ಅತಂತ್ರ ಮತ್ತು ಅಲೆದಾಟದ ಬದುಕಿನಿಂದ ಹೊರ ಬಂದ ಈ ಮಕ್ಕಳು ಇಂದು ಶಾಲೆಗೆ ಓಗುತ್ತಿವೆ. ಮನದಲ್ಲಿ ಕಟ್ಟಿಕೊಂಡಿದ್ದ ಕನಸುಗಳನ್ನು ನನಸು ಮಾಡುವ ಉತ್ಸಾಹದಲ್ಲಿವೆ. ಈಗ ಕಂದಮ್ಮಗಳ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ. ಇವರು ಅದೃಷ್ಟವಂತ ಮಕ್ಕಳು ಎನಿಸಿದ್ದಾರೆ.
ಹೌದು, ನಿತ್ಯಾ ನರಕದ ಕೂಪದಲ್ಲಿ ನರಳುತ್ತಾ, ಸ್ವಚ್ಚತೆ, ಆರೈಕೆ, ಆರೋಗ್ಯ ಕಾಣದೇ ಬಾಡಿ ಹೋಗುತ್ತಿದ್ದ ಈ ಹೂವುಗಳು ಇಂದು ಚಿಣ್ಣರ ಅಂಗಳದಲ್ಲಿ ನಲಿದಾಡುತ್ತಿವೆ. ಹಿಂದೆ ಎಂದೂ ಶಾಲೆಯ ಬಾಗಿಲು ತುಳಿಯದ ಈ ಅಮಾಯಕ ಮಕ್ಕಳು ಇತರೆ ಮಕ್ಕಳೊಂದಿಗೆ ಅ,ಆ,ಇ,ಈ..ಕಲಿಕೆ ಶುರು ಮಾಡಿವೆ. ಹೊಸದಾಗಿ ಕಾಣುತಿರುವ ಎಲ್ಲವನ್ನೂ ಅಚ್ಚರಿಯಾಗಿ ನೋಡುತ್ತಿವೆ. ನೀರಸ ಮತ್ತು ವ್ಯರ್ಥವಾಗಿದ್ದ ತಮ್ಮ ಬಾಲ್ಯದ ಬದುಕಿಗೆ ಒಂದು ಅರ್ಥ ಹುಡುಕಲು ಹೊರಟಿವೆ.
ತಿಪಟೂರಿನ ಸರಕಾರಿ ಮಾದರಿ ಕನ್ನಡ ಶಾಲೆಯಲ್ಲಿ ನಡೆಯುತ್ತಿರುವ ಚಿಣ್ಣರ ಅಂಗಳವೇ ಈಗ ಅವರಿಗೆ ಅರಮನೆ. ಬಯಲ ಗುಡಾರದಿಂದ ಚಳಿ, ಮಳೆ, ನಾನಾ ಉಪಟಳದ ಬದುಕಿನಿಂದ ಹೊರಬಂದ ಈ ಮಕ್ಕಳು ಈಗ ತಮ್ಮ ಮನದಾಸೆಯನ್ನು ಪೊರೈಸಿಕೊಳ್ಳುವತ್ತಾ, ಹೊಸ ಬದುಕಿನತ್ತಾ ಪಯಣ ಆರಂಭಿಸಿದ್ದಾರೆ. ತಾಲೂಕು ಆಡಳಿತ ಇಂತಹ ಕಲಿಕೆ ವಂಚಿತ ಮಕ್ಕಳನ್ನು ಪತ್ತೆ ಮಾಡಿ, ಅಕ್ಷರ ಕಲಿಸುವ ತಯಾರಿ ನಡೆಸಿದೆ. ತಾಲೂಕಿನಾದ್ಯಂತ ಇರುವ ಅಲೆಮಾರಿ ಮಕ್ಕಳನ್ನು ಗುರ್ತಿಸಿ, ಶಾಲೆಗೆ ಕರೆತರುವ ಸಿದ್ಧತೆಯಲ್ಲಿದೆ. ತಹಸೀಲ್ದಾರ್ ವಿಜಯಕುಮಾರ್, ಬಿಇಒ ಮನಮೋಹನ್, ಪೌರಾಯುಕ್ತ ಡಾ.ವೆಂಕಟೇಶಯ್ಯ, ಡಾ.ರಘು, ಸಂತೋಷ್, ಸತೀಶ್ ಮತ್ತು ಸುರೇಶ್ ಮತ್ತಿತರರು ಈ ಮಹತ್ಕಾರ್ಯದಲ್ಲಿ ಕೈ ಜೋಡಿಸಿದ್ದಾರೆ.
ಮೊದಲಿಗೆ ತಾಲೂಕಿನ ನಾನಾ ಕಡೆ ಸುತ್ತಿ ಅಲೆಮಾರಿಗಳನ್ನು ಗುರ್ತಿಸಿದ ಈ ತಂಡ ಅವರ ಸಮಸ್ಯೆಯನ್ನು ಆಲಿಸುವ ಯತ್ನ ನಡೆಸಿದೆ. ನಂತರ ಅವರಿಗೆ ಸಿಗದ ಸವಲತ್ತುಗಳ ವಿತರಣೆಗೆ ಆಧ್ಯತೆ ನೀಡಿದೆ. ಕನಿಷ್ಟ ಮತದಾರರ ಗುರುತಿನ ಚೀಟಿ ಇಲ್ಲದ ಸ್ಥಿತಿಯನ್ನು ಗಮನಿಸಿ ಆತಂಕ ಪಟ್ಟುಕೊಂಡ ತಹಸೀಲ್ದಾರ್ ಅವರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವುದಕ್ಕೆ ಮೊದಲು ಮುಂದಾಗಿದ್ದಾರೆ. ಈ ಅಲೆಮಾರಿ ಬದುಕಿಗೆ ಅಂತ್ಯ ಆಡಿ, ಶಾಶ್ವತವಾದ ನೆಲೆ ಹುಡುಕಿ ಎಂದು ಮನವೊಲಿಸುವ ಜೊತೆಗೆ ಹತ್ತಿರದ ಗ್ರಾಮ ಪಂಚಾಯಿತಿಗಳಲ್ಲಿ ನೋಂದಾವಣೆ ಮಾಡುವ ಮೂಲಕ ಅವರಿಗೆ ಮಡಿತರ ಚೀಟಿ ನೀಡುವ ವ್ಯವಸ್ಥೆಯನ್ನು ಕಲ್ಪಿಸುವ ಯತ್ನ ನಡೆದಿದೆ. ಶೈಕ್ಷಣಿಕ ಸವಲತ್ತು ಬಳಕೆ ಮಾಡಿಕೊಳ್ಳುವ ಬಗ್ಗೆ ಆವರ ಮನವೊಲಿಸಲಾಗಿದೆ.
ಇದರ ಪರಿಣಾಮ ತಿಪಟೂರು ಪಕ್ಕ ಮಂಜುನಾಥ ನಗರದ ಆಚೆ ಗುಡ್ಡದ ಪಕ್ಕದಲ್ಲಿ ಸುಮಾರು ೧೨ ವರ್ಷಗಳಿಂದ ಬಿಡಾರಗಳಲ್ಲಿ ಬದುಕುತ್ತಿರುವ ಅಲೆಮಾರಿ ಕುಟುಂಬ ಹಾಗೂ ಶಾರದಾನಗರ ರೈಲ್ವೆ ನಿಲ್ದಾಣ ಮುಂದೆ ಬಯಲಿನಲ್ಲಿ ಕೆಲ ತಿಂಗಳಿಂದ ತಾತ್ಕಾಲಿಕ ನೆಲೆಯೂರಿರುವ ಚಿಂದಿ ಆಯುವ, ಕೂದಲು, ಪ್ಲಾಸ್ಟಿಕ್ ಸಾಮಗ್ರಿ ಮಾರಾಟಗಾರರ ಮಕ್ಕಳು ಚಿಣ್ಣರ ಅಂಗಳಕ್ಕೆ ಬಂದು ನಲಿಯುತ್ತಿದ್ದಾರೆ.
ಕೊಳಕಿನಿಂದ ಬೆಳಕಿಗೆ:
ಮಂಜುನಾಥ ನಗರ ಸಮೀಪದ ಬಿಡಾರದಲ್ಲಿ ಬದುಕುತಿದ್ದ ಮಕ್ಕಳ ಸ್ಥಿತಿ ಶೋಚನೀಯವಾಗಿತ್ತು. ಪತ್ರಿಕೆಯಲ್ಲಿ ವಿವರವಾದ ವರದಿ ಬಂದಿತ್ತು. ಕೆಲವೇ ದಿನಗಳ ಹಿಂದೆ ಈ ಅಲೆಮಾರಿ ಮಕ್ಕಳು ತಮ್ಮ ಪೋಷಕರ ಜೊತೆಯಲ್ಲಿ ಬಿಸಿಲು, ಮಳೆಯಲ್ಲಿ ಹಳ್ಳಿಹಳ್ಳಿ ಸುತ್ತಿ ಕೂದಲು, ಪ್ಲಾಸ್ಟಿಕ್ ಇತರೆ ವಸ್ತುಗಳನ್ನು ಮಾರುವ ನರಕದ ಬದುಕಿನಲ್ಲಿ ಕೊಳೆಯುತ್ತಿದ್ದರು. ಧೂಳು ಹಿಡಿದು ಬಾಚದ ಉದ್ದ ಕೂದಲು, ಕೊಳಕು ಬಟ್ಟೆ ಅದರ ದುರ್ವಾಸನೆಯ ಅರಿವು ಸಹ ಅವರಿಗಿರಲಿಲ್ಲ. ನಾಗರಿಕ ಪ್ರಪಂಚದಿಂದ ದೂರ ಉಳಿದು ಇದೇ ತಮ್ಮ ಬದುಕು, ಇದೇ ಸ್ವರ್ಗ ಎಂದು ಕೊಂಡಿದ್ದರೂ ಶಾಲೆಗೆ ಹೋಗುವ ಮಕ್ಕಳನ್ನು ಕಂಡಾಗ ತಾವೂ ಅವರಂತೆ ಅಂದವಾಗಿ ಸಮವಸ್ತ್ರ ಧರಿಸಿ, ಪಾಠ ಹೇಳಿಸಿಕೊಳ್ಳಬೇಕು ಎಂದು ಕನಸುತ್ತಿದ್ದರು. ಆದರೂ ತಮಗೆ ಅರಿವಿಲ್ಲದಂತೆ ಪೋಷಕರ ಜತೆ ತಾವೂ ಅಲೆದಾಡಿ ಬಾಲ್ಯವನ್ನು ದುಸ್ಥಿತಿಯಲ್ಲಿ ಕಳೆಯುತ್ತಿದ್ದರು.
ಆದರೆ ಇಂದು ಅವರ ಸ್ಥಿತಿ ಬದಲಾಗಿದೆ. ಈ ಮಕ್ಕಳು ಈಗ ಚಿಣ್ಣರ ಅಂಗಳ ಸೇರಿ ಎಲ್ಲರ ಜೊತೆ ನಲಿದಾಡುತ್ತಾ, ಅತ್ಯಂತ ಸಂತೋಷ ವ್ಯಕ್ತ ಪಡಿಸಿದ್ದಾರೆ. ಆರೋಗ್ಯ, ಸ್ವಚ್ಛತೆಯ ಅರಿವು ಅವರಿಗಾಗಿದೆ. ಇಲ್ಲಿನ ಬಿಇಒ ಕಚೇರಿ ಹಿಂದಿನ ಮಾದರಿ ಕನ್ನಡ ಶಾಲೆಯಲ್ಲಿ ಏಪ್ರಿಲ್ ೫ರಿಂದ ನಡೆಯುತ್ತಿರುವ ಚಿಣ್ಣರ ಅಂಗಳದ ಆಟಪಾಟಗಳಲ್ಲಿ ತೊಡಗಿರುವ ಈ ಮಕ್ಕಳು ತಮ್ಮ ಭವಿಷ್ಯದ ಕನಸು ಕಾಣಲು ಆರಂಭಸಿದ್ದಾರೆ. ಶಾಲೆಗೆ ಸೇರಿ ಓದಬೇಕೆಂಬ ಆಸೆ ಮನದಲ್ಲಿ ಚಿಗುರೊಡೆದಿದೆ.
