಸಿದ್ಧವಾಗಿ ಪಟಾಪಟ್ ಎಂದು ಕತ್ತರಿಸಿ ಹೋಗುತ್ತಾರೆ. ಎಲ್ಲಾ ಸಿಂಪಲ್.  


 ಈಗ ಗ್ರಾಮದಲ್ಲಿ ಪ್ರತಿಯೊಬ್ಬ ಯುವಕನೂ ಅಂದವಾಗಿ, ಆಕರ್ಷಕವಾಗಿ ತಮ್ಮ ತಮ್ಮ ಕೂದಲುಗಳನ್ನು ಕತ್ತರಿಸಿಕೊಂಡು ನೋಡುಗರು ಗಮನಿಸುವಂತೆ ಸಿನಿಮಾ ನಟರಂತೆ ಮಿಂಚುತ್ತಿದ್ದಾರೆ. ಒಬ್ಬರ ಕೂದಲು ಇರುವಂತೆ ಮತ್ತೊಬ್ಬರ ಕೂದಲು ಇರುವುದಿಲ್ಲ. ಎಲ್ಲರದ್ದೂ ವಿಶೇಷ ಮತ್ತು ವಿಭೀನ್ನ ರೀತಿಯ ಆಕರ್ಷಕ ಕೇಶ ವಿನ್ಯಾಸಗಳೇ. ಮಾರಕಟ್ಟೆಯ ಯಾವುದೇ ಕೇಶ ವಿನ್ಯಾಸನ್ನೂ ಕೇಳಿದರೂ ಕ್ಷಣಾರ್ಧದಲ್ಲಿ ಮಾಡಿ ತೋರಿಸುತ್ತಾರೆ. ಹಾಗಂತ ಯಾರೂ ಅದನ್ನೇ ವೃತ್ತಿ ಮಾಡಿಕೊಂಡಿಲ್ಲ.
ಮನಸ್ಸಿಗಿಂತ ದೊಡ್ಡದು ಯಾವುದೂ ಇಲ್ಲ. ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸ ಬಹುದು ಎಂದು ಹೇಳುವ ಯುವಕರ ಒಂದೊಂದು ಮಾತುಗಳು ಆಳ ಮತ್ತು ಅರ್ಥ ಗರ್ಭಿತ. ಬೇರೆಯವರನ್ನ ಅವಲಂಬಿಸದೇ ತಮ್ಮ ಕೆಲಸಗಳನ್ನು ತಾವು ಶುದ್ಧವಾಗಿ ಮತ್ತು ಆತ್ಮತೃಪ್ತಿಗಾಗಿ ಮಾಡಿಕೊಳ್ಳುವುದರಲ್ಲಿ ಹಿತವಿದೆ ಎಂದು ಉಪದೇಶ ನೀಡುವ  ಅವರ ಅನುಭವ ಸಿದ್ಧ ಮಾತುಗಳಲ್ಲಿ ಚೈತನ್ಯವಿದೆ. ಸಮಯ, ಹಣ ಎರಡೂ ಉಳಿಯುತ್ತದೆ ಮತ್ತು ಮನಸ್ಸಿಗೆ ಸಂತೋಷವಾಗುತ್ತದೆ ಎಂದು ಎದೆ ಹುಬ್ಬಿಸಿ ಹೇಳುವಾಗ ಅವರ ಸಾಧನೆಯ ಬಗ್ಗೆ ಹೆಮ್ಮೆ ಎನಿಸುತ್ತದೆ. ಅಚ್ಚರಿ ಮತ್ತು ಆಸಕ್ತಿಯಿಂದ ಯಾರಾದರೂ ಬಂದರೆ ಅವರ ಮುಖಕ್ಕೆ ಹೊಂದುವ ಕೇಶ ವಿನ್ಯಾಸ ಮಾಡಿ, ತಮ್ಮ ಕೈ ಚಳಕ ತೋರಿಸಿ ನಾವು ಯಾರಿಗಿಂಥ ಕಮ್ಮಿ ಇಲ್ಲ ಎನ್ನುತ್ತಾರೆ ಈ ಛಲದಂಕಮಲ್ಲ ಸಾಧಕ ಯುವಕರು. ತಮ್ಮ ಸಾಧನೆಯ ಮೂಲಕ ಸಮಾಜಕ್ಕೆ ಒಂದು ತಣ್ಣನೆಯ ಮೌನ ಸಂದೇಶ ರವಾನಿಸಿದ್ದಾರೆ..