Tuesday, March 18, 2014

ನಮ್ಮ ನಡುವಿನ ಗಾಂಧಿವಾದಿ ಕಳೆದು ಹೋಗಿದ್ದು..

 
ದಲಿತ ಶಕ್ತಿಯ ಸರ್ವೋದಯ ಟಿ. ದಾಸಪ್ಪ..



 ಕೆಳವರ್ಗದ ಬಗ್ಗೆ ಜಾತಿ ಕೀಳು ಮನೋಭಾವದಲ್ಲಿ ಅಸ್ಪೃಶ್ಯತೆ, ತಾತ್ಸರ ಮತ್ತು ಅಸಹನೆಯಿಂದ ನೋಡುತ್ತಿದ್ದ ಕಾಲಘಟ್ಟದಲ್ಲಿ ನಾಡಿನಲ್ಲಿ ದಲಿತರ ದ್ವನಿಗೆ ಒಂದು ಮಹತ್ವ ಮತ್ತು ಶಕ್ತಿ ತಂದು ಕೊಟ್ಟು, ಕೊನೆಯವೆಗೂ ದಲಿತರ ಪರವಾಗಿ ಹೋರಾಡಿದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಗಾಂಧಿವಾದಿ, ಬಸವ ಅನುಯಾಯಿ, ಶರಣ ಟಿ..ದಾಸಪ್ಪನವರ ಬದುಕು ಮತ್ತು ನಡೆ ಸಮಾಜಕ್ಕೆ ಆದರ್ಶಪ್ರಯವಾಗಿತ್ತು.. ಆದರೆ ಅವರ ಕಾಲಾನಂತರ ಅವರು ನಮ್ಮ ನಡುವೆ ಕಳೆದು ಹೋಗಿದ್ದು ಒಂದು ದುರಂತವೇ ಸರಿ..

ಹೌದು.. ಮೇಲಿನ ಮಾತನ್ನು ಅತ್ಯಂತ ದುಃಖ ಮತ್ತು ವೇದನೆಯಿಂದ ಹೇಳಲೇ ಬೇಕು..
ಈಚೆಗಷ್ಟೆ ನಮ್ಮ ನಡುವೆ ಇದ್ದ ಒಬ್ಬ ದಲಿತ ನಾಯಕ ಮತ್ತಿಹಳ್ಳಿ ದೊಡ್ಡಯ್ಯ ನಿಧನರಾದರು. ಕಳೆದ ಒಂದು ದಶಕದಲ್ಲಿ ನಾವು ಇದೇ ರೀತಿಯಲ್ಲಿ ಮೂವರು ದಲಿತ ಪರ ಹೋರಾಟಗಾರನ್ನು ಕಳೆದುಕೊಂಡಿದ್ದೇವೆ. ಇದು ದಲಿತ ಸಮಾಜಕ್ಕೆ ಆದ ಬಹು ದೊಡ್ಡ ನಷ್ಟವೆಂದರೆ ತಪ್ಪಾಗಲಾರದು.
ಸತತ ೩೦-೪೦ ವರ್ಷಗಳ ಕಾಲ ದಲಿತರ ಸಮಸ್ಯೆಗಳಿಗೆ, ನೋವುಗಳಿಗೆ ಮತ್ತು ದಲಿತರ ಹೋರಾಟಗಳಲ್ಲಿ ಭಾಗವಹಿಸಿ ತಮ್ಮ ಜೀವನ ಪೂರ್ತಿ ದಲಿತರ ಸೇವೆಯಲ್ಲೇ ತಮ್ಮ ಬದಕು ಸವೆಸಿದ ದಲಿತ ಮುಖಂಡರಾದ ಕೊಪ್ಪದ ಸಿ.ಪಾಂಡು ಆಗಲಿ ಅಥವಾ ಮತ್ತಿಹಳ್ಳಿ ದೊಡ್ಡಯ್ಯನವರಾಗಲಿ ತಮಗಾಗಿ ಏನೂ ಮಾಡಿಕೊಳ್ಳದೇ ತಮ್ಮನ್ನೇ ನಂಬಿದ ಕುಟುಂಬಕ್ಕೂ ಏನನ್ನೂ ಕೊಡದೇ ಭಗವಂತನ ಪಾದ ಸೇರಿಕೊಂಡು ಬಿಟ್ಟರು. ಇದು ಒಂದು ಸಂಕಟವಾದರೆ,

ನಾಡಿನ ಬಹುದೊಡ್ಡ ದಲಿತರ ವಿದ್ಯಾ ಸಂಸ್ಥೆಯಾಗಿ ಬೆಳೆಯುತ್ತದೆ ಗ್ರಾಮೀಣ ದಲಿತ ಮಕ್ಕಳ ಜ್ಞಾನ ದಾಹ ತಣಿಸಿ, ಸಾವಿರಾರು ದಲಿತ ಕುಟುಂಬಗಳ ಮನೆಯ ಬೆಳಗುತ್ತದೆ ಎಂದುಕೊಂಡಿದ್ದ ಸ್ವತಃ ದಾಸಪ್ಪನವರೇ ಕಟ್ಟಿ ಬೆಳೆಸಿದ ಸರ್ವೋದಯ ವಿದ್ಯಾ ಸಂಸ್ಥೆ ಕೂಡ ಅವರು ಹೋದ ಹಾದಿಯಲ್ಲೇ ಅಳಿದು ಹೋಗುತ್ತಿರುವುದು ಒಂದು ವಿಪರ್ಯಾಸವೇ..

ದಲಿತರ ದೇವಾಲಯ ಪ್ರವೇಶವನ್ನು ನಿರಾಕರಿಸಿದ ಅಂದಿನ ದಿನಗಳಲ್ಲಿ ಬಲಿಷ್ಠ ಮೇಲ್ವರ್ಗದ ವಿರುದ್ಧ ಸಡ್ಡು ಹೊಡೆದು ತಮ್ಮ ಹಕ್ಕು ಚಲಾಯಿಸಿದ ದಾಸಪ್ಪ ಅಂದು ನಾಡಿನ ಮನೆ ಮನೆ ಮಾತಾಗಿದ್ದರು. ಮುಂದೆ ಅವರು ಜೀವನದಲ್ಲಿ ತಿರುಗಿ ನೋಡದೇ ಯಶಸ್ಸಿನ ಹಾದಿಯಲ್ಲಿ ಸಾಗುತ್ತಾ ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗುರ್ತಿಸಿಕೊಂಡರು. ಜಾತ್ಯಾತೀತ ನಿಲುವಿನ ದಾಸಪ್ಪನವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ, ಜೈಲು ವಾಸ ಅನುಭವಿಸಿದ್ದರು. ನಂತರ ಸತ್ಯಾಗ್ರಹ, ಚಳುವಳಿ, ಅಹಿಂಸೆಯ ಪ್ರತಿಪಾದನೆ ಮೂಲಕ ದೇಶದ ಮನಗೆದ್ದಿದ್ದ ಗಾಂಧಿಯವರಿಂದ ಪ್ರಭಾವಿತರಾಗಿ ಅವರ ಅನುಯಾಯಿ ಆದರು.
೧೨ನೇ ಶತಮಾನದಲ್ಲಿ ಜಾತ್ಯಾತೀತ ನಿಲುವು ಮೂಲಕ ಸಾಮಾಜಿಕ ಕ್ರಾಂತಿ ಉಂಟು ಮಾಡಿದ್ದ ಬಸವಣ್ಣವರ ಆದರ್ಶಗಳಿಂದಲೂ ಪ್ರಭಾವಿತರಾದ ದಾಸಪ್ಪವರು ದೀಕ್ಷೆ ಪಡೆದು ಶರಣರಾದರು. ಮಾಂಸ ಮತ್ತು ಮಧ್ಯ ತ್ಯಜಿಸಿದ ಅವರು ಇದರ ವಿರುದ್ಧ ಹಲವಾರು ಉಪವಾಸ ಸತ್ಯಾಗ್ರಹಗಳನ್ನು ಮಾಡಿದರು. ೧೯೬೮ರಿಂದ ಶೈಕ್ಷಣಿಕ ಸಂಸ್ಥೆಗಳನ್ನು ಹುಟ್ಟು ಹಾಕಿ ಬಡವರ, ದೀನ ದಲಿತರ, ಅನಾಥ ಮಕ್ಕಳ ಶಿಕ್ಷಣಕ್ಕೆ ದಾರಿ ದೀಪವಾಗಿದ್ದರು. ತುಮಕೂರಿನಲ್ಲಿ ಗಂಗಾಧರಯ್ಯ ಸಿದ್ಧಾರ್ಥ ವಿದ್ಯಾ ಸಂಸ್ಥೆ ಹುಟ್ಟು ಹಾಕಿದ್ದ ಕಾಲದಲ್ಲಿ ತಿಪಟೂರಿನಲ್ಲಿ ದಾಸಪ್ಪನವರು ನಾನಾ ಕನಸು ಕಂಡು ಶೈಕ್ಷಣಿಕ ಸೇವೆಗೆ ಮುಂದಾಗಿದ್ದರು. ಈಗಾಗಿ ಇಂದು ಲಕ್ಷಾಂತರ ಮಂದಿ ಹೊರಗೆ ಅವರ ಹೆಸರು ಹೇಳಿಕೊಂಡು ಅನ್ನದ ದಾರಿ ಕಂಡು ಕೊಂಡಿದ್ದಾರೆ..


ಸರ್ವರ ಹಿತದ ಸರ್ವೋದಯ ಉದಯ:     
ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಜಯರಾಂ, ಮಾರನಗೆರೆ ರಂಗಪ್ಪ, ವಿಶ್ವನಾಥಶೆಟ್ಟರು, ಟಿ..ದಾಸಪ್ಪ ಸೇರಿದಂತೆ ಸಮಾನ ಮನಸ್ಥಿತಿಯ ಎಂಟು ಹತ್ತು ಜನ ಅಂದು ಗ್ರಾಮೀಣ ಬಡಜನತೆಯ ಮಕ್ಕಳ ವಿದ್ಯಾಬ್ಯಾಸಕ್ಕಾಗಿ ಒಂದು ಸಂಸ್ಥೆ ಹುಟ್ಟು ಹಾಕಿದರು. ಸರ್ವರ ಉದಯದ ಸಂಕೇತವಾಗಿ ಸರ್ವೋದಯ ಎಂದು ಹೆಸರಿನಲ್ಲಿ ಸಂಸ್ಥೆ ಆರಂಭಿಸಿದರು. ಜಾತಿಯಲ್ಲಿ ಮೇಲ್ವರ್ಗವಾಗಿದ್ದರೂ ವಿಶ್ವನಾಥಶೆಟ್ಟರು ದಲಿತರ ಪರವಾಗಿ ದ್ವನಿ ಎತ್ತಿದ್ದ ಮೊದಲ ವ್ಯಕ್ತಿಯಾಗಿದ್ದರು. ನಂತರ ಅವರು ಸಂಸ್ಥೆಯ ಉದ್ಧಾರಕ್ಕೆ ಸಾಕಷ್ಟು ಶ್ರಮಿಸಿದ್ದರು.
ಅವರು ಅಧ್ಯಕ್ಷರಾಗಿ ಟಿ..ದಾಸಪ್ಪ ಕಾರ್ಯದರ್ಶಿಯಾಗಿ ಸಂಸ್ಥೆ ೧೯೯೦ರವರೆಗೂ ಅದ್ಭತವಾಗಿ ಬೆಳದು ರಾಜ್ಯ ಹಾಗೂ ರಾಷ್ಟ್ರಮಟ್ಟದ ಖ್ಯಾತಿ ಪಡೆದಿತ್ತು. ನರ್ಸರಿಯಿಂದ ಹಿಡಿದು ಪದವಿ ಪೂರ್ವ ಮಟ್ಟದವರೆಗೂ, ಟೈಪಿಂಗ್, ವೃತ್ತಿ ಶಿಕ್ಷಣ ತರಬೇತಿಯವರೆಗೂ ಇಲ್ಲಿ ಬಡ ಮಕ್ಕಳಿಗೆ ಶಿಕ್ಷಣ ಸಿಗುತ್ತಿತ್ತು. ಸಾವಿರಾರು ಅನಾಥ ಮಕ್ಕಳಿಗೆ ಉಚಿತ ಊಟ, ವಸತಿ ಮತ್ತು ಶಿಕ್ಷಣ ನೀಡುತ್ತಿದ್ದ ಹೆಮ್ಮೆಯ ಶಿಕ್ಷಣ ಸಂಸ್ಥೆ ಇದಾಗಿತ್ತು. ಹತ್ತಾರು ಹಸುಗಳು ಇಲ್ಲಿ ಹಾಲು ಕಡೆಯುತ್ತಿದ್ದವು. ನಿತ್ಯಾ ಇಲ್ಲಿ ಪ್ರಾಥಃ ಕಾಲದ ಪ್ರಾರ್ಥನೆಯೊಂದಿಗೆ ಸಾವಿರಾರು ಮಕ್ಕಳು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಶಿಕ್ಷಣ ಕಲಿಯುತಿದ್ದವು. ಸಂಸ್ಥೆಯ ಅದೀನದಲ್ಲಿ ಶಿರಸಿ ಮತ್ತು ತುಮಕೂರಿನಲ್ಲಿಯೂ ನಾನಾ ಶಾಲೆಗಳು ಶೈಕ್ಷಣಿಕ ಸೇವೆ ಆರಂಭಿಸಿದ್ದವು..

ಕಲೆ, ಸಾಹಿತ್ಯ, ಸಂಗೀತ ಸೇರಿದಂತೆ ನಾನಾ ಸಾಂಸ್ಕೃತಿಕ ಸ್ಪರ್ಧೆಗಳ ಜೊತೆಗೆ ಕ್ರೀಡೆಯಲ್ಲೂ ಮಕ್ಕಳು ಇತರೆ ಶಾಲೆಗಳೊಂದಿಗೆ ಪೈಪೋಟಿ ನಡೆಸುತ್ತಿದ್ದರು. ಇಲ್ಲಿನ ಮಕ್ಕಳು ಜಿಲ್ಲೆ, ಅಂತರ ಜಿಲ್ಲೆ, ರಾಜ್ಯ ಮತ್ತು ಅಂತರ ರಾಜ್ಯ ಮಟ್ಟದಲ್ಲೂ ಸಂಸ್ಥೆಗೆ ಕೀರ್ತಿ ತಂದ ನಾನಾ ಉದಾಹರಣೆಗಳುಂಟು. ಇಂದು ದೇಶದ ಮೂಲೆ ಮೂಲೆಯಲ್ಲೂ ಸಂಸ್ಥೆಯಲ್ಲಿ ಓದಿದ್ದವರು ಉತ್ತಮ ವೃತ್ತಿಯಲ್ಲಿದ್ದಾರೆ. ವೈಧ್ಯರಿದ್ದಾರೆ, ಶಿಕ್ಷಕರಿದ್ದಾರೆ, ಇಂಜಿನಿಯರ್ಸ್, ಪತ್ರಕರ್ತರು, ಉಪನ್ಯಾಸಕರು, ಕಲಾವಿದರು, ಹೋರಾಟಗಾರರು..ಇದ್ದಾರೆ.
ಮುಂದೆ ಒಂದು ದಿನ ಇಲ್ಲಿ ವಿಜ್ಞಾನ, ತಾಂತ್ರಿಕ ಮತ್ತು ವೈಧ್ಯಕೀಯ ಶಿಕ್ಷಣ ದೊರೆಯುವ ಮಟ್ಟಕ್ಕೆ ಬೆಳೆಯುತ್ತದೆ ಎಂದು ಸಮಾಜದ ನಾನಾ ವ್ಯಕ್ತಿಗಳು ಆಶಾವಾದ ವ್ಯಕ್ತ ಪಡಿಸಿದ್ದರು. ಇತರೆ ಶಿಕ್ಷಣ ಸಂಸ್ಥೆಗಳೂ ಸಹ ಇದೇ ನಿಲುವು ತಾಳಿದ್ದರು.

ನೆಲ ಕನಸು, ಹಾಳಾದ ಸಂಸ್ಥೆ:

ಸರ್ವರ ಹಿತದ ಸರ್ವೋದಯ ಉದಯವಾಗಿ ಸುಮಾರು ೩೦ ವರ್ಷಗಳಲ್ಲೇ ಬಹು ಎತ್ತರಕ್ಕೆ ಬೆಳೆದು ಅಷ್ಟೇ ವೇಗವಾಗಿ ಕುಸಿದು ಬಿತ್ತು. ಸಂಸ್ಥಾಪಕರ ಆದರ್ಶಗಳು ಕಾಣೆಯಾದವು. ಅವರ ಕನಸು ನನಸಾಗುವ ಸಮಯದಲ್ಲೆ ನಾನಾ ಅಪಸ್ವರಗಳು ಕೇಳಿ ಬಂದವು. ಸಾತ್ವಿ ಮನೋಭಾವದ ದಾಸಪ್ಪನವರು ಸ್ವಾರ್ಥ ಮತ್ತು ಅವಕಾಶವಾದಿಗಳ ಕುಯುಕ್ತಿಗೆ ಬಲಿಯಾದರು. ಹಾಲಿನಂತೆ ಬೆಳೆಯುತ್ತಿದ್ದ ಸಂಸ್ಥೆಯೊಳಗೆ ಆಗಲೇ ವಿಷಬೀಜ ಬಿತ್ತಿರುವ ವಿಚಾರ ತಿಳಿದು, ಆಕ್ರೋಶಗೊಂಡರು ಕಾಲ ಮಿಂಚಿದ್ದರಿಂದ ಏನೂ ಮಾಡಲಾಗದೇ ಸುಮ್ಮನಾದರು. ತಾವು ಕಟ್ಟಿ ಬೆಳೆಸಿದ ಸಂಸ್ಥೆ ಕಣ್ಣಾ ಮುಂದೆಯೇ ಪರರ ದುಷ್ಟತನದಿಂದ ಹಾಳಾಗಿ ಹೋಗುತ್ತಿದ್ದರೂ ಮೌನವಾಗಿಯೇ ಕಣ್ಣೀರು ಹಾಕಿದರು. ನೊಂದರು, ಬೆಂದರೂ ಯಾರೂ ಅವರ ಸಹಾಯಕ್ಕೆ ಬರಲಿಲ್ಲ.
ತಾವು ಕರೆದುಕೊಂಡು ಬಂದು ಅನ್ನ ಹಾಕಿದ ವ್ಯಕ್ತಿಗಳೇ ದಾಸಪಪ್ನವರ ವಿರುದ್ಧ ತಿರುಗಿ ಬಿದ್ದು ಇಡೀ ಸಂಸ್ಥೆಯ ಹಿಡಿತ ಸಾಧಿಸಿದರು. ಎಲ್ಲಾ ಆಡಳಿತಾಧಿಕಾರ ಪಡೆದು ಶಾಂತಿಯ ನಂದನವನವಾಗಿದ್ದ ಸಂಸ್ಥೆಯ ವಾತಾವರಣದಲ್ಲಿ ಅಸಹನೆ, ದ್ವೇಷ, ಅಸೂಹೆಯ, ಪರಸ್ಪರ ಕಿತ್ತಾಟ, ಗುದ್ದಾಟದ ಗೂಡು ಮಾಡಿದರು. ಮನನೊಂದ ದಾಸಪ್ಪನವರು ಬೆಂಗಳೂರಿನ ಗಾಂ ಧಿಭವನದಲಿ ವಾಸ ಮಾಡಲು ಶುರು ಮಾಡಿದರು. ಇಲ್ಲಿ ಆಡಳಿತ ದಿಕ್ಕು ತಪ್ಪಿತು.

ದಿನೇ ದಿನೇ ಶಾಲೆಯ ಬೆಳೆವಣಿಗೆ ಕುಂಠಿತಗೊಂಡು ಹೀನಾಯ ಸ್ಥಿತಿ ತಲುಪಿತು. ಇಂದು ಸ್ಮಾರಕದಂತೆ ಕಾಣುತ್ತಿದೆ. ಬನ್ನಿ ನೋಡಿ ಇದು ಸತ್ಯ. ಒಂದು ಕಾಲದಲ್ಲಿ ಸಾವಿರಾರು ಮಕ್ಕಳು, ಹತ್ತಾರು ಹಸು ಕರುಗಳು, ಹಾಲು, ಮೊಸರು ಮಜ್ಜಿಗೆಯಿಂದ ನಂದನವನದಂತೆ ಕಣ್ಣು ಕುಕ್ಕುತ್ತಿದ್ದ ಸರ್ವೋದಯ ಸಂಸ್ಥೆ ಈಗ ಹಾಳೂರಿನಂತೆ ಕಾಣೂತ್ತಿದೆ. ಈಗ ಕೇವಲ ಪ್ರೌಢಶಾಲೆ ಮಾತ್ರ ನಡೆಯುತಿದೆ. ಸಾವಿರಾರು ಬದಲಿಗೆ ಅವರ ಸಂಖ್ಯೆ ೪೦-೫೦ಕ್ಕೆ ಇಳಿದಿದೆ. ಇರುವ ಕಟ್ಟಡಗಳು ಉದುರಿ ಹೋಗುತ್ತಿವೆ. ಎಲ್ಲವೂ ಅಳಿದು ಹೋದ ಸ್ಮಾರಕದಂತೆ ಕಾಣುತ್ತಿದೆ.
ಮಧ್ಯೆ ಎರಡು ಗುಂಪುಗಳು ಇರುವ ಕೋಟ್ಯಾಂತರ ರೂಪಾಯಿಯ ಆಸ್ತಿ ಕಬಳಿಸಲು ಇಲ್ಲದ ಸಂಚು ನಡೆಸಿ, ಸಂಸ್ಥೆಯನ್ನು ಗುಡಿಸಿ ಗುಂಡಾಂತರ ಮಾಡಲು ಹವಣಿಸುತ್ತಿವೆ. ಎಲ್ಲಾ ಅಕ್ರಮಗಳ ನಡುವೆ ಬಲಿಷ್ಟಶಕ್ತಿಗಳ ಅಟ್ಟಹಾಸ ಸಂಸ್ಥೆಯ ಮೇಲೆ ಬಿದ್ದಿದೆ. ಈಗಾಗಲೇ ಬೇರೆ ಕಡೆಯಿದ್ದ ಕೋಟ್ಯಾಂತರ ರೂಗಳ ಆಸ್ತಿ ಅಕ್ರಮವಾಗಿ ಮಾರಾಟ ಮಾಡಲಾಗಿದೆ.
ಸರ್ಕಾರ, ಇಲಾಖೆಗಳು ಗೊತ್ತಿದ್ದೂ ಗೊತ್ತಿಲ್ಲದಂತೆ ಇದ್ದರೆ ನಾಡಿನ ದಲಿತವರ್ಗ ಮತ್ತು ಶಿಕ್ಷಿತ ವರ್ಗ ಜಾಣ ಮೌನ ವಹಿಸಿವೆ. ಹಳೆಯ ವಿದ್ಯಾರ್ಥಿಗಳ್ಯಾರೂ ಹಾಳಾದ ತಮ್ಮ ಸಂಸ್ಥೆ ತಿರುಗಿಯೂ ನೋಡಿಲ್ಲ
ಇದನ್ನೆಲ್ಲಾ ಕಣ್ಣಾರೆ ಕಂಡ ದಾಸಪನವರ ಆತ್ಮ ಮಾತ್ರ ಅಲ್ಲೇ ಮೌನವಾಗಿದ್ದುಕೊಂಡು ತನ್ನೊಳಗೆ ನೊಂದು ಕೊಂಡು ಆಕ್ರಂದನ ಮಾಡುತ್ತಾ ಸುತ್ತುತ್ತಾ ಕಂಡ ಕಂಡವರಿಗೆ ಅರಿವಾಗದಂತೆ ಸಂಸ್ಥೆಯ ಉಳಿಸಿ ಎಂದು ಗೋಗರೆಯುತ್ತಿದೆ.. ಪ್ರಲಾಪಿಸುತ್ತಿದೆ..


Thursday, August 2, 2012

ಕೊಳಕಿನಲ್ಲಿ ಕಂಡ ಅಚ್ಚರಿಯ ಬೆಳಕು:




ಅತಂತ್ರ ಮತ್ತು ಅಲೆದಾಟದ ಬದುಕಿನಿಂದ ಹೊರ ಬಂದ ಈ ಮಕ್ಕಳು ಇಂದು ಶಾಲೆಗೆ ಓಗುತ್ತಿವೆ. ಮನದಲ್ಲಿ ಕಟ್ಟಿಕೊಂಡಿದ್ದ ಕನಸುಗಳನ್ನು ನನಸು ಮಾಡುವ ಉತ್ಸಾಹದಲ್ಲಿವೆ. ಈಗ ಕಂದಮ್ಮಗಳ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ. ಇವರು ಅದೃಷ್ಟವಂತ ಮಕ್ಕಳು ಎನಿಸಿದ್ದಾರೆ.



ಹೌದು, ನಿತ್ಯಾ ನರಕದ ಕೂಪದಲ್ಲಿ ನರಳುತ್ತಾ, ಸ್ವಚ್ಚತೆ, ಆರೈಕೆ, ಆರೋಗ್ಯ ಕಾಣದೇ ಬಾಡಿ ಹೋಗುತ್ತಿದ್ದ ಈ ಹೂವುಗಳು ಇಂದು ಚಿಣ್ಣರ ಅಂಗಳದಲ್ಲಿ ನಲಿದಾಡುತ್ತಿವೆ. ಹಿಂದೆ ಎಂದೂ ಶಾಲೆಯ ಬಾಗಿಲು ತುಳಿಯದ ಈ ಅಮಾಯಕ ಮಕ್ಕಳು ಇತರೆ ಮಕ್ಕಳೊಂದಿಗೆ ಅ,ಆ,ಇ,ಈ..ಕಲಿಕೆ ಶುರು ಮಾಡಿವೆ. ಹೊಸದಾಗಿ ಕಾಣುತಿರುವ ಎಲ್ಲವನ್ನೂ ಅಚ್ಚರಿಯಾಗಿ ನೋಡುತ್ತಿವೆ. ನೀರಸ ಮತ್ತು ವ್ಯರ್ಥವಾಗಿದ್ದ ತಮ್ಮ ಬಾಲ್ಯದ ಬದುಕಿಗೆ ಒಂದು ಅರ್ಥ ಹುಡುಕಲು ಹೊರಟಿವೆ.

ತಿಪಟೂರಿನ ಸರಕಾರಿ ಮಾದರಿ ಕನ್ನಡ ಶಾಲೆಯಲ್ಲಿ ನಡೆಯುತ್ತಿರುವ ಚಿಣ್ಣರ ಅಂಗಳವೇ ಈಗ ಅವರಿಗೆ ಅರಮನೆ. ಬಯಲ ಗುಡಾರದಿಂದ ಚಳಿ, ಮಳೆ, ನಾನಾ ಉಪಟಳದ ಬದುಕಿನಿಂದ ಹೊರಬಂದ ಈ ಮಕ್ಕಳು ಈಗ ತಮ್ಮ ಮನದಾಸೆಯನ್ನು ಪೊರೈಸಿಕೊಳ್ಳುವತ್ತಾ, ಹೊಸ ಬದುಕಿನತ್ತಾ ಪಯಣ ಆರಂಭಿಸಿದ್ದಾರೆ. ತಾಲೂಕು ಆಡಳಿತ ಇಂತಹ ಕಲಿಕೆ ವಂಚಿತ ಮಕ್ಕಳನ್ನು ಪತ್ತೆ ಮಾಡಿ, ಅಕ್ಷರ ಕಲಿಸುವ ತಯಾರಿ ನಡೆಸಿದೆ. ತಾಲೂಕಿನಾದ್ಯಂತ ಇರುವ ಅಲೆಮಾರಿ ಮಕ್ಕಳನ್ನು ಗುರ್ತಿಸಿ, ಶಾಲೆಗೆ ಕರೆತರುವ ಸಿದ್ಧತೆಯಲ್ಲಿದೆ. ತಹಸೀಲ್ದಾರ್ ವಿಜಯಕುಮಾರ್, ಬಿಇಒ ಮನಮೋಹನ್, ಪೌರಾಯುಕ್ತ ಡಾ.ವೆಂಕಟೇಶಯ್ಯ, ಡಾ.ರಘು, ಸಂತೋಷ್, ಸತೀಶ್ ಮತ್ತು ಸುರೇಶ್ ಮತ್ತಿತರರು ಈ ಮಹತ್ಕಾರ್ಯದಲ್ಲಿ ಕೈ ಜೋಡಿಸಿದ್ದಾರೆ.


ಮೊದಲಿಗೆ ತಾಲೂಕಿನ ನಾನಾ ಕಡೆ ಸುತ್ತಿ ಅಲೆಮಾರಿಗಳನ್ನು ಗುರ್ತಿಸಿದ ಈ ತಂಡ ಅವರ ಸಮಸ್ಯೆಯನ್ನು ಆಲಿಸುವ ಯತ್ನ ನಡೆಸಿದೆ. ನಂತರ ಅವರಿಗೆ ಸಿಗದ ಸವಲತ್ತುಗಳ ವಿತರಣೆಗೆ ಆಧ್ಯತೆ ನೀಡಿದೆ. ಕನಿಷ್ಟ ಮತದಾರರ ಗುರುತಿನ ಚೀಟಿ ಇಲ್ಲದ ಸ್ಥಿತಿಯನ್ನು ಗಮನಿಸಿ ಆತಂಕ ಪಟ್ಟುಕೊಂಡ ತಹಸೀಲ್ದಾರ್ ಅವರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವುದಕ್ಕೆ ಮೊದಲು ಮುಂದಾಗಿದ್ದಾರೆ. ಈ ಅಲೆಮಾರಿ ಬದುಕಿಗೆ ಅಂತ್ಯ ಆಡಿ, ಶಾಶ್ವತವಾದ ನೆಲೆ ಹುಡುಕಿ ಎಂದು ಮನವೊಲಿಸುವ ಜೊತೆಗೆ ಹತ್ತಿರದ ಗ್ರಾಮ ಪಂಚಾಯಿತಿಗಳಲ್ಲಿ ನೋಂದಾವಣೆ ಮಾಡುವ ಮೂಲಕ ಅವರಿಗೆ ಮಡಿತರ ಚೀಟಿ ನೀಡುವ ವ್ಯವಸ್ಥೆಯನ್ನು ಕಲ್ಪಿಸುವ ಯತ್ನ ನಡೆದಿದೆ. ಶೈಕ್ಷಣಿಕ ಸವಲತ್ತು ಬಳಕೆ ಮಾಡಿಕೊಳ್ಳುವ ಬಗ್ಗೆ ಆವರ ಮನವೊಲಿಸಲಾಗಿದೆ.


ಇದರ ಪರಿಣಾಮ ತಿಪಟೂರು ಪಕ್ಕ ಮಂಜುನಾಥ ನಗರದ ಆಚೆ ಗುಡ್ಡದ ಪಕ್ಕದಲ್ಲಿ ಸುಮಾರು ೧೨ ವರ್ಷಗಳಿಂದ ಬಿಡಾರಗಳಲ್ಲಿ ಬದುಕುತ್ತಿರುವ ಅಲೆಮಾರಿ ಕುಟುಂಬ ಹಾಗೂ ಶಾರದಾನಗರ ರೈಲ್ವೆ ನಿಲ್ದಾಣ ಮುಂದೆ ಬಯಲಿನಲ್ಲಿ ಕೆಲ ತಿಂಗಳಿಂದ ತಾತ್ಕಾಲಿಕ ನೆಲೆಯೂರಿರುವ ಚಿಂದಿ ಆಯುವ, ಕೂದಲು, ಪ್ಲಾಸ್ಟಿಕ್ ಸಾಮಗ್ರಿ ಮಾರಾಟಗಾರರ ಮಕ್ಕಳು ಚಿಣ್ಣರ ಅಂಗಳಕ್ಕೆ ಬಂದು ನಲಿಯುತ್ತಿದ್ದಾರೆ.

ಕೊಳಕಿನಿಂದ ಬೆಳಕಿಗೆ:

ಮಂಜುನಾಥ ನಗರ ಸಮೀಪದ ಬಿಡಾರದಲ್ಲಿ ಬದುಕುತಿದ್ದ ಮಕ್ಕಳ ಸ್ಥಿತಿ ಶೋಚನೀಯವಾಗಿತ್ತು. ಪತ್ರಿಕೆಯಲ್ಲಿ ವಿವರವಾದ ವರದಿ ಬಂದಿತ್ತು. ಕೆಲವೇ ದಿನಗಳ ಹಿಂದೆ ಈ ಅಲೆಮಾರಿ ಮಕ್ಕಳು ತಮ್ಮ ಪೋಷಕರ ಜೊತೆಯಲ್ಲಿ ಬಿಸಿಲು, ಮಳೆಯಲ್ಲಿ ಹಳ್ಳಿಹಳ್ಳಿ ಸುತ್ತಿ ಕೂದಲು, ಪ್ಲಾಸ್ಟಿಕ್ ಇತರೆ ವಸ್ತುಗಳನ್ನು ಮಾರುವ ನರಕದ ಬದುಕಿನಲ್ಲಿ ಕೊಳೆಯುತ್ತಿದ್ದರು. ಧೂಳು ಹಿಡಿದು ಬಾಚದ ಉದ್ದ ಕೂದಲು, ಕೊಳಕು ಬಟ್ಟೆ ಅದರ ದುರ್ವಾಸನೆಯ ಅರಿವು ಸಹ ಅವರಿಗಿರಲಿಲ್ಲ. ನಾಗರಿಕ ಪ್ರಪಂಚದಿಂದ ದೂರ ಉಳಿದು ಇದೇ ತಮ್ಮ ಬದುಕು, ಇದೇ ಸ್ವರ್ಗ ಎಂದು ಕೊಂಡಿದ್ದರೂ ಶಾಲೆಗೆ ಹೋಗುವ ಮಕ್ಕಳನ್ನು ಕಂಡಾಗ ತಾವೂ ಅವರಂತೆ ಅಂದವಾಗಿ ಸಮವಸ್ತ್ರ ಧರಿಸಿ, ಪಾಠ ಹೇಳಿಸಿಕೊಳ್ಳಬೇಕು ಎಂದು ಕನಸುತ್ತಿದ್ದರು. ಆದರೂ ತಮಗೆ ಅರಿವಿಲ್ಲದಂತೆ ಪೋಷಕರ ಜತೆ ತಾವೂ ಅಲೆದಾಡಿ ಬಾಲ್ಯವನ್ನು ದುಸ್ಥಿತಿಯಲ್ಲಿ ಕಳೆಯುತ್ತಿದ್ದರು.

ಆದರೆ ಇಂದು ಅವರ ಸ್ಥಿತಿ ಬದಲಾಗಿದೆ. ಈ ಮಕ್ಕಳು ಈಗ ಚಿಣ್ಣರ ಅಂಗಳ ಸೇರಿ ಎಲ್ಲರ ಜೊತೆ ನಲಿದಾಡುತ್ತಾ, ಅತ್ಯಂತ ಸಂತೋಷ ವ್ಯಕ್ತ ಪಡಿಸಿದ್ದಾರೆ. ಆರೋಗ್ಯ, ಸ್ವಚ್ಛತೆಯ ಅರಿವು ಅವರಿಗಾಗಿದೆ. ಇಲ್ಲಿನ ಬಿಇಒ ಕಚೇರಿ ಹಿಂದಿನ ಮಾದರಿ ಕನ್ನಡ ಶಾಲೆಯಲ್ಲಿ ಏಪ್ರಿಲ್ ೫ರಿಂದ ನಡೆಯುತ್ತಿರುವ ಚಿಣ್ಣರ ಅಂಗಳದ ಆಟಪಾಟಗಳಲ್ಲಿ ತೊಡಗಿರುವ ಈ ಮಕ್ಕಳು ತಮ್ಮ ಭವಿಷ್ಯದ ಕನಸು ಕಾಣಲು ಆರಂಭಸಿದ್ದಾರೆ. ಶಾಲೆಗೆ ಸೇರಿ ಓದಬೇಕೆಂಬ ಆಸೆ ಮನದಲ್ಲಿ ಚಿಗುರೊಡೆದಿದೆ.

ಲಕ್ಷ್ಮೀ ಎಂಬ ೧೦ ವರ್ಷದ ಹುಡುಗಿಯಂತೂ ತಾನು ಓದಿ ಲಾಯರ್ ಆಗುತ್ತೇನೆಂದು ಕಣ್ಣರಳಿಸುತ್ತಾಳೆ. ಇದೇ ಕ್ಯಾಂಪಿನ ಮಕ್ಕಳಾದ ಅಣ್ಣಪ್ಪ (೯), ಕರಿಯಪ್ಪ(೮), ದಿನೇಶ್(೭) ಸೇರಿದಂತೆ ಸುಮಾರು ೧೨ಕ್ಕೂ ಹೆಚ್ಚು ಮಕ್ಕಳು ತಾವು ಇನ್ನು ಮುಂದೆ ಶಾಲೆಗೆ ಹೋಗುತ್ತೇವೆ ಎನ್ನುತ್ತಾರೆ. ಎಲ್ಲರೂ ಚಿಣ್ಣರ ಅಂಗಳದ ಚಟುವಟಿಕೆಗಳಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳುತ್ತಿದ್ದಾರೆ. ಮಧ್ಯಾಹ್ನ ಇವರಿಗೆ ಒಳ್ಳೆಯ ಊಟದ ವ್ಯವಸ್ಥೆಯಿದೆ. ಬಟ್ಟೆ ಮತ್ತು ಪುಸ್ತಕದ ವ್ಯವಸ್ಥೆ ಮಾಡಲಾಗಿದೆ. ಚಿಣ್ಣರ ಅಂಗಳ ಮುಗಿಸಿದ ಪ್ರಮಾಣ ಪತ್ರ ನೀಡಿ ಅವರು ನೆಲೆಯೂರುವ ಸ್ಥಳಗಳಲ್ಲಿ ಅವರವರ ವಯಸ್ಸಿಗೆ ಅನುಗುಣವಾಗಿ ಪ್ರಾಥಮಿಕ ತರಗತಿಗಳಿಗೆ ಸೇರಿಸುವ ಉದ್ದೇಶವನ್ನು ಶಿಕ್ಷಣ ಇಲಾಖೆ ಹೊಂದಿದೆ. ಅದಕ್ಕೆ ಬೇಕಾಗುವ ಸವಲತ್ತುಗಳನ್ನು ಒದಗಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಮಕ್ಕಳಿಗೆ ಶಿಕ್ಷಕ ಜಿ.ಟಿ. ಲಕ್ಷ್ಮಯ್ಯ, ಸ್ವಯಂ ಸೇವಕರಾದ ರತ್ನಮ್ಮ, ಹನುಮಂತಪ್ಪ ಆಟಪಾಟ ಹೇಳಿಕೊಡುತ್ತಿದ್ದಾರೆ.


ಶಾಲೆ ಬಿಟ್ಟ ನಗರದ ಸುಮಾರು ೨೫ಕ್ಕೂ ಹೆಚ್ಚು ಮಕ್ಕಳನ್ನು ಚಿಣ್ಣರ ಅಂಗಳಕ್ಕೆ ಸೇರಿಸುವ ಉದ್ದೇಶ ಶಿಕ್ಷಣ ಇಲಾಖೆಗಿತ್ತು. ಆದರೆ ಪೋಷಕರು ಸಹಕಾರ ತೋರಿಲ್ಲ. ಅವರ ಮನವೊಲಿಕೆ ಯತ್ನ ಸಮಾಜದಿಂದ ಆಗಬೇಕಿದೆ. ಬೆಳೆಯುವ ಮಕ್ಕಳ ಭವಿಷ್ಯ ನಾಶ ಮಾಡುವ ಅಧಿಕಾರ ಪೋಷಕರಿಗಿಲ್ಲ. ಮಕ್ಕಳ ಹಕ್ಕು ಇಲ್ಲಿ ಮುಖ್ಯ. ಇಂತಹ ಪ್ರಯತ್ನದಿಂದ ಬೀದಿಗೆ ಬೀಳುವ ಲಕ್ಷಾಂತರ ಮಕ್ಕಳು ಉತ್ತಮ ಭವಿಷ್ಯ ರೂಪಿಸಿಕೊಳ್ಳುವತ್ತಾ ಹೋಗಬಹುದು.





ಯಕನಾತಿ ಯಲ್ಲವ್ವಾ ಚೌಡ್ಕೆ ಚಾಮುಂಡೆವ್ವ




‘ಯಕನಾತಿ ಯಲ್ಲವ್ವಾ ಚೌಡ್ಕೆ ಚಾಮುಂಡೆವ್ವ, ರಕ್ಕಸರ ಸೊಕ್ಕ ಮುರಿದ ತಾಯೆ ಕೊಲ್ಲಾಪುರದವ್ವ, ಭಕುತೀಲಿ ಬಾಗುವೆ-ವರವನ್ನೇ ಬೇಡುವೆ, ಶಕುತೀಯ ಕೊಟ್ಟು ಕಾಪಾಡೆ, ತಾಯೆ....ಕಾಪಾಡೆ-




ವಂಶಪಾರಂಪರ‍್ಯವಾಗಿ ಬಂದ ಚೌಡಿಕೆ ಮೇಳದ ಕಲೆಯಲ್ಲೆ ತನ್ನ ಬದುಕನ್ನು ಕಂಡು ಕೊಂಡ ಯಲ್ಲಯ್ಯ ತನ್ನ ಶ್ರಮಕ್ಕೆ ತಿಚೋರಿ ತುಂಬುವಷ್ಟು ಪ್ರಶಸ್ತಿ ಮತ್ತು ಸನ್ಮಾನ ಪತ್ರ ಪಡೆದು ಹಳ್ಳಿಯಿಂದ ಡಿಲ್ಲಿಯವರೆಗೂ ಹೆಸರು ಮಾಡಿದ್ದರೂ ಸರಕಾರದ ಅವಕೃಪೆಗೆ ಒಳಗಾಗಿರುವುದು ವಿಷಾಧನೀಯ. ದರ್ಬಲ ಮತ್ತು ಆರ್ಥಿಕವಾಗಿ ಹಿನ್ನಡೆಯುಳ್ಳ ಎಂತಹ ಕಲಾವಿದರಾದರೂ ಇದೇ ಗತಿ.

ತಿಪಟೂರು ತಾಲೂಕಿನ ಬಜಗೂರು ಗ್ರಾಮ ರಾಷ್ಟ್ರಮಟ್ಟದಲ್ಲಿ ಗುರ್ತಿಸಿಕೊಳ್ಳುತ್ತದೆ ಎಂದರೆ ಅದಕ್ಕೆ ಕಾರಣ ನಮ್ಮ ಚೌಡಿಕೆ ಮೇಳದ ಯಲ್ಲಯ್ಯ ಎಂಬುದನ್ನು ಜನ ಬಹಿರಂಗವಾಗಿ ಒಪ್ಪಿಕೊಳ್ಳುತ್ತಾರೆ. ಚೌಡಿಕೆ ಗುಡಿಕಟ್ಟಿನ ಬಡ ದಲಿತ ಕುಟುಂಬದಲ್ಲಿ ಜನಿಸಿದ ಬಜಗೂರಿನ ಚೌಡಿಕೆ ಯಲ್ಲಯ್ಯನಿಗೆ ಈಗ ೬೫, ಆದರೂ ಅವರು ಜಾನಪದ ಕಲಾ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಅಪಾರ.

ಮುತ್ತಜ್ಜ ದೊಡ್ಡಯಲ್ಲಯ್ಯ, ಅಜ್ಜ ರಾಮಯ್ಯ, ತಂದೆ ಪರಶುರಾಮಯ್ಯ ಎಲ್ಲರೂ ಚೌಡಿಕೆ ಕಲಾವಿದರೇ. ರೇಣುಕಾದೇವಿ ಆರಾಧಕರಾದ ಇವರ ಕುಟುಂಬದಲ್ಲಿ ಚೌಡಿಕೆ ಮೇಳ ಪಾರಂಪರಿಕವಾಗಿ ಬಂದಿದೆ. ಬಾಲ್ಯದಿಂದಲೂ ಚೌಡಿಕೆಯ ನಾದ, ಹಾಡು ಕೇಳುತ್ತಲೇ ಬೆಳೆದ ಯಲ್ಲಯ್ಯನಿಗೆ ಮುಂದೆ ಜೀವನೋಪಾಯದ ಜೊತೆಗೆ ಹೆಸರು ಮತ್ತು ಕೀರ್ತಿ ತಂದಿದ್ದು ಇದೇ ಕಲೆಯೇ. ಸಾಧನೆಯ ಆ ದಾರಿ ಯಶೋಗಾಥೆಯೇ ಸರಿ.

ಶ್ರದ್ಧಾಭಕ್ತಿಯ ಹಾಡಿನೊಂದಿಗೆ ಚೌಡಿಕೆ ಆರಂಭಿಸುವ ಯಲ್ಲಯ್ಯ ತನ್ನ ಬದುಕಿಗೂ ಸಹ ಈ ಜಾನಪದ ಪ್ರಕಾರದಿಂದ ಶಕ್ತಿ ತುಂಬಿಕೊಂಡು ಧನ್ಯತೆ ಕಂಡಿದ್ದಾರೆ. ರೇಡಿಯೋದಲ್ಲಿ ಯಾವಾಗಲಾದರೂ ಚೌಡಿಕೆ ಮೇಳ ಕೇಳಿದರೆ ಇದು ಬಜಗೂರು ಚೌಡಿಕೆ ಯಲ್ಲಯ್ಯನದೇ ಇರಬೇಕೆನ್ನುವಷ್ಟರ ಮಟ್ಟಿಗೆ ಅವರು ಆ ಜಾನಪದ ಪ್ರಕಾರದಲ್ಲಿ ಛಾಪು ಮೂಡಿಸಿದ ಅಪ್ರತಿಮ ಕಲಾವಿದ. ಜಾನಪದ ಪ್ರಕಾರಗಳು ಸೊರಗಿರುವ ಈ ಆಧುನಿಕ ಕಾಲದಲ್ಲೂ ಯಲ್ಲಯ್ಯನ ಮಕ್ಕಳಾದ ಜಗದೀಶ್, ಪ್ರಕಾಶ್, ಬಾಬು, ರವೀಶ್ ಅವರಲ್ಲಿ ಮೊದಲ ಮೂವರು ಅಪ್ಪನ ದಾರಿಯನ್ನೇ ತುಳಿದು ವಂಶದ ಕಲೆಯನ್ನು ಮುಂದುವರೆಸುತ್ತಿದ್ದಾರೆ. ಯಲ್ಲಯ್ಯ ಚೌಡಿಕೆ ಮೇಳ ಪ್ರದರ್ಶನಕ್ಕೆ ತನ್ನ ಮೂವರು ಮಕ್ಕಳನ್ನೇ ಜತೆಕಲಾವಿದರನ್ನಾಗಿ ಬಳಸಿಕೊಂಡು ಕಲಿಸಿ, ಕಲೆಗೆ ಗೌರವ ನೀಡುವ ಜೊತೆಗೆ ಅದರ ಸಂರಕ್ಷಣೆ, ಉಳಿವಿಗೆ ಕಾರಣರಾಗಿದ್ದಾರೆ.

ಬದುಕಿನ ಮಾರ್ಗ ಕಲೆ:

ಅಪರೂಪದ ಎನಿಸುವಂತ ಕಲಾವಿದರ ವಂಶಕ್ಕೆ ಬೆಳೆದು ತಿನ್ನಲು ಅಂಗೈಯಗಲ ಭೂಮಿ ಇಲ್ಲದಿರುವುದು ದುರದುಷ್ಟಕರ. ಹಿರಿಯರಿಂದ ಇಂದಿನ ಪೀಳಿಗೆಯವರೆಗೆ ಹೊಲಿದು ಬಂದದ್ದು ಚೌಡಿಕೆ ಮೇಳ ಮಾತ್ರ. ಇದೇ ಜೀವನ ಕೂಡ. ಸಂಪ್ರದಾಯ ಪ್ರಕಾರ ರೇಣುಕಾದೇವಿ ಭಕ್ತರ ಮನೆಗಳ ನಿಗದಿತ ಪೂಜೆ ನೆರವೇರಿಸುತ್ತಾ ವಾರ್ಷಿಕ ಪಡಿ ಆಧಾರದಲ್ಲಿ ಜೀವನ ಸಾಗಿಸುತ್ತಿದ್ದ ಇವರಿಗೆ ಕಾಲಕ್ರಮೇಣ ಕಲೆಯೇ ಕೈಹಿಡಿದಿದೆ.

ಅಂದಿನ ಬಡತನ ಮತ್ತು ಆರ್ಥಿಕ ದುಸ್ಥಿತಿ ಕಾರಣದಿಂದ ಯಲ್ಲಯ್ಯ ಕೂಲಿ ಮಠದಲ್ಲಿ ೩ನೇ ತರಗತಿ ಕಲಿತದ್ದೇ ಹೆಚ್ಚು. ಮುಂದೆ ತನ್ನ ಅನುಭವದಿಂದ ಕನ್ನಡ ಓದು ಬರಹ ಕಲಿತಿದ್ದಾರೆ. ಹಿರಿತಲೆಗಳಿಂದ ಬಂದ ಚೌಡಿಕೆ ಮೇಳಕ್ಕೆ ಮೌಖಿಕ ಸಾಹಿತ್ಯವೇ ಸಾಕೆಂದು ನಂಬಿದ ವ್ಯಕ್ತಿ ಅವರು. ಸುಮಾರು ೧೦ಕ್ಕೂ ಹೆಚ್ಚು ಕಥೆಗಳು ಇವರ ಸ್ಮೃತಿಪಟಲದಲ್ಲಿದ್ದು ಮೇಳಕ್ಕೆ ನಿಂತು ಪ್ರೇಕ್ಷಕರ ಬೇಡಿಕೆಯ ಕಥೆಯನ್ನು ನಿರಾಯಾಸವಾಗಿ ನಡೆಸಿಕೊಡುವ ಕೌಶಲ್ಯಗಳಿಸಿದ್ದಾರೆ. ಹಾಗಾಗಿ ಜಾನಪದ ವಿಧ್ವಾಂಸ ಪಿ.ಕೆ. ರಾಜಶೇಖರ್ ಅವರು ಯಲ್ಲಯ್ಯನಿಂದ ಹೊರ ಬಂದ ಕಥಾ ಸಾರವನ್ನು ‘ಚೌಡಿಕೆ ಕಾವ್ಯ ಪುಸ್ತಕದ ಮೂಲಕ ದಾಖಲಿಸಿದ್ದಾರೆ.

ಸಾಧನೆ ಮತ್ತು ಖ್ಯಾತಿ:

ಈವರೆಗೆ ಲೆಕ್ಕವಿಲ್ಲದಷ್ಟು ಪ್ರದರ್ಶನಗಳನ್ನು ಕೊಟ್ಟಿರುವ ಯಲ್ಲಯ್ಯನ ಕಲಾಸಾಮಾರ್ಥ್ಯದ ಎದುರಿಗೆ ಸಾಟಿ ಮಾಡುವವರೂ ಇಲ್ಲ. ರಾಜೀವ್‌ಗಾಂಧಿ ಪ್ರಧಾನಿಯಾಗಿದ್ದಾಗ ದೆಹಲಿಯಲ್ಲಿ ನಡೆದಿದ್ದ ಅಂತಾರಾಷ್ಟ್ರೀಯ ಸಮ್ಮೇಳನವೊಂದರಲ್ಲಿ ಯಲ್ಲಯ್ಯ ಪ್ರದರ್ಶನ ನೀಡಿ, ಮೆಚ್ಚಿಗೆ ಪಡೆದಿದ್ದಾರೆ. ೧೯೯೬ರಲ್ಲಿ ಭಾರತೀಯ ಸಂಸ್ಕೃತಿ ಅಧ್ಯಯನ ಮತ್ತು ಸಂಶೋಧನಾ ಪ್ರತಿಷ್ಠಾನ, ಕರ್ನಾಟಕ ಜಾನಪದ ಪರಿಷತ್, ಜಾನಪದ ಲೋಕದಿಂದ ಪ್ರದರ್ಶನಗಳನ್ನು ನೀಡಿದ್ದಾರೆ. ೧೯೯೭ರಲ್ಲಿ ಮೈಸೂರು ದಸರಾದಲ್ಲಿ ಪ್ರದರ್ಶನ ನೀಡಿ ಅಭಿನಂದನಾ ಪತ್ರ ಪಡೆದಿದ್ದಾರೆ. ನಾನಾ ಜಾನಪದ ಮೇಳಗಳಲ್ಲಿ ತಮ್ಮ ಪ್ರತಿಭೆ ಮೆರೆದಿದ್ದಾರೆ. ಸಾಕ್ಷರತಾ ಆಂದೋಲನದಲ್ಲಿ ಪಾಲ್ಗೊಂಡಿರುವುದು ಇವರ ಹೆಗ್ಗಳಿಕೆ. ದೂರದರ್ಶನದಲ್ಲಿ ಪ್ರಸಾರಗೊಂಡ ನಾಗೇಗೌಡರ ಜಾನಪದ ಸರಣಿ ‘ಸಿರಿಗಂಧದಲ್ಲಿ ಇವರ ಬಗ್ಗೆ ಬಿತ್ತರವಾಗಿದೆ. ಆಕಾಶವಾಣಿಯಲ್ಲಿ ಇವರ ಚೌಡಿಕೆ ಮೇಳ ಆಗಾಗ್ಗೆ ಬಿತ್ತರವಾಗುತ್ತಿದೆ.

ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಇವರ ದೀರ್ಘಾವಧಿಯ ಸಾಧನೆ ಗುರ್ತಿಸಿ ೨೦೦೫ರಲ್ಲಿ ಪ್ರಶಸ್ತಿ ನೀಡಿ, ಗೌರವಿಸಿದೆ. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗಳು ಸಿಕ್ಕಿವೆ. ಆದರೆ ನಾಡೋಜ ಗೌರವ ಪ್ರಶಸ್ತಿ ನೀಡುವ ಹಂಪಿ ವಿವಿಗಾಗಲಿ, ಸರಕಾರದ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಗಾಗಲಿ ಈ ಜಾನಪದ ಪ್ರತಿಭೆ ಕಾಣದಿರುವುದು ವಿಷಾಧನೀಯ.

ಕಲಾಸೇವೆ ಮತ್ತು ಸಾಧನೆ ಬ್ಗಗೆ ಸಂತೃಪ್ತಿ ಹೊಂದಿರುವ ಯಲ್ಲಯ್ಯನಿಗೆ ಸರಕಾರದ ಧೋರಣೆ ಬಗ್ಗೆ ಬೇಸರ ಮತ್ತು ನೋವು ಇದೆ. ಕಂದಾಯ ಇಲಾಖೆಯಿಂದ ೧೯೬೮ರಲ್ಲಿ ಮಂಜೂರಾಗಿದ್ದ ೧.೩೪ ಎಕರೆ ಜಮೀನನ್ನು ಇವರ ಹೆಸರಿಗೆ ಖಾತೆ ಮಾಡಿಸಿಕೊಳ್ಳಲು ಸಾಧ್ಯವಾಗಿಲ್ಲ. ನಶಿಸಿ ಹೋಗುತ್ತಿರುವ ಜಾನಪದ ಕಲೆಗಳು ಪುಸ್ತಕ ಅಥವಾ ಸಿಡಿ ರೂಪದಲ್ಲಿ ದಾಖಲಾಗುತ್ತಿರುವ ಸಮಯದಲ್ಲಿ ಛಲತೊಟ್ಟು ಮುಂದಿನ ಪೀಳಿಗೆಗೆ ಉಳಿಸುವ ಈ ಕುಟುಂಬ ಆ ಕಲೆಗಾಗಿಯೇ ಜೀವನ ಮುಡುಪಿಟ್ಟಿದೆ. ಚೌಡಿಕೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ ಎನ್ನುವ ಕುಟುಂಬಕ್ಕೆ ಸರಕಾರ ಮತ್ತು ಸಮಾಜ ತಿರುಗಿ ನೋಡುವುದೇ ?. ಕಲಾವಿದಳ ಬಾಳು ಬೆಳಗುವುದೇ?







ಶತಾಯುಷಿ ಮತ್ತು ಅಪರೂಪದ ರಾಜಕಾರಣಿ: ಟಿ.ಜಿ.ತಿಮ್ಮೇಗೌಡರು.




ತುಮಕೂರು ಜಿಲ್ಲೆಯಲ್ಲಿ ಕಲ್ಪತರು ನಾಡು ಎಂದೇ ಪ್ರಸಿದ್ಧವಾದ ತಿಪಟೂರು ತಾಲೂಕಿನ ಮಟ್ಟಿಗೆ ಒಬ್ಬ ಅಪರೂಪದ ಮತ್ತು ಮಾದರಿ ರಾಜಕಾರಣಿ ಎಂದರೆ ಅದು ಟಿ.ಜಿ.ತಿಮ್ಮೇಗೌಡರು ಮಾತ್ರ.

ಕಳೆದ ೬೦ ವರ್ಷದ ರಾಜಕೀಯ ವ್ಯವಸ್ಥೆಯಲ್ಲಿ ಇಂತಹ ರಾಜಕಾರಣಿಯನ್ನು ಜನತೆ ನೋಡೇ ಇಲ್ಲ. ಒಬ್ಬ ರಾಜಕಾರಣಿ ಹೇಗಿರಬೇಕು. ಅವನ ಕರ್ತವ್ಯ ಮತ್ತು ಸಮಾಜಕ್ಕೆ ಅವನ ಕೊಡುಗೆ ಏನು. ಆಚಾರ, ವಿಚಾರ, ನಡೆ ನುಡಿ ಹೇಗಿರಬೇಕು ಎಂಬ ನಾನಾ ಅಂಶಗಳಿಗೆ ಇಡೀ ರಾಜ್ಯಕ್ಕೆ ಮಾಜಿ ಶಾಸಕ ಟಿ.ಜಿ.ತಿಮೇಗೌಡರು ನಿಜಕ್ಕೂ ಇಂದು ಮಾದರಿ.
ರಾಜ್ಯ ವಿಧಾನ ಸಭೆಗೆ ೬೦ ವರ್ಷದ ಸಂಭ್ರಮ. ಹಾಗೆಯೇ ತಾಲೂಕಿನ ಮೊದಲ ಶಾಸಕ ೧೦೩ ವರ್ಷದ ಶತಾಯುಷಿ ಟಿ.ಜಿ.ತಿಮ್ಮೆಗೌಡರಿಗೂ ಸ್ವಾತಂತ್ರ್ಯದ ನಂತರ ತಾಲೂಕು ಆಡಳಿತದಲ್ಲಿ ಅಧಿಕಾರ ನಡೆಸಿದ ನೆನಪಿನ ೬೦ರ ಸಂಭ್ರಮ. ಇವರು ಇಂದಿನ ರಾಜಕಾರಣಿಗಳಿಗೆ ಮತ್ತು ಯುವಜನತೆಗೆ ಸ್ಪೂರ್ತಿ ಕೂಡ.
ವಿಧಾನ ಸಭೆಗೆ ೬೦ ವರ್ಷದ ತುಂಬಿರುವ ಕಾರಣ ಸರಕಾರ ಜೂನ್ ೧೮ರ ವೇಳೆಗೆ ಒಂದು ಸಮಾರಂಭ ಹಮ್ಮಿಕೊಂಡಿದ್ದು ಅಂದು ತಿಮ್ಮೇಗೌಡರನ್ನು ಗೌರವಿಸುವ ಏರ್ಪಾಡು ಮಾಡಿದೆ. ಹಾಗಾಗಿ ಅವರಿಗೆ ಗೌರವ ಸೂಚಕವಾಗಿ ಈ ಲೇಖನ.

ವಯಸ್ಸು ನೂರು ದಾಟಿದ್ದರೂ ಯುವಕರಂತೆ ಓಡಾಡಿಕೊಂಡಿರುವ ತಿಮ್ಮೇಗೌಡರು ಸ್ವಾತಂತ್ರ್ಯ ನಂತರ ರಚನೆಗೊಂಡ ರಾಜ್ಯದ ಮೊದಲ ವಿಧಾನ ಸಭೆಯ ತಾಲೂಕಿನ ಪ್ರಥಮ ಶಾಸಕರೂ ಆಗಿದ್ದಾರೆ. ೧೯೪೭ರಲ್ಲಿ ಮೈಸೂರು ರಾಜರ ಆಡಳಿತದ ಮೈಸೂರು ರಾಜ್ಯದ ಪ್ರಜಾ ಪ್ರತಿನಿಧಿ ಸಭೆಯ (ಎಂ.ಆರ್.ಎ) ಸದಸ್ಯರಾಗಿ ೧೯೫೨ರವರೆಗೂ ಸೇವೆ ಮಾಡಿದ್ದ ಇವರು ೧೯೫೨ರಲ್ಲಿ ರಾಜ್ಯದಲ್ಲಿ ನಡೆದ ಪ್ರಥಮ ಸಾರ್ವತ್ರಿಕ ವಿಧಾನ ಸಭಾ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಗೊಂಡು ೧೯೫೭ರವರೆಗೂ ಶಾಸಕರಾಗಿ ಕೆಲಸ ಮಾಡಿದ್ದಾರೆ. ನಂತರ ೧೯೫೭ರಲ್ಲಿ ನಡೆದ ಎರಡನೇ ವಿಧಾನ ಸಭಾ ಚುನಾವಣೆಯಲ್ಲಿ ಜಾತಿ ರಾಜಕಾರಣದಿಂದ ಎರಡನೇ ಬಾರಿಗೆ ಕಡಿಮೆ ಅಂತರದಿಂದ ಪರಾಭವಗೊಂಡ ಅವರು ಮತ್ತೆಂದೂ ಚುನಾವಣೆ ಕಡೆಗೆ ಮುಖ ಮಾಡಿಲ್ಲ.
ಹೆಚ್ಚು ಮಾತನಾಡದ ಯಾರಿಗೂ ತೊಂದರೆ ಕೊಡದ ತಿಮ್ಮೇಗೌಡರು ಇಂದು ತಾಲೂಕಿನಲ್ಲಿ ಪ್ರಾಮಾಣಿಕ ರಾಜಕಾರಣಿ, ಉತ್ತಮ ವರ್ತಕ, ಗೌರವಯುತ ಪತಿ, ಆದರ್ಶ ತಂದೆ, ಮಾದರಿ ತಾತಾ ಎನಿಸಿಕೊಂಡಿದ್ದು ತಮ್ಮ ಸಜ್ಜನಿಖೆ, ನಡೆ ನುಡಿಯಲ್ಲಿ ಉತ್ತಮ ಚಾರಿತ್ರ್ಯವನ್ನು ಗಳಿಸಿದ್ದಾರೆ. ಅಸೂಹೆ, ಅತೃಪ್ತಿ ಮತ್ತು ಸ್ವಾರ್ಥದ ಹತ್ತಿರವೂ ಸುಳಿಯದ ಅವರು ಸರಳವಾಗಿ ಗಾಂಧಿ ಮಾರ್ಗದಲ್ಲಿ ಬದುಕು ಸಾಗಿಸುತ್ತಾ ತೃಪ್ತಿ ಮತ್ತು ಸಂತೋಷ ಕಂಡವರು. ಇವರ ಸ್ವಂತ ಊರು ತಾಲೂಕಿನ ತಿಮ್ಲಾಪುರ ಗ್ರಾಮ, ತಂದೆ ಗಿರಿಗೌಡರ ಮೂವರು ಮಕ್ಕಳಲ್ಲಿ ಮೂರನೆವರು. ನಗರದ ಸಮೀಪದ ಗ್ರಾಮದ ಗೌರಮ್ಮ ಎಂಬುವರೊಂದಿಗೆ ವಿವಾಹವಾದ ಇವರಿಗೆ ೭ ಮಕ್ಕಳು, ೫ ಹೆಣ್ಣು, ೨ ಗಂಡು. ಗಂಡು ಮಕ್ಕಳಲ್ಲಿ ನಿರಂಜನ್ (ವರ್ತಕ) ಮತ್ತು ಕುಮಾರ್( ಕೃಷಿ) ಈಗ ೭ ಜನ ಮೊಮ್ಮಕ್ಕಳಿದ್ದು ತುಂಬೂ ಕುಟುಂಬ.

ದಿವಾನ್ ಮಾಧವರಾವ್ ಜೊತೆ ಸೇವೆ:
೧೯೪೭ರಿಂದ ೧೯೫೨ ರವರೆಗೆ ಮೈಸೂರು ರಾಜ್ಯದ ಪ್ರಜಾಪ್ರತಿನಿಧಿ ಸಭೆಯ ಸದಸ್ಯರಾಗಿ ಆಯ್ಕೆಗೊಂಡ ಸಂದರ್ಭದಲ್ಲಿ ಅಂದು ದಿವಾನರಾಗಿದ್ದ ಆರ್ಕಾಟ್ ರಾಮಸ್ವಾಮಿ ಮತ್ತು ಮಾಧವರಾವ್ ಜೊತೆ ಕೆಲಸ ಮಾಡಿದ್ದಾರೆ.
ರಾಜ್ಯದ ಮೊದಲ ವಿಧಾನನಸಭೆಯ ಮುಖ್ಯಮಂತ್ರಿ ಕೆಂಗಲ್ ಹನಮಂತಯ್ಯ ಇದ್ದಾಗ ಇವರು ಅವರೊಂದಿಗೆ ಆತ್ಮೀಯವಾಗಿದ್ದರು. ವಿಧಾನ ಸೌಧದ ನಿರ್ಮಾಣಕ್ಕೆ ಶಾಸಕರಾಗಿದ್ದುಕೊಂಡು ಅವರ ಜೊತೆ ಕೈ ಜೋಡಿಸಿದ್ದರು. ನಂತರ ಮುಖ್ಯ ಮಂತ್ರಿಯಾಗಿದ್ದ ಕಡಿದಾಳು ಮಂಜಪ್ಪನವರು ತಿಮ್ಮೇಗೌಡರ ಮನಯ ಗೃಹಪ್ರವೇಶಕ್ಕೆ ಬಂದು ಹರಸಿದ್ದರು. ಅಂದಿನ ರಾಜಕೀಯ ಮುತ್ಸದ್ದಿ ನಿಜಲಿಂಗಪ್ಪ ಅವರೊಂದಿಗೆ ವಿಶ್ವಾಸ ಬೆಳೆಸಕೊಂಡಿದ್ದ ಅವರು ತಿಪಟೂರಿನಲ್ಲಿ ಸಾರ್ವಜುನಿಕ ಆಸ್ಪತ್ರೆ ಮತ್ತು ತಿಪಟೂರು ಹೊನ್ನವಳ್ಳಿಗೆ ರಸ್ತೆ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆಯಿಂದ ಮುಂಜೂರಾತಿ ಪಡೆದು ಚಾಲನೆ ಕೊಟ್ಟದ್ದರು.
ಕಡದಾಳು ಮಂಜಪ್ಪ, ನಿಜಲಿಂಗಪ್ಪ, ಡಾ.ಪಟ್ಟಾಭಿರಾಮಯ್ಯ, ಹೆಚ್.ಎಂ.ಚನ್ನಬಸಪ್ಪ, ವೀರಣ್ಣಗೌಡ, ಸಿದ್ದವೀರಪ್ಪ, ತಾಳಕೆರೆ ಸುಬ್ರಮಣ್ಯಂ ತಿಮ್ಮೇಗೌಡರ ಆತ್ಮೀಯರು ಜೊತೆಗೆ ತಿಪಟೂರಿನ ವಿಎಲ್‌ಶಿವಪ್ಪ, ಎಂ.ಆರ್.ರಂಗಪ್ಪ, ಎಂ.ಚನ್ನಬಸಪ್ಪ ಮತ್ತಿತರರು ಗೆಳೆಯರಾಗಿದ್ದುಕೊಂಡು ರಾಜಕಾರಣದಲ್ಲಿ ಸಹಕಾರ ನೀಡಿದ್ದರು.

೧೦೩ ವರ್ಷದ ಚಿರ ಯುವಕ:
ತಿಮ್ಮೇಗೌಡರಿಗೆ ೧೦೩ ವರ್ಷ ತುಂಬಿದ್ದರೂ ಯಾವುದೇ ಕಾಯಿಲೆ ಇಲ್ಲದೇ ಇಂದಿಗೂ ಆರೋಗ್ಯವಾಗಿದ್ದಾರೆ. ಯಾರಿಗೂ ತೊಂದರೆ ಕೊಡುವುದಿಲ್ಲ, ಯಾರನ್ನೂ ಅವಲಂಬಿಸಿಲ್ಲ, ಎಲ್ಲಾ ಕೆಲಸವನ್ನೂ ಅವರೇ ಮಾಡಿಕೊಳ್ಳುತ್ತಾರೆ. ಕಣ್ಣು ಚೆನ್ನಾಗಿ ಕಾಣುತ್ತವೆ. ಈಗಲೂ ಮುದ್ದಾಗಿ ಬರೆಯುತ್ತಾರೆ. ಓದುತ್ತಾರೆ. ಚೆನ್ನಾಗಿ ಓಡಾಡುತ್ತಾರೆ, ಸದಾ ಆರೋಗ್ಯವಾಗಿರುವ ಅವರ ಆಯುಷ್ಯದ ಗುಟ್ಟು ಚೆನ್ನಾಗಿ ಊಟ ಮಾಡುವುದು ಮತ್ತು ನಿದ್ದೆ ಮಾಡುವುದು, ಶಾಂತ ಸ್ವಭಾವ, ಯಾವ ವಿಷಯಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ ಅಗಾಧ ನೆನಪಿನ ಶಕ್ತಿ, ಸ್ವಚ್ಚತೆಗೆ ಹೆಚ್ಚು ಆಧ್ಯತೆ. ಇವರ ನಡತೆ ಮನೆಯವರ ಅಚ್ಚು ಮೆಚ್ಚು,

ಪ್ರಸ್ತುತ ರಾಜಕೀಯಕ್ಕೆ ಬೇಸರ:
ಸರಕಾರ ಜನರ ಸೇವೆಗಾಗಿ ಇರೋದು. ಈಗ ಸ್ವಾರ್ಥ ಮತ್ತು ಮೋಸದ ರಾಜಕಾರಣವೇ ವೈಭವೀಕರಿಸುತ್ತಿದೆ. ಹಿಂದೆ ಎಂದೂ ಕಾಣದಂತಹ ಕೆಟ್ಟ ರಾಜಕಾರಣದ ವಾತಾವರಣ ರಾಜ್ಯದಲ್ಲಿ ಕೇಳಿತ್ತಿದ್ದು ಮನನೊಂದಿದೆ. ಯಡಿಯೂರಪ್ಪ ಮಾಡ ಬಾರದನ್ನು ಮಾಡಿದರು. ಇನ್ನೂ ಮನಸ್ಸು ಪರಿವರ್ತನೆಯಾಗಿಲ್ಲ. ಜಾತಿ ರಾಜಕಾರಣ ಬೇಡ. ಇದು ಸಮಾಜಕ್ಕೆ ಮಾರಕ ಎಂಬ ತಮ್ಮ ಅಭಿಪ್ರಾಯವನ್ನು ತಿಮ್ಮೇಗೌಡರು ವ್ಯಕ್ತಪಡಿಸುತ್ತಾರೆ.
ಹಿಂದಿನ ಮತ್ತು ಇವತ್ತಿನ ಸರಕಾರದ ಆಡಳಿತ ವ್ಯವಸ್ಥೆ ವ್ಯತ್ಯಾಸ ಹೇಳಲು ಬರೋದಿಲ್ಲ. ಆಗ ಜನ ಸೇವೆಯೇ ಮುಖ್ಯವಾಗಿತ್ತು. ಜನರು ತಮ್ಮ ಪ್ರತಿನಿಧಿಗಳನ್ನು ಗೌರವವಾಗಿ ಕಾಣುತ್ತಿದ್ದರು. ಹಣ ಇತರೆ ಕೆಟ್ಟದನ್ನು ಬಯಸುತ್ತಿರಲಿಲ್ಲ. ಅಂದು ನಾನು ಚುನಾವಣೆಗೆ ಕೇವಲ ೨೫-೩೦ಸಾವಿರ ಖರ್ಚು ಮಾಡಿದ್ದೆ. ಅದು ಪ್ರಚಾರ, ಓಡಾಟಕ್ಕೆ ಮಾತ್ರ, ಜನರಿಗೆ ಒಂದಾಣಿ ಕೊಟ್ಟಿಲ್ಲ. ಈಗ ಕೋಟಿ ಗಟ್ಟಲೆ ಹಣ ಬೇಕು ಎಲ್ಲಿಂದ ತರೋದು. ಇದು ಭ್ರಷ್ಟಾಚಾರಕ್ಕೆ ನಾಂದಿ. ಜನರ ಮನಸ್ಥಿತಿ ಬದಲಾಗಬೇಕು ಎಂದು ಸಲಹೆ ನೀಡುತ್ತಾರೆ ಅವರು.
ರಾಜ್ಯದಲ್ಲಿ ಮತ್ತು ದೇಶದಲ್ಲಿ ಭ್ರಷ್ಟಚಾರ ಮುಗಿಲು ಮುಟ್ಟಿದೆ. ಇದು ಅಪಾಯದ ಸಂಕೇತ. ಜನ ಕ್ಷಮಿಸಲ್ಲ, ಇಂದು ಸಮಾಜ ರಾಜಕಾರಣಿಗಳಿಂದ ಹೊಲಸಾಗಿದೆ. ಚುನಾವಣೆ ಮತ್ತು ಸಮಾರಂಭಗಳಿಗೆ ಅನೈತಿಕವಾಗಿ ಸಂಪಾದಿಸಿದ್ದ ದುಡ್ಡು ಚೆಲ್ಲುತ್ತಾರೆ, ನಂತರ ಲಂಚ ಪಡೆಯುತ್ತಾರೆ. ಇದು ವ್ಯಾಪಾರವಾಗಿದೆ. ಆದರ್ಶವಿಲ್ಲ ಮೌಲ್ಯಗಳಿಲ್ಲ. ಮೋಸವೇ ತುಂಬಿದೆ. ಇದು ಜನರ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿದ್ದಾರೆ.
ಸೇವೆ:
ಹಿರಿಯ ಸ್ವಾತಂತ್ರ್ಯ ಹೋರಾಟಗಾರರು, ಅಂದಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರಿಗೆ ವಿಧಾನ ಸೌಧ ನಿರ್ಮಾಣದಲಿ ಸಹಾಯ, ಅಂದಿನ ಮೈಸೂರು ರಾಜ್ಯದ ನಾನಾ ಪ್ರಮುಖ ಸಂಘಗಳ ಸದಸ್ಯರಾಗಿ ಸೇವೆ, ಅಂದಿನ ಮೈಸೂರು ಅಸೆಂಬ್ಲಿಯಿಂದ ಸತತ ೩ ಬಾರಿ ಹೌಸ್ ಕಮಿಟಿ ಸದಸ್ಯರಾಗಿ ಸೇವೆ. ಬೆಂಗಳೂರು ಇಂಜಿನಿಯರಿಂಗ್ ಇನ್ಸಿಟ್ಯೂಟ್ ಸದಸ್ಯರಾಗಿ ಎರಡು ವರ್ಷ ಸೇವೆ. ಭದ್ರಾವತಿ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆಯ ಸದಸ್ಯರಾಗಿ ಸೇವೆ, ತುಮಕೂರು ಜಿಲ್ಲಾ ಬೋರ‍್ಡ್ ಸದಸ್ಯರಾಗಿ, ಡಿಸಿಸಿ ಬ್ಯಾಂಕ್ ಸದಸ್ಯರಾಗಿ ಹಾಗೂ ತಾಲೂಕು ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾಗಿ ಎಂಟು ವರ್ಷದ ಸೇವೆ ಸಲ್ಲಿಸಿ ಹೆಸರು ಮಾಡಿದ್ದಾರೆ.

ಸವಲತ್ತುಗಳಿಂದ ವಂಚಿತರು:
ಮಾಜಿ ಶಾಸಕರ ವೇತನ ಬಿಟ್ಟರೆ ಬೇರೆ ಯಾವುದೇ ಸರಕಾರದಿಂದ ಬರುವ ಸವಲತ್ತುಗಳನ್ನು ಪಡೆಯುತ್ತಿಲ್ಲ.

ಸಂದೇಶ:
ಇಂದಿನ ಪೀಳಿಗೆ ಹಿರಿಯರಾದ ನಮ್ಮ ಮಾತು ಯಾರೂ ಕೇಳಲ್ಲ. ಹೊಸ ಜನರೇಷನ್ ಕಾಲ ಬದಲಾಗಿದೆ ಎನುತ್ತಾರೆ. ಆದರೂ ಒಂದು ಮಾತು ಹೇಳುತ್ತೇನೆ. ಬೇಡ ಹಣದ ವ್ಯಾಮೋಹ ಸರಿಯಲ್ಲ. ನಾನು ದಡ್ಡ ಶಾಸಕನಾಗಿದ್ದೆ. ಹಣ ಮಾಡಲಿಲ್ಲ. ಅಕ್ರಮ ಆಸ್ತಿ ಸಂಪಾದಿಸಲಿಲ್ಲ. ಆದರೆ ಭಗವಂತ ಕೋಟ್ಯಾಂತರ ಬೆಲೆ ಬಾಳುವ ಆಯುಷ್ಯ ಮತ್ತು ಆರೋಗ್ಯ ಕೊಟ್ಟ. ವ್ಯಾಪಾರ ಮಾಡಿದೆ, ಲಾಭ ಮತ್ತು ನಷ್ಟ ಎರಡೂ ಆಗಿದೆ. ಆದರೆ ನೆಮ್ಮದಿ ಹಾಳಾಗಿಲ್ಲ.
ಮುಂದಿನ ಯುವ ಜನತೆ ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ಭ್ರಷ್ಟಚಾರ ದೇಶದಲ್ಲಿ ಬೇಡ. ಇದರ ವಿರುದ್ಧ ಹೋರಾಡುತ್ತಿರುವ ಅಣ್ಣಾಹಜಾರೆಗೆ ನನ್ನ ಬೆಂಬಲವಿದೆ. ಮನುಷ್ಯರ ನಡುವಿನ ಭಾವನೆ ಮತ್ತು ಸಂಬಂಧಗಳು ಅನ್ಯಾಯ, ಅಕ್ರಮ ಭ್ರಷಟಚಾರದಿಂದ ನಾಶವಾಗುತ್ತಿದೆ. ಇದು ಅಪಾಯ.
ಇಗಾಗಲೇ ನಾನಾ ಸಂಘ ಸಂಸ್ಥೆಗಳು ಅವರನ್ನು ಗುರ್ತಿಸಿ ಗೌರವಿಸಿವೆ. ರಾಜ್ಯ ವಿಧಾನ ಸಭೆಯ ೬೦ರ ಸಂಭ್ರಮಕ್ಕೆ ಶುಭ ಹಾರೈಸಿದ್ದಾರೆ. ರಾಜ್ಯದ ಜನತೆಗೆ ಆಶೀರ್ವಚಿಸಿ ಉತ್ತಮ ಮಳೆ ಬೆಳೆ ಬಂದು ಉತ್ತಮ ಸರಕಾರ ಜನರ ಪಾಲಿಗೆ ಬರಲಿ ಎಂದಿದ್ದಾರೆ.


ಸ್ವಾತಂತ್ರ್ಯದ ನಂತರ ರಚನೆಯಾದ ರಾಜ್ಯದ ಮೊದಲ ಶಾಸಕಾಂಗ ಸಭೆಯ ಶಾಸಕರು ಮತ್ತು ಮುಖ್ಯಮಂತ್ರಿ ಕಡಿದಾಳು ಮಂಜಪ್ಪ ಅವರೊಂದಿಗೆ ತಿಪಟೂರಿನ ಅಂದಿನ ಶಾಸಕ ಟಿ.ಜಿ.ತಿಮ್ಮೇಗೌಡರು (ವಿಧಾನ ಸೌಧದ ಮುಂದೆ ತೆಗೆದ ಚಿತ್ರ ೧೯೫೬)

ನೂರಾರು ಕನಸುಗಳನ್ನು ಹೊತ್ತುಕೊಂಡೇ ಸತ್ತು ಹೋದಳು ಆಶಾ!

ನೂರಾರು ಕನಸುಗಳನ್ನು ಹೊತ್ತುಕೊಂಡೇ ಸತ್ತು ಹೋದಳು ಆಶಾ!




ತನ್ನ ಬದುಕಿನ ಉದ್ದಕ್ಕೂ ಕುಟುಂಬದಿಂದಲೇ ಮಾನಸಿಕ ಒತ್ತಡ, ದೌರ್ಜನ್ಯ ಮತ್ತು ಕಿರುಕುಳಕ್ಕೆ ಒಳಗಾಗಿ ಜೀವನ ಸವೆಸಿದ ತುಮಕುರು ಜಿಲ್ಲೆ, ತಿಪಟೂರು ತಾಲೂಕು ಅರಳುಗುಪ್ಪೆಯ ಆಶಾ (೨೬) ಕೊನೆಗೂ ಮನದಾಳದ ನೂರಾರು ಕನಸುಗಳನ್ನು ಹೊತ್ತುಕೊಂಡೇ ೨೦೧೨ರ ಜುಲೈ ೧೧ರಂದು ಕೊನೆ ಉಸಿರು ಎಳೆದು, ಈ ಲೋಕ ಬಿಟ್ಟು ಬಾರದ ಲೋಕಕ್ಕೆ ಹೋಗಿ ಬಿಟ್ಟಳು.

ತಿಪಟೂರು ತಾಲೂಕು ಅರಳುಗಪ್ಪೆ ವಾಸಿ ನಿವೃತ್ತ ಶಿಕ್ಷಕ ಪುಟ್ಟಶಾಮಯ್ಯನವರ ಕೊನೆ ಪತ್ರಿ ಆಶಾ ತನ್ನ ೨೧ರ ಹರೆಯದಲ್ಲಿ ತನ್ನ ಸಹಪಾಟಿ ಗೆಳೆತಿಯರಂತೆ ನೂರು ಕನಸು ಕಟ್ಟಿ ಪುಟಿಯುವ ಕಾಲದಲ್ಲೇ ಮನೆಯ ಮೂಲೆಯ ಕತ್ತಲೆಯ ಕೋಣೆಯಲ್ಲಿ ಯಾತನಮಯ ಜೀವನ ನಡೆಸುತ್ತಿದ್ದಳು. ಮಹಿಳಾ ಮತ್ತು ಮಕ್ಕಳಾ ಅಭಿವೃದ್ಧಿ ಇಲಾಖೆ ಮತ್ತು ವಿಕ ಸಹಕಾರದಿಂದ ಆಕೆಯನ್ನು ನರಕಕೂಪದಿಂದ ಬಿಡುಗಡೆಗೊಳಿಸಿ, ತಕ್ಷಣ ಬೆಂಗಳೂರಿನ ನಿಮಾನ್ಸ್‌ಗೆ ದಾಖಲಿಸಲಾಗಿತ್ತು. ತಂದೆಯಿಂದ ಮಗಳ ಕತ್ತಲಕೊಣೆಯ ಬಂಧನ, ಮಾನಸಿಕ ಹಿಂಸೆ ಬಗ್ಗೆ ವಿಜಯಕರ್ನಾಟಕದಲ್ಲಿ ಸಮಗ್ರವಾಗಿ ವರದಿ ಮಾಡಿ ಬೆಳಕು ಚೆಲ್ಲಲಾಗಿತ್ತು.

ಸತತ ಐದು ವರ್ಷದ ವೈಧ್ಯಕೀಯ ಆರೈಕೆಯಲಿ ಮಾನಸಿಕ ಅನಾರೋಗ್ಯದಿಂದ ಹೊರಬಂದ ಆಶಾ ಕತ್ತಲ ಕೋಣೆಯಲ್ಲಿ ಅಂಟಿಕೊಂಡ ನಾನಾ ರೋಗಗಳಿಂದ ಹೊರ ಬರಲಾಗಲಿಲ್ಲ. ಎಂಟು ತಿಂಗಳ ನಿಮಾನ್ಸ್‌ನ ಚಿಕಿತ್ಸೆಯ ನಂತರ ಎರಡು ತಿಂಗಳು ಫಿಜಿಯೋಥೆರಪಿಗೆ ಒಳಪಡಿಸಲಾಗಿತ್ತು. ಅಲ್ಲಿಂದ ಆಕೆಯನ್ನು ಬೆಂಗಳೂರಿನ ಫ್ರೀಡಂ ಫೌಂಡೇಶನ್ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೆಂದ್ರಕ್ಕೆ ದಾಖಲಿಸಿ, ಎರಡು ವರ್ಷಗಳ ಕಾಲ ಆರೈಕೆಯಲ್ಲಿಡಲಾಗಿತ್ತು. ಈ ಮಧ್ಯೆ ಆಕೆಯಲ್ಲಿ ಉಲ್ಪಣಗೊಳ್ಳುತ್ತಿದ್ದ ಕ್ಷಯ, ಅನಿಮಿಯಾ ಮತ್ತಿತರ ರೋಗಗಳ ಗುಣಪಡಿಸಲು ಹಾಸನ ಇತರೆ ಆಸ್ಪತ್ರೆಯ ತಜ್ಞರ ಬಳಿ ಕರೆದೊಯ್ದು ಚಿಕಿತ್ಸೆ ನೀಡಲಾಗಿತ್ತು. ಆದರೆ ದುರಾದುಷ್ಟವಶಾತ್ ಆಕೆ ತನ್ನ ಬರ್ಬರ ಬದುಕಿಗೆ ವಿದಾಯ ಹೇಳಿ ಬಿಟ್ಟಳು. ಅಷ್ಟು ವರ್ಷಗಳ ಕಾಲ ಆಕೆಯ ಜೀವ ಮತ್ತು ಆರೋಗ್ಯಕ್ಕಾಗಿ ಹಗಲಿರುಳು ಶ್ರಮಿಸಿದ ಮಾನವೀಯ ವೈಧ್ಯರು ಹನಿ ಕಣ್ಣೀರು ಹಾಕಿ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ಬದುಕುವ ಉತ್ಕಟವಾದ ಆಸೆಯಿಟ್ಟುಕೊಂಡಿದ್ದ ಆಶಾ ೨೬ನೇ ವಯಸ್ಸಿನಲ್ಲಿ ತನ್ನ ಎಲ್ಲಾ ನೋವು, ವೇದನೆಗಳಿಗೆ ಅಂತ್ಯ ಹಾಡಿದ್ದು ಮಾತ್ರ ವಿಷಾಧನಿಯ. ಸಾವಿನ ಕಾಲದವರೆಗೂ ಮಾನಸಿಕವಾಗಿ ಕುಗ್ಗಿ ಹೋಗಿದ್ದ ಆಕೆ ತನ್ನದಲ್ಲದ ತಪ್ಪಿಗೆ ಗುಣವಾಗದ ನಾನಾ ರೋಗಗಳ ಹಾವಳಿಗೆ ಹೆದರಿ ಬಸವಳಿದು ಸಾವನ್ನು ಅಪ್ಪಿಕೊಳ್ಳಬೇಕಾಗಿತ್ತು. ಜೀವನೋತ್ಸವದ ಯಾವ ಸುಖವನ್ನು ಕಾಣದ ಮುಗ್ದ ಹುಡುಗಿ ತಂದೆಯಿಂದ ಬಂದ ಬದುಕಿನ ಬರ್ಬರತೆಗೆ ಹೆದರಿ ತತ್ತರಿಸಿ ಹೋಗಿದ್ದಳು. ಕೊನೆಗೆ ಸಾವು ಮಾತ್ರ ಆಕೆಗೆ ಶಾಶ್ವತ ಸುಖನೀಡಿತ್ತು.

ಹಿನ್ನಲೆ:
೨೦೦೬ರಲ್ಲಿ ತಂದೆ ಪುಟ್ಟಶಾಮಯ್ಯ ಮಗಳು ಆಶಾಳನ್ನು ಅರಳುಗುಪ್ಪೆಯ ತನ್ನ ಮನೆಯ ಕೊಠಡಿಯೊಂದರಲ್ಲಿ ಬಂಧಿಸಿ, ಹೊರ ಪ್ರಪಂಚದಿಂದ ಬೇರೆ ಇಡುವ ಮೂಲಕ ತನ್ನ ಪೈಶಾಚಿಕ ವರ್ತನೆ ತೋರಿದ್ದ. ೨೦೦೭ರ ಮಾರ್ಚ್ ೧೪ರಂದು ಗ್ರಾಮದ ಎ.ಟಿ.ಪ್ರಸಾದ್ ಈ ವಿಷಯ ಬಯಲಾಗಿತ್ತು. ಮಾಹಿತಿ ಮೇರೆಗೆ ವಿಕ ವರದಿಗಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಡಿಪಿಒ ಎಸ್.ನಟರಾಜು ಅವರೊಂದಿಗೆ ಸ್ಥಳಕೆ ಬೇಟಿ ನೀಡಿ ಈ ಘೋರ ಘಟನೆಯನ್ನು ಬಯಲು ಮಾಡಿ, ಕತ್ತಲ ಕೋಣೆಯ ನರಕದಲ್ಲಿ ದುರ್ವಾಸನೆ ಬೀರುತ್ತಾ ಕೊಳೆಯುತ್ತಿದ್ದ ಆಶಾಳ ಬಿಡುಗಡೆಗೊಳಿಸಲಾಗಿತ್ತು.

ಸ್ಥಳದಲ್ಲಿ ಇದ್ದ ಎಸಿಡಿಪಿಒ ಸುಂದರಮ್ಮ, ಮೇಲ್ವಿಚಾರಕಿ ಪ್ರೇಮಾ, ಸ್ತ್ರಿಶಕ್ತಿ ಮಹಿಳೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರ ಸಹಾಯದಿಂದ ತಕ್ಷಣ ಆಶಾಳನ್ನು ಸ್ವಚ್ಚಗೊಳಿಸಿ, ಬೆಂಗಳೂರಿನ ನಿಮಾನ್ಸ್‌ಗೆ ಕರೆದೊಯ್ದು ದಾಖಲಿಸಿ, ಚಿಕಿತ್ಸೆಗೆ ಏರ್ಪಾಡು ಮಾಡಲಾಗಿತ್ತು. ಕೆಲವು ತಿಂಗಳ ನಂತರ ಅಲ್ಲಿ ಆಕೆಯ ಆರೋಗ್ಯ ಚೇತರಿಕೆ ಕಂಡು ಬಂದಿತ್ತು. ಒಬ್ಬಳೆ ಕೂರುವುದು, ಮಾತನಾಡುವುದು, ತಿರುಗಾಡುವುದು ಮತ್ತು ಪತ್ರಿಕೆಯನ್ನು ಓದುವುದು ಮಾಡುತ್ತಾ ಆರೋಗ್ಯ ಸುಧಾರಣೆ ಕಂಡು ಬಂದಿತ್ತು. ಆದರೆ ಆಕೆಯನ್ನು ವಿಧಿ ಬಿಡದೇ ಕರೆದೊಯ್ದು ಬಿಟ್ಟಿದ್ದಾನೆ. ಆಕೆಯ ಬದುಕಿಗಾಗಿ ಮಾಡಿದ ಎಲ್ಲರ ಶ್ರಮ ವ್ಯರ್ಥವಾಯಿತು.

ನತದೃಷ್ಟೆ ಆಶಾ ನರಕದ ಬಾಗಿಲಿಗೆ:
ಆಶಾಳ ತಂದೆ ಪಟ್ಟುಶಾಮಯ್ಯ ನಿವೃತ್ತ ಶಿಕ್ಷಕ. ಇವರೂ ಕಳೆದ ಎರಡು ವರ್ಷಗಳ ಹಿಂದೆ ತೀರಿಕೊಂಡಿದ್ದಾರೆ. ಮಗಳನ್ನು ಒಂದೂವರೆ ವರ್ಷದ ಕಾಲ ಕತ್ತಲ ಕೊಣೆಯಲ್ಲಿ ಕೂಡಿ ಹಾಕಿ ಆಕೆಯ ಬದುಕನ್ನು ನರಕವಾಗಿಸಿದ ಎಂಬ ಆರೋಪ ಹೊತ್ತುಕೊಂಡೇ ಅವರು ತನ್ನ ಬದುಕಿಗೂ ವಿದಾಯ ಹೇಳಿದ್ದರು. ತಾಯಿ ಜಯಲಕ್ಷ್ಮಮ್ಮ, ದೊಡ್ಡ ಅಕ್ಕ ರೂಪ, ಅಣ್ಣ ಶಿವು, ಎರಡನೇ ಅಣ್ಣ ರಾಜಣ್ಣ ಮತ್ತು ನಾಲ್ಕನೇ ಅಣ್ಣ ಮಧುಸೂಧನ್ ಕೊನೆಗೆ ಹುಟ್ಟಿದವಳೇ ನತದೃಷ್ಟೆ ಆಶಾ.

ಹತ್ತನೇ ತರಗತಿಯವರೆಗೂ ಚೆನ್ನಾಗಿ ಓದಿಕೊಂಡಿದ್ದ ಆಶಾ ಮನೆಯ ಪರಿಸ್ಥಿತಿಯನ್ನು ಸಹಜವಾಗಿ ತೆಗೆದುಕೊಂಡು ಸ್ಪುರದ್ರೂಪಿಯಾಗಿ ಬೆಳೆದವಳು. ನೋಡಲು ಅಂದವಾಗಿ ಮುದ್ದಾಗಿ ಕಾಣುತ್ತಿದ್ದ ಆಕೆ ಅಕ್ಕಪಕ್ಕದವರ ಕಣ್ಣು ಕುಕ್ಕುವಂತೆ ಕಾಣುತ್ತಿದ್ದಳು. ನಡತೆ ಮತ್ತು ಸ್ವಭಾದಲ್ಲಿಯೂ ಸರಳತೆ ಎದ್ದು ಕಾಣುತ್ತಿತ್ತು. ಆದರೆ ಇಡೀ ಕುಟುಂಬವನು ಕಾಡುತ್ತಿರುವ ವಿಧಿ ಈಕೆಯ ಬಾಳಿನಲ್ಲೂ ಅಪ್ಪನ ರೂಪದಲ್ಲಿ ೨೦೦೧ರಲಿಯೇ ಕಾಲಿಟ್ಟು ಬಿಟ್ಟಿದ್ದ. ಮಾನಸಿಕ ಒತ್ತಡಕ್ಕೆ ಸಿಲುಕಿದ್ದ ಆಕೆಯನ್ನು ೨೦೦೨, ೨೦೦೪ ಮತ್ತು ೨೦೦೬ರಲ್ಲಿ ಕೆಲವು ಕಾಲ ದಾಖಲಿಸಿ, ಚಿಕಿತ್ಸೆ ನೀಡಲಾಗಿತ್ತು. ಗುಣಮುಖಳಾಗುತ್ತಿದ್ದ ಆಕೆ ಚೆನ್ನಾಗಿ ಓಡಾಡಿಕೊಂಡಿದ್ದಳು. ಆದರೆ ೨೦೦೬ ಆಗಸ್ಟ್ ನಂತರ ಆಕೆ ಎಲ್ಲಿಯೂ ಕಾಣಲಿಲ್ಲ. ಊರಿನವರು ಪುನಃ ನಿಮಾನ್ಸ್‌ಗೆ ಕರೆದುಕೊಂಡು ಹೋಗಿರಬೇಕು ಎಂದು ಸುಮ್ಮನಾಗಿದ್ದರು. ಆದರೆ ಆಕೆ ಆಗಲೇ ತಂದೆಯ ದೌರ್ಜನ್ಯಕ್ಕೆ ಬಲಿಯಾಗಿ, ಮನೆಯೆಂಬ ಜೈಲಿನ ಕತ್ತಲ ಕೋಣೆಯ ಖೈಧಿಯಾಗಿ ಹೊರಗಿನ ಲೋಕದ ಸಂಪರ್ಕ ಕಡಿದುಕೊಂಡು ನರಳುತ್ತಿದ್ದಳು. ಪುಟ್ಟಶಾಮಯ್ಯನವರಿಗೆ ಹೆದರಿ ತಾಯಿ ಮತ್ತು ಅಣ್ಣಂದಿರು ಯಾವುದೇ ಸಹಾಯ ಮಾಡದೇ ವೇದನೆ ಅನುಭವಿಸುತ್ತಿದ್ದರು.

ದಿನಗಳು, ತಿಂಗಳುಗಳು ಕಳೆದಂತೆ ಗಾಳಿ ಬೆಳಕಿನ ಸಂಪರ್ಕವಿಲ್ಲದೇ ಕತ್ತಲಕೊಣೆಯ ಬದುಕಿನಲ್ಲಿ ಜೀವನ ಚೈತನ್ಯ ಕಳೆದುಕೊಂಡ ಆಶಾ ರಕ್ತ ಮಾಂಸದ ಮುದ್ದೆಯಾಗಿದ್ದಳು. ಕುಳಿತ ಜಾಗದಲ್ಲಿ ಒಂದು ಸಣ್ಣ ಬೆಳಕಿನ ಕಿಂಡಿಯನ್ನೆ ನೋಡುತ್ತಾ ಕುಳಿತುಕೊಳ್ಳುವುದೇ ಆಕೆಗೆ ಒಲಿದು ಬಂದ ಭಾಗ್ಯವಾಗಿತ್ತು. ಹೊರಗೆ ಬರದಂತೆ ಮಲ ಮೂತ್ರವನ್ನೂ ಅಲ್ಲೆ ಮಾಡಿಕೊಳ್ಳುವ ದುಸ್ಥಿತಿ. ಅಂಡಮಾನ್ ಜೈಲಿನಲ್ಲಿ ಖೈದಿಗಳಿಗೆ ನೀಡುವಂತೆ ಒಂದು ಅಲ್ಯೂಮಿನಿಯಂ ತಟ್ಟೆಯಲ್ಲಿ ಯಾವಾಗಲೋ ಊಟ ತಿಂಡಿ ನೀರು ಬರುತ್ತಿತ್ತು. ಅದರ ಬಗ್ಗೆ ಆಸಕ್ತಿ ಕಳೆದುಕೊಂಡ ಆಕೆ ತನಗೆ ಬೇಕಾದಾಗ ತಿಂದು ಅಲ್ಲೇ ಇದ್ದ ಹಳೇಯ ಹರಿದ ಗೋಣಿಚೀಲದ ಮೇಲೆ ಮಲಗುತ್ತಿದ್ದಳು.

ಕುಳಿತಲ್ಲೇ ಬೆನ್ನು ಬಾಗಿ ಹೋಗಿತ್ತು. ಮೈಗೆ ನೀರು ಸೋಕದಿದ್ದರೂ ಮೈ ಬೆಳ್ಳಗೆ ಬಿಳಿಚಿಕೊಂಡಿತ್ತು. ಗೇಣುದ್ದದ ಉಗುರುಗಳು ಅವಳ ಬದುಕಿನ ಬರ್ಬರತೆಯನ್ನು ಸಾರುತ್ತಿದ್ದವು. ಕೋಣೆಯ ತುಂಬಾ ಮನಷ್ಯ ಮಾತ್ರದವರು ವಾಸಿಸದಷ್ಟು ದುರ್ವಾಸನೆ. ಯಾವಾಗಲೋ ಒಮ್ಮೆ ತಾಯಿ ಒಳಬಂದು ಹೊಲಸನ್ನು ತೆಗೆದು ಹಾಕುತ್ತಿದ್ದಳು. ನಂತರದ ದಿನಗಳಲ್ಲಿ ಬಾಗಿಲು ತೆರೆದರೂ ಹೊರಗೆ ಹೋಗದಷ್ಟು ನಿತ್ರಾಣಳಾದ ಆಶಾ ಹಾಗೆಯೇ ಬಾಗಿಕೊಂಡು ಚೀರುತ್ತಿದ್ದಳು. ಅವಳಿಗೆ ಆಗ ಹೊರಿಗಿನ ಬೆಳಕು ಕಂಡರೆ ಭಯ ಆವರಿಸಿಕೊಂಡು ಬಿಟ್ಟಿತ್ತು. ಕತ್ತಲೆಯ ಪ್ರಪಂಚ ಆಕೆಗೆ ಅಪ್ಯಾಯಮಾನವಾಗಿತ್ತು. ನಿಜಕ್ಕೂ ಯಾವುದೇ ದುಷ್ಟ ಹೃದಯದವರೂ ಕಂಡರೂ ಕರಗಿ ಕಣ್ಣೀರು ಹಾಕುವಂತ ದೃಶ್ಯ ಅದು. ಅಂತಹ ಯಾತನೆಯ ಬದುಕನ್ನು ಆಕೆ ಕಳೆದಿದ್ದು ಬರೋಬ್ಬರಿ ಒಂದೂವರೆ ವರ್ಷ. ಕೊನೆಗೊಮ್ಮೆ ಆಪದ್ಭಾಂದವರಂತೆ ಆಕೆಗೆ ಆಗ ಒಲಿದು ಬಂದವರು ಸಿಡಿಪಿಒ ಎಸ್.ನಟರಾಜು, ಸ್ಥಳೀಯ ಎ.ಟಿ.ಪ್ರಸಾದ್ ಮತ್ತು ವಿಕ ಪತ್ರಿಕೆ.


ಹೊರಗೆ ಬರುವ ಸಮಯದಲ್ಲಿ ಆಶಾ ಭಯದಿಂದ ತತ್ತರಿಸಿ ಚೀರುತ್ತಿದ್ದಳು. ಎಷ್ಟು ಸಮಾಧಾನ ಮಾಡಿದರೂ ತಿರುಗಿ ತಿರುಗಿ ತನ್ನ ಕೋಣೆಗೆ ಹೋಗುತ್ತಾ ತನ್ನ ಜಾಗದಲ್ಲಿ ಮುದುರಿಕೊಂಡು ಕೂರುತ್ತಿದ್ದಳು. ನಡುಗುತ್ತಿದ್ದಳು. ಎಸಿಡಿಪಿಒ ಸುಂದರಮ್ಮ, ಸಹಾಯಕಿ ಪ್ರೇಮಾ, ಸ್ಥಳೀಯ ಅಂಗನವಾಡಿ ಕಾಯಕರ್ತೆಯರು ಮತ್ತು ಸ್ತ್ರೀಶಕ್ತಿ ಮಹಿಳೆಯರು ಜೊತೆಗೆ ಆಕೆಯ ತಾಯಿ ಜಯಲಕ್ಷ್ಮಮ್ಮ ಸೇರಿಕೊಂಡು ಮೆಲ್ಲಗೇ ಮಾತಾಡಿಸಿ ದೈರ್ಯ ತುಂಬಿದರು. ತಕ್ಷಣ ಉಗುರು ಬೆಚ್ಚಗಿನ ಬಿಸಿ ನೀರು ಹಾಕಿ ಮೈ ತೊಳೆದರು. ಮೈ ಯಿಂದ ಹುಂಡೆ ಹುಂಡೆ ಗಾತ್ರದ ಕೊಳೆಯೂ ನೀರಿನಲ್ಲಿ ಹರಿದು ಹೋಯಿತು. ಬೇರೆ ಬಟ್ಟೆ ಹಾಕಿಕೊಂಡು ಹೊರಗೆ ಕರೆದುಕೊಂಡು ಬಿಟ್ಟಾಗ ಹಕ್ಕಿಯಂತೆ ದಾರಿ ತುಂಬಾ ನಡೆದಾಡಿದಳು ಆಶಾ. ಅವಳ ಸಂತೋಷಕ್ಕೆ ಪಾರವೇ ಇರಲಿಲ್ಲ. ಸ್ವತಂತ್ರ ಪಡೆದವಳಂತೆ ಇದ್ದ ಬದ್ದ ಶಕ್ತಿ ಉಪಯೋಗಿಸಿ, ಉತ್ಸಾಹ ತುಂಬಿಕೊಂಡು ನಗುತ್ತಿದ್ದಳು. ಈ ದೃಶ್ಯವನ್ನು ಕಣ್ಣಾರೆ ನೋಡಿದ ಅಲ್ಲಿದ್ದ ಅಷ್ಟು ಮಂದಿಗೆ ಕಣ್ಣಿನಲ್ಲಿ ನೀರು ತೊಟ್ಟಿಕ್ಕಿದವು.

-

ನಿಮ್ಮ ಅನಿಸಿಕೆ ತಿಳಿಸಿ: ೯೪೪೮೪೧೬೫೫೦,

e-mಚಿiಟ:ಣiಠಿಣuಡಿಞಡಿishಟಿಚಿ_ಟಿeತಿs@ಥಿಚಿhoo.ಛಿo.iಟಿ













Tuesday, October 4, 2011

ರಾಜ್ಯದಲ್ಲೂ ಆಘೋರಿಗಳಿದ್ದಾರಾ?


ರಾಜ್ಯದಲ್ಲೂ ಆಘೋರಿಗಳಿದ್ದಾರಾ?

 ದಯವಿಟ್ಟು,  ಅಸಹ್ಯ ಪಟ್ಟು ಕೊಳ್ಳದ ಗಟ್ಟಿ ಹೃದಯದವರಿಗೆ ಮಾತ್ರ.
ಇದು ಪರಮ ಸತ್ಯ ಆದರೂ ಮನುಷ್ಯ ಮಾತ್ರದವರು ನಂಬಲು ಅಸಾದ್ಯ. ಬೇಜಾರು ಮಾಡಿಕೊಳ್ಳಬೇಡಿ, ಕಸಿವಿಸಿ ಮಾಡಿ ಕೊಳ್ಳಬೇಡಿ. ಬರೆಯಬೇಕಾದ್ದು ಅವಶ್ಯಕ ಮತ್ತು ಅನಿವಾರ್ಯ ಕೂಡ. ವರದಿ ಓದಿದ ಮೇಲೆ ನೀವೇ ಉದ್ಘರಿಸುತ್ತೀರಿ ಹೀಗೂ ಉಂಟೆ ಎಂದು. ನಂತರ ಮನಸ್ಸಿಗೆ ಕಸಿವಿಸಿಯಾದರೆ ನಮ್ಮನ್ನು ಕ್ಷಮಿಸಿ, ಇದು ನಮ್ಮ ತಪ್ಪಲ್ಲ.
 
ಇಲ್ಲೊಬ್ಬ ಸುಮಾರು ೯೫ ವರ್ಷದ ಮುದುಕ ವಿಚಿತ್ರವಾಗಿ ವರ್ತಿಸುತ್ತಾನೆ. ಅಘೋರಿಗಳ ತರಹ. ಮನುಷ್ಯ ಮಾತ್ರದವರು ಮಾಡಲಾರದ ಕೆಲಸ ಮಾಡಿ, ಎಲ್ಲರನ್ನೂ ಬೆಚ್ಚಿ ಬೀಳಿಸುವ ಜೊತೆಗೆ ಭಯ ಮತ್ತು ಗೊಂದಲಕ್ಕೀಡು ಮಾಡುತ್ತಾನೆ. ಇವನ ವರ್ತನೆ ವಿಜ್ಞಾನ ಮತ್ತು ವೈಧ್ಯ ಕ್ಷೇತ್ರಕ್ಕೆ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ.

ಆಸ್ಪತ್ರೆಗೆ ಹೋಗಿಯೂ ಸಹ ವಾಸಿಯಾಗದೇ ನಿಮ್ಮೂರಿನಲ್ಲಿ ಯಾರಿಗಾದರೂ ಕಾಲು, ಕೈ ಕೊಳೆತು ಗ್ಯಾಂಗ್ರಿನ್ ಆಗಿದ್ದರೆ, ಯಾವುದಾದರೂ ಕಾರಣಕ್ಕೆ ಗಾಯವಾಗಿ ವಾಸಿಯಾಗದೇ ರಣವಾಗಿದ್ದರೆ ಅಥವಾ ಬಾರಿ ಸುಟ್ಟ ಗಾಯವಾಗಿ ಕೀವು ರಕ್ತ ಸೋರುತ್ತಾ ಬಾಧೆ ಪಡುತ್ತಿದ್ದರೆ, ಗಾಯವಾಗಿ ಸಕ್ಕರೆ ಕಾಯಿಲೆಯ ಕಾರಣದಿಂದ ವಾಸಿಯಾಗದೇ ಅದು ಇಡೀ ಕಾಲು ವ್ಯಾಪಿಸಿ ಮತ್ತೆ ಮತ್ತೆ ಹೆಚ್ಚುತ್ತಾ ಕೊಳೆಯುವ ಸ್ಥಿತಿಗೆ ತಲುಪಿ ಹುಳ ಸಹಿತ ದುರ್ವಾಸನೆ ಬಂದಿದ್ದರೆ ಇನ್ನೂ ಮುಂದೆ ಹೆದರಬೇಕಿಲ್ಲ. ಗುಣ ಪಡಿಸಿಕೊಳ್ಳುವ ಉಪಾಯ ಇಲ್ಲಿದೆ.
ಅದು ಯಾವುದೇ ಔಷಧಿ ನೀಡದೇ, ಶಸ್ತ್ರ ಚಿಕಿತ್ಸೆ ಮಾಡದೇ, ದುಬಾರಿ ವೆಚ್ಚ ಕೇಳದೇ ಕ್ಷಣ ಮಾತ್ರದಲ್ಲಿ ನೋವನ್ನು ನೀಗಿಸುವ ಮಾಂತ್ರಿಕ ಶಕ್ತಿಯ ವಿಸ್ಮಯ ಕಥೆ ಇಲ್ಲಿದೆ. ಆತ ಸಾಮಾನ್ಯ ಸಾಧು. ರೈತ ಸಂಘದ ಹೋರಾಟಗಾರನಂತೆ ಕಾಣುವ ಆ ವ್ಯಕ್ತಿ ಇಂತಹ ಗಾಯಗಳನ್ನು ನಾಲಿಗೆಯಿಂದ ನೆಕ್ಕಿ ನೆಕ್ಕಿ ಅದನ್ನು ವಾಸಿ ಮಾಡುತ್ತಾರೆ. ಬಹಳ ದಿನಗಳಿಂದ ಅನುಭವಿಸುತ್ತಿರುವ ನೋವಿಗೆ ದೀರ್ಘ ವಿರಾಮ ನೀಡುತ್ತಾರೆ. ಗಾಯದ ಕಾರಣದಿಂದ ಕಾಲು ಅಥವಾ ಕೈ ಕತ್ತರಿಸುವ ಪ್ರಮೆಯವೇ ಇಲ್ಲ.
ಇದೇನು ಮನುಷ್ಯ ಎಲ್ಲಾದರೂ ರಕ್ತ ಕೀವು ಸೋರುವ ಗಾಯವನ್ನು ನಾಯಿಯಂತೆ ನೆಕ್ಕುವುದು ಸಾಧ್ಯವೇ? ಎಂದು ಅಚ್ಚರಿ ಪಡಬೇಡಿ. ಗಾಬರಿಯಾಗಬೇಡಿ. ಇದು ಸತ್ಯ, ನೂರಕ್ಕೆ ನೂರು.
ಅವರೇ ಸವದತ್ತಿ ತಾಲೂಕಿನ ಅಳಕಟ್ಟೆ ಗ್ರಾಮದ ೯೫ ವರ್ಷದ ಹುಟ್ಟು ಬ್ರಹ್ಮಚಾರಿ ನಾರಾಯಣಸ್ವಾಮಿ. ತನ್ನ ೧೮ನೇ ವಯಸ್ಸಿನಲ್ಲಿ ಶಕ್ತಿವಂತ ಗುರುವೊಬ್ಬರು  ಇವರ ತಲೆ ಮೇಲೆ ಕೈಯಿಟ್ಟು ಆಶೀರ್ವದಿಸಿದರಂತೆ. ಅವರಿಂದ ದೀಕ್ಷೆ ಪಡೆದು ಸಾಧನೆ ಮಾಡಿದ ಒಂದು ವಿಶಿಷ್ಟ ಶಕ್ತಿ ಗಳಸಿಕೊಂಡು ಸಮಾಜ ಸೇವೆಗಾಗಿ ತಮ್ಮ ಬದುಕನ್ನು ಮೀಸಲಿಟ್ಟಿದ್ದಾರೆ. ಊರಿಂದ ಊರಿಗೆ ಬರಿಗಾಲಲ್ಲಿ ನಡೆದು ನಾಲಿಗೆಯಿಂದ ನೆಕ್ಕುವ ಮೂಲಕ ಗಾಯದ ನೋವಿನಿಂದ ನರಳುವವರಿಗೆ ಶಾಶ್ವತ ಪರಿಹಾರ ನೀಡಿ ವರದಾನವಾಗಿದ್ದಾರೆ. ಬಹಳ ಕಾಲದಿಂದ ವಾಸಿಯಾಗದೇ ಸಾಕಷ್ಟು ಆಸ್ಪತ್ರೆಗಳಿಗೆ ಸುತ್ತಿ ಸಾವಿರಾರು ರೂ.ಗಳನ್ನು ಖರ್ಚು ಮಾಡಿಕೊಂಡು ಕೈ ಸೋಸಿದವರಿಗೆ ಇವರು ಸುಲಭ ಮತ್ತು ಸರಳ ಸಿದ್ಧ ಔಷಧಿಯಾಗಿದ್ದಾರೆ. ಸೋರಿಯಾಸಿಸ್, ಗ್ಯಾಂಗ್ರಿನ್, ಸುಟ್ಟಗಾಯ ನೀರು ಇಸುಬು, ಕುಷ್ಟರೋಗ ಸೇರಿದಂತೆ ನಾನಾ ಚರ್ಮ ರೋಗಗಳನ್ನು ಗುಣ ಪಡಿಸುವ ದೇವದೂತ ಎನಿಸಿದ್ದಾರೆ.
ಮೊನ್ನೆ ತಿಪಟೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಬಹಳ ದಿನಗಳಿಂದ ದಾಖಲಾಗಿದ್ದ ರೋಗಿಯೊಬ್ಬರ ವಾಸಿಯಾಗದ ಗಾಯ(ಗ್ಯಾಂಗ್ರಿನ್)ವನ್ನು ವಾಸಿ ಮಾಡಲು ಇವರನ್ನು ಬೆಳಗಾವಿಯಿಂದ ಕರೆಸಲಾಗಿತ್ತು. ಬೆಳಗಾವಿಯಲ್ಲಿ ವೃತ್ತಿ ಮಾಡುತ್ತಿರುವ ತಿಪಟೂರಿನ ಮೂಲದವರಾದ ದಂತವೈಧ್ಯ ಕೃಷ್ಣ ಎಂಬುವರು ಈ ಸಾಧು ನಾರಾಯಣಸ್ವಾಮಿಯವರನ್ನು ಕರೆತಂದಿದ್ದರು. ಆಸ್ಪತ್ರೆಯಲ್ಲಿ ಗಾಯವನ್ನು ನಾಲಿಗೆಯಿಂದ ನೆಕ್ಕಿ ವಾಸಿ ಮಾಡುವ ದೃಶ್ಯ ಕಂಡ ಕೆಲವರು ಪತ್ರಿಕೆಗೆ ಮಾಹಿತಿ ನೀಡಿದಾಗ ತಕ್ಷಣ ಸ್ಥಳಕ್ಕೆ ಹೋಗಿ ಪರೀಕ್ಷಿಸಿದಾಗ ಅಚ್ಚರಿಯಾಯಿತು. ನಂತರ ಅವರು ತುರುವೇಕೆರೆ ತಾಲೂಕು ದಂಡಿನ ಶಿವರದ ರಾಮೇಗೌಡ ಎಂಬುವರಿಗೆ ಆಗಿರುವ ಗಾಯವನ್ನು ವಾಸಿ ಮಾಡಲು ಕರೆದುಕೊಂಡು ಹೋಗಲಾಯ್ತು.

ಶಕ್ತಿದಾಯಕ ವಿಭೂತಿ:
ನಾರಾಯಣಸ್ವಾಮಿ ಒಬ್ಬ ವಿಚಿತ್ರವಾದ ಸಾಧು. ಇವರು ಇದ್ದ ಕಡೆ ಇರುವುದಿಲ್ಲ. ಸದಾ ಸಂಚರಿಸುತ್ತಲೇ ಇರುತ್ತಾರೆ. ಸ್ವಂತ ಸ್ಥಳ ಎನ್ನುವುದು ಇಲ್ಲ. ತಲೆ ಮೇಲೆ ನಾನಾ ಗಿಡಮೂಲಿಕೆಗಳ ಗಂಟೊಂದನ್ನು ಇಟ್ಟು ಕೊಂಡು ಕಾಲಿಗೆ ಚಪ್ಪಲಿ ಹಾಕದೇ ಬರಿಗಾಲಲ್ಲಿ ತಮ್ಮ ಮನಸ್ಸು ಬಂದ ಕಡೆ ಹೋಗುತ್ತಿರುತ್ತಾರೆ. ಯಾರಾದರೂ ಕರೆದರೆ ಶಕ್ತಿಯಿರುವ ನಾಲಿಗೆಯಿಂದ ನೆಕ್ಕುವ ಮೂಲಕ ಗುಣಪಡಿಸಿ ಒಂದು ನಯಾಪೈಸೆಯೂ ದಕ್ಷಿಣೆ ಪಡೆಯದೇ ಮರಳಿ ಹೋಗುತ್ತಾರೆ. ಆದರೆ ಇಡೀ ಚಿಕಿತ್ಸೆಗೆ ಬಳಸುವುದು ವಿಭೂತಿ ಮಾತ್ರ. ಅದೇ ಅವರ ಸಂಜಿವಿನಿ ಔಷಧ ಎಂದು ಅವರ ಬಗ್ಗೆ ವ್ಯಕ್ತಿಪರಿಚಯವನ್ನು ತೆರದಿಡುತ್ತಾರೆ ಬೆಳಗಾಂನಲ್ಲಿ ದಂತವೈಧ್ಯರಾಗಿರುವ ಕೃಷ್ಣ(೯೮೮೬೬೩೨೩೦೮).
ಎಂತದ್ದೇ ರಣಗಾಯವಾಗಿದ್ದರೂ ಅದು ಹುಳ ಬಿದ್ದಿದ್ದರೂ ಅದರ ಮೇಲೆ ಮೊದಲು ವಿಭೂತಿ ಹಾಕಿ ನಂತರ ತಮ್ಮ ನಾಲಿಗೆಯಿಂದ ನೆಕ್ಕಲು ಶುರು ಮಾಡುತ್ತಾರೆ. ನೆಕ್ಕಿದ ನಂತರ ಅದನ್ನು ಹೊರಗೇ ಉಗಿಯದೇ ಎಲ್ಲವನ್ನೂ ಒಳಗೆ ನುಂಗಿ ಬಿಡುತ್ತಾರೆ. ಗಾಯದಲ್ಲಿರುವ ಕೀವು, ರಕ್ತವನ್ನು ಸಂಪೂರ್ಣವಾಗಿ ಹೀರಿದ ನಂತರ ಪುನಃ ಅದರ ಮೇಲೆ ವಿಭೂತಿ ಹಾಕಿ, ಸ್ವಲ್ಪ ವಿಭೂತಿಯನ್ನು ರೋಗಿಗೆ ನೀಡಿ ಒಂದು ವಾರ ಗಾಯದ ಮೇಲೆ ಹಾಕಲು ಹೇಳುತ್ತಾರೆ. ಯಾವುದೇ ಪಥ್ಯ ಹೇಳದಿದ್ದರೂ ಗಾಯ ವಾಸಿಯಾಗುವವರೆಗೂ ಭಗವಂತನನನ್ನು ಚಿತ್ತ ಮನಸ್ಸಿನಿಂದ ಧ್ಯಾನಿಸಲು ಹೇಳುತ್ತಾರೆ. ಇದಲ್ಲದೇ ಗುಡ್ಡಗಾಡುಗಳನ್ನು ಸುತ್ತಿ ತಮ್ಮ ಬಳಿಯಿಟ್ಟುಕೊಂಡಿರುವ ಗಿಡಮೂಲಿಕೆಗಳಿಂದ ನಾನಾ ತರಹದ ರೋಗಗಳನ್ನೂ ಸಹ ಗುಣಪಡಿಸುತ್ತಾರಂತೆ ಎಂದು ಮತ್ತಷ್ಟು ಅವರ ಬಗ್ಗೆ ವಿವರ ನೀಡುತ್ತಾರೆ.
ಮೊಬೈಲ್ ಬಳಸಲ್ಲ: 
ಸಾಧು ನಾರಾಯಣಸ್ವಾಮಿ ಹತ್ತಿರ ಯಾವುದೇ ಸಂಪರ್ಕ ಸಾಧನಗಳಿಲ್ಲ. ತಮ್ಮ ವಿಳಾಸ ಹೇಳಲ್ಲ. ಮೊಬೈಲ್‌ನಂತೂ ಅವರು ಮುಟ್ಟುವುದೂ ಇಲ್ಲ. ದಿನಕ್ಕೆ ಒಂದು ಹೊತ್ತು ಮಾತ್ರ ಊಟ ಮಾಡುತ್ತಾರೆ, ಅದೂ ಸರಳ ಸಸ್ಯಹಾರ. ವಾರಕ್ಕೊಮ್ಮೆ ಬಹಿರ್ದಿಷೆಗೆ ಹೋಗುವ ಅಭ್ಯಾಸ ಇಟ್ಟುಕೊಂಡಿರುವ ಅವರು ಯಾರಿಗಾದರೂ ಚಿಕಿತ್ಸೆ ನೀಡಿದ (ನಾಲಿಗೆಯಿಂದ ನೆಕ್ಕಿದ) ನಂತರ ಎರಡು ಮೂರು ದಿನ ಊಟ ಮಾಡುವುದಿಲ್ಲವಂತೆ.
ಸ್ಪರ್ಶಕ್ಕೆ ನೋವು ಮಾಯ:
ದಂಡಿನಶಿವರದ ರಾಮೇಗೌಡ ಗಾಯ ಮಾಡಿಕೊಂಡು ಅದು ಕೊಳೆತು ಬಾಧೆ ಕೊಡುತ್ತಿತ್ತಂತೆ. ಸಾಧು ನಾರಾಯಣಸ್ವಾಮಿ ಗಾಯವನ್ನು ಸ್ಪರ್ಶಿಸುತ್ತಿದ್ದಂತೆ ಹಿತವೆನಿಸಿ, ನೆಕ್ಕಲು ಶುರು ಮಾಡುತ್ತಿದ್ದಂತೆ ಅವರಿಗೆ ಅದೆನೋ ಆನಂದವಾಯಿತಂತೆ. ವಾರದಿಂದ ಜೀವ ಹಿಂಡುತ್ತಿದ್ದ ನೋವು ತಕ್ಷಣ ಮಾಯ. ಇದು ಪವಾಡವೇ ಸರಿ.  ಈಗ ಗಾಯವೂ ವಾಸಿಯಾಗುತ್ತಾ ಬರುತ್ತಿದೆ ಎಂದು ಅವರು ಹೇಳುತ್ತಾರೆ.

ಮೂರು ದಿನ ಊಟ, ತಿಂಡಿ ಮರೆತಿದ್ದ ದೃಶ್ಯ ಮಾಧ್ಯಮ ತಂಡ:
ಕಳೆದ ಆರೇಳು ತಿಂಗಳ ಹಿಂದೆ ಸುದ್ದಿ ತಿಳಿದ ಸ್ನೇಹಿತ ದಂಡಿನಶಿವರ ತಿಮ್ಮೇಗೌಡ, ಬಾಲಕೃಷ್ಣ ಕಾಕತ್ಕರ್ ಮತ್ತು ತಂಡ ನಾರಾಯಣಸ್ವಾಮಿ ಬೆನ್ನು ಹತ್ತಿ ಶುದ್ಧ ಹಸಿ ಹಸಿ ದೃಶ್ಯಗಳನ್ನು ಸೆರೆ ಹಿಡಿದ ಜೊತೆಗೆ ಉತ್ತಮ ಸುದ್ದಿ ಮಾಡಿತ್ತು. ಇದೊಂದು ಬೊಂಬಾಟ್ ಹಾಟ್ ಸುದ್ದಿ ಎಂದು ಎಡಿಟಿಂಗ್‌ಗೆ ಕಳುಹಿಸಿತ್ತು. ಆದರೆ ಆಗಿದ್ದೇ ಬೇರೆ. ವಿಡಿಯೋ ಎಡಿಟ್ ಮಾಡುವ ಆಸಾಮಿ ದೃಶ್ಯಗಳನ್ನು ನೋಡಿ ಬಕಾ ಬಕಾ ಅಂತ ವಾಂತಿ ಮಾಡಿಕೊಂಡು ಬಿಟ್ಟಿದ್ದಾನೆ.
ಸುದ್ದಿ ತಿಳಿದ ತಕ್ಷಣ ಪ್ರಸಾರ ಸ್ಟುಡಿಯೋದ ಸಿಬ್ಬಂಧಿ ಜಮಾಯಿಸಿ ವೀಕ್ಷಿಸುತ್ತಿದ್ದಂತೆ ಹಲವಾರು ಮಂದಿ ವಾಂತಿ ಮಾಡಿಕೊಂಡಿದ್ದಾರೆ. ಕೆಲವರಂತೂ ಮೂರು ನಾಲ್ಕು ದಿನ ಊಟವನ್ನೇ ತೊರೆದಿದ್ದರಂತೆ. ಅಯ್ಯೋ ಈ ಎಪಿಸೋಡ್ ಪ್ರಸಾರ ಮಾಡಿದರೆ ನಾವು ದೊಡ್ಡ ಪಾಪಿಷ್ಟರಾಗುತ್ತೇವೆ. ನಾಡಿನ ವೀಕ್ಷಕರ ಊಟ ಕಿತ್ತುಕೊಂಡು ನರಕಕ್ಕೆ ಹೋಗುತ್ತೇವೆ. ಎಂದು ಬಾರಿ ಚಿಂತನೆ ನಡೆಸಿದ ಚಾನಲೆ ಕೊನೆಗೆ ಅದನ್ನು ಪ್ರಸಾರ ಮಾಡದಂತೆ ರದ್ದು ಪಡಿಸಿತಂತೆ.


ಸಾಧಕಿಯ ಯಶೋಗಾಥೆ: "ಒಲೆಯಮ್ಮ"  
ಓದಿಲ್ಲ, ಬರೆದಿಲ್ಲ ಅಕ್ಷರ ಜ್ಞಾನ ಮೊದಲೇ ಇಲ್ಲ. ಆದರೂ ಮನಸ್ಸಿದ್ದರೆ ಮಾರ್ಗ ಎನ್ನುವ ಪ್ರೋತ್ಸಾಹ ನುಡಿಯ ಬೆನ್ನು ಹತ್ತಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಭಾಜನರಾಗುವ ಮೂಲಕ ನಾಡಿಗೆ ಕೀರ್ತಿತಂದಿರುವ "ಒಲೆಯಮ್ಮ" ಹೊಸ ದಾಖಲೆ ಮಾಡಿ ಮತ್ತೊಮ್ಮೆ ದೇಶದ ಗಮನ ಸೆಳೆಯಲು ಹೊರಟಿದ್ದಾರೆ.
ನಮ್ಮ ಹಳ್ಳಿ ಅಡಿಗೆ ಮನೆ ಸಮಸ್ಯೆಯಲ್ಲಿ ಮಹಿಳೆಯರ ಉಸಿರುಗಟ್ಟಿಸಿ, ಕಣ್ಣಿನಲ್ಲಿ ನೀರು ಬರಿಸುವ ಹೊಗೆಯ ಉಪಟಳ ಸಹಿಸಲಸಾಧ್ಯ. ಸಮಸ್ಯೆಗೆ ಪರಿಹಾರ ಹುಡುಕಿ ಹೊಗೆ ರಹಿತ ಸುಲಭ ಮತ್ತು ಸರಳ ಅಸ್ತ್ರ ಒಲೆ ನಿರ್ಮಿಸಿಕೊಡುವ ಮೂಲಕ ಗ್ರಾಮೀಣ ಮಹಿಳೆಯರ ಸಮಸ್ಯೆಗೆ ಮುಕ್ತಿ ಕಾಣಿಸಿ ಅವರ ಅಚ್ಚುಮೆಚ್ಚಿನವರಾಗಿ "ಒಲೆಯಮ್ಮ" ಎಂದೇ ಪ್ರಸಿದ್ಧರಾಗಿರುವ ತಿಪಟೂರು ತಾಲೂಕಿನ ಹಾಲ್ಕುರಿಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಚ್.ಮುದ್ದೇನಹಳ್ಳಿ ತಾಂಡ್ಯದ ಲಲಿತಾಬಾಯಿಯ ಯಶೋಗಾಥೆ ಇದು.
ತನ್ನ ಅವಿರತ ಶ್ರಮದಿಂದ ರಾಜ್ಯ ಮತ್ತು ಹೊರ ರಾಜ್ಯದಲ್ಲಿ ಈಗಾಗಲೇ ೧೪ಸಾವಿರಕ್ಕೂ ಹೆಚ್ಚು ಒಲೆಗಳನ್ನು ನಿರ್ಮಿಸಿದ್ದಾರೆ. ಶೀಘ್ರದಲ್ಲೇ ೨೦ಸಾವಿರ ಒಲೆ ನಿರ್ಮಿಸುವ ಅತ್ಯುತ್ಸಾಹದಲ್ಲಿದ್ದಾರೆ. ವಯಸ್ಸು ೪೯ ಆದರೂ ಅವರ ಉತ್ಸಾಹ ಒಂದಿಷ್ಟೂ ಕುಗ್ಗಿಲ್ಲ. ಹಾಗಾಗಿ ಒಬ್ಬ ಮಾದರಿ ಯಶಸ್ವಿ ಗೃಹಿಣಿ ಎನಿಸಿದ್ದಾರೆ.
ಟೈಡ್ ಸಂಸ್ಥೆಯ ಮಾರ್ಗದರ್ಶನದಲ್ಲಿ ಹಳ್ಳಿ ಹಳ್ಳಿಗಳಿಗೆ ಹೋಗಿ ಅಲ್ಲಿ ಸಿಗುವ ಸ್ಥಳೀಯ ಸಂಪನ್ಮೂಲ ಬಳಸಿಕೊಂಡು ಒಲೆಗಳನ್ನು ಕೇವಲ ೨೦೦-೩೦೦ರೂಗಳಲ್ಲಿ ಸರಳ, ಸುಲಭ ಅಸ್ತ್ರಒಲೆಯನ್ನು ತಯಾರಿಸಿ ಕೊಡುವ ಇವರು ಸ್ಥಳೀಯ ಮಟ್ಟದ ಉದ್ಯಮವಾಗಿಸಿಕೊಂಡು ಶ್ರಮವಹಿಸಿ, ನ್ಯಾಯವಾಗಿ ಹಣ ಸಂಪಾದನೆ ಮಾಡುತ್ತಿದ್ದಾರೆ. ಸಾಂಪ್ರದಾಯಿಕ ಒಲೆಗಳಿಗಿಂಥ ವಿಭಿನ್ನ ಹಾಗೂ ಗ್ರಾಮೀಣ ಪರಿಸರಕ್ಕೆ ಸೂಕ್ತವಾಗಿ ಹೊಂದುವಂತಹ ಈ ಒಲೆಗಳು ಇಂಧನ ಮಿತವ್ಯಯಿ ಕೂಡ. ಗ್ರಾಮೀಣ ಮಹಿಳೆಯರ ಆರೋಗ್ಯದ ದೃಷ್ಟಿಯಲ್ಲೂ ಇದು ಉತ್ತಮ ಎನಿಸಿದೆ. ಸಾಂಪ್ರದಾಯಿಕ ಒಲೆಗಳಿಗಿಂತ ಅರ್ಧ ಪಟ್ಟು ಕಡಿಮೆ ಕಟ್ಟಿಗೆಯಿಂದ ಅತ್ಯಂತ ಹೆಚ್ಚಿನ ಶಾಖ ನೀಡುವ ಈ ಒಲೆ ಹೊಗೆ ರಹಿತವಾಗಿದ್ದು ಗ್ರಾಮೀಣ ಮಹಿಳೆಯರ ಅಚ್ಚುಮೆಚ್ಚು ಎನಿಸಿದೆ.
ಭ್ಯೆಫ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಲ್ಲಿ ನರ್ಸರಿ ತರಬೇತಿಯನ್ನೂ ಪಡೆದಿರುವ ಇವರು ತಮ್ಮ ಗ್ರಾಮದಲ್ಲಿ ಔಷಧ ಗಿಡಗಳನ್ನು ನೆಟ್ಟು ಜನರಿಗೆ ಉಪಕಾರಿಯಾದರು. ಹೋದ ಕಡೆಯಲ್ಲಿ ತನ್ನ ಕಾಯಕದ ಜೊತೆಗೆ  ಗ್ರಾಮೀಣ ಅಭಿವೃದ್ಧಿ, ಸ್ವಚ್ಚತೆ, ಪರಿಸರ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಿ, ಬಾಯಿ ಮಾತಿನ ಪ್ರಚಾರ ಮಾಡುವ ಸಾಮಾಜಿಕ ಸೇವಕಿ ಎನಿಸಿದ್ದಾರೆ.

ತರಬೇತಿಯಿಂದ ಏನಾದೀತು ಎಂದು ಗ್ರಾಮದ ಕೆಲವು ಜನರು ಹೀಯಾಳಿಸಿದ್ದರು. ಸೌದೆ, ಸೀಮೆಎಣ್ಣೆ, ವಿದ್ಯುತ್ ಹಾಗೂ ಆಧನಿಕ ಗ್ಯಾಸ್ ಸ್ಟೌಗಳ ಭರಾಟೆಯಲ್ಲಿ ಲಲಿತಾಬಾಯಿಯ ಅಸ್ತ್ರ ಒಲೆ ಉಳಿಯುತ್ತಾ ಎಂದು ಜನರಾಡಿ ಕೊಳ್ಳುವಾಗಲೇ ತನ್ನ ನಿಷ್ಟೆ, ಶ್ರದ್ದೆ ಮತ್ತು ಅಚಲ ವಿಶ್ವಾಸದಿಂದ ಮುನ್ನುಗಿದ್ದ ಅವರು ಎರಡು ವರ್ಷ ಕಳೆಯುವುದರ ಒಳಗೆ ೨೦೦೭ ಸಾಲಿನ ಸಿಐಐ-ಭಾರತಿ ಆದರ್ಶ ಮಹಿಳಾ ಪ್ರಶಸ್ತಿಗೆ ಆಯ್ಕೆಯಾಗಿ ಆಗದು ಎಂದು ಕೈ ಹೊತ್ತು ಕುಳಿತ ಮಂದಿಯ ಎದುರು ಭಾರತೀಯ ಕೈಗಾರಿಕಾ ಒಕ್ಕೂಟ ಮತ್ತು ಟೆಲಿಕಾಂ ವಲಯದ ಏರ್‌ಟೆಲ್ ಭಾರತದಲ್ಲಿ ಗ್ರಾಮೀಣ ಅಭಿವೃದ್ಧಿಗೆ ಕೊಡುಗೆ ನೀಡಿದ ಸಾಹಸಿ ಉದ್ಯಮಿ ಎಂದು ಗುರ್ತಿಸಿಕೊಂಡು ಒಂದು ಲಕ್ಷ ನಗದು ಪುರಸ್ಕಾರ, ಪ್ರಶಸ್ತಿ ಹಾಗೂ ಪದಕದೊಂದಿಗೆ ದೆಹಲಿಯ ಅಂದಿನ ಮುಖ್ಯಮಂತ್ರಿ ಶೀಲಾದೀಕ್ಷಿತ್ ಅವರಿಂದ ಬೆನ್ನುತಟ್ಟಿಸಿಕೊಂಡ ಹೆಮೆಯ ಮಹಿಳೆ ಎನಿಸಿದ್ದರು. ಈಗ ಹತ್ತಾರು ಸನ್ಮಾನಗಳು ಅಅರನ್ನು ಅರಸಿ ಬಂದಿವೆ.
ಸಾಧಕಿಯ ಯಶೋಗಾಥೆ:  

ತಿಪಟೂರು ತಾಲೂಕಿನ ಹಿಂದುಳಿದ ಗ್ರಾಮದಲ್ಲಿ ಕಳೆದ ಆರು ವರ್ಷಗಳ ಹಿಂದೆ ಅತ್ಯಂತ ಬಡತನದ ಶಾಪದಲ್ಲಿ ಕನಸ್ಸುಗಳನ್ನು ಗಂಟು ಕಟ್ಟಿ ಮೂಲೆಗೆಸೆದು ಗಂಡನೊಂದಿಗೆ ಬದುಕಿನ ಬಂಡಿ ನೆಡಸಲು ಹೆಗಲು ಕೊಟ್ಟಿದ್ದ ಲಿಲಿತಾಬಾಯಿ, ಹಸಿದ ಹೊಟ್ಟೆಯ ತಣಿಸಲು ಗಾರೆ ಕೆಲಸ, ಜಲ್ಲಿ ಹೊಡೆಯುವ ಕೆಲಸ, ಸೌದೆ ಹೊರುವ ಕೆಲಸ ಮಾಡಿ ಹೇಗೋ ಸಂಜೆಯ ವೇಳೆಗೆ ೨೦-೩೦ರೂ ದುಡಿಯುತ್ತಿದ್ದ ಲಲಿತಾಬಾಯಿ ಮುಂದೆ ತಾನು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಖ್ಯಾತಿಗೆ ಒಳಗಾಗಿ, ಆರ್ಥಿಕವಾಗಿ ಉತ್ತಮ ಜೀವನ ನಡೆಸುತ್ತೇನೆ ಎನ್ನುವ ಕಲ್ಪನೆಯೂ ಸಹ ಇರಲಿಲ್ಲ. ಕಿತ್ತು ತಿನ್ನುವ ಬಡತನದಲ್ಲಿ ತನ್ನ ಇಬ್ಬರು ಮಕ್ಕಳನ್ನು ಚೆನ್ನಾಗಿ ಓದಿಸಿ, ಅವರ ಭವಿಷ್ಯ ನಿರ್ಮಿಸುವ ಕನಸನ್ನೂ ಕಾಣದ ಸ್ಥಿತಿಯಲ್ಲಿ ಲಲಿತಾಬಾಯಿಗೆ ಕೈಹಿಡಿದಿದ್ದು ಟೈಡ್( ಟೆಕ್ನಾಲಜಿ ಇನ್ಫೋಮೆಟ್ರಿಕ್ ಡಿಸೈನ್ ಎಂಡೀವರ್) ಸಂಸ್ಥೆ.
ಬೆಂಗಳೂರಿನಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸುಸ್ಥಿರ ತಂತ್ರಜ್ಞಾನ ಕೇಂದ್ರ ಸರಳ ಹೆಸರಿನಲ್ಲಿ ಅಭಿವೃದ್ಧಿ ಪಡಿಸಿದ ಸೌದೆ ಆಧಾರಿತ ಉರಿಯುವ ಒಲೆಯನ್ನು ನಿರ್ಮಿಸುವ ತರಬೇತಿಯನ್ನು ಎಲ್ಲರಂತೆ ಮುಗಿಸಿದ ಲಲಿತಾಬಾಯಿ ಇದರಲ್ಲೇ ತನ್ನ ಭವಿಷ್ಯವನ್ನು ಕನಸಿಕೊಂಡು ಅದಕ್ಕೊಂದು ರೂಪ ಮತ್ತು ಶಕ್ತಿ ಕೊಟ್ಟರು. ಕಲಿತದ್ದು ಈಕೆಯ ಕೈ ಹಿಡಿದ ಪರಿಣಾಮ ಇಂದು ಅತ್ಯಂತ ಬೇಡಿಕೆಯ ಸ್ವಯಂ ವೃತ್ತಿ ಮಹಿಳೆಯಾಗಿದ್ದಾರೆ. ತನ್ನ ೪೫ರ ವಯಸ್ಸಿನಲ್ಲಿ ದಿಕ್ಕು ಕಾಣದ ದಿನಗಳಲ್ಲಿ ತೆಗೆದುಕೊಂಡ ದೃಡ ನಿರ್ಧಾರ ಇಂದು ಆಕೆಯ ಭವಿಷ್ಯವನ್ನೇ ಬದಲಿಸಿದೆ. ಸಾಧಕಿ ಲಿಲತಾಬಾಯಿಯ ಛಲ ಮತ್ತು ಪರಿಶ್ರಮ ಆಕೆಗೆ ಗೌರವ, ಕೀರ್ತಿ, ಹಣ ಹಾಗೂ ತೃಪ್ತಿಯನ್ನು ನೀಡಿದೆ. ತನ್ನ ಮಗಳಿಗೆ ಟಿಸಿಹೆಚ್ ಓದಿಸಿ ಕೆಲಸ ಕೊಡಿಸಿದ್ದಾರೆ. ಮಗನಿಗೆ ಐಟಿಐ ತರಬೇತಿ ಕೊಡಿಸಿದ್ದಾರೆ. ತನ್ನ ನಿಷ್ಠೆ, ನಿಸ್ವಾರ್ಥ ಮತ್ತು ಅರ್ಪಣಾ ಮನೋಭಾವ ಕಾಯಕಕ್ಕೆ ದಿನಕ್ಕೆ ಕನಿಷ್ಟ ಐದು ನೂರು ದುಡಿಯುತ್ತಾ ಅದರಲ್ಲೇ ಸಂತೃಪ್ತಿ ಪಡುತ್ತಾರೆ. ಸಂಕಟದ ಬದುಕಿನ ತೀವ್ರತೆ ಅರಿತಿರುವ ಲಲಿತಾಬಾಯಿ ಕಷ್ಟ ಎಂದು ಬಂದ ಮಹಿಳೆಯರಿಗೆ ಬದುಕುವ ಮಾರ್ಗವನ್ನು ಹೇಳಿಕೊಡುತ್ತಾರೆ ಅಲ್ಲದೇ ಆರ್ಥಿಕ ಸಹಾಯವನ್ನೂ ಮಾಡಿ, ಪ್ರೋತ್ಸಾಹಿಸುತ್ತಿದ್ದಾರೆ. ಅವರೂ ಸ್ವ ಉದ್ಯೋಗ ಮಾಡುವಂತೆ ಹುರಿದುಂಬಿಸಿ, ಮಾರ್ಗದರ್ಶನ ನೀಡುತ್ತಾ ಪರಿಪೂರ್ಣ ಮಹಿಳೆ ಎನಿಸಿರುವ ಆಕೆಯನ್ನು ನಾನಾ ಸಂಘಟನೆಗಳು ಗುರ್ತಿಸಿ, ಹೆಮ್ಮೆಯಿಂದ ಅಭಿನಂದಿಸಿವೆ. ತಾಲೂಕು ಆಡಳಿತದ ನಾನಾ ಇಲಾಖೆಗಳು ಸನ್ಮಾನಿಸಿ, ಪುರಸ್ಕರಿಸಿವೆ.
ಬೆನ್ನ ಹಿಂದೆ ಬಿದ್ದು ಅಂಗಲಾಚಿ ಬೇಡುವ ಹುಂಬರಿಗೆ, ಹೊಗಳುವ ನಿರರ್ಥಕರಿಗೆ, ಸ್ವಾರ್ಥ ಪ್ರಚಾರ ಪ್ರಿಯರಿಗೆ ಪ್ರಶಸ್ತಿ ನೀಡುವ ಪರಿಪಾಠವನ್ನು ಸರಕಾರ ಕೂಡಲೇ ಕೈಬಿಟ್ಟು ಇಂತಹ ನಿಸ್ವಾರ್ಥ ಶ್ರಮ ಜೀವಿಗಳನ್ನು ಗುರ್ತಿಸಿ, ಪುರಸ್ಕರಿಸಿದರೆ ಸಾರ್ಥಕ್ಯ ಎನಿಸುತ್ತದೆ.