ಲಕ್ಷ್ಮೀ ಎಂಬ ೧೦ ವರ್ಷದ ಹುಡುಗಿಯಂತೂ ತಾನು ಓದಿ ಲಾಯರ್ ಆಗುತ್ತೇನೆಂದು ಕಣ್ಣರಳಿಸುತ್ತಾಳೆ. ಇದೇ ಕ್ಯಾಂಪಿನ ಮಕ್ಕಳಾದ ಅಣ್ಣಪ್ಪ (೯), ಕರಿಯಪ್ಪ(೮), ದಿನೇಶ್(೭) ಸೇರಿದಂತೆ ಸುಮಾರು ೧೨ಕ್ಕೂ ಹೆಚ್ಚು ಮಕ್ಕಳು ತಾವು ಇನ್ನು ಮುಂದೆ ಶಾಲೆಗೆ ಹೋಗುತ್ತೇವೆ ಎನ್ನುತ್ತಾರೆ. ಎಲ್ಲರೂ ಚಿಣ್ಣರ ಅಂಗಳದ ಚಟುವಟಿಕೆಗಳಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳುತ್ತಿದ್ದಾರೆ. ಮಧ್ಯಾಹ್ನ ಇವರಿಗೆ ಒಳ್ಳೆಯ ಊಟದ ವ್ಯವಸ್ಥೆಯಿದೆ. ಬಟ್ಟೆ ಮತ್ತು ಪುಸ್ತಕದ ವ್ಯವಸ್ಥೆ ಮಾಡಲಾಗಿದೆ. ಚಿಣ್ಣರ ಅಂಗಳ ಮುಗಿಸಿದ ಪ್ರಮಾಣ ಪತ್ರ ನೀಡಿ ಅವರು ನೆಲೆಯೂರುವ ಸ್ಥಳಗಳಲ್ಲಿ ಅವರವರ ವಯಸ್ಸಿಗೆ ಅನುಗುಣವಾಗಿ ಪ್ರಾಥಮಿಕ ತರಗತಿಗಳಿಗೆ ಸೇರಿಸುವ ಉದ್ದೇಶವನ್ನು ಶಿಕ್ಷಣ ಇಲಾಖೆ ಹೊಂದಿದೆ. ಅದಕ್ಕೆ ಬೇಕಾಗುವ ಸವಲತ್ತುಗಳನ್ನು ಒದಗಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಮಕ್ಕಳಿಗೆ ಶಿಕ್ಷಕ ಜಿ.ಟಿ. ಲಕ್ಷ್ಮಯ್ಯ, ಸ್ವಯಂ ಸೇವಕರಾದ ರತ್ನಮ್ಮ, ಹನುಮಂತಪ್ಪ ಆಟಪಾಟ ಹೇಳಿಕೊಡುತ್ತಿದ್ದಾರೆ.
ಶಾಲೆ ಬಿಟ್ಟ ನಗರದ ಸುಮಾರು ೨೫ಕ್ಕೂ ಹೆಚ್ಚು ಮಕ್ಕಳನ್ನು ಚಿಣ್ಣರ ಅಂಗಳಕ್ಕೆ ಸೇರಿಸುವ ಉದ್ದೇಶ ಶಿಕ್ಷಣ ಇಲಾಖೆಗಿತ್ತು. ಆದರೆ ಪೋಷಕರು ಸಹಕಾರ ತೋರಿಲ್ಲ. ಅವರ ಮನವೊಲಿಕೆ ಯತ್ನ ಸಮಾಜದಿಂದ ಆಗಬೇಕಿದೆ. ಬೆಳೆಯುವ ಮಕ್ಕಳ ಭವಿಷ್ಯ ನಾಶ ಮಾಡುವ ಅಧಿಕಾರ ಪೋಷಕರಿಗಿಲ್ಲ. ಮಕ್ಕಳ ಹಕ್ಕು ಇಲ್ಲಿ ಮುಖ್ಯ. ಇಂತಹ ಪ್ರಯತ್ನದಿಂದ ಬೀದಿಗೆ ಬೀಳುವ ಲಕ್ಷಾಂತರ ಮಕ್ಕಳು ಉತ್ತಮ ಭವಿಷ್ಯ ರೂಪಿಸಿಕೊಳ್ಳುವತ್ತಾ ಹೋಗಬಹುದು.