ಕಲ್ಪನೆಯ ಮನೆ ಕಟ್ಟಿ ಕೊಳ್ಳಿ!
ಮದುವೆ ಮಾಡಿ ನೋಡು, ಮನೆ ಕಟ್ಟಿ ನೋಡು ಎಂದು ಹಿರಿಯರು ಹಿಂದೆ ಹೇಳುವ ಮಾತೊಂದು ಇತ್ತು. ಆದರೆ ಇಂದು ಚೆಂದದ ಮನೆ ಕಟ್ಟುವುದು, ಒಳ್ಳೆ ಮದುವೆ ಮಾಡುವುದು ಎರಡೂ ದುಭಾರಿಯಾಗಿ ಬಿಟ್ಟಿದೆ. ನೋಟಿನ ಬೆಲೆ ಕಳೆದುಕೊಂಡ ಮೇಲಂತೂ ಇವೆರಡೂ ಬಡವರಿಗೆ ಕಬ್ಬಿಣದ ಕಡಲೆಯಂತೆಯೇ ಸರಿ. ಬಡವರು, ಆರ್ಥಿಕವಾಗಿ ಹಿಂದುಳಿದ ಜನ ಇಂದು ಮನೆ ಕಟ್ಟುವುದು ಇರಲಿ ಒಂದು ಸ್ವಂತ ಸೈಟ್ ಕೊಂಡು ಕೊಳ್ಳುವುದು ಸಾಧ್ಯವಿಲ್ಲದ ಸ್ಥಿತಿಯಿದೆ. ಆದರೆ ತಿಪಟೂರಿನ ಭೈಫ್ ರೆಡ್ಡಿ ಅವರು ಕನಸಿನ ಮನೆಯನ್ನು ಅತ್ಯಲ್ಪ ವೆಚ್ಚದಲ್ಲಿ ಹೇಗೆ ಕಟ್ಟುವುದು ಎಂದು ಸ್ವತಃ ತೋರಿಸಿಕೊಟ್ಟಿದ್ದಾರೆ.
ಒಂದು ಸ್ವಂತ ನಿವೇಶನ ಕೊಂಡುಕೊಳ್ಳಬೇಕು, ಅಲ್ಲಿ ಒಂದು ತಮ್ಮದೇ ಕಲ್ಪನೆಯ ಸುಂದರ ಮನೆ ಕಟ್ಟಬೇಕು, ಟಿವಿ, ಪ್ರಿಡ್ಜ್, ಕಾರು ಕೊಳ್ಳಬೇಕು.. ಏನೆಲ್ಲಾ ಪ್ರತಿಯೊಬ್ಬರೂ ನಿತ್ಯಾ ಕಾಣುವ ಕನಸು. ಆದರೆ ಇಂದಿನ ದುಬಾರಿ ಯುಗದಲ್ಲಿ ಕನಸು ಕೊನೆಯವರೆಗೂ ಕನಸಾಗಿಯೇ ಉಳಿದು ಬಿಡುತ್ತದೆ. ಅಂತಹವರಿಗೆ ಜಿ.ಎನ್.ಎಸ್.ರೆಡ್ಡಿಯವರು ಆತ್ಮಸ್ಥೈರ್ಯ ಮತ್ತು ದೈರ್ಯ ತುಂಬುತ್ತಾರೆ ಅಲ್ಲದೇ ಮನೆ ಕಟ್ಟುವ ಕನಸಿಗೆ ಶಕ್ತಿ ತುಂಬಿ ಕಡಿಮೆ ವೆಚ್ಚದಲ್ಲಿ ಸುಂದರವಾದ ಮನೆ ಕಟ್ಟಿ ಕೊಳ್ಳುವ ಉಪಾಯ ಹೇಳಿ ಕೊಡುತ್ತಾರೆ.
ಸ್ವತಃ ಅವರು ತಿಪಟೂರಿನ ಶಾರದ ನಗರದಲ್ಲಿ ಕೇವಲ ೩೩ ಅಡಿ ಉದ್ದ ಮತ್ತು ೩೩ ಅಡಿ ಅಗಲದ ವಿಸ್ತೀರ್ಣದಲ್ಲಿ ಒಂದು ಸುಂದರ ಮತ್ತು ಆಕರ್ಷಕ ಮನೆ ನಿರ್ಮಿಸಿದ್ದಾರೆ. ಅವರ ಕಲ್ಪನೆಗೆ ತಕ್ಕಂತೆ ನಾನಾ ಪ್ರದೇಶಗಳನ್ನು ಸುತ್ತಿ ತಮ್ಮದೇ ವಿನ್ಯಾಸದಲ್ಲಿ ನಿರ್ಮಿಸಿರುವ ಮನೆಯನ್ನು ನೋಡಲು ನಿತ್ಯಾ ಹತ್ತಾರು ಜನ ಬಂದು ಹೋಗುತ್ತಾರೆ.
ಸ್ಥಳೀಯವಾಗಿ ದೊರೆಯುವ ಕಟ್ಟಡ ಸಾಮಾಗ್ರಿಗಳನ್ನೇ ತಮ್ಮ ಮನೆ ನಿರ್ಮಾಣಕ್ಕೆ ಬಳಸಿದ್ದಾರೆ. ಸರಳ ಮತ್ತು ಸುಲಭವಾದ ವಿನ್ಯಾಸದಿಂದ ನಿರ್ಮಿಸಿರುವ ಈ ಮನೆ ಹಲವು ವಿಶೇಷಗಳಿಂದ ಕೂಡಿದೆ. ಕಡಿಮೆ ವೆಚ್ಚದಲ್ಲಿ ಅತ್ಯಾಕರ್ಷಕವಾಗಿ ಕಟ್ಟಿರುವ ಈ ಎರಡು ಅಂತಸ್ತಿನ ಮನೆ ಪರಿಸರ ಸ್ನೇಹಿಯಾಗಿದ್ದು ನೋಡುಗರಿಗೆ ಒಂದು ಭವ್ಯ ಭಂಗಲೆಯಂತೆ ಕಾಣುತ್ತದೆ. ತಮ್ಮದೇ ಕಲ್ಪನೆಯ ಮನೆ ಕಟ್ಟುತ್ತೇವೆ ಎನ್ನುವವರಿಗೆ ರೆಡ್ಡಿ ಮಾದರಿಯಾಗಿದ್ದಾರೆ.
ಇಂಜಿಯರ್, ಆರ್ಕಿಟೆಕ್ಟ್ ಸೇರಿದಂತೆ ಯಾರ ಯಾರದೋ ಕಲ್ಪನೆಗೆ ಲಕ್ಷಾಂತರ ರೂಪಾಯಿ ಹಣ ಸುರಿದು ಮನೆ ಕಟ್ಟುವ ಜನ ಮತ್ತೊಂದು ಅದ್ಭುತ ಮನೆ ನೋಡಿದಾಗ ಅಯ್ಯೋ ನಾವು ಅವಸರ ಮಾಡಿದೇವು, ತಡವಾಗಿದ್ದರೆ ಇಂತಹ ಮನೆ ಕಟ್ಟಬಹುದಿತ್ತು ಎಂದು ನೊಂದು ಕೊಳ್ಳುತ್ತಾರೆ. ಆಸೆ ಎನ್ನುವುದು ಎಂದಿಗೂ ಕಡಿಮೆಯಾಗುವುದಿಲ್ಲ. ಮನುಷ್ಯನ ಗುಣವೇ ಅಷ್ಟು, ತನ್ನ ಹತ್ತಿರ ಇರುವುದಕ್ಕೆ ತೃಪ್ತಿ ಪಟ್ಟುಕೊಳ್ಳದೇ ಪರರ ಬಳಿ ಇರುವುದಕ್ಕೆ ಹಂಬಲಿಸುವುದು ಹೆಚ್ಚು. ಈ ರೀತಿ ಕೊನೆಗೂ ತೃಪ್ತಿಯಿಲ್ಲದೇ ಹುಡುಕಾಟ ನಡೆಸುವುದಕ್ಕಿಂತ ನಮ್ಮದೇ ವ್ಯಕ್ತಿತ್ವ ಪ್ರತಿನಿಧಿಸುವಂತ, ತಮ್ಮ ಕಲ್ಪನೆಗೆ ನಿಲುಕುವಂತಹ ಮನೆಯನ್ನು ನಿರ್ಮಿಸಿಕೊಂಡಾಗ ಆಗುವ
ಆತ್ಮತೃಪ್ತಿ, ಸಂತೋಷ ಅರಮನೆಯಲ್ಲಿದ್ದರೂ ಬರುವುದಿಲ್ಲ. ನಮ್ಮ ಕನಸು ಮತ್ತು ಕಲ್ಪನೆಯ ಮನೆ ಪರಿಸರಕ್ಕೆ ನಮ್ಮ ಬದುಕು ಹೊಂದಿಕೊಳ್ಳುವಂತಿರ ಬೇಕು. ಆರೋಗ್ಯಕರ, ಆಹ್ಲಾದಕರ ಮತ್ತು ತೃಪ್ತಿಕರವಾಗಿ ವಾಸಿಸಲು ಯೋಗ್ಯವಾಗಿರಬೇಕು ಎನ್ನುವ ರೆಡ್ಡಿ ಅವರು ಮರ ಮುಟ್ಟುಗಳನ್ನು ಬಳಸಲು ಪ್ರಕೃತಿ ಮೇಲೆ ದೌರ್ಜನ್ಯ ನಡೆಸುವುದು ಸರಿಯಲ್ಲ ಎನ್ನುತ್ತಾರೆ. ನಮ್ಮ ಚೆಂದದ ಮನೆಗಾಗಿ ಪರಿಸರದ ಮೇಲೆ ಧಾಳಿ ಮಾಡಿ ನಾಶ ಮಾಡಿದರೆ ಭವಿಷ್ಯದಲ್ಲಿ ಬಾರೀ ಅಪಾಯ ಎದುರಿಸಬೇಕಾದೀತು ನಮನ್ನು ಕಾಯುವ ಈ ಸುಂದರ ಪ್ರಕೃರ್ತಿಯನ್ನು ಮುಂದಿನ ಪೀಳಿಗೆಗಾಗಿ ನಾವು ಸದಾ ಕಾಯಬೇಕು ಎಂದು ಎಚ್ಚರಿಸುತ್ತಾರೆ.
೭೮ ವರ್ಷಗಳ ಹಿಂದೆಯೇ ಗಾಂಧಿಜಿಯವರು ಮನೆ ಕಟ್ಟಲು ಒಂದು ಸರಳ ಸೂತ್ರ ನೀಡಿದ್ದರು. ಅವರ ಸಲಹೆಯಂತೆ ಮನೆ ಕಟ್ಟಲು ಉದ್ದೇಶಿಸಿರುವ ಪ್ರದೇಶಕ್ಕೆ ಹೆಚ್ಚಿನ ಆಧ್ಯತೆ ನೀಡಬೇಕು. ಮನೆ ಕಟ್ಟುವ ಸ್ಥಳದ ೫ ಕಿಮಿ ವ್ಯಾಪ್ತಿಯೊಳಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ದೊರೆಯುವ ಕಟ್ಟಡ ಸಾಮಾಗ್ರಿಗಳನ್ನು ಬಳಸಬೇಕು. ಮನೆ ಪರಿಸರ ಸ್ನೇಹಿಯಾಗಿದ್ದು ಸ್ಥಳೀಯ ವಾತಾವರಣದ ಬದಲಾವಣೆಗೆ ಹೊಂದಿಕೊಳ್ಳುವಂತಹ ವಿನ್ಯಾಸ ಹೊಂದಿರಬೇಕು. ನಮ್ಮ ಮನಸ್ಸಿಗೆ ಒಪ್ಪುವ ಸುಂದರ ಮತ್ತು ವಿಶಾಲವಾದ ಮನೆಯನ್ನು ಮಿತವ್ಯಯದಲ್ಲಿ ನಿರ್ಮಿಸುವುದು ಒಂದು ದೊಡ್ಡ ಸಾಧನೆ ಮತ್ತು ಪ್ರತಿಷ್ಟೆಯೇ ಸರಿ. ಒಂದು ಸುಂದರ ಆಲೋಚನೆ, ತಾಳ್ಮೆ, ಕಲ್ಪನೆ ಇಷ್ಟಿದ್ದರೆ ಸಾಕು ಒಂದು ಭವ್ಯ ಮನೆ ಸಿದ್ಧ.
ಸ್ಥಳೀಯವಾಗಿ ಸಿಗುವ ಇಟ್ಟಿಗೆ, ಮಣ್ಣು, ಇತ್ಯಾದಿ ವಸ್ತುಗಳನ್ನೇ ಬಳಸಿ ಸ್ಥಳೀಯ ವಿನ್ಯಾಸಕ್ಕನುಗುಣವಾಗಿ ಸ್ಥಳೀಯ ಕಾರ್ಮಿಕರಿಂದ ಮನಸ್ಸಿಗೆ ಒಪ್ಪುವ ಮನೆ ನಿರ್ಮಾಣ ಮಾಡಿಕೊಳ್ಳಬೇಕು ಎನ್ನುವ ರೆಡ್ಡಿಯವರು ಇಂಜಿನಿಯರ್ ಹೇಳಿದರು ಎಂದು ದುಂದುವೆಚ್ಚಮಾಡಿ ಮನಸ್ಸಿಗೆ ಬಂದಂತೆ ಕಬ್ಬಿಣ, ಸಿಮೆಂಟ್, ಮರ ಮಟ್ಟುಗಳನ್ನು ಬಳಸಿ ಅತಿ ಭಾರದ ಮನೆ ನಿರ್ಮಾಣ ಮಾಡಬಾರದು ಎಂದು ಸಲಹೆ ನೀಡುತ್ತಾರೆ.
ಆರ್ಕಿಟೆಕ್ಟರ್ಗಳ ಕಲ್ಪನೆಗೆ ತಕ್ಕಂತೆ ಒಂದೊಂದು ಮನೆ ನಿರ್ಮಾಣ ವೆಚ್ಚ ಲಕ್ಷ, ಕೋಟಿಗಳನ್ನೂ ದಾಟುತ್ತವೆ. ಆದರೆ ಅಲ್ಲಿ ಎಲ್ಲಾ ಒಂದೇ ಮಾದರಿಯ ತದ್ರೂಪ ವ್ಯವಸ್ಥೆಗಳಿರುತ್ತವೆ. ಒಂದು ಮನೆ ನೋಡಿದರೆ ಮತ್ತೊಂದು ಮನೆ ನೋಡುವಂತಿಲ್ಲ. ಅಲ್ಲಿ ವಿಶೇಷ ಏನೂ ಇರುವುದಿಲ್ಲ. ಒಂದು ಕಿಚನ್, ಎರಡು ಬೆಡ್ ರೂಂ, ಒಂದು ಹಾಲ್, ಬಾತ್ ರೂಂ, ಪೋರ್ಟಿಕೋ ಹಾಗೂ ಒಂದು ಕಾರ್ ಶೆಡ್ ಮುಗಿದು ಹೋಯಿತು, ನೀವು ನೂರು ಅಲ್ಲ ಸಾವಿರ ಮನೆ ಸುತ್ತಿದರೂ, ಯಾವ ಮನೆ ನೋಡಿದರೂ ಇದೇ ವಿನ್ಯಾಸ. ಬೇರೆ ಹೊಸ ವಿಶೇಷ ಇರೋದಿಲ್ಲ. ಜೊತೆಗೆ ರಾಜಾಸ್ಥಾನ್ ಮಾರ್ಬಲ್, ಇಟಾಲಿಯನ್ ಮಾರ್ಬಲ್, ಚೈನೀಸ್ ಕಿಚನ್, ಹೀಗೆ ನಾನಾ ತರಹದ ನಾನಾ ಐಷರಾಮಿ ವಿನ್ಯಾಸದಿಂದ ದುಬಾರಿ ವೆಚ್ಚದಲ್ಲಿ ಅಲಂಕರಿಸಿ, ಕ್ಷಣಿಕ ತೃಪ್ತಿ ಪಟ್ಟು ಕೊಳ್ಳುತ್ತಾರೆ. ಆದರೆ ಮತ್ತೆ ಇದಕ್ಕಿಂತ ಭಿನ್ನ ವಿನ್ಯಾಸ ನೋಡಿದಾಗ ಖಿನ್ನರಾಗುತ್ತಾರೆ. ಇಷ್ಟೆಲ್ಲಾ ಕೋಟಿ ಗಟ್ಟಲೆ ಹಣ ಕರ್ಚು ಮಾಡಿ ಕಟ್ಟಿರುವ ಮನೆಯಲ್ಲಿ ಗಾಳಿಗಾಗಿ ವಿದ್ಯುತ್ ಫ್ಯಾನು, ಬೆಳಕಿಗಾಗಿ ವಿದ್ಯುತ್ ದೀಪ, ವಾತಾವರಣ ನಿಯಂತ್ರಣಕ್ಕಾಗಿ ಏರ್ಕಂಡಿಶನ್ ವ್ಯವಸ್ಥೆ, ಮರ ಮುಟ್ಟುಗಳ ರಕ್ಷಣೆಗಾಗಿ ನಾನಾ ಕೀಟ ನಾಶಕಗಳ ಬಳಕೆ, ನಾನಾ ಕೊಠಡಿಗಳ ನಿರ್ವಹಣೆಗಾಗಿ ಮಾನವಯಂತ್ರ ನಿಯೋಜನೆ ಹೀಗೆ ತಾವು ಮಾಡಿಕೊಂಡ ವ್ಯವಸ್ಥೆಯ ನಿರ್ವಹಣೆಗಾಗಿ ಪುನಃ ಮಿತಿ ಮೀರಿದ ವೆಚ್ಚವನ್ನು ನಿರಂತರವಾಗಿ ಮಾಡುತ್ತಾ ಹೋಗುತ್ತಾರೆ. ಒಂದು ದಿನ ನಿರ್ವಹಣೆ ನಿಂತರೆ ಆಗ ಅದು ಭೂತ ಭಂಗಲೆಯಂತೆ ಕಾಣುತ್ತದೆ. ಮನೆ ಕಟ್ಟಿದಾಗ ಈ ರೀತಿ ಆಗ ಬಾರದು.
ನಮ್ಮ ಕಲ್ಪನೆಯ ಮನೆ ಕಟ್ಟಿದಾಗ ಅಲ್ಲಿ ಶಾಂತಿ, ನೆಮ್ಮದಿ, ಪ್ರೀತಿ ಮತ್ತು ಆರೋಗ್ಯದ ವಾತಾವರಣ ನಿರ್ಮಾಣವಾಗಬೇಕು. ಗಾಳಿ, ಬೆಳಕು ನೈಸರ್ಗಿಕವಾಗಿ ಬರುವಂತಿರಬೇಕು. ಅತಿಯಾದ ಗೋಡೆಗಳನ್ನು ಬಳಸದೇ ಎಲ್ಲರೂ ಕೂಡಿ ಬದುಕುವಂತೆ, ಮನೆಯ ಸದಸ್ಯರೊಂದಿಗೆ ಮಾನವೀಯ ಸಂಬಂಧ ಗಟ್ಟಿಗೊಳಿಸುವ ವಾತಾವರಣ ಸೃಷ್ಟಿಯಾಗಬೇಕು. ವಿಶಾಲ ಜಾಗದಲ್ಲಿ ಮಧ್ಯೆ ಮಧ್ಯೆ ಗೋಡೆಗಳನ್ನು ಹಾಕುವ ಮೂಲಕ ಮನೆಯವರನ್ನೇ ಭಾಗ ಮಾಡಿ, ಮನಸ್ಸನ್ನು ಬೇರ್ಪಡಿಸಿ, ಬಂಧಿಸಿಡುವ ಆಧುನಿಕ ಗೃಹ ನಿರ್ಮಾಣ ಪದ್ಧತಿ ಸರಿಯಲ್ಲ ಎನ್ನುವ ರೆಡ್ಡಿ ಅವರ ಕಲ್ಪನೆಯ ಮನೆಯಲ್ಲಿ ಮಧ್ಯೆ ಗೋಡೆ ಮತ್ತು ಬಾಗಿಲುಗಳನ್ನೇ ಇಟ್ಟಿಲ್ಲ,
ಹುಚ್ಚು ಪ್ರತಿಷ್ಟೆಗೆಂದು ಎಷ್ಟು ದುಬಾರಿ ಮನೆ ಕಟ್ಟುತ್ತೇವೆಯೋ ಅಷ್ಟು ಹಣ ಪರರ ಪಾಲಾಗುತ್ತದೆ. ಮನೆ ಕಟ್ಟುವುದು ನಾವು, ಆದರೆ ಅದರ ಲಾಭ ಎಲ್ಲರಿಗೂ ಸಿಗುತ್ತದೆ. ಮೊದಲಿಗೆ ಮನೆ ವಿನ್ಯಾಸದ ಇಂಜಿನಿಯರ್ನಿಂದ ಶುರುವಾಗಿ, ಆರ್ಕಿಟೆಕ್ಟ್, ಗುತ್ತಿಗೆದಾರ, ಗಾರೆಯವರು, ಬಣ್ಣಗಾರರು, ಬಡಗಿ, ನಾನಾ ವ್ಯಾಪಾರಿಗಳೂ ಸೇರಿದಂತೆ ಹಲವು ಮಂದಿಗೆ ಮನೆ ಕಟ್ಟುವ ನೆಪದಲ್ಲಿ ಹೇರಳವಾಗಿ ಹಣ ಸುರಿಯುತ್ತೇವೆ. ಮನೆ ನಿರ್ಮಾಣ ಮಾಡುವ ವೆಚ್ಚ ಹೆಚ್ಚಿದಂತೆಲ್ಲಾ ಅದು ದುಬಾರಿಯಾಗುತ್ತದೆ. ಆಗ ಹಣವೆಲ್ಲಾ ನಿರ್ಮಾಣ ಮಾಡುವ ಹಂತದ ಭಾಗಿದಾರರಿಗೆ ಹಂಚಿ ಹೋಗುತ್ತದೆ. ಒಂದು ಮನೆ ನಿರ್ಮಾಣ ಮಾಡುವಾಗ ಶೇ.೫೦-೬೦ರಷ್ಟು ಹಣ ವಿನಾ ಕಾರಣ ಪರರ ಪಾಲಾಗುತ್ತದೆ ಎನ್ನುವ ರೆಡ್ಡಿಯವರು ನಾವು ನಮ್ಮ ಪುರಾತನರ ಕಲ್ಪನಗೆ ತಕ್ಕಂತೆ ಕಡಿಮೆ ವೆಚ್ಚದಲ್ಲಿ ಒಂದು ಸುಂದರ ಮನೆ ಕಟ್ಟಿಕೊಳ್ಳಬಹುದು.
ಡೆಸಾರ್ಟ್ ಆರ್ಕಿಟೆಕ್ಚರ್, ಹೈದರಾಬಾದ್ನ ಗೋಲ್ಕಂಡ ಪೋರ್ಟ್ ಸಮೀಪ ಸಿಗುವ ಕೆಲವು ಮಾದರಿಗಳ ಸ್ಪೂರ್ತಿಯಿಂದ ಈ ನಮ್ಮ ಮನೆ ನಿರ್ಮಾಣ ಮಾಡಲು ಸಾಧ್ಯವಾಯಿತು. ಚಿಂತನೆ, ಅಧ್ಯಯನ, ಮಾಹಿತಿ ಸಂಗ್ರಹ ಸೇರಿದಂತೆ ಯೋಜನೆ ರೂಪಿಸಿ ಮನೆ ಕಟ್ಟಲು ತೆಗೆದುಕೊಂಡ ಅವಧಿ ನಾಲ್ಕು ವರ್ಷಗಳಾದರೂ ನನ್ನ ಕನಸಿನ ಮನೆ ನನ್ನ ಕಣ್ಣ ಮುಂದೆ ಇದೆ ಎಂದು ತಾವು ನಿರ್ಮಿಸಿರುವ ಮನೆಯತ್ತ ಬೊಟ್ಟು ಮಾಡುತ್ತಾರೆ ರೆಡ್ಡಿಯವರು.
ಮನೆಯ ವೈಶಿಷ್ಟ್ಯ:
೩೩*೩೩ ಅಡಿಗಳ ನಿವೇಶನದಲ್ಲಿ ಒಟ್ಟು ೨೨ ಚದರಡಿಯ ಮನೆ ನಿರ್ಮಾಣ ಮಾಡಲಾಗಿದೆ. ವೈಜ್ಞಾನಿಕವಾಗಿ ಮತ್ತು ಸಂಪ್ರದಾಯವಾಗಿ ನಿವೇಶನದ ಮಧ್ಯೆ ಭಾಗದಲ್ಲಿ ೧೧*೧೧ ಅಡಿಗಳಲ್ಲಿ ಒಂದು ತೊಟ್ಟಿಯನ್ನು ನಿರ್ಮಿಸಿ, ಮನೆಯ ಎಲ್ಲರ ಬದುಕು ಮತ್ತು ವ್ಯಕ್ತಿತ್ವ ಈ ತೊಟ್ಟಿಯ ಸುತ್ತಲೂ ನಿರ್ಮಾಣವಾಗಬೇಕು. ಇದು ಮನೆಯ ಬ್ರಹ್ಮ ಸ್ಥಳ ಎನ್ನುತ್ತಾರೆ ರೆಡ್ಡಿ.
ಈ ತೊಟ್ಟಿಯೂ ಒಂದು ಸುಂದರ ಆಕರ್ಷಕ ಸ್ಥಳವಲ್ಲದೇ ಆಧ್ಯಾತ್ಮಿಕತೆಯ ಮಹತ್ವವುಳ್ಳ ಕೇಂದ್ರವೂ ಆಗಿದೆ. ಬಾಗಿಲು ಇಲ್ಲದೇ ತೆರೆದಿಟ್ಟ ಸ್ಥಳದಲ್ಲಿ ಪೀಠದಲ್ಲಿ ಮನೆ ದೇವರನ್ನು ಪ್ರತಿಷ್ಠಾಪಿಸಿದ್ದು ಎಲ್ಲರೂ ಪೂಜೆ ಮಾಡುವ ಅವಕಾಶ ಕಲ್ಪಿಸಿ ಕೊಡಲಾಗಿದೆ. ಅದು ಇದರ ಸುತ್ತಲೂ ಎಲ್ಲಾ ಕೊಠಡಿಗಳು ನಿರ್ಮಾಣವಾಗುತ್ತವೆ. ಬರುವವರು, ಹೋಗುವವರು, ಮನೆಯವರೆಲ್ಲಾ ಎಲ್ಲರಿಗೂ ಗೋಚರಿಸುತ್ತಾರೆ.
ಈ ತೊಟ್ಟಿಯ ಸುತ್ತಾಲೂ ಆಗ್ನೆಯಕ್ಕೆ ಅಡಿಗೆ ಮನೆ ೧೧*೧೧ ಅಳತೆ. ದಕ್ಷಿಣಕ್ಕಿರುವ ವಿಶ್ರಾಂತಿ ಕೊಠಡಿ ೧೧*೧೧, ಬಾತ್ ರೂಂ ೧೧*೧೧, ಹೀಗೆ ಒಟ್ಟು ಇತರೆ ಎಂಟು ಕೊಠಡಿಗಳು ತಲಾ ೧೧*೧೧ ಅಳತೆಯಲ್ಲಿವೆ. ಅದೇ ಮಾದರಿಯಲ್ಲಿ ಮೊದಲ ಅಂತಸ್ಥಿನಲ್ಲೂ ಎಂಟು ಕೊಠಡಿಗಳನ್ನು ನಿರ್ಮಿಸಲಾಗಿದೆ. ಆದರೆ ಯಾವ ಕೊಠಡಿಗೂ ಬಾಗಿಲುಗಳಿಲ್ಲ ಮತ್ತು ಗೋಡೆಗಳಿಲ್ಲ. ಇಲ್ಲಿ ಓಪನ್ ಕಿಚನ್ ಇದೆ, ಗಾಳಿ, ಬೆಳಕು ಸರಾಗಿ ಬರುವಂತಹ ತಾಂತ್ರಿಕ ವ್ಯವಸ್ಥೆ ಮನೆಯಲ್ಲಿದೆ. ಮಧ್ಯೆ ಭಾಗದಲ್ಲಿರುವ ಮೇಲ್ಚಾವಣಿಯಲ್ಲಿ ತೆರೆದುಕೊಂಡ ಭಾಗದಿಂದ ಮನೆಯ ಬಿಸಿ ಗಾಳಿ ಹೊರ ಹೋದರೆ ಮನೆಯ ನಾನಾ ಕಡೆ ನಿರ್ಮಿಸಿರುವ ಪಿಲ್ಲರ್ಗಳಲ್ಲಿರುವ ತಂಪಾದ ಶುದ್ಧಗಾಳಿ ರಂಧ್ರದ ಮೂಲಕ ಒಳಗೆ ಬರುತ್ತದೆ ಇದು ಯಾಂತ್ರಿಕೃತವಾಗಿ ನಡೆಯುವುದರಿಂದ ಇಲ್ಲಿ ಯಾವ ಕೊಠಡಿಗೂ ಫ್ಯಾನುಗಳಿಲ್ಲ.
ಮನೆಯಲ್ಲಿ ಎಲ್ಲೂ ಮರಗಳನ್ನು ಬಳಸಿ ಮಾಡಿದ ಮಂಚ, ಬಾಗಿಲು, ಕಿಟಕಿ, ಸೆಲ್ಫ್ಗಳಿಲ್ಲ. ಇರುವ ಸೆಲ್ಫ್ ಮತ್ತು ಪುಸ್ತಕ ರ್ಯಾಕ್ಗಳನ್ನು ಕಡಪ ಕಲ್ಲು ಮತ್ತು ಬಿದರಿನ ಕಡ್ಡಿಗಳಿಂದ ಮಾಡಲಾಗಿದೆ. ಮನೆಯ ಮಧ್ಯೆ ಇರುವ ತೊಟ್ಟಿಯ ಮಧ್ಯೆ ನೇತು ಹಾಕಿರುವ ಒಂದು ವಿದ್ಯುತ್ ದೀಪ ಇಡೀ ಕೆಳಗಿನ ಮತ್ತು ಮೇಲಿನ ಎಂಟು ಕೊಠಡಿಗೆ ಬೆಳಕು ನೀಡುತ್ತದೆ, ಅದೂ ರಾತ್ರಿ ವೇಳೆ ಮಾತ್ರ. ಹಾಗಾಗಿ ಮನೆಯಲ್ಲಿ ಎಲ್ಲೂ ಹೆಚಿನ ದೀಪದ ಅವಶ್ಯತೆಯಿರುವುದಿಲ್ಲ.
ಕೊಠಡಿಗಳಲ್ಲಿರುವ ಮಂಚಗಳೂ ಸಹ ಇಟ್ಟಿಗೆ ಮತ್ತು ಕಡಪ ಕಲ್ಲಿನಿಂದ ಮಾಡಲಾಗಿದ್ದು ಅರಾಮದಾಯಕ ಮತ್ತು ಆರೋಗ್ಯದಾಯಕವಾಗಿದೆ. ಮನೆಯಲ್ಲಿ ಮುಂಭಾಗಿಲು ಬಿಟ್ಟರೆ ಉಳಿದಂತೆ ಬಾಗಿಲು, ಕಿಟಕಿಗಳಿಲ್ಲದ್ದರಿಂದ ಮರಗಳನ್ನು ಬಳಸಿಲ್ಲ. ಅವಶ್ಯತೆ ಇರುವ ಕಡೆಗಳಲ್ಲಿ ಸಿಂಥಟಿಕ್ ಬಾಗಿಲುಗಳನ್ನು ಬಳಸಲಾಗಿದೆ. ಕಟ್ಟಡಕ್ಕೆ ಹಾಲೋ ಬ್ರಿಕ್ಸ್ ಬಳಸಿರುವುದರಿಂದ ಮನೆಯ ತುಂಬಾನೇ ಹಗುರವಾಗಿದೆ. ನೆಲ್ಕಕೆಲ್ಲಾ ಟೆರಾಕೋಟ ಟೈಲ್ಸ್ ಬಳಸಿದ್ದು ಅತ್ಯಂತ ಸುಂದರವಾಗಿದೆ.
ಮುಂಭಾಗ ಮತ್ತು ಒಳ ಭಾಗದ ಮುಖ್ಯ ಭಾಗಗಳಲ್ಲಿ ಗ್ರಾನೈಟ್ ಕಂಪನಿಗಳಲ್ಲಿ ಬಳಸಿ ಬಿಸಾಡಿದ ನಿರುಪಯುಕ್ತ ಗ್ರಾನೈಟ್ ಕಲ್ಲುಗಳನ್ನು ತಂದು ಬಳಸಿದ್ದು ಅತ್ಯಂತ ಸುಂದರವಾಗಿ ಕಾಣುತ್ತಿದ್ದು ಕಸದಿಂದ ರಸವಾಗಿದೆ. ಮನೆಯ ಮುಂಬಾಗದ ಗೇಟ್ ಬಳಿ ಹಾಗೂ ಕಾಂಪೌಂಡ್ ಗೋಡೆಗಳಿಗೆ ಕಾಡು ಕಲ್ಲುಗಳನ್ನು ಬಳಸಿದ್ದು ಅತ್ಯಂತ ಆಕರ್ಷಕವಾಗಿ ಕಾಣುತ್ತದೆ. ಅಂದರೆ ಮನೆ ಕಟ್ಟುವವರು ಒಮ್ಮೆ ರೆಡ್ಡಿಯವರನ್ನು ಸಂಪರ್ಕಿಸಿದರೆ ಹೊಸ ಕಲ್ಪನೆ, ಹೊಸ ವಿಚಾರ ಹಾಗೂ ಒಂದು ಹೊಸ ಆಲೋಚನೆ ಸಿಗುತ್ತದೆ.
ರೆಡ್ಡಿಯವರ ನಿರ್ಮಿಸಿರುವ ಮನೆ ನಗರದಲ್ಲೇ ವಿಶಿಷ್ಟ ಮತು ವಿಶೇಷವಾಗಿದ್ದು ಭವ್ಯ ಭಂಗಲೆಯತೆ ಕಾಣುತ್ತದೆ. ಆದರೆ ಅದರ ಒಟ್ಟು ವೆಚ್ಚ ಕೇವಲ ೧೦-೧೨ ಲಕ್ಷ ಮಾತ್ರ. ನೋಡುಗರಿಗೆ ಈ ಮನೆ ನಿರ್ಮಾಣ ಕಡಿಮೆ ಎಂದರೂ ೪೦-೫೦ಲಕ್ಷ ಎಂದು ಭಾಸವಾಗುತ್ತದೆ